ಆರ್ಥಿಕ ಆತಂಕದ ನಾಲ್ಕು ಮುಖಗಳು; ಭಯ ಹೋಗಲಾಡಿಸಲು ಇಲ್ಲಿವೆ ಸೂತ್ರ
ಭಯ ಎಂಬುದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ- ಗಾತ್ರದಲ್ಲಿ ಇರುತ್ತದೆ. ಕೆಲವರಿಗೆ ಸಣ್ಣ ಸಣ್ಣದಕ್ಕೂ ಭಯ ಆಗುತ್ತದೆ. ನೋಟಿನ ಕಂತೆ ಕೊಟ್ಟು ಎಣಿಸಲು ಹೇಳಿದರೆ, ಕೈ ಬೆವರಿ- ಲೆಕ್ಕ ತಪ್ಪಿ, ನಡುಗಲು ಆರಂಭಿಸುತ್ತಾರೆ. ಮತ್ತೆ ಕೆಲವರಿಗೆ ವರ್ತಮಾನದಲ್ಲಿ ಎಂಥದ್ದೇ ಸುಖ- ಸುಪ್ಪತ್ತಿಗೆ, ಅನುಕೂಲಗಳೇ ಇದ್ದರೆ ಭವಿಷ್ಯದ ಬಗ್ಗೆಯೇ ಆತಂಕ.
ಹೀಗೆ ವರ್ತಮಾನ, ಭವಿಷ್ಯತ್ ಗಳ ಆತಂಕವನ್ನು ಎಷ್ಟು ಬಗೆಯಲ್ಲಿ ವಿಂಗಡಿಸಬಹುದು? ಎಷ್ಟು ಬಗೆಯಲ್ಲಾದರೂ ವಿಂಗಡಿಸಬಹುದು, ಬಿಡಿ ಅಂತೀರಾ? ಈ ಲೇಖನದಲ್ಲಿ ಆರ್ಥಿಕ ಆತಂಕಗಳನ್ನು ಪಟ್ಟಿ ಮಾಡಲಾಗಿದೆ. ಭಾರತೀಯರ ಭಯ ಯಾವುದರ ಬಗ್ಗೆ, ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.
ಅನಿಶ್ಚಿತತೆ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳಬಹುದು
ಆರ್ಥಿಕ ಆತಂಕದಲ್ಲಿ ತುಂಬ ಸಾಮಾನ್ಯವಾದದ್ದು ಇದು. ಅದರಲ್ಲು ಅನನುಭವಿಗಳು ಅಥವಾ ಆರ್ಥಿಕ ಜ್ಞಾನದ ಕೊರತೆ ಇರುವ ಹೂಡಿಕೆದಾರರಲ್ಲಿ ಈ ಭಯ ಜಾಸ್ತಿ ಇರುತ್ತದೆ. ಈ ಹಿಂದಿನ ಮಾರುಕಟ್ಟೆ ಅನಿಶ್ಚಿತ ಸನ್ನಿವೇಶಗಳಲ್ಲಿ ಹಣ ಕಳೆದುಕೊಂಡ ಹೂಡಿಕೆದಾರರ ಸಂಖ್ಯೆ ಹೆಚ್ಚಿರುವುದು ಸತ್ಯ ಸಹ ಹೌದು. ಆ ಕಾರಣಕ್ಕೆ ನಷ್ಟ ಆಗುವ ಭಯ ಇರುತ್ತದೆ.
ಷೇರು ಮಾರುಕಟ್ಟೆಯಲ್ಲಿ ಈ ಹಿಂದೆ ಹಣ ಕಳೆದುಕೊಂಡು, ನಷ್ಟ ಅನುಭವಿಸಿದ್ದಲ್ಲಿ ನೇರವಾಗಿ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಬಾರದು. ಆದರೆ ಮ್ಯೂಚುವಲ್ ಫಂಡ್ಸ್ ಮೂಲಕ ಹಣ ಹೂಡಬಹುದು. ಒಂದು ವೇಳೆ ಷೇರಿನ ಮೇಲೆ ಹೂಡಿಕೆ ಮಾಡಬೇಕು ಅಂದುಕೊಂಡಲ್ಲಿ ಸ್ನೇಹಿತರು, ಸಂಬಂಧಿಕರು ಸಲಹೆಗಳನ್ನು ಕುರುಡಾಗಿ ನಂಬಬೇಡಿ. ನೀವಾಗಿಯೇ ಈ ವಿಷಯದ ಬಗ್ಗೆ ಓದಿಕೊಂಡು ತಿಳಿಯಿರಿ ಅಥವಾ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ. ದೀರ್ಘಾವಧಿಗೆ ಹೂಡಿಕೆ ಮಾಡಿ. ಅಲ್ಪಾವಧಿಯ ಆತಂಕಗಳಿಂದ ದೂರವಾಗಬಹುದು.
ನಿವೃತ್ತಿ ಜೀವನಕ್ಕೆ ಸಾಕಷ್ಟು ಹಣ ಇಲ್ಲ, ಮಕ್ಕಳ ಮೇಲೆ ಅವಲಂಬಿಸ ಬೇಕಾಗಬಹುದು
ನಿವೃತ್ತಿ ಹೊತ್ತಿಗೆ ಶೇಕಡಾ ಐವತ್ತೊಂದರಷ್ಟು ಭಾರತೀಯರ ಬಳಿ ಹಣದ ಕೊರತೆ ಇರುತ್ತದೆ. ಹತ್ತರಲ್ಲಿ ಏಳು ಮಂದಿಯು ಮಕ್ಕಳು ತಮ್ಮನ್ನು ಪೋಷಿಸಲಿ ಎಂದು ನಿರೀಕ್ಷಿಸುತ್ತಾರೆ ಎಂಬ ಅಂಶವನ್ನು ಎಚ್ ಎಸ್ ಬಿಸಿ ಅಧ್ಯಯನವೊಂದು ತಿಳಿಸಿದೆ. ಇನ್ನೊಂದು ವಿಷಯ ಗೊತ್ತಿರಲಿ, ಜಾಗತಿಕ ಮಟ್ಟದಲ್ಲಿ ಶೇಕಡಾ ಮೂವತ್ತೊಂಬತ್ತು ಮಂದಿ ತಮ್ಮ ನಿವೃತ್ತಿಗಾಗಿ ಉಳಿತಾಯ ಮಾಡಿದರೆ, ಭಾರತದಲ್ಲಿ ಶೇಕಡಾ ಐವತ್ತೈದು ಮಂದಿ ಉಳಿತಾಯ ಮಾಡುತ್ತಾರೆ. ಆದರೂ ಈ ಥರದ ಆತಂಕ ಇದ್ದೇ ಇದೆ.
ಈ ಭಯದಿಂದ ಹೊರಗೆ ಬರುವುದಕ್ಕೆ ಮಾರ್ಗ ಇದೆ. ಅನವಶ್ಯಕ ಖರ್ಚುಗಳ ಪಟ್ಟಿಯೊಂದನ್ನು ಮಾಡಿಕೊಂಡು, ಅದರಲ್ಲಿ ಉಳಿತಾಯ ಮಾಡಿ. ಆ ಮೊತ್ತವನ್ನು ನಿವೃತ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಿ. ಆರ್ಥಿಕ ಸಲಹೆಗಾರರ ನೆರವು ಪಡೆದುಕೊಳ್ಳಿ. ಈಗಿರುವ ನಿಮ್ಮ ಆದಾಯದ ಜತೆಗೆ ಹೆಚ್ಚುವರಿ ಮೂಲವನ್ನು ಮಾಡಿಕೊಂಡು, ನಿವೃತ್ತಿಯನ್ನು ಇನ್ನಷ್ಟು ಮುಂಚಿತವಾಗಿಯೇ ಪ್ಲಾನ್ ಮಾಡಿ.
ಕೆಲಸ ಕಳೆದುಕೊಳ್ಳಬಹುದು
ಕೆಲಸ ಕಳೆದುಕೊಳ್ಳಬಹುದು ಎಂಬ ಆತಂಕ ಕಾಡುತ್ತಲೇ ಇದೆಯಾ? ಸಹೋದ್ಯೋಗಿಗಳ ಮೂಲಕವೋ ಅಥವಾ ಬಾಸ್ ಕಡೆಯಿಂದಲೋ ಆ ಬಗ್ಗೆ ಸುಳಿವು ಸಿಕ್ಕಿದೆಯಾ? ಕಂಪೆನಿಯೊಳಗಿನ ಬೆಳವಣಿಗೆಯಿಂದ ಅಥವಾ ಕೆಲಸ ನಿರ್ವಹಿಸುವ ಕ್ಷೇತ್ರದಲ್ಲೇ ಅಂಥದ್ದೊಂದು ವಾತಾವರಣ ಇದ್ದಲ್ಲಿ... ಈ ಪೈಕಿ ಯಾವುದೇ ಒಂದಕ್ಕೆ ಉತ್ತರ 'ಹೌದು' ಎಂದಾದರೆ, ಈ ಭಯದಿಂದ ಆಚೆ ಬರಲೇಬೇಕು.
ಇಂಥ ಸನ್ನಿವೇಶದಲ್ಲಿ ಪ್ರಾಮಾಣಿಕವಾದ ವಿಮರ್ಶೆ ಮಾಡಿಕೊಳ್ಳಿ. ಕಾರ್ಯ ನಿರ್ವಹಣೆಯಲ್ಲಿ ನೀವೇ ಹಿಂದೆ ಇದ್ದೀರಾ ಎಂಬುದರ ಮೌಲ್ಯಮಾಪನ ಮಾಡಿಕೊಳ್ಳಿ. ಒಂದು ವೇಳೆ ಹೌದು ಎಂದಾದರೆ, ನಿಮ್ಮ ಬಾಸ್ ಜತೆಗೆ ಮಾತನಾಡಿ, ಕೌಶಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ವೆಚ್ಚ ಕಡಿತಕ್ಕೋ ಅಥವಾ ಆ ಕ್ಷೇತ್ರದಲ್ಲಿ ಕುಸಿಯುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಇಂಥ ಸನ್ನಿವೇಶ ಸೃಷ್ಟಿಯಾಗುತ್ತಿದೆ ಎಂದಾದಲ್ಲಿ ಅದಕ್ಕೆ ನೀವು ಜವಾಬ್ದಾರರಲ್ಲ. ಆಗ ಹೊಸ ಕೌಶಲಗಳನ್ನು ಕಲಿತುಕೊಳ್ಳಿ. ಈಗಿನ ಕೆಲಸದಿಂದ ಅವರಾಗಿಯೇ ತೆಗೆಯುವ ಮೊದಲು ಹೊಸ ಉದ್ಯೋಗ ಹುಡುಕಿಕೊಳ್ಳಿ. ತುರ್ತು ಸನ್ನಿವೇಶಗಳಿಗೆ ಸ್ವಲ್ಪ ಹಣವನ್ನು ಎತ್ತಿಟ್ಟುಕೊಳ್ಳಿ.
ನನ್ನಿಂದ ಎಂದಿಗೂ ಸಾಲ ತೀರಿಸಲು ಸಾಧ್ಯವಿಲ್ಲ
ಸಾಲ ಸಿಗುತ್ತದೆ ಅಂದಾಕ್ಷಣ ಬೇಡವಾದದ್ದನ್ನು ಖರೀದಿ ಮಾಡುವ ಖಯಾಲಿ ಕೆಲವರಿಗೆ ಇರುತ್ತದೆ. ಅದರ ಪರಿಣಾಮವಾಗಿ ಹಲವು ಸಾಲಗಳು ಆಗುತ್ತವೆ. ಅವುಗಳಲ್ಲಿ ಕೆಲವು ದೀರ್ಘಾವಧಿಗೆ ದೊಡ್ಡ ಮೊತ್ತದ ಇಎಂಐನದ್ದಾಗಿರುತ್ತದೆ. ಆ ಕಾರಣಕ್ಕೆ ದೊಡ್ಡ ಮೊತ್ತದ ಸಾಲ ತೀರಿಸಲು ಸಾಧ್ಯವಾ ಎಂಬ ಆತಂಕ ಎದುರಾಗುತ್ತದೆ.
ಯಾವಾಗಲೂ ನಿಮ್ಮ ಆದಾಯದ ನಲವತ್ತರಿಂದ- ಐವತ್ತು ಪರ್ಸೆಂಟ್ ಗೂ ಹೆಚ್ಚು ಮೊತ್ತದ ಸಾಲ ಮಾಡಬಾರದು. ಈಗಾಗಲೇ ದೊಡ್ಡ ಮೊತ್ತದ ಸಾಅಲ ತೆಗೆದುಕೊಂಡಿದ್ದರೆ ಅದನ್ನು ಆದ್ಯತೆ ಮೇಲೆ ತೀರಿಸಲು ಆಲೋಚಿಸಿ. ಕ್ರೆಡಿಟ್ ಕಾರ್ಡ್ ಅಥವಾ ಪರ್ಸನಲ್ ಲೋನ್ ಸಾಲಗಳನ್ನು ಮೊದಲಿಗೆ ತೀರಿಸಿ. ಆ ನಂತರ ಕಾರ್ ಹಾಗೂ ಶಿಕ್ಷಣ ಸಾಲಗಳನ್ನು ಚುಕ್ತಾ ಮಾಡಿ. ದೀರ್ಘಾವಧಿ ಸಾಲವೇ ಬೇಡ ಅಂದುಕೊಳ್ಳುವವರಾದರೆ ಗೃಹ ಸಾಲ ತೀರಿಸಲು ಹೆಚ್ಚಿನ ಗಮನ ನೀಡಿ. ಅಥವಾ ಆ ಮೂಲಕ ತೆರಿಗೆ ಅನುಕೂಲ ದೊರೆಯಬೇಕು ಅಂತಿದ್ದಲ್ಲಿ ಗೃಹ ಸಾಲ ಹಾಗೇ ಉಳಿಸಿಕೊಳ್ಳಿ. ಇಎಂಐ ತಪ್ಪಿಸಬೇಡಿ.