ಕಾಣೆಯಾದ ಸರ್ಕಾರಿ ನೌಕರರ ಕುಟುಂಬ ಪಿಂಚಣಿ ನಿಯಮ ಸಡಿಲಿಸಿದ ಕೇಂದ್ರ: ಏನಿದು?
ಕಾಣೆಯಾದ ಕೇಂದ್ರ ಸರ್ಕಾರಿ ನೌಕರರಿಗೆ ಕುಟುಂಬ ಪಿಂಚಣಿ ನಿಯಮಗಳನ್ನು ಕೇಂದ್ರ ಸರ್ಕಾರವು ಸೋಮವಾರ ಸಡಿಲಗೊಳಿಸಿದೆ. ಈ ಕ್ರಮವು ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಂತಹ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ.
ಈ ನಿಯಮವನ್ನು ಜಾರಿಗೆ ತಂದರೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ಸೇವೆಯ ಸಮಯದಲ್ಲಿ ನಾಪತ್ತೆಯಾದರೆ, ಕುಟುಂಬ ಪಿಂಚಣಿಯ ಪ್ರಯೋಜನಗಳನ್ನು ತಕ್ಷಣವೇ ಮುಂದಿನ ಬಂಧುಗಳಿಗೆ ಪಾವತಿ ಮಾಡಲಾಗುತ್ತದೆ.
ಎನ್ಪಿಎಸ್ ನಲ್ಲಿ ಗ್ರಾಚ್ಯುಟಿ ಪಾವತಿಗೆ ನಿಯಮಗಳೇನಿವೆ? ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು...
ಸೇವೆಯ ಸಮಯದಲ್ಲಿ ನಾಪತ್ತೆಯಾದ ಸರ್ಕಾರಿ ನೌಕರರು ಬಳಿಕ ಮತ್ತೆ ಪತ್ತೆಯಾಗಿ ಸೇವೆಯನ್ನು ಪುನರಾರಂಭಿಸಿದರೆ, ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಕುಟುಂಬಕ್ಕೆ ಪಾವತಿಸಲಾದ ಪಿಂಚಣಿಯನ್ನು ಬಳಿಕ ಸರ್ಕಾರಿ ನೌಕರರ ಸಂಬಳದಿಂದ ಕಡಿತ ಮಾಡಲಾಗುತ್ತದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊಸ ಪಿಂಚಣಿ ನಿಯಮಗಳನ್ನು ಸೂಚಿಸಿದೆ. ಇನ್ನು ಈ ಕ್ರಮವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನ ಮಂತ್ರಿ ಉದ್ಯೋಗದ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸಹಾಯಕವಾಗಿದೆ ಎಂದು ಕೂಡಾ ಸರ್ಕಾರವು ಹೇಳಿಕೊಂಡಿದೆ.
ಯಾವೆಲ್ಲಾ ಸೌಲಭ್ಯ ಲಭ್ಯ?
ಕಾಣೆಯಾದ ಸರ್ಕಾರಿ ನೌಕರ ಕುಟುಂಬಕ್ಕೆ ಬಾಕಿ ವೇತನ, ನಿವೃತ್ತಿ ಗ್ರಾಚ್ಯುಟಿ ಮತ್ತು ರಜೆಯ ವೇತನ ಪ್ರಯೋಜನವನ್ನು ಸಹ ಪಾವತಿಸಲಾಗುತ್ತದೆ. ನೌಕರನು ಸಿಸಿಎಸ್ (ಪಿಂಚಣಿ) ನಿಯಮಗಳ ಅಡಿಯಲ್ಲಿ ಅಥವಾ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ನಿರ್ಗಮನ ಮತ್ತು ಹಿಂತೆಗೆದುಕೊಳ್ಳುವಿಕೆ) ನಿಯಮಗಳು, 2015 ರ ಅಡಿಯಲ್ಲಿ ಪ್ರಯೋಜನಗಳನ್ನು ಹೊಂದಿದ್ದರೂ ಕೂಡಾ ವೇತನವನ್ನು ಪಾವತಿ ಮಾಡಲಾಗುತ್ತದೆ.
ಈ ಹಿಂದಿನ ನಿಯಮ ಏನು ಹೇಳುತ್ತದೆ?
ಈ ಸಂಬಂಧ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಅಧಿಕೃತ ಹೇಳಿಕೆಯನ್ನು ನೀಡಿದೆ. ನಾಪತ್ತೆಯಾಗಿರುವ ಸರ್ಕಾರಿ ನೌಕರನನ್ನು ಕಾನೂನಿನ ಪ್ರಕಾರ ನಿಧನ ಎಂದು ಘೋಷಿಸುವವರೆಗೆ ಅಥವಾ ಅವನು ನಾಪತ್ತೆಯಾಗಿ ಏಳು ವರ್ಷಗಳು ಕಳೆಯುವವರೆಗೆ ಕುಟುಂಬಕ್ಕೆ ಕುಟುಂಬ ಪಿಂಚಣಿ ಪಾವತಿಸುವಂತಿಲ್ಲ ಎಂದು ಈ ಹಿಂದಿನ ನಿಯಮವಾಗಿತ್ತು.