ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವ್ಯವಹಾರಕ್ಕೂ ಬ್ಯಾಂಕುಗಳಿಗೆ ಅಲೆದಾಡುವ ಅಗತ್ಯವಿಲ್ಲ. ತುರ್ತಾಗಿ ಹಣ ಬೇಕಾದ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರು ಎಟಿಎಂ ಬಾಗಿಲು ತೆರೆಯುವುದು ಸಹಜ!
ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವ್ಯವಹಾರಕ್ಕೂ ಬ್ಯಾಂಕುಗಳಿಗೆ ಅಲೆದಾಡುವ ಅಗತ್ಯವಿಲ್ಲ. ತುರ್ತಾಗಿ ಹಣ ಬೇಕಾದ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರು ಎಟಿಎಂ ಬಾಗಿಲು ತೆರೆಯುವುದು ಸಹಜ! ಹಗಲು, ರಾತ್ರಿ ಹೀಗೆ ಯಾವುದೇ ಸಮಯದಲ್ಲಿಯೂ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ತಕ್ಷಣ ಪಡೆದುಕೊಳ್ಳಲು ಈ ಎಟಿಎಂಗಳು ಅನುಕೂಲಕರವಾಗಿವೆ. ಕಳೆದೊಂದು ದಶಕದಲ್ಲಿ ಎಟಿಎಂಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸುವ ವಂಚಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ವಿಧಾನಗಳಿಂದ ಈ ವಂಚಕರು ಹಣ ಎಗರಿಸುತ್ತಾರೆ. ಹಾಗಂತ ವಂಚಕರಿಗೆ ಹೆದರಿ ಎಟಿಎಂ ಬಳಸುವುದನ್ನೇ ಬಿಟ್ಟು ಬಿಡಬೇಕು ಅಂತಲ್ಲ. ಆದರೆ ಎಟಿಎಂನಿಂದ ಹಣ ಪಡೆಯುವಾಗ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಇಂಥ ವಂಚನೆ ಹಾಗೂ ಮೋಸಗಳಿಂದ ಪಾರಾಗಬಹುದಾಗಿದೆ. ಎಟಿಎಂ ಬಳಸುವಾಗ ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬ ಸಂಗತಿಯನ್ನು ಇಲ್ಲಿ ವಿವರಿಸಲಾಗಿದೆ.
ಎಟಿಎಂ ವ್ಯವಹಾರದ ಸುರಕ್ಷತೆಗಾಗಿ ಎಟಿಎಂ ಬಳಕೆದಾರರು ಅನುಸರಿಸಬೇಕಾದ ಕ್ರಮಗಳು ಇಲ್ಲಿವೆ:
ಎಟಿಎಂ ಬಗ್ಗೆ ಎಚ್ಚರವಿರಲಿ
ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಎಟಿಎಂ ಯಂತ್ರ ಪರಿಶೀಲನೆ ಮಾಡುವುದು ಸಾಧ್ಯವಾಗದೆ ಇರಬಹುದು. ಆದರೆ ಕೆಲ ಚಿಕ್ಕ ಪುಟ್ಟ ವಿಧಾನಗಳ ಮೂಲಕ ಎಟಿಎಂ ವ್ಯವಹಾರವನ್ನು ಸುರಕ್ಷಿತಗೊಳಿಸಬಹುದು. ರಾತ್ರಿ ಸಮಯದಲ್ಲಿ ಉತ್ತಮ ಬೆಳಕಿರುವ ಹಾಗೂ ಹೆಚ್ಚು ಜನಸಂಚಾರ ಇರುವ ಪ್ರದೇಶಗಳಲ್ಲಿನ ಎಟಿಎಂಗಳನ್ನು ಬಳಸುವುದು ಸೂಕ್ತ. ಸಿಸಿಟಿವಿ ಅಳವಡಿಸಿರುವ ಹಾಗೂ ಬ್ಯಾಂಕ್ ಕಟ್ಟಡದಲ್ಲಿರುವ ಎಟಿಎಂಗಳನ್ನು ಹುಡುಕಿ. ಈ ಹಿಂದೆ ದರೋಡೆ ಅಥವಾ ವಂಚನೆ ಪ್ರಕರಣಗಳು ನಡೆದ ಎಟಿಎಂಗಳನ್ನು ಆದಷ್ಟು ಬಳಸದೆ ಇರಲು ಪ್ರಯತ್ನಿಸಬೇಕು.
ವಂಚಕರ ಬಗ್ಗೆ ಗಮನವಿರಲಿ
ಎಟಿಎಂ ಕಾರ್ಡ ಸ್ವೈಪ್ ಮಾಡುವ ಮುನ್ನ ಎಟಿಎಂ ಯಂತ್ರವನ್ನು ಸರಿಯಾಗಿ ಚೆಕ್ ಮಾಡಿ. ಕೆಲ ಬಾರಿ ವಂಚಕರು ವಾಸ್ತವ ಕಾರ್ಡ ಸ್ಲಾಟ್ ಅನ್ನು ಮರೆ ಮಾಡಿ ನಕಲಿ ಸ್ಲಾಟ್ ಅನ್ನು ಅಳವಡಿಸಿರುತ್ತಾರೆ. ಇದರಲ್ಲಿ ಕಾರ್ಡ್ ಹಾಕಿದರೆ ಕಾರ್ಡ ಮಾಹಿತಿಯನ್ನೂ ಸೈಬರ್ ವಂಚಕರು ಕದಿಯುವ ಸಾಧ್ಯತೆ ಇರುತ್ತದೆ. ಇನ್ನು ಕೆಲ ಬಾರಿ ಕೀಬೋರ್ಡ ಮೇಲ್ಭಾಗದಲ್ಲಿ ಮೈಕ್ರೊ ಕ್ಯಾಮೆರಾ ಅಳವಡಿಸಿ ನಿಮ್ಮ ಪಿನ್ ಕದಿಯಬಹುದು.
ಇಂಥ ಯಾವುದೇ ವಂಚನೆಯ ಯತ್ನಗಳು ನಿಮ್ಮ ಗಮನಕ್ಕೆ ಬಂದಲ್ಲಿ ಆ ಎಟಿಎಂ ಬಳಸದಿರಿ ಹಾಗೂ ಅದರ ಬಗ್ಗೆ ಸಂಬಂಧಿಸಿದ ಬ್ಯಾಂಕಿಗೆ ತಕ್ಷಣ ಮಾಹಿತಿ ನೀಡಿ. ಹೀಗೆ ಮಾಡುವುದರ ಮೂಲಕ ಇನ್ನೂ ಕೆಲವರು ಮೋಸಕ್ಕೆ ಒಳಗಾಗುವುದರಿಂದ ನೀವು ತಡೆಗಟ್ಟಬಹುದು.
ಜೊತೆಯಲ್ಲಿ ಯಾರಾದರೂ ಇರಲಿ
ಕೇವಲ ಸೈಬರ್ ವಂಚನೆಯ ಮೂಲಕ ಮಾತ್ರ ಮೋಸ ನಡೆಯುತ್ತದೆ ಎಂದುಕೊಳ್ಳಬೇಡಿ. ಎಟಿಎಂಗಳಲ್ಲಿ ಪಕ್ಕದಲ್ಲಿಯೇ ನಿಂತು ನಿಮಗೆ ಗೊತ್ತಾಗದಂತೆ ಪಿನ್ ನಂಬರ್ ಗಮನಿಸುವ ವಂಚಕರು ಇರುತ್ತಾರೆ. ಇಂಥವರ ಬಗ್ಗೆ ಎಚ್ಚರವಿರಲಿ. ಯಾವುದೋ ನಿರ್ದಿಷ್ಟ ಎಟಿಎಂ ನಿಂದ ಹಣ ತೆಗೆಯುವುದು ಸುರಕ್ಷಿತವಾಗಿ ಕಾಣುತ್ತಿಲ್ಲ ಎಂದು ಅನಿಸುತ್ತಿದ್ದರೆ ಜೊತೆಗೆ ಯಾರನ್ನಾದರೂ ಕರೆದೊಯ್ಯಿರಿ. ಇದರಿಂದ ಹಣ ಕಸಿದುಕೊಂಡು ಹೋಗುವ ವಂಚಕರಿಂದ ಪಾರಾಗಬಹುದು. ಎಟಿಎಂ ಸುತ್ತಮುತ್ತ ಯಾರಾದರೂ ಬಹಳ ಹೊತ್ತಿನಿಂದ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಪಿನ್ ನಂಬರ್ ಸುರಕ್ಷಿತವಾಗಿರಿಸಿಕೊಳ್ಳಿ
ಪಿನ್ ನಂಬರ್ ಟೈಪ್ ಮಾಡುವಾಗ ಪಕ್ಕದಲ್ಲಿದ್ದವರಿಗೆ ಕೀಬೋರ್ಡ ಕಾಣದಂತೆ ಕೈ ಅಡ್ಡವಾಗಿಡಿ. ಎಟಿಎಂನಲ್ಲಿ ನಿಮಗೆ ತೀರಾ ಸನಿಹದಲ್ಲಿ ಜನ ನಿಂತಿದ್ದರೆ ಪಿನ್ ನಂಬರ್ ಟೈಪ್ ಮಾಡಲೇಬೇಡಿ. ಮಿತ್ರರು, ಮನೆಯವರು ಅಥವಾ ಬ್ಯಾಂಕ್ ಸಿಬ್ಬಂದಿ ಯಾರಿಗೇ ಆದರೂ ಎಟಿಎಂ ಪಿನ್ ನಂಬರ್ ತಿಳಿಸಬೇಡಿ. ಸುಲಭವಾಗಿ ನೆನಪಿಟ್ಟುಕೊಳ್ಳಲು ಆದಷ್ಟು ನಾಲ್ಕಂಕಿಯ ಪಿನ್ ಬಳಸಿ. ಚೀಟಿಯಲ್ಲಿ ಪಿನ್ ನಂಬರ್ ಬರೆದು ಅದನ್ನು ಪರ್ಸನಲ್ಲಿ ಅಥವಾ ಬ್ಯಾಗ್ನಲ್ಲಿ ಇಡುವುದು ಸರ್ವಥಾ ಸಲ್ಲದು. ಪಿನ್ ನಂಬರನ್ನು ಎಲ್ಲಿಯೂ ಬರೆದಿಡದೆ ಕೇವಲ ನೆನಪಿನಲ್ಲಿಟ್ಟುಕೊಳ್ಳುವುದೇ ಕ್ಷೇಮ. ಎಟಿಎಂ ಕಾರ್ಡ ಹಾಗೂ ಅದರ ಜೊತೆಗೆಯೇ ಪಿನ್ ನಂಬರ್ ಇರುವ ಹಾಳೆಯೂ ಕಳೆದು ಹೋದರೆ ನಿಮ್ಮ ಕಾರ್ಡ ಬಳಸುವುದು ವಂಚಕರಿಗೆ ಅತಿ ಸುಲಭವಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸಿ.
ಅಪರಿಚಿತರಿಂದ ಸಹಾಯ ಬೇಡ
ಎಟಿಎಂ ಬಳಿ ಎಷ್ಟೇ ಒಳ್ಳೆಯವರಾಗಿ ಕಂಡು ಬಂದರೂ ಎಟಿಎಂ ವ್ಯವಹಾರದಲ್ಲಿ ಮಾತ್ರ ಅಪರಿಚಿತರ ಸಹಾಯ ಪಡೆಯಲೇಬೇಡಿ. ಒಂದೊಮ್ಮೆ ನಿಮ್ಮ ಕಾರ್ಡ ಎಟಿಎಂ ಯಂತ್ರದಲ್ಲಿ ಸಿಕ್ಕಿ ಹಾಕಿಕೊಂಡರೆ ಅದನ್ನು ಅಲ್ಲಿಯೇ ಬಿಟ್ಟು ಬರಬೇಡಿ. ಮೊಬೈಲ್ ಫೋನ್ ಮುಖಾಂತರ ಕಸ್ಟಮರ್ ಕೇರ್ಗೆ ತಿಳಿಸಿ. ಒಂದು ವೇಳೆ ಜೊತೆಯಲ್ಲಿ ಯಾರಾದರೂ ಬಂದಿದ್ದರೆ ಒಬ್ಬರು ಎಟಿಎಂನಲ್ಲಿಯೇ ಕಾಯುತ್ತ, ಇನ್ನೊಬ್ಬರು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿ. ಇಂಥ ಸಂದರ್ಭಗಳಲ್ಲಿ ಅಪರಿಚಿತರು ಸಹಾಯ ನೀಡಲು ಮುಂದೆ ಬಂದರೂ ಅವರಿಂದ ಸಹಾಯ ಪಡೆಯುವುದು ಸೂಕ್ತವಲ್ಲ. ಇನ್ನು ಕೆಲವೊಮ್ಮೆ ತಾವು ಬ್ಯಾಂಕ್ ಸಿಬ್ಬಂದಿ, ಎಟಿಎಂ ಯಂತ್ರದ ಮಾಲೀಕರು ಅಥವಾ ಪೊಲೀಸ್ ಎಂದು ಹೇಳಿ ನಿಮ್ಮ ಪಿನ್ ನಂಬರ್ ಕೇಳಬಹುದು. ಆದರೆ ಯಾರಿಗೇ ಆದರೂ ಪಿನ್ ಹೇಳುವ ಅಗತ್ಯವಿಲ್ಲ.
ಕುಡಿದ ಮತ್ತಿನಲ್ಲಿ ವ್ಯವಹಾರ ಬೇಡ
ಸಂಜೆ ಪಬ್ ಅಥವಾ ಬಾರ್ಗೆ ಹೋಗುವ ಯೋಜನೆ ಇದ್ದಲ್ಲಿ, ಅಲ್ಲಿಗೆ ಹೋಗುವ ಮುನ್ನವೇ ಹಣ ವಿತ್ಡ್ರಾ ಮಾಡಿಕೊಳ್ಳಿ. ಕುಡಿದ ಮತ್ತಿನಲ್ಲಿ ಎಟಿಎಂ ವ್ಯವಹಾರ ಮಾಡುವುದು ಸೂಕ್ತವಲ್ಲ. ಅಲ್ಕೋಹಾಲ್ ಸೇವಿಸಿದಾಗ ನಿರ್ಣಯ ಶಕ್ತಿ ಕುಂದುವುದರಿಂದ ಮೋಸ ಅಥವಾ ವಂಚನೆಗೊಳಗಾಗುವುದು ಬೇಗ ಗಮನಕ್ಕೆ ಬರುವುದಿಲ್ಲ.
ಕುಡಿದ ಮತ್ತಿನಲ್ಲಿ ಅಪರಿಚಿತರನ್ನು ನಂಬುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಸುಲಭವಾದ ವಂಚನೆಗೆ ದಾರಿ ಮಾಡಿಕೊಡಬಹುದು. ಅದೇ ರೀತಿ ಮತ್ತಿನಲ್ಲಿ ಕಾರ್ಡ ಎಟಿಎಂನಲ್ಲಿಯೇ ಮರೆಯುವ ಅಥವಾ ಹಣವನ್ನೇ ತೆಗೆದುಕೊಳ್ಳದೆ ಬರುವ ಅಪಾಯಗಳು ಸಂಭವಿಸಬಹುದು.
ಎಟಿಎಂ ರಸೀದಿ ಚೆಕ್ ಮಾಡಿ
ಎಟಿಎಂನಲ್ಲಿ ನಡೆಸಿದ ವ್ಯವಹಾರದ ರಸೀದಿಗಳನ್ನು ನಿಮ್ಮ ಬ್ಯಾಂಕ್ ಸ್ಟೇಟಮೆಂಟ್ನೊಂದಿಗೆ ಪರಿಶೀಲಿಸಿ ನೋಡಿ. ನೀವು ಮಾಡಿರದ ಯಾವುದಾದರೂ ಎಟಿಎಂ ವ್ಯವಹಾರ ಕಾಣಿಸಿದಲ್ಲಿ ತಕ್ಷಣ ಬ್ಯಾಂಕಿಗೆ ದೂರು ನೀಡಿ. ಯಾವುದೇ ಎಟಿಎಂನಲ್ಲಿ ರಸೀದಿ ಲಭ್ಯವಿರುವಾಗ ಅದನ್ನು ನಿರಾಕರಿಸಬೇಡಿ. 'ಎಸ್' ಎಂಬ ಆಪ್ಷನ್ ಆಯ್ಕೆ ಮಾಡಿ ರಸೀದಿ ಪಡೆದುಕೊಳ್ಳಿ. ನೀವು ನಡೆಸಿದ ವ್ಯವಹಾರದ ಬಗ್ಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಈ ರಸೀದಿ ಸಾಕ್ಷಿಯಾಗಿ ಕೆಲಸ ಮಾಡುತ್ತದೆ.
ಅವಶ್ಯಕತೆಯಿದ್ದರೆ ಮಾತ್ರ ಎಟಿಎಂ ಬಳಸಿ
ಇತ್ತೀಚಿನ ದಿನಗಳಲ್ಲಿ ಬಹುತೇಕ ವ್ಯವಹಾರ ಸ್ಥಳಗಳಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ ಮೂಲಕವೇ ಪಾವತಿ ಮಾಡಬಹುದಾಗಿದೆ. ಇಂಥ ಪಾವತಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂಬುದನ್ನು ಮಾತ್ರ ತಿಳಿದುಕೊಳ್ಳಬೇಕು. ಇನ್ನು ಕೆಲವೆಡೆ ಕಾರ್ಡ ಮೂಲಕ ಪಾವತಿಸಿದಾಗ ಕ್ಯಾಶ ಬ್ಯಾಕ್ ಹಾಗೂ ಪಾಯಿಂಟ್ಗಳು ಸಿಗುತ್ತವೆ. ಹೀಗಾಗಿ ಕ್ಯಾಶ ಬದಲು ಕಾರ್ಡನ್ನೇ ನೇರವಾಗಿ ಬಳಸಬಹುದು. ಇದರಿಂದ ಎಟಿಎಂ ಮೂಲಕ ಹಣ ಪಡೆಯುವ ಸಂದರ್ಭಗಳನ್ನು ಕಡಿಮೆ ಮಾಡಬಹುದು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications