ಭಾರತವು ಮತ್ತೆ ಪ್ರಗತಿಯ ಹಾದಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ
ಭಾರತವು ಮತ್ತೆ ಪ್ರಗತಿಯ ಹಾದಿಗೆ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜೂನ್ 2, 2020) ವಿಶ್ವಾಸ ವ್ಯಕ್ತಪಡಿಸಿದರು. ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ವಾರ್ಷಿಕ ಸಮಾವೇಶಕ್ಕಾಗಿ ವರ್ಚುವಲ್ ಆನ್ ಲೈನ್ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಪೊರೇಟ್ ಜಗತ್ತಿನ ಪ್ರತಿನಿಧಿಗಳ ಜತೆಗೂಡಿ ಹೇಗೆ ಭಾರತವು ಮತ್ತೆ ಪ್ರಗತಿಯ ಹಾದಿಗೆ ಮರಳುತ್ತದೆ ಎಂಬ ತಮ್ಮ ವಿಚಾರಧಾರೆಯನ್ನು ಹಂಚಿಕೊಂಡರು. ಭಾರತದ ಕಂಪೆನಿಗಳ ಜತೆ ಅತ್ಯಂತ ಮಹತ್ವದ ಸನ್ನಿವೇಶದಲ್ಲಿ ಮೋದಿ ಮಾತುಕತೆ ನಡೆಸಿದ್ದಾರೆ. ಅದಕ್ಕೆ ಹಲವಾರು ಕಾರಣಗಳು ಸಹ ಇವೆ.
14 ಖಾರಿಫ್ ಬೆಳೆಗೆ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ
ಎರಡನೇ ಅವಧಿಗೆ ಮೋದಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರ್ತಿಯಾಗಿದೆ. ಲಾಕ್ ಡೌನ್ ನಿಂದ ಗೃಹಸಚಿವಾಲಯ ವಿನಾಯಿತಿಗಳನ್ನು ನೀಡಿದ ಮೇಲೆ ಮತ್ತೆ ಕಂಪೆನಿಗಳು ಕಾರ್ಯಾರಂಭ ಮಾಡಿವೆ. ಕಳೆದ ಇಪ್ಪತ್ತೆರಡು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಭಾರತದ ರೇಟಿಂಗ್ ಅನ್ನು ಮೂಡೀಸ್ ಸೋಮವಾರದಂದು ಇಳಿಕೆ ಮಾಡಿದೆ. ಇಂಥ ಸನ್ನಿವೇಶದಲ್ಲಿ ಮೋದಿ ಆರ್ಥಿಕತೆ ಚೇತರಿಕೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು:
* ಈಗ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅದಕ್ಕಾಗಿ ಹೊಸ ಮಾರ್ಗಗಳು ತೆರೆದುಕೊಂಡಿವೆ.
* ಆಶಯ, ಒಳಗೊಳ್ಳುವಿಕೆ, ಹೂಡಿಕೆ, ಮೂಲಸೌಕರ್ಯ ಮತ್ತು ಆವಿಷ್ಕಾರ- ಭಾರತ ಸ್ವಾವಲಂಬಿಯಾಗಲು ಈ ಐದು ಅಂಶಗಳು ಬಹಳ ಮುಖ್ಯ.
* ಜನಜೀವನದಲ್ಲಿ ಸರ್ಕಾರದ ಮಧ್ಯಪ್ರವೇಶ ಕಡಿಮೆ ಮಾಡುತ್ತೇವೆ.
* ಬೆಳವಣಿಗೆ ವಾಪಸಾಗುವುರ ಆಚೆಗೆ ನಾನು ಆಲೋಚಿಸುತ್ತೇನೆ. ಖಂಡಿತವಾಗಿಯೂ ನಮ್ಮ ಪ್ರಗತಿ ಮರುಕಳಿಸುತ್ತದೆ.
* ಆರ್ಥಿಕತೆಯನ್ನು ಮರಳಿ ಹಳಿಗೆ ತರುವುದು ಪ್ರಮುಖ ಆದ್ಯತೆ.
* ಭಾರತದ ಬಿಕ್ಕಟ್ಟಿನ ನಿರ್ವಹಣೆ, ಎಂಎಸ್ ಎಂಇಗಳು ಹಾಗೂ ರೈತರನ್ನು ಬಲವಾಗಿ ನಂಬುತ್ತೇನೆ.
* ಕೊರೊನಾ ನಂತರದ ಜಗತ್ತಿನಲ್ಲಿ ಇಂಥ ಆನ್ ಲೈನ್ ಕಾರ್ಯಕ್ರಮಗಳು ಸಾಮಾನ್ಯ.
* 125 ವರ್ಷ ಪೂರೈಸಿದ ಸಿಐಐಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ.
'Getting Growth Back' ಎಂಬ ವಿಷಯದೊಂದಿಗೆ ಒಂದು ದಿನದ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಪಿರಾಮಲ್ ಗ್ರೂಪ್ ಅಧ್ಯಕ್ಷ ಅಜಯ್ ಪಿರಾಮಲ್, ಐಟಿಸಿ ಸಿಎಂಡಿ ಸಂಜೀವ್ ಪುರಿ, ಬಯೋಕಾನ್ ಸಿಎಂಡಿ ಕಿರಣ ಮಜುಂದಾರ್ ಷಾ, ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್, ಕೊಟಕ್ ಮಹೀಂದ್ರಾ ಬ್ಯಾಂಕ್ ಸಿಇಒ ಮತ್ತು ಸಿಐಐ ನಿಯೋಜಿತ ಅಧ್ಯಕ್ಷ ಉದಯ್ ಕೊಟಕ್ ಮತ್ತು ಸಿಐಐ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಭಾಗವಹಿಸಿದ್ದಾರೆ.