ಆರ್ಥಿಕ ಅಪರಾಧಿ ವಿಜಯ್ ಮಲ್ಯ ಭಾರತಕ್ಕೆ ಕರೆತರಲು ಇನ್ನೇನು ದಿನಗಣನೆ
ದೇಶ ಬಿಟ್ಟು ಪಲಾಯನ ಮಾಡಿರುವ ಆರ್ಥಿಕ ಅಪರಾಧಿ- ಉದ್ಯಮಿ, ಸದ್ಯಕ್ಕೆ ಕಾರ್ಯ ನಿರ್ವಹಣೆ ನಿಲ್ಲಿಸಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸ್ಥಾಪಕ ವಿಜಯ್ ಮಲ್ಯ ಇನ್ನೇನು ಯಾವುದೇ ಸಮಯದಲ್ಲಿ ಭಾರತಕ್ಕೆ ಯು.ಕೆ.ಯಿಂದ ಹಸ್ತಾಂತರ ಆಗಬಹುದು. ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ತಿಯಾಗಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಯು.ಕೆ. ಉಚ್ಚ ನ್ಯಾಯಾಲಯದಲ್ಲಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದು ತಿರಸ್ಕೃತವಾಗಿತ್ತು. ಜಾರಿ ನಿರ್ದೇಶನಾಲಯದ (ಇ.ಡಿ.) ಮೂಲಗಳು ಐಎಎನ್ ಎಸ್ ಜತೆ ಮಾತನಾಡಿದ್ದು, ಮಲ್ಯ ಅವರನ್ನು ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ಕರೆ ತರಲಾಗುವುದು ಎಂದು ತಿಳಿಸಿವೆ. ಆದರೆ ಹಸ್ತಾಂತರದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಪೂರ್ತಿ ಹಣ ಕೊಡ್ತೀನಿ, ಕೇಸ್ ಮುಗಿಸಿಬಿಡಿ: ಕೇಂದ್ರಕ್ಕೆ ಮಲ್ಯ ದುಂಬಾಲು
"ಯು.ಕೆ. ಸುಪ್ರೀಂ ಕೋರ್ಟ್ ನಲ್ಲಿ ವಿಜಯ್ ಮಲ್ಯ ಮನವಿ ತಿರಸ್ಕೃತವಾಗಿದೆ. ಹಸ್ತಾಂತರಕ್ಕೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ" ಎಂದು ಮೂಲಗಳು ತಿಳಿಸಿವೆ.
ಮೊದಲಿಗೆ ಸಿಬಿಐ ವಶಕ್ಕೆ ಪಡೆಯಲಾಗುವುದು
ಭಾರತಕ್ಕೆ ವಿಜಯ್ ಮಲ್ಯರನ್ನು ಕರೆತರಲು ಸಿಬಿಐ ಹಾಗೂ ಇ.ಡಿ. ತಂಡಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ. ಸಿಬಿಐ ಮೂಲಗಳು ಹೇಳಿರುವ ಪ್ರಕಾರ, ಭಾರತಕ್ಕೆ ಮಲ್ಯ ಹಸ್ತಾಂತರ ಆದ ನಂತರ ತನಿಖಾ ಸಂಸ್ಥೆಯ ವಶಕ್ಕೆ ಅವರನ್ನು ಮೊದಲಿಗೆ ಪಡೆಯಲಾಗುವುದು. ಆ ನಂತರ ಪ್ರಕರಣ ದಾಖಲಿಸಲಾಗುವುದು. ಮೇ 14ನೇ ತಾರೀಕಿನಂದು ವಿಜಯ್ ಮಲ್ಯ ಅವರು ಪ್ರಕರಣದಲ್ಲಿ ಸೋತ ಮೇಲೆ ಹಸ್ತಾಂತರ ಪ್ರಕ್ರಿಯೆಗೆ ಇದ್ದ ಅಡೆತಡೆ ನಿವಾರಣೆ ಆಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಲ್ಲಿಂದ 28 ದಿನಗಳಲ್ಲಿ ವಾಪಸ್ ಕರೆತರಬೇಕು. ಮಲ್ಯ ಅರ್ಜಿಯನ್ನು ಯು.ಕೆ. ಕೋರ್ಟ್ ತಿರಸ್ಕರಿಸಿ ಈಗಾಗಲೇ 20 ದಿನಗಳು ಕಳೆದಿವೆ.
9 ಸಾವಿರ ಕೋಟಿ ರುಪಾಯಿ ವಂಚನೆ ಆರೋಪ
ಮಾಜಿ ಸಂಸದರೂ ಆಗಿರುವ ವಿಜಯ್ ಮಲ್ಯ ಭಾರತದ ಅತಿ ದೊಡ್ಡ ಸ್ಪಿರಿಟ್ಸ್ ಕಂಪೆನಿ ಯುನೈಟೆಡ್ ಸ್ಪಿರಿಟ್ಸ್ ನಡೆಸುತ್ತಿದ್ದರು. ಸದ್ಯಕ್ಕೆ ಕಾರ್ಯ ನಿರ್ವಹಣೆ ನಿಲ್ಲಿಸಿರುವ ಕಿಂಗ್ ಫಿಷರ್ ಏರ್ ಲೈನ್ ಸ್ಥಾಪಿಸಿದರು. ಸದ್ಯಕ್ಕೆ 9 ಸಾವಿರ ಕೋಟಿ ರುಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ಮಾರ್ಚ್ 2016ರಲ್ಲಿ ವೈಯಕ್ತಿಕ ಕಾರಣಗಳ ನೆಪವೊಡ್ಡಿ ದೇಶ ಬಿಟ್ಟು ಪರಾರಿ ಆಗಿದ್ದಾರೆ. ಭಾರತದ ಕನಿಷ್ಠ ಹದಿನೇಳು ಬ್ಯಾಂಕ್ ಗಳಿಗೆ ವಿಜಯ್ ಮಲ್ಯ ವಂಚನೆ ಮಾಡಿದ್ದಾರೆ. ಅಲ್ಲಿಂದ ಸಾಲವನ್ನು ಪಡೆದು, ವಿದೇಶಗಳಲ್ಲಿ ಇರುವ ನಲವತ್ತು ಕಂಪೆನಿಗಳಲ್ಲಿ ಪೂರ್ತಿ ಅಥವಾ ಭಾಗಶಃ ಷೇರಿನ ಪಾಲು ಖರೀದಿಗೆ ಬಳಸಿದ್ದಾರೆ.
ಯು.ಕೆ. ಹೈ ಕೋರ್ಟ್ ನಲ್ಲಿ ಮಲ್ಯ ಮೇಲ್ಮನವಿ ತಿರಸ್ಕೃತ
ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಲಂಡನ್ ಹೈ ಕೋರ್ಟ್ ನಲ್ಲಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ಏಪ್ರಿಲ್ 20, 2020ರಲ್ಲಿ ತಿರಸ್ಕೃತವಾಗಿತ್ತು. ಆ ನಂತರ ಯು.ಕೆ. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇ 14ನೇ ತಾರೀಕು ಸುಪ್ರೀಂ ಕೋರ್ಟ್ ಸಹ ಮೇಲ್ಮನವಿ ತಿರಸ್ಕರಿಸಿದ ಮೇಲೆ, ಒಂದು ವೇಳೆ ತಮ್ಮ ವಿರುದ್ಧದ ಕೇಸುಗಳನ್ನು ಮುಕ್ಯಾತ ಮಾಡಿದರೆ ಶೇಕಡಾ 100ರಷ್ಟು ಸಾಲವನ್ನು ಮರಳಿಸುವುದಾಗಿ ಕೇಂದ್ರ ಸರ್ಕಾರವನ್ನು ಮಲ್ಯ ಮತ್ತೊಮ್ಮೆ ಕೇಳಿಕೊಂಡಿದ್ದರು. ಪದೇ ಪದೇ ಸಾಲ ಮರುಪಾವತಿ ಮಾಡುವುದಾಗಿ ಹೇಳಿದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದನ್ನು ತಿರಸ್ಕರಿಸುತ್ತಿದೆ ಎಂದು ಮಲ್ಯ ಹೇಳಿದ್ದರು. ಯು.ಕೆ. ಹೈ ಕೋರ್ಟ್ ನೀಡಿದ್ದ ವಿಜಯ್ ಮಲ್ಯ ಹಸ್ತಾಂತರ ಆದೇಶವು 'ಮೈಲುಗಲ್ಲು' ಎಂದು ಸಿಬಿಐ ಬಣ್ಣಿಸಿತ್ತು. ನ್ಯಾಯ ವ್ಯಾಪ್ತಿಯನ್ನು ಬದಲಿಸಿದ ಮಾತ್ರಕ್ಕೆ ಆರ್ಥಿಕ ಅಪರಾಧಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು.
ಐಡಿಬಿಐ ಬ್ಯಾಂಕ್ ಗೆ 900 ಕೋಟಿ ರುಪಾಯಿ ವಂಚನೆ
ಸಿಬಿಐ ಅಧಿಕಾರಿಗಳು ಹೇಳಿರುವ ಪ್ರಕಾರ, ಉದ್ಯಮಿ ವಿಜಯ್ ಮಲ್ಯ ವಂಚನೆ, ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಸರ್ಕಾರಿ ಉದ್ಯೋಗಿಗಳ ಜ್ಜತೆಗೆ ಸೇರಿಕೊಂಡು ಐಡಿಬಿಐ ಬ್ಯಾಂಕ್ ಗೆ 900 ಕೋಟಿ ರುಪಾಯಿ ವಂಚನೆ ಆರೋಪವೂ ಇದೆ. ಮಲ್ಯ ಮತ್ತು ಇತರರ ವಿರುದ್ಧ ಜನವರಿ 24, 2017ರಲ್ಲಿ ಸಿಬಿಐ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಆ ನಂತರ ಅದೇ ವರ್ಷ ಜನವರಿ 31ನೇ ತಾರೀಕಿನಂದು ಯು.ಕೆ.ನಿಂದ ಹಸ್ತಾಂತರಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಮನವಿ ಮೇರೆಗೆ ಏಪ್ರಿಲ್ 20, 2017ರಲ್ಲಿ ಯು.ಕೆ. ಅಧಿಕಾರಿಗಳು ಮಲ್ಯ ಅವರನ್ನು ಬಂಧಿಸಿದ್ದರು.