ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದು ದಿನಗಳ ಕಾಲ ವಾಷಿಂಗ್ಟನ್ ಡಿಸಿ ಪ್ರವಾಸದಲ್ಲಿದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ವಿಶ್ವ ಬ್ಯಾಂಕ್ ಜೊತೆ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಬೇರೆ ಕೆಲವು ಸಭೆಗಳಲ್ಲಿ ಕೂಡಾ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ.
ಜಾಗತಿಕವಾಗಿ ಹಿಂಜರಿತದ ವರದಿಗಳ ನಡುವೆಯೂ ದೇಶದ ಬೆಳವಣಿಗೆಯ ದರವು ಈ ಆರ್ಥಿಕ ವರ್ಷದಲ್ಲಿ ಶೇಕಡಾ 7 ರಷ್ಟಿದೆ ಎಂದು ಭವಿಷ್ಯ ನುಡಿದರು. ವಿತ್ತ ಸಚಿವೆ ಪ್ರಕಾರ ದೇಶದಲ್ಲಿ ಮುಂದಿನ ಪ್ರಮುಖ ಸವಾಲು ಲಭ್ಯವಿರುವ ಶಕ್ತಿ ಸಂಪತ್ತು ಹಾಗೂ ಅದಕ್ಕಾಗಿ ತಗುಲುವ ವೆಚ್ಚವನ್ನು ಸರಿದೂಗಿಸುವುದು ಆಗಿದೆ.
ಹಾಗೆಯೇ ಭಾರತದ ಮುಂದಿನ ವಾರ್ಷಿಕ ಬಜೆಟ್ ಅನ್ನು ಅತೀ ಜಾಗರೂಕವಾಗಿ ರಚಿಸಬೇಕಾಗಿದೆ ಎಂದು ಹೇಳಿದ ಸಚಿವೆ, ಭಾರತದ ಬೆಳವಣಿಗೆಗಾಗಿ ಈ ಎಚ್ಚರಿಕೆ ಅತೀ ಮುಖ್ಯ ಎಂದು ಹೇಳಿದರು. ಆ ಸಂದರ್ಭದಲ್ಲಿ ಹಣದುಬ್ಬರವನ್ನು ಕೂಡಾ ಗಮನದಲ್ಲಿ ಇಟ್ಟುಕೊಂಡು ಬಜೆಟ್ ರಚಿಸಬೇಕಾಗುತ್ತದೆ ಎಂದು ತಿಳಿಸಿದರು.

ಡಿಸೆಂಬರ್ನಲ್ಲಿ ಭಾರತವು ಜಿ-20 ವಾರ್ಷಿಕ ನಾಯಕತ್ವವನ್ನು ವಹಿಸುವ ಮೊದಲು ಜಾಗತಿಕ ಒಳಿತಿಗಾಗಿ ಕೆಲಸ ಮಾಡುವ ಮಹತ್ವದ ಸಾಮರ್ಥ್ಯವನ್ನು ಜಗತ್ತಿನ 20 ಅಗ್ರ ಆರ್ಥಿಕತೆಗಳ ಗುಂಪು ಹೊಂದಿದೆ ಎಂದು ಹಣಕಾಸು ಸಚಿವರು ಹೇಳಿದರು.
'ಆತ್ಮನಿರ್ಭರ್ ಭಾರತ್' ಉಲ್ಲೇಖ
'ಆತ್ಮನಿರ್ಭರ್ ಭಾರತ್' ಅಥವಾ ಸ್ವಾವಲಂಬನೆಯ ನೀತಿಯು ಭಾರತವು ತನ್ನ ಜಿಡಿಪಿಯ ಉತ್ಪಾದನಾ ಭಾಗವನ್ನು ಹೆಚ್ಚಿಸಬೇಕು ಎಂಬುವುದರತ್ತ ಗುರಿಯಾಗಿಸಿದೆ ಎಂದು ಹಣಕಾಸು ಸಚಿವರು ಹೇಳಿದರು.
ರುಪೇ ಕರೆನ್ಸಿಯನ್ನು ಬೇರೆ ದೇಶಗಳಲ್ಲೂ ಕೂಡಾ ಜಾರಿಗೆ ತರಲು ಬೇರೆ ದೇಶಗಳೊಂದಿಗೆ ಭಾರತ ಸಂಪರ್ಕದಲ್ಲಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಯುಪಿಐ, ಭೀಮ್ ಆಪ್, ಎನ್ಸಿಪಿಐಯಲ್ಲಿ ಜಾಗತಿಕವಾಗಿ ಬಳಕೆ ಮಾಡಲಾಗುವ ಪಾವತಿ ವಿಧಾನವನ್ನಾಗಿ ಮಾಡಲಾಗುವುದು ಎಂದು ಕೂಡಾ ಹಣಕಾಸು ಸಚಿವೆ ತಿಳಿಸಿದ್ದಾರೆ.


Click it and Unblock the Notifications