ರಿಲಯನ್ಸ್ ಆಸ್ತಿ ಎಷ್ಟೆಂದು ಬಹಿರಂಗ ಮಾಡದ ಮುಕೇಶ್; ತಿಕ್ಕಾಟ ತಾರಕಕ್ಕೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮಧ್ಯದ ತಿಕ್ಕಾಟದಿಂದ ಹದಿನೈದು ಬಿಲಿಯನ್ ಅಮೆರಿಕನ್ ಡಾಲರ್ ನ ಸೌದಿ ಅರೇಬಿಯಾದ ಅರಾಮ್ಕೋ ಜತೆಗಿನ ವ್ಯಾಪಾರ ಒಪ್ಪಂದದ ಮೇಲೆ ಪರಿಣಾಮ ಬೀರುವಂತಿದೆ. ಸರ್ಕಾರ ವರ್ಸಸ್ ಮುಕೇಶ್ ಅಂಬಾನಿ ತಿಕ್ಕಾಟದಲ್ಲಿ ಈಗ ರಿಲಯನ್ಸ್ ದೆಹಲಿ ಹೈ ಕೋರ್ಟ್ ಮೆಟ್ಟಿಲೇರಿದೆ.
ರಿಲಯನ್ಸ್ ನ ಆಸ್ತಿ ಎಷ್ಟಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂಬ ಆದೇಶವನ್ನು ಹಿಂಪಡೆಯುವಂತೆ ಸೂಚಿಸಬೇಕು ಎಂದು ಹೈ ಕೋರ್ಟ್ ಗೆ ಮನವಿ ಮಾಡಲಾಗಿದೆ. ಈ ಸಂಬಂಧ ಕೋರ್ಟ್ ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ರಿಲಯನ್ಸ್ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.
25 ವರ್ಷದ ನಂತರ ಪನ್ನಾ- ಮುಕ್ತ ತೈಲ, ಅನಿಲ ಪ್ರದೇಶ ಒಎನ್ ಜಿಸಿಗೆ ಹಸ್ತಾಂತರ
ತನ್ನ ಆಸ್ತಿ ಘೋಷಣೆ ಮಾಡುವುದಕ್ಕೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಯಾಕಿಷ್ಟು ಭಯ ಪಡುತ್ತಿದೆ ಎಂಬುದು ಅತಿ ದೊಡ್ಡ ಪ್ರಶ್ನೆಯಾಗಿದೆ. ಪನ್ನಾ- ಮುಕ್ತಾ/ತಪತಿ ತೈಲ ಪ್ರದೇಶ ವ್ಯವಹಾರದಲ್ಲಿ 385 ಕೋಟಿ ಅಮೆರಿಕನ್ ಡಾಲರ್ ನಷ್ಟು ಬಾಕಿಯನ್ನು ರಿಲಯನ್ಸ್ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಹೈ ಕೋರ್ಟ್ ಮೆಟ್ಟಿಲೇರಿತ್ತು.
ಸೌದಿ ಅರಾಮ್ಕೋ ಜತೆಗಿನ ಹದಿನೈದು ಬಿಲಿಯನ್ ಡಾಲರ್ ವ್ಯವಹಾರಕ್ಕೆ ರಿಲಯನ್ಸ್ ಗೆ ತಡೆ ಕೋರಿತ್ತು. ರಿಲಯನ್ಸ್ ಗ್ರೂಪ್ ಗೆ ದೊಡ್ಡ ಪ್ರಮಾಣದ ಸಾಲವಿದೆ. ಆದ್ದರಿಂದ ಮೂರನೇ ವ್ಯಕ್ತಿಯ ಹಕ್ಕಿರುವ ಚರಾಸ್ತಿ ಸ್ಥಿರಾಸ್ತಿಯ ಮಾರಾಟ, ವರ್ಗಾವಣೆಗೆ ಮುಂದಾಗಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ರಿಲಯನ್ಸ್ ನಿಂದ ಆಸ್ತಿ ಮಾರಾಟ ಮಾಡಿದರೆ ಸರ್ಕಾರದ ಹಣ ಪಾವತಿಸಲು ಏನೂ ಉಳಿಯುವುದಿಲ್ಲ ಎಂದು ಕೂಡ ಹೇಳಲಾಗಿದೆ.
ಕಳೆದ ಡಿಸೆಂಬರ್ ನಲ್ಲಿ ಹೈ ಕೋರ್ಟ್ ನಿರ್ದೇಶನ ನೀಡಿದ್ದು, ರಿಲಯನ್ಸ್ ಮತ್ತು ಬ್ರಿಟಿಷ್ ಗ್ಯಾಸ್ ಕಂಪೆನಿಗಳು ತಮ್ಮ ಆಸ್ತಿಯ ಬಗ್ಗೆ ಅಫಿಡವಿಟ್ ಅನ್ನು ಹೊಸ ಫಾರ್ಮಾಟ್ ನಲ್ಲಿ ನೀಡುವಂತೆ ಸೂಚಿಸಿದೆ.