ಠೇವಣಿ ಮೇಲೆ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್ ಗಳಲ್ಲಿ ಹಣ ಇಡಬಹುದೇ?
ಮೊದಲಿಗೆ ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಆ ಮೇಲೆ ಯೆಸ್ ಬ್ಯಾಂಕ್, ಈಗ ಲಕ್ಷ್ಮೀವಿಲಾಸ್ ಬ್ಯಾಂಕ್ ಸರದಿ. ಈ ಬ್ಯಾಂಕ್ ಗಳ ಸ್ಥಿತಿ ಕಂಡು ಠೇವಣಿದಾರರು ಕಂಗಾಲಾಗಿದ್ದಾರೆ. "ಈ ದೇಶದಲ್ಲಿ ಬ್ಯಾಂಕ್ ಗಳು ಎಷ್ಟು ಸುರಕ್ಷಿತ?" ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಇದು ಎಂಥ ಸಂದಿಗ್ಧ ಅಂದರೆ, ಮನೆ ಖರ್ಚುಗಳು ಜಾಸ್ತಿ ಆಗುತ್ತಿವೆ. ಠೇವಣಿಗಳ ಮೇಲೆ ಬಡ್ಡಿ ಕಡಿಮೆ.
ಯಾವುದೋ ಬ್ಯಾಂಕ್ ನಲ್ಲಿ ಸ್ವಲ್ಪ ಮಟ್ಟಿಗಾದರೂ ಬಡ್ಡಿ ಹೆಚ್ಚಿಗೆ ಸಿಗುತ್ತೆ ಅಂದುಕೊಂಡು, ಅಲ್ಲಿ ಹಣ ಇಡುವುದಕ್ಕೆ ಮುಂದಾದರೆ, ಈ ಬ್ಯಾಂಕ್ ಸೇಫ್ ಹೌದೋ ಅಲ್ಲವೋ ಎಂಬ ಪ್ರಶ್ನೆ ಕಾಡುತ್ತದೆ. ಇನ್ನೊಂದು ಕಡೆ, ಯಾರು ನಗದನ್ನು ಮನೆ ಮತ್ತು ಲಾಕರ್ ಗಳಲ್ಲಿ ಇಡುತ್ತಿದ್ದರೋ ಅಂಥವರಿಗೆ ಅಪನಗದೀಕರಣದ ನಂತರ ಭಯ ಬಂದಿದೆ.
ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ 5 ಅಂಶ ಗಮನದಲ್ಲಿರಲಿ
ಫ್ರಾಂಕ್ಲಿನ್ ಫಂಡ್ ಮುಚ್ಚಿದ ಪ್ರಕರಣದ ನಂತರ ಡೆಟ್ ಮ್ಯೂಚುವಲ್ ಫಂಡ್ ಗಳ ಮೇಲೆ ಹಣ ಹೂಡುವುದಕ್ಕೂ ಹೆದರುತ್ತಿದ್ದಾರೆ. ಒಂದಾದ ಮೇಲೆ ಒಂದು ಕೆಟ್ಟ ಸುದ್ದಿಯೇ ಕೇಳುತ್ತಿದ್ದರೆ ನಂಬಿಕೆ ಕಳೆದುಕೊಳ್ಳುವುದು ಸಹಜವಾದ ವಿದ್ಯಮಾನ. ಹೆಚ್ಚಿನ ಬಡ್ಡಿ ನೀಡುತ್ತಾರಲ್ಲಾ ಆ ಬ್ಯಾಂಕ್ ಗಳಲ್ಲಿ ಹಣ ಡೆಪಾಸಿಟ್ ಮಾಡಬಹುದಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಠೇವಣಿದಾರರನ್ನು ಸೆಳೆಯಲು ಹೆಚ್ಚಿನ ಬಡ್ಡಿ ದರ
ಸಣ್ಣ ಖಾಸಗಿ ವಾಣಿಜ್ಯ ಬ್ಯಾಂಕ್ ಗಳು, ಸಣ್ಣ ಹಣಕಾಸು ಬ್ಯಾಂಕ್ ಗಳು ಮತ್ತು ಕೋ ಆಪರೇಟಿವ್ ಬ್ಯಾಂಕ್ ಗಳು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗಿಂತ ಉತ್ತಮ ಬಡ್ಡಿ ದರ ನೀಡುತ್ತವೆ. ಆ ವ್ಯತ್ಯಾಸ ಕೂಡ ದೊಡ್ಡ ಮಟ್ಟದ್ದಾಗಿರುತ್ತದೆ. ಕೆಲವು ಬ್ಯಾಂಕ್ ಗಳು ಉಳಿತಾಯ ಖಾತೆಗೆ ಏಳು ಪರ್ಸೆಂಟ್ ಬಡ್ಡಿ ನೀಡುತ್ತವೆ. ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2.7 ಪರ್ಸೆಂಟ್ ಬಡ್ಡಿ ದರ ನೀಡುತ್ತದೆ. ಇನ್ನು ಎಫ್.ಡಿ.ಗಳಿಗೆ ಕೋ ಆಪರೇಟಿವ್ ಬ್ಯಾಂಕ್ ಗಳು 8 ಪರ್ಸೆಂಟ್ ಬಡ್ಡಿ ನೀಡುತ್ತಿದ್ದರೆ, ಎಸ್ ಬಿಐನ ಅತಿ ಹೆಚ್ಚಿನ ಬಡ್ಡಿ ದರ ಇರುವುದು 5ರಿಂದ 10 ವರ್ಷದ ಅವಧಿಗೆ 5.4 ಪರ್ಸೆಂಟ್ ಮಾತ್ರ. ಇಷ್ಟೊಂದು ದೊಡ್ಡ ವ್ಯತ್ಯಾಸ ಇರುವಾಗ ಹೂಡಿಕೆದಾರರಿಗೆ ಯಾವ ಕಡೆ ಆಕರ್ಷಣೆ ಇರುತ್ತದೆ? ಷೇರು ಮಾರ್ಕೆಟ್, ಮೂಚುವಲ್ ಫಂಡ್ ಅಥವಾ ಬೇರೆ ಯಾವುದೇ ಹೂಡಿಕೆ ಬಗ್ಗೆ ಆಸಕ್ತಿ ಹಾಗೂ ನಂಬಿಕೆ ಮತ್ತು ಧೈರ್ಯ ಇಲ್ಲದವರು ಈ ಎಫ್.ಡಿ.ಗಳಿಗಾಗಿ ಸ್ಥಳೀಯ ಬ್ಯಾಂಕ್ ಗಳನ್ನೇ ಆಶ್ರಯಿಸುತ್ತಾರೆ.
ಅಪಾಯವೂ ಹೆಚ್ಚು- ರಿವಾರ್ಡ್ಸ್ ಹೆಚ್ಚು ಎಂಬ ಸನ್ನಿವೇಶ
ಸಣ್ಣ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ದರ ನೀಡುವುದಕ್ಕೆ ಅತಿ ಮುಖ್ಯ ಕಾರಣ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂಬುದಾಗಿರುತ್ತದೆ ಮತ್ತು ಸಾಲಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಬೇಕು ಎಂದಿರುತ್ತದೆ. ಇದು ಅನ್ ಸೆಕ್ಯೂರ್ಡ್ ಡಿಬೆಂಚರ್ಸ್ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತಾರಲ್ಲಾ ಆ ರೀತಿ. ಆದರೆ ಅಷ್ಟು ರಿಸ್ಕ್ ಇರುವುದಿಲ್ಲ. ಯೆಸ್ ಬ್ಯಾಂಕ್ ಹಾಗೂ ಲಕ್ಷ್ಮೀ ವಿಲಾಸ್ ಬ್ಯಾಂಕ್ ಪ್ರಕರಣದಲ್ಲಿ ಯಾವುದೇ ಠೇವಣಿದಾರರು ಹಣ ಕಳೆದುಕೊಳ್ಳುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭರವಸೆ ನೀಡಿದೆ. ಹೂಡಿಕೆದಾರರ ಹಣ ಉಳಿಸಬೇಕು ಎಂಬ ಕಾರಣಕ್ಕೆ ಬಹಳ ಸಮಯದಿಂದ ಪ್ರಯತ್ನಿಸಿ, ಡಿಬಿಎಸ್ ಇಂಡಿಯಾ ಜತೆಗೆ ವಿಲೀನ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಹಣ ವಿಥ್ ಡ್ರಾಗೆ ಕೆಲ ಸಮಯ ನಿರ್ಬಂಧ ಇದೆ. ಅದು ಶೀಘ್ರದಲ್ಲೇ ಕೊನೆಯಾಗುತ್ತದೆ. ಆದರೆ ಯೆಸ್ ಬ್ಯಾಂಕ್ ರೀತಿಯಲ್ಲಿ ತಕ್ಷಣವೇ ಸಮಸ್ಯೆ ನಿವಾರಣೆ ಆಗಿಬಿಡುತ್ತದೆಯೇ ಎಂಬುದು ಹಲವರ ಪ್ರಶ್ನೆಯಾಗಿದೆ.
ಹೂಡಿಕೆದಾರರು ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಇಲ್ಲಿಯ ತನಕ ಭಾರತದ ಯಾವ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಠೇವಣಿದಾರರು ತಮ್ಮ ಹಣವನ್ನು ಕಳೆದುಕೊಂಡಿಲ್ಲ. ಅದರಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ನಲ್ಲಿ ಹಾಗಾಗಿಯೇ ಇಲ್ಲ. ಈ ಬ್ಯಾಂಕ್ ಗಳು ಕಡಿಮೆ ಬಡ್ಡಿಯನ್ನೇ ನೀಡಬಹುದು. ಆದರೆ ಅವು ಸುರಕ್ಷಿತ.
ಇನ್ನು ಸಣ್ಣ ಬ್ಯಾಂಕ್ ಗಳ ಬಗ್ಗೆ ಹೇಳುವುದಾದರೆ, ಅವು ಈ ದೊಡ್ಡ ಬ್ಯಾಂಕ್ ಗಳಿಗಿಂತ ಅಪಾಯಕಾರಿ ಹೌದು. ಉದಾಹರಣೆಗೆ ಪಿಎಂಸಿ ಬ್ಯಾಂಕ್. ಅದರ ಹೂಡಿಕೆದಾರರು ಈಗಲೂ ಬ್ಯಾಂಕ್ ಪುನಶ್ಚೇತನಕ್ಕೆ ಎದುರು ನೋಡುತ್ತಿದ್ದಾರೆ. ಬ್ಯಾಂಕ್ ನಲ್ಲಿ ಹಣಕಾಸು ಅವ್ಯವಹಾರ ಆಗಿದೆ ಎಂದು ಆರ್ ಬಿಐ ಕಂಡುಹಿಡಿದ ಮೇಲೆ ವರ್ಷಕ್ಕೂ ಹೆಚ್ಚು ಸಮಯದಿಂದ ನಿರ್ಬಂಧ ಇದೆ.
ಠೇವಣಿ ಮೇಲೆ ಇನ್ಷೂರೆನ್ಸ್
ಎಲ್ಲ ಬ್ಯಾಂಕ್ ಠೇವಣಿಗಳು, ಅದು ಉಳಿತಾಯ ಖಾತೆ ಅಥವಾ ನಿಶ್ಚಿತ ಠೇವಣಿ, ಸಣ್ಣ ಬ್ಯಾಂಕ್ ಇರಬಹುದು ಅಥವಾ ದೊಡ್ಡ ಬ್ಯಾಂಕ್ ಇರಬಹುದು ಗರಿಷ್ಠ ಮೊತ್ತ ಐದು ಲಕ್ಷ ರುಪಾಯಿ ತನಕ (ಅಸಲು ಹಾಗೂ ಬಡ್ಡಿ ಸೇರಿ) ಇನ್ಷೂರೆನ್ಸ್ ಒಳಗೊಂಡಿರುತ್ತದೆ. ಒಬ್ಬ ಗ್ರಾಹಕರ, ಎಲ್ಲ ಶಾಖೆಯ ಸರಾಸರಿ ಇನ್ಷೂರೆನ್ಸ್ ಮೊತ್ತವಾಗಿ ಗರಿಷ್ಠ ಮೊತ್ತ ಐದು ಲಕ್ಷ ಪಾವತಿಸಲಾಗುತ್ತದೆ. ಇದರರ್ಥ, ತಕ್ಷಣವೇ ಇನ್ಷೂರೆನ್ಸ್ ಮೊತ್ತ ಸಿಕ್ಕಿಬಿಡುತ್ತದೆ ಅಂತಲ್ಲ. ಅದಕ್ಕೆ ವರ್ಷಗಳ ಸಮಯ ಹಿಡಿಸಬಹುದು. ನಿಮಗೆ ಸಿಕ್ಕಾಪಟ್ಟೆ ತುರ್ತಿನ ಸನ್ನಿವೇಶ ಇದ್ದರೂ ಆ ಹಣ ಸಿಗದಿರಬಹುದು. ಒಂದು ವೇಳೆ ಹಣವನ್ನು ಠೇವಣಿ ಮಾಡಲು ಬಯಸಿದಲ್ಲಿ ನಾಲ್ಕು ಲಕ್ಷ ರುಪಾಯಿಯಷ್ಟು ಮಾಡಿ. ಅದರಲ್ಲೇ ಬಡ್ಡಿಯೂ ಸೇರಿಕೊಂಡಂತೆ ಇನ್ಷೂರೆನ್ಸ್ ಒಳಗೊಳ್ಳಬೇಕು.
ಅಂತಿಮವಾಗಿ ಏನೆಂದರೆ, ಈಕ್ವಿಟಿ ಮತ್ತು ಡೆಟ್ ಫಂಡ್ ಗಳು ಅಪಾಯ ಅನ್ನೋದು ನಿಜ. ಅವುಗಳಿಗೆ ಖಾತ್ರಿಯಾದ ರಿಟರ್ನ್ಸ್ ಇಲ್ಲ. ಇನ್ಷೂರೆನ್ಸ್ ಕವರ್ ಇಲ್ಲ. ಹಾಗೆ ನೋಡಿದರೆ ಸಣ್ಣ ಬ್ಯಾಂಕ್ ಗಳಲ್ಲಿ ಎಫ್.ಡಿ. ಮಾಡಬಹುದು. ಆದರೆ ಹೆಚ್ಚಿನ ಅಪಾಯ ಬೇಡ ಅಂದುಕೊಳ್ಳುವುದಾದರೆ ಒಂದು ವರ್ಷದ ಅವಧಿಗೆ ಎಫ್.ಡಿ. ಮಾಡಿಸಬಹುದು.
ಈ ಲೇಖನದ ಮೂಲಕ ಮಾಹಿತಿ ನೀಡಲಾಗುತ್ತಿದೆಯೇ ವಿನಾ ಅಂತಿಮ ನಿರ್ಧಾರವನ್ನು ಓದುಗರೇ ತೆಗೆದುಕೊಳ್ಳಬೇಕು. ಈ ಮಾಹಿತಿ ಆಧಾರದಲ್ಲಿ ತೆಗೆದುಕೊಂಡು ಸ್ವಂತ ನಿರ್ಧಾರಗಳಿಂದ ಆಗುವ ನಷ್ಟಕ್ಕೆ ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್, ಲೇಖಕರು ಹೊಣೆ ಅಲ್ಲ.