ಕೋಪರೇಟಿವ್ ಬ್ಯಾಂಕುಗಳ ಅವ್ಯವಸ್ಥೆಯ ಸುದ್ದಿಗಳನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿರುವ ಈ ಸಮಯದಲ್ಲಿ ಮತ್ತೊಂದು ಖಾಸಗಿ ವಲಯದ ಬ್ಯಾಂಕಿನ ಅವ್ಯವಹಾರ ಹೊರಬಿದ್ದಿದೆ.
2004ರಲ್ಲಿ ರಾಣಾ ಕಪೂರ್ ಮತ್ತು ಅಶೋಕ್ ಕಪೂರ್ ಹುಟ್ಟುಹಾಕಿದ ಯೆಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿಕೊಂಡಿದೆ. ಗುರುವಾರ (ಮಾ 5) ಸಂಜೆ ಈ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಯೆಸ್ ಬ್ಯಾಂಕ್, ಗ್ರಾಹಕರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾ, ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿತ್ತು. ಆದರೆ, ಬ್ಯಾಂಕಿನ ಒಳಗುಟ್ಟು ಈ ಜಗಜ್ಜಾಹೀರಾಗಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ರಿಸರ್ವ್ ಬ್ಯಾಂಕ್, ವಿತ್ ಡ್ರಾ ಮಿತಿಯನ್ನು ತಕ್ಷಣವೇ ಜಾರಿಗೆ ಬರುವಂತೆ 50 ಸಾವಿರ ರುಪಾಯಿಗೆ ನಿಗದಿ ಪಡಿಸಿದೆ.
ಸ್ಯಾಲರೀಡ್ ಕ್ಲಾಸ್ ಉದ್ಯೋಗಿಗಳಿಗೆ
ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ, ಕೃಷ್ಣನ ಲೆಕ್ಕದ ಮೂಲಕ ಆದಾಯ ತೆರಿಗೆಯನ್ನು ಕಮ್ಮಿ ಪಾವತಿ ಮಾಡುವ ಯಾವುದೇ ಆಯ್ಕೆ ಇಲ್ಲದೇ ಇರುವುದು, ಸ್ಯಾಲರೀಡ್ ಕ್ಲಾಸ್ ಉದ್ಯೋಗಿಗಳಿಗೆ. ಇಲ್ಲಿ ಏನಿದ್ದರೂ ಲೆಕ್ಕಾಚಾರ ಬಹುತೇಕ ಪಾರದರ್ಶಕವಾಗಿರುತ್ತದೆ. ಹೀಗಿರುವಾಗ, ಕ್ರಮಬದ್ದವಾಗಿ ಐಟಿಯಿಂದ ಬಚಾವ್ ಆಗಲು ಇರುವ ಒಂದು ಆಯ್ಕೆ ಫುಡ್ ಕೂಪನ್ / ಮೀಲ್ ಕಾರ್ಡ್. ಇಲ್ಲಿ ಹಾಕುವ ಹಣಕ್ಕೆ ಐಟಿ ವಿನಾಯತಿಯಿದೆ.
ಶಾಕಿಂಗ್ ಮೆಸೇಜ್ ಗಳು
ಉದ್ಯೋಗಿಗಳಿಗೆ ಫುಡ್ ಕೂಪನ್ ಅಥವಾ ಮೀಲ್ ಕಾರ್ಡ್ ವಿತರಿಸಲು ಸಂಸ್ಥೆಗಳು ಈ ವ್ಯವಹಾರ ನಡೆಸುವ ಸಂಸ್ಥೆಗಳ ಜೊತೆ ಟೈಅಪ್ ಮಾಡಿಕೊಂಡಿರುತ್ತವೆ. ಇಂತಹ ಸಂಸ್ಥೆಗಳು ಯೆಸ್ ಬ್ಯಾಂಕ್ ಅನ್ನು ತಮ್ಮ ಬ್ಯಾಂಕರ್ ಆಗಿ ಹೊಂದಿದೆ. ಉದಾಹರಣೆಗೆ ಈಡನ್ ರೆಡ್, ಟಿಕೆಟ್ ರೆಸ್ಟೋರೆಂಟ್ ಮುಂತಾದವು. ಈ ಸಂಸ್ಥೆಗಳಿಂದ ಶುಕ್ರವಾರ (ಮಾ 6) ಮಧ್ಯಾಹ್ನದ ಹೊತ್ತಿಗೆ ಶಾಕಿಂಗ್ ಮೆಸೇಜ್ ಗಳು ಬಂದಿವೆ.
ಫುಡ್ ಕೂಪನ್/ಕಾರ್ಡ್ ನಲ್ಲಿ ದುಡ್ಡಿದ್ದರೂ ಉಪಯೋಗಿಸಲು ಸಾಧ್ಯವಿಲ್ಲ
ಮೆಸೇಜ್ ನಲ್ಲಿ ಬರೆದಿರುವ ಸಾರಾಂಶ, "ರಿಸರ್ವ್ ಬ್ಯಾಂಕ್, ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿರುವುದರಿಂದ, ಯಾವುದೇ ಅಂಗಡಿ/ಮಾಲ್ ಗಳಲ್ಲಿ ಮುಂದಿನ ಆದೇಶದವರೆಗೆ ನಿಮ್ಮ ಕಾರ್ಡ್/ಕೂಪನ್ ಗಳನ್ನು ಬಳಸಲು ಸಾಧ್ಯವಾಗುದಿಲ್ಲ. ಆದಷ್ಟು ಬೇಗ ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು". ಇದು ಉದ್ಯೋಗಿಗಳಿಗೆ ಬಂದಿರುವ ಮೆಸೇಜ್. ಹಾಗಾಗಿ, ಫುಡ್ ಕೂಪನ್/ಕಾರ್ಡ್ ನಲ್ಲಿ ದುಡ್ಡಿದ್ದರೂ ಉಪಯೋಗಿಸಲು ಸಾಧ್ಯವಾಗುವುದಿಲ್ಲ.
ಖಾಸಗಿ ರಂಗದ 5ನೇ ಅತಿ ದೊಡ್ಡ ಖಾಸಗಿ ಬ್ಯಾಂಕ್, ಯೆಸ್ ಬ್ಯಾಂಕ್
ಖಾಸಗಿ ರಂಗದ 5ನೇ ಅತಿ ದೊಡ್ಡ ಖಾಸಗಿ ಬ್ಯಾಂಕ್, ಯೆಸ್ ಬ್ಯಾಂಕಿನ ಈ ರಗಳೆಯಿಂದ ಫೋನ್ ಪೇ ಕೂಡಾ ಬಳಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಫೋನ್ ಪೇ ಬಳಕೆದಾರರಿಗೆ ಬಂದಿರುವ ಮೆಸೇಜಿನ ಸಾರಾಂಶ,"ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿರುವುದರಿಂದ, ಸದ್ಯ ನಾವು ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಅಹೋರಾತ್ರಿ ವ್ಯವಸ್ಥೆಯನ್ನು ಸರಿಪಡಿಸಲು ನಾವು ಶ್ರಮಿಸುತ್ತಿದ್ದೇವೆ. ಇನ್ನು, ಕೆಲವು ಗಂಟೆಗಳಲ್ಲಿ ನಮ್ಮ ಸೇವೆ ಮುಂದುವರಿಯಲಿದೆ". ಇದು ಶುಕ್ರವಾರ ಸಂಜೆ ಫೋನ್ ಪೇನ ಸಮೀರ್ ನಿಗಂ ಕಳುಹಿಸಿರುವ ಮೆಸೇಜ್.
ರಿಸರ್ವ್ ಬ್ಯಾಂಕ್ ಕಠಿಣ ನಿಯಮ
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಕಠಿಣ ನಿಯಮವನ್ನು ಜಾರಿಗೆ ತಂದಿತ್ತು. ಅದರೆ ಪ್ರಕಾರ, ಬ್ಯಾಂಕ್ ಗಳು ಸಾಲದ ವಿವರಗಳನ್ನು ಕಡ್ಡಾಯವಾಗಿ ಆರ್ಬಿಐಗೆ ಸಲ್ಲಿಸಬೇಕು. ಈ ಕಠಿಣ ನಿಯಮ ಯೆಸ್ ಬ್ಯಾಂಕಿಗೆ ಭಾರೀ ಹೊಡೆತ ನೀಡಿತ್ತು. ಯೆಸ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನಲ್ಲಿ ವಸೂಲಾಗದ ಸಾಲದ ವಿಚಾರದಲ್ಲಿ ವ್ಯತ್ಯಾಸ ಇರುವುದು ಆರ್ಬಿಐ ಗಮನಕ್ಕೆ ಬಂದಿತ್ತು. ಹಾಗಾಗಿಯೇ, ಯೆಸ್ ಬ್ಯಾಂಕ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಬ್ಯಾಂಕಿನ ಈ ಅವ್ಯವಹಾರದಿಂದ ಹೈರಾಣವಾಗುತ್ತಿರುವುದು ನಮ್ಮ, ನಿಮ್ಮಂತಹ ಬಡಪಾಯಿಗಳು.


Click it and Unblock the Notifications