'ಸ್ಮಾರ್ಟ್ ಸಿಟಿ ಬದಲು ಸ್ಮಾರ್ಟ್ ಹಳ್ಳಿಗಳನ್ನು ರೂಪಿಸಬೇಕಿದೆ' ಎಂದ ಕೇಂದ್ರ ಸಚಿವ
ನವದೆಹಲಿ, ಜೂನ್ 3: ಕಳೆದ 70 ದಿನಗಳ ನಿರಂತರ ಲಾಕ್ಡೌನ್ ಪರಿಣಾಮವಾಗಿ ಅನೇಕ ಕೂಲಿ ಕಾರ್ಮಿಕರು ದೊಡ್ಡ ದೊಡ್ಡ ನಗರಗಳಿಂದ ತಮ್ಮ ಹಳ್ಳಿಗಳಿಗೆ ತೆರಳಿದ್ದಾರೆ. ಇದರಿಂದ ಆರ್ಥಿಕತೆಗೆ ನಿರುದ್ಯೋಗ, ಆದಾಯ ಕುಸಿತದಂತಹ ತಲೆನೋವು ಪ್ರಾರಂಭವಾಗಿದೆ.
ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಾರಿಗೆ ಹಾಗೂ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಅವರು, ''ಸ್ಮಾರ್ಟ್ ಸಿಟಿಗಳಿಗಿಂತ ಸ್ಮಾರ್ಟ್ ಹಳ್ಳಿಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಿದೆ'' ಎಂದು ಹೇಳಿದ್ದಾರೆ. ಆ ಮೂಲಕ ಲಾಕ್ಡೌನ್ ನಿಂದ ಎದುರಾಗಿರುವ ಹೊಸ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಸಚಿವರು ಸೂಚ್ಯವಾಗಿ ಹೇಳಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ನಡೆದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಭೆಯಲ್ಲಿ ನಿತಿನ್ ಗಡ್ಕರಿ ಅವರು ಹಳ್ಳಿಗಳನ್ನು ಸ್ಮಾರ್ಟ್ ಆಗಿಸುವ ಮೂಲಕ ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಸಲಹೆ ನೀಡಿದ್ದಾರೆ.
ಹೊಸ ಸಮಸ್ಯೆಗಳಿಗೆ ತೆರೆದುಕೊಳ್ಳುತ್ತಿದ್ದೇವೆ
''ಈ ಹಿಂದೆ ಲಕ್ಷಾಂತರ ಸಂಖ್ಯೆಯಲ್ಲಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿದ್ದ ಕಾರ್ಮಿಕರು ಇದೀಗ ಕೊರೊನಾವೈರಸ್ ಹಾವಳಿ ಪರಿಣಾಮವಾಗಿ ಅದೇ ಲಕ್ಷಾಂತರ ಜನ ತಮ್ಮ ತಮ್ಮ ತವರುಗಳತ್ತ ಮುಖ ಮಾಡಿದ್ದಾರೆ. ಈ ವೇಳೆ ನಾವು ಹೊಸ ಸಮಸ್ಯೆಗಳಿಗೆ ತೆರೆದುಕೊಳ್ಳುತ್ತಿದ್ದೇವೆ. ಇದರಿಂದ ಪಾರಾಗಬೇಕಾದರೆ ಗ್ರಾಮೀಣ, ಕೃಷಿ ಮತ್ತು ಹಿಂದುಳಿದ ಪ್ರದೇಶಗಳತ್ತ ಗಮನಹರಿಸುವುದು, ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವುದು ಮತ್ತು ಅದೇ ವಲಯದಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆ'' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಮುಂಬೈ, ಬೆಂಗಳೂರು ಹೆಚ್ಚು ಸ್ಯಾಚುರೇಟೆಡ್
"ಉದ್ಯಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರ ಮೇಲೆ ಉತ್ತಮ ಪರಿಣಾಮ ಬೀರುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ. ಮುಂಬೈ, ಬೆಂಗಳೂರಿನಂತಹ ಹೆಚ್ಚಿನ ನಗರ ಪ್ರದೇಶಗಳು ಸ್ಯಾಚುರೇಟೆಡ್ ಆಗಿವೆ. ಸ್ಮಾರ್ಟ್ ಸಿಟಿಗಳ ಬದಲು ಸ್ಮಾರ್ಟ್ ಹಳ್ಳಿಗಳನ್ನು ಮಾಡುವ ಸಮಯ ಇದು" ಎಂದು ಗಡ್ಕರಿ ಹೇಳುತ್ತಾರೆ.
ಶೇ 100 ರಷ್ಟು ಅವಲಂಬಿತವಾಗಿಲ್ಲ
ಉದ್ಯಮಗಳು ವಲಸೆ ಕಾರ್ಮಿಕರ ಮೇಲೆ ಶೇ 100 ರಷ್ಟು ಅವಲಂಬಿತವಾಗಿವೆ ಎಂಬ ಅಭಿಪ್ರಾಯ ತಪ್ಪಾಗಿದೆ ಎಂದಿರುವ ಸಚಿವರು, ಕೈಗಾರಿಕಾ ಉದ್ಯೋಗಿಗಳ ಪೈಕಿ ವಲಸೆ ಕಾರ್ಮಿಕರು 10% ರಿಂದ 20% ರಷ್ಟಿದ್ದಾರೆ ಎನ್ನುತ್ತಾರೆ. ಲಾಕ್ಡೌನ್ ಸಮಯದಲ್ಲಿ ಇವರೆಲ್ಲರೂ ತಮ್ಮ ಊರುಗಳಿಗೆ ವಾಪಸ್ ತೆರಳಿಲ್ಲ. ಕೆಲವರಿಗೆ ಉದ್ಯಮಿಗಳು ಆಶ್ರಯ ನೀಡಿರುವುದನ್ನು ನಾನು ಕಂಡುಕೊಂಡಿದ್ದೇನೆ. ಆದರೆ, ಹಳ್ಳಿಗಳತ್ತ ಹೋಗಿರುವವರಿಗೆ ಅಲ್ಲಿಯೇ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕಿದೆ ಎನ್ನುತ್ತಾರೆ.
ಕೋವಿಡ್ ಪರಿಣಾಮ ದೀರ್ಘಾವಧಿಯದ್ದಾಗಿದೆ
ಕೋವಿಡ್ -19 ಪರಿಣಾಮವು ದೀರ್ಘಾವಧಿಯದ್ದಾಗಿದೆ ಎಂದಿರುವ ನಿತಿನ್ ಗಡ್ಕರಿ ಅವರು ಸಣ್ಣ, ಅತಿ ಸಣ್ಣ ಕೈಗಾರಿಕಾ ವಲಯದ ತ್ವರಿತ ಪುನರುಜ್ಜೀವನಕ್ಕಾಗಿ, ರಫ್ತು ಹೆಚ್ಚಿಸಲು ವಿಶೇಷ ಗಮನ ಹರಿಸಲಾಗಿದೆ ಎಂದಿದ್ದಾರೆ.