ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆಯ ಬೇಡಿಕೆ ಮತ್ತೆ ಈಗ ಮುನ್ನೆಲೆಗೆ ಬಂದಿದೆ. ಆದರೆ ಆದಾಯ ತೆರಿಗೆಗೆ ಈಗಾಗಲೇ ವಿನಾಯಿತಿ ನೀಡುತ್ತಿರುವುದರಿಂದ ಮತ್ತಷ್ಟು ವಿನಾಯಿತಿ ಕ್ರಮಗಳಿಗೆ ಸರಕಾರ ಮುಂದಾಗಲಾರದು ಎನ್ನಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಹಿಂದಿನ ಕೇಂದ್ರ ಹಣಕಾಸು ಖಾತೆಯ ಪ್ರಭಾರಿ ಸಚಿವರಾಗಿದ್ದ ಪಿಯೂಷ್ ಗೋಯಲ್ ಮಧ್ಯಂತರ ಬಜೆಟ್ ಮಂಡಿಸಿದ್ದರು. ಆಗ ವೈಯಕ್ತಿಕ ತೆರಿಗೆ ಸ್ಲ್ಯಾಬ್ಗಳಲ್ಲಿ ಮಾರ್ಪಾಟು ಮಾಡಬೇಕೆಂಬ ಕೂಗು ಬಲವಾಗಿಯೇ ಕೇಳಿ ಬಂದಿತ್ತು. ಆದರೆ ಇಂಥ ಯಾವ ಬದಲಾವಣೆ ಅಂದಿನ ಬಜೆಟ್ನಲ್ಲಿ ಘೋಷಣೆಯಾಗಲಿಲ್ಲ. ಆದರೂ ಕೇಂದ್ರ ಸರಕಾರ ತೆರಿಗೆದಾತರಿಗೆ ಒಂದಿಷ್ಟು ನಿರಾಳ ಮೂಡಿಸುವ ಕ್ರಮವೊಂದನ್ನು ಘೋಷಿಸಿತ್ತು. ಇದರನ್ವಯ 5 ಲಕ್ಷದವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಯಿತು. ಹಾಗೆಯೇ ಸಂಬಳ ಪಡೆಯುವ ನೌಕರರ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ರೂ. 40000 ಗಳಿಂದ 50000 ರೂ.ಗಳಿಗೆ ಹೆಚ್ಚಿಸಲಾಯಿತು. ಇನ್ನು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗಳಲ್ಲಿನ ಠೇವಣಿಯಿಂದ ಬರುವ ಬಡ್ಡಿ ಆದಾಯಕ್ಕೆ ಟಿಡಿಎಸ್ ವಿಧಿಸುವ ಮಿತಿಯನ್ನು 10 ಸಾವಿರ ರೂ. ಗಳಿಂದ 40 ಸಾವಿರ ರೂ. ಆದಾಯ ಮಟ್ಟಕ್ಕೆ ಹೆಚ್ಚಿಸಲಾಯಿತು. ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರವು ಪೂರ್ಣ ಪ್ರಮಾಣದ ಬಜೆಟ್ 2019 (Budget-2019) ಮಂಡಿಸುವ ತಯಾರಿಯಲ್ಲಿ ತೊಡಗಿದೆ.
ಹೊಸ ಸರ್ಕಾರದ ಬಜೆಟ್
ಈಗ ಮತ್ತೊಮ್ಮೆ ಬಜೆಟ್ ಮಂಡಿಸುವ ಅವಕಾಶ ಸರಕಾರದ ಮುಂದೆ ಇರುವುದರಿಂದ ಈಗಿನ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ದೇಶದ ಜನತೆಯ ಬೇಡಿಕೆಯನುಸಾರ ಕೆಲ ಸೌಲಭ್ಯಗಳನ್ನು ಘೋಷಿಸಬಹುದು ಎನ್ನುವ ನಂಬಿಕೆ ಮನೆ ಮಾಡಿದೆ. ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆಯ ಬೇಡಿಕೆ ಮತ್ತೆ ಈಗ ಮುನ್ನೆಲೆಗೆ ಬಂದಿದೆ. ಆದರೆ ಆದಾಯ ತೆರಿಗೆಗೆ ಈಗಾಗಲೇ ವಿನಾಯಿತಿ ನೀಡುತ್ತಿರುವುದರಿಂದ ಮತ್ತಷ್ಟು ವಿನಾಯಿತಿ ಕ್ರಮಗಳಿಗೆ ಸರಕಾರ ಮುಂದಾಗಲಾರದು ಎನ್ನಲಾಗುತ್ತಿದೆ. ಆದರೂ ಈ ಬಜೆಟ್ನಿಂದ ಈ ಕೆಳಗೆ ತಿಳಿಸಲಾದ ೩ ಪ್ರಮುಖ ಘೋಷಣೆಗಳನ್ನು ನೀವು ನಿರೀಕ್ಷೆ ಮಾಡಬಹುದು. ಜುಲೈ 5 ರಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್-2019 ಮಂಡಿಸಲಿದ್ದಾರೆ.
1. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್)
ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಣ ಹಿಂಪಡೆಯುವಾಗ ಅದಕ್ಕೆ ಭಾಗಶಃ ತೆರಿಗೆ ಪಾವತಿಸಬೇಕಾಗುತ್ತದೆ. ಈ ಪಿಂಚಣಿ ಯೋಜನೆಯಲ್ಲಿ ಹೂಡಲಾಗುವ ಮೊತ್ತ ಹಾಗೂ ಇತರ ಸಂಚಿತ ಮೊತ್ತಕ್ಕೆ ಒಂದು ಹಂತದವರೆಗೆ ತೆರಿಗೆ ವಿನಾಯಿತಿ ಇದ್ದರೂ, ಮೊತ್ತ ಹಿಂಪಡೆತಗಳಿಗೆ ಮಾತ್ರ ಚಾಲ್ತಿಯಲ್ಲಿರುವ ನಿಯಮಗಳಂತೆ ತೆರಿಗೆ ಪಾವತಿಸಬೇಕಿದೆ ಎನ್ನುತ್ತಾರೆ ಡೆಲಾಯ್ಟ್ ಇಂಡಿಯಾ ಪಾರ್ಟನರ್ ದಿವ್ಯಾ ಬವೇಜಾ.
ಎನ್ಪಿಎಸ್ ಸದಸ್ಯರು ತಮಗೆ 60 ವರ್ಷ ವಯಸ್ಸಾದ ನಂತರ ಎನ್ಪಿಎಸ್ ಖಾತೆಯಲ್ಲಿ ಜಮೆಯಾಗಿರುವ ಶೇ.60 ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಇದರಲ್ಲಿ ಶೇ.40 ಮೊತ್ತಕ್ಕೆ ತೆರಿಗೆ ವಿನಾಯಿತಿ ಇದ್ದು, ಶೇ.20 ಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಹಾಗೆಯೇ ಇನ್ನುಳಿದ ಶೇ.40 ರಷ್ಟು ಮೊತ್ತವನ್ನು ಮಾಸಿಕ ಪಿಂಚಣಿ ಪಡೆಯುವ ಸಲುವಾಗಿ ಖಾತೆಯಲ್ಲಿ ಹಾಗೆಯೇ ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ಈಗ ಹಿಂಪಡೆಯಬಹುದಾದ ಸಂಪೂರ್ಣ ಶೇ.60 ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆ ಸರಕಾರದ ಮುಂದಿದ್ದು, ಇಂಥದೊಂದು ಘೋಷಣೆ ಆಗಬಹುದು ಎಂದು ಅಭಿಪ್ರಾಯ ಪಡುತ್ತಾರೆ ಬವೇಜಾ.
2. 80ಡಿ ಮಿತಿ ಹೆಚ್ಚಳ
80ಡಿ ಅನ್ವಯ ತೆರಿಗೆ ವಿನಾಯಿತಿಗಳು 80ಸಿ ಯಷ್ಟು ಹೆಚ್ಚು ಪ್ರಚಲಿತವಾಗಿ ಚರ್ಚೆಗೆ ಒಳಗಾಗಿಲ್ಲ. 80ಸಿ ಮೀರಿದ ನಂತರ 90ಡಿ ಅನ್ವಯ ತೆರಿಗೆ ಉಳಿತಾಯ ಮಾಡಬಹುದಾಗಿದೆ. ಆದರೂ ಈ ಸೆಕ್ಷನ್ ಅಡಿ ನೀವು ಕೇವಲ 25 ಸಾವಿರ ರೂ.ಗಳನ್ನು ಕ್ಲೇಮ್ ಮಾಡಬಹುದಾಗಿದೆ.
ಈ ಸೆಕ್ಷನ್ ಅಡಿ ಈಗ ಆರೋಗ್ಯ ವಿಮಾ ಪಾಲಿಸಿ ಪ್ರೀಮಿಯಂ ಪಾವತಿಗೆ ನೀಡಲಾಗುತ್ತಿರುವ ತೆರಿಗೆ ವಿನಾಯಿತಿ ಮಟ್ಟವನ್ನು 25 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳಿಗೆ ಹೆಚ್ಚಿಸಬಹುದು ಎನ್ನುತ್ತಾರೆ ಬವೇಜಾ.
3. 80ಸಿ ಮಿತಿ ಹೆಚ್ಚಳ
ಪ್ರಸ್ತುತ ಕಾಯ್ದೆ 80ಸಿ ಅಡಿ 1.5 ಲಕ್ಷ ರೂ.ಗಳಿಗೆ ತೆರಿಗೆ ವಿನಾಯಿತಿ ಇದೆ. ಇದನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ತೆರಿಗೆದಾತರ ಹಲವಾರು ರೀತಿಯ ಪಾವತಿಗಳಾದ (ಉದಾ: ಮಕ್ಕಳ ಟ್ಯೂಶನ್ ಫೀ), ಹೂಡಿಕೆಗಳು ಮತ್ತು ಗೃಹ (ಉದಾ: ಗೃಹಸಾಲ ಮರುಪಾವತಿ) ಮತ್ತು ನಿವೃತ್ತಿ ಜೀವನಕ್ಕೆ ಹೂಡಿಕೆಗಳು (ಉದಾ:ಪಿಪಿಎಫ್) ಹೀಗೆ ಹಲವಾರು ಪಾವತಿಗಳಿಗೆ 80 ಸಿ ಅಡಿ ವಿನಾಯಿತಿ ಸಿಗುತ್ತದೆ. ಆದರೆ ಇಷ್ಟೊಂದು ರೀತಿಯ ಪಾವತಿಗಳಿಗೆ ಕೇವಲ 1.5 ಲಕ್ಷ ರೂ. ವರೆಗೆ (ಎನ್ಪಿಎಸ್ ವಂತಿಗೆ ಸೇರಿ) ತೆರಿಗೆ ವಿನಾಯಿತಿ ನೀಡಿದ್ದು ಯಾತಕ್ಕೂ ಸಾಕಾಗದು ಎನ್ನುತ್ತಾರೆ ಬವೇಜಾ.
ಕೇಂದ್ರ ಸರಕಾರ 80ಸಿ ಅನ್ವಯ ಕೆಲವು ಪ್ರಮುಖ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿ ಮಟ್ಟವನ್ನು 1.5 ಲಕ್ಷ ರೂ.ಗಳಿಂದ ಕನಿಷ್ಠ 2 ಲಕ್ಷ ರೂ.ಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. ಇದು ಜಾರಿಯಾದಲ್ಲಿ ಸ್ಲ್ಯಾಬ್ಗಳನ್ನು ಆಧರಿಸಿ ವೈಯಕ್ತಿಕ ತೆರಿಗೆದಾರನೊಬ್ಬ 2,500 ರೂ. ಗಳಿಂದ 15,000 ರೂ.ಗಳವರೆಗೆ ತೆರಿಗೆ ಉಳಿತಾಯ ಮಾಡಲು ಸಾಧ್ಯ. ಎಂಬುದು ದಿವ್ಯ ಬವೇಜಾ ಅವರ ಅಭಿಪ್ರಾಯವಾಗಿದೆ.


Click it and Unblock the Notifications
