2021ರ ಕೇಂದ್ರ ಬಜೆಟ್ ದಾಖಲಾತಿ ಮುದ್ರಣ ಇಲ್ಲ; ಈ ಬಾರಿ ಇ- ವರ್ಷನ್
2021- 22ನೇ ಸಾಲಿನ ಕೇಂದ್ರ ಬಜೆಟ್ ದಾಖಲೆಯನ್ನು ಸಂಸದರು ಇ- ವರ್ಷನ್ ನಲ್ಲಿ ಪಡೆಯಲಿದ್ದಾರೆ. ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಕಂಡರಿಯದ ಬಜೆಟ್ ಮಂಡಿಸುವ ಭರವಸೆ ನೀಡಿದ್ದಾರೆ. ಮತ್ತು ಆ ದಿಕ್ಕಿನೆಡೆಗೆ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ವರ್ಷ ಬಜೆಟ್ ದಾಖಲೆ ಮುದ್ರಣ ಆಗುವುದಿಲ್ಲ.
ಹಣಕಾಸು ಸಚಿವಾಲಯದ ಅಧಿಕಾರಿಗಳು ಈ ಬೆಳವಣಿಗೆಯನ್ನು ಖಾತ್ರಿ ಪಡಿಸಿದ್ದಾರೆ. ಏಕೆ ಹೀಗೆ ಎಂಬುದನ್ನು ಊಹಿಸುವುದು ಕಷ್ಟ ಏನಲ್ಲ. ಅದಕ್ಕೆ ಕಾರಣವಾಗಿರುವುದು ಕೊರೊನಾ ಬಿಕ್ಕಟ್ಟು. ನವದೆಹಲಿಯ ರೈಸಿನಾ ಹಿಲ್ ನಲ್ಲಿ ಇರುವ ನಾರ್ಥ್ ಬ್ಲಾಕ್ ನಲ್ಲಿನ ಮುದ್ರಣಾಲಯಲ್ಲಿ ಬಜೆಟ್ ದಾಖಲೆಗಳ ಮುದ್ರಣವಾಗುತ್ತಿತ್ತು. ಅಲ್ಲೇ ವಾರಗಟ್ಟಲೆ ಒಟ್ಟಿಗೆ ಹತ್ತಾರು ಜನರು ಒಂದೇ ಕಡೆ ಇರುತ್ತಿದ್ದರು.
2021-22ರ ಹಣಕಾಸು ವರ್ಷದ ಬಜೆಟ್: ಪ್ರಮುಖ ವಿಷಯಗಳು
ಇನ್ನು ಈಗಿನ ಸನ್ನಿವೇಶದಲ್ಲಿ ಹತ್ತಾರು ಜನ ಒಟ್ಟಿಗೆ ಇರುವುದು ಅಪಾಯಕಾರಿ. ಜತೆಗೆ ಮುದ್ರಣಾಲಯ, ಉಳಿದುಕೊಳ್ಳುವ ಸ್ಥಳ ಇವನ್ನೆಲ್ಲ ಮುಚ್ಚಲಾಗುತ್ತದೆ.
ವಿಷಯ ಇಲ್ಲಿಗೇ ಕೊನೆಯಾಗಲ್ಲ. ಸಾಮಾನ್ಯ ಸನ್ನಿವೇಶದಲ್ಲಿ ಕಾರ್ಮಿಕರು ದಾಖಲಾತಿಗಳನ್ನು ಬೆಂಗಾವಲಿನಲ್ಲಿ ಟ್ರಕ್ ಗೆ ತುಂಬುತ್ತಾರೆ. ಅದನ್ನು ಸಂಸತ್ ಮತ್ತು ಆ ನಂತರ ದೇಶದ ಇತರ ಭಾಗಗಳಿಗೆ ಒಯ್ಯಲಾಗುತ್ತದೆ. ಮೊದಲಿಗೆ ಇದನ್ನು ವಿಶೇಷವಾಗಿ ಬಟ್ಟೆ ಬ್ಯಾಗ್ ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಆ ನಂತರ ವಿಶೇಷ ಹಸಿರು ಬಣ್ಣದ ಚೀಲದಲ್ಲಿ ಹಾಕಿ, ಸಂಸತ್ ಭವನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅದನ್ನು ಇಳಿಸಲಾಗುತ್ತದೆ.
ಅಲ್ಲಿ ಭದ್ರತಾ ಪರಿಶೀಲನೆಯನ್ನು ನಡೆಸಿ, ಸದಸ್ಯರಿಗೆ ಹಂಚುವ ಸಲುವಾಗಿ ವಿತರಣೆ ಕೌಂಟರ್ ಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಇನ್ನು ವಿವಿಧ ಸಚಿವಾಲಯ ಹಾಗೂ ಇಲಾಖೆಗಳಿಗೂ ಕಳುಹಿಸಲಾಗುತ್ತದೆ.
ಬಜೆಟ್ ಪತ್ರದಲ್ಲಿ ಹದಿನಾಲ್ಕು ದಾಖಲೆಗಳು ವಿವಿಧ ಬಣ್ಣಗಳಲ್ಲಿ ಇರುತ್ತವೆ. ಇನ್ನು ಬಜೆಟ್ ಭಾಷಣದ ದಾಖಲೆಯು ಅದರದೇ ವಿಶಿಷ್ಟ ವಿನ್ಯಾಸದಲ್ಲಿ ಇರುತ್ತದೆ. ಹೇಗೆಂದರೆ, ಕಳೆದ ವರ್ಷ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಇತ್ತಲ್ಲಾ, ಹಾಗೆ. ಆ ಪೈಕಿ ಕೆಲವಕ್ಕೆ ಶಾಶ್ವತವಾಗಿ ಬಣ್ಣ ನಿಗದಿ ಆಗಿದೆ. ಉದಾಹರಣೆಗೆ, ಫೈನಾನ್ಷಿಯಲ್ ಬಿಲ್ ಯಾವಾಗಲೂ ಬಿಳಿ ಬಣ್ಣದ್ದಾಗಿರುತ್ತದೆ.
ಈ ಮೇಲಿನ ಯಾವುವೂ ಈ ವರ್ಷ ಆಗುವುದಿಲ್ಲ. 750ರಷ್ಟಿರುವ ಸಂಸತ್ ಸದಸ್ಯರು ದಾಖಲೆಗಳನ್ನು ಇ- ವರ್ಷನ್ ನಲ್ಲಿ ಪಡೆಯುತ್ತಾರೆ. ಈಗಾಗಲೇ ಮಾಧ್ಯಮಗಳಿಗೆ ಫಿಸಿಕಲ್ ಪ್ರತಿ ವಿತರಣೆಯನ್ನು ನಿಲ್ಲಿಸಲಾಗಿದೆ. ಬಜೆಟ್ ಭಾಷಣ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಭಾಷಣ ಮುಗಿದ ಮೇಲೆ www.Indiabudget.gov.in ಅಥವಾ www.indiabudget.nic.in ನಲ್ಲಿ ಪಡೆಯಬಹುದು.
ಇನ್ನು ಬಜೆಟ್ ಆರಂಭದ ವೇಳೆ ಮಾಡುತ್ತಿದ್ದ ಹಲ್ವಾ ಕಾರ್ಯಕ್ರಮ ಕೂಡ ಈ ವರ್ಷ ಇರುವುದಿಲ್ಲ. ಬಜೆಟ್ ಸಿದ್ಧತೆಯಲ್ಲಿ ಭಾಗವಹಿಸುವ ಎಲ್ಲರೂ ಇದರಲ್ಲಿ ಇರುತ್ತಿದ್ದರು. ಒಂದು ಸಲ ಮುದ್ರಣ ಆರಂಭವಾದ ಮೇಲೆ ಬಜೆಟ್ ಮಂಡನೆ ಆಗುವ ತನಕ ಅವರ್ಯಾರೂ ಮನೆಗೆ ತೆರಳುವಂತಿರಲಿಲ್ಲ. ಆಯ್ದ ಕೆಲವೇ ಅಧಿಕಾರಿಗಳಿಗೆ ಮುದ್ರಣಾಲಯಕ್ಕೆ ಅಗತ್ಯ ಸಮಯದಲ್ಲಿ ಭೇಟಿ ನೀಡೂವ ಅನುಮತಿ ಇರುತ್ತಿತ್ತು. ಅದು ಕೂಡ ವಿಶೇಷ ಗುರುತಿನ ಚೀಟಿ ಬೇಕಾಗುತ್ತಿತ್ತು.