ಸಾಲದ ಹೊರೆ ಹೆಚ್ಚಿಸಿದ ಕೋವಿಡ್: ಈಗ ಜೀವನದಲ್ಲೆಷ್ಟು ಬದಲಾವಣೆ..
ಕೊರೊನಾ ವೈರಸ್ ಸೋಂಕಿನ ಮೊದಲ ಅಲೆ ಹಾಗೂ ಎರಡನೇ ಅಲೆಯಿಂದಾಗಿ ಹಲವಾರು ಸಾಮಾಜಿಕ, ಆರ್ಥಿಕ ಬದಲಾವಣೆಗಳು ಆಗಿದೆ. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಮಾಡಲಾದ ಲಾಕ್ಡೌನ್ನಿಂದಾಗಿ ಹಲವಾರು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇನ್ನು ಹಲವಾರು ಮಂದಿ ತಮ್ಮ ಸಂಬಳದಲ್ಲಿ ಕಡಿತ ಕಂಡುಕೊಂಡಿದ್ದಾರೆ. ಇವೆಲ್ಲವೂ ಕೂಡಾ ಜನರ ಆರ್ಥಿಕತೆಯ ಮೇಲೆ ಭಾರೀ ಹೊಡೆತವನ್ನು ನೀಡಿದೆ. ಈ ನಡುವೆ ಹಲವಾರು ಸಾಮಾಜಿಕ ಬದಲಾವಣೆಗಳು ಉಂಟಾಗಿದೆ.
ಆರ್ಥಿಕವಾಗಿ ಉಂಟಾದ ಬಿಕ್ಕಟ್ಟು ಕೊಂಚ ನಿಧಾನವಾಗಿ ಆದರೂ ಸುಧಾರಿಸುತ್ತಿದೆ. ಆದರೆ ಈ ನಡುವೆ ನಮ್ಮ ಜೀವನ ಶೈಲಿಯಲ್ಲೇ ಹಲವಾರು ಬದಲಾವಣೆಗಳು ಖಾಯಂ ಎಂಬಂತೆ ಉಳಿದು ಬಿಟ್ಟಿದೆ. ವರ್ಕ್ ಫ್ರಮ್ ಹೋಮ್ ಎಂಬುವುದನ್ನು ಹಲವಾರು ಸಂಸ್ಥೆಗಳು ಇನ್ನೂ ಮುಂದುವರಿಸಿದೆ. ಹಾಗೆಯೇ ಶಾಲಾ ಕಾಲೇಜುಗಳು ಹಲವಾರು ರಾಜ್ಯಗಳಲ್ಲಿ ಇನ್ನೂ ಆರಂಭವಾಗದ ಕಾರಣ ಇನ್ನೂ ಕೂಡಾ ಆನ್ಲೈನ್ ಕಲಿಕೆಯನ್ನೇ ಮಾಡಲಾಗುತ್ತಿದೆ.
ವೈಯಕ್ತಿಕ ಹಣಕಾಸಿನ ಮೇಲೆ ಕೋವಿಡ್ ಪರಿಣಾಮ: ಖರ್ಚು ಹೆಚ್ಚಾಯಿತಾ?
ಹಾಗೆಯೇ ಯಾವುದೇ ಅವಶ್ಯಕತೆ ಇಲ್ಲದೇ ದೂರ ಸಂಚಾರವನ್ನು ಕೂಡಾ ಮಾಡುವುದನ್ನು ಜನರೇ ತಡೆಯುತ್ತಿದ್ದಾರೆ. ಹಣವನ್ನು ಕೂಡಾ ಖರ್ಚು ಮಾಡುವಾಗ ಭಾರೀ ಜಾಗರೂಕತೆಯಿಂದ ಖರ್ಚು ಮಾಡಲಾಗುತ್ತಿದೆ. ಹಲವು ಮಂದಿ ತಮ್ಮ ಎಲ್ಲಾ ಬಯಕೆಗಳನ್ನು ಬದಿಗೊತ್ತಿ ಹಣಕಾಸನ್ನು ಬಹಳ ಸೂಕ್ಷ್ಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇವೆಲ್ಲವನ್ನು ನಾವು ಹೊಸ ಸಾಮಾನ್ಯ ಜೀವನ ಎಂದೇ ಕರೆದುಕೊಳ್ಳುತ್ತಿದ್ದೇವೆ.
ಕೋವಿಡ್ನಿಂದಾಗಿ ಜನರಲ್ಲಿ ಆದ ಪ್ರಮುಖ ಬದಲಾವಣೆಗಳು ಏನು?
ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಆರಂಭದಲ್ಲಿ ಜನರಲ್ಲಿದ್ದ ಮನೋಭಾವನೆಯು ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಕೊಂಚ ಬದಲಾಗಿದೆ ಎಂದೇ ನಾವು ಹೇಳಿಕೊಳ್ಳಬಹುದು. "ಕೊರೊನಾ ವೈರಸ್ ಸೋಂಕು ಆರಂಭವಾದ ಎರಡನೇ ವರ್ಷ ಆರಂಭದಲ್ಲೇ ಜನರಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದೆ," ಎಂದು ಕೆಪಿಎಂಜಿ ವರದಿಯು ಉಲ್ಲೇಖ ಮಾಡಿದೆ. ಜನರು ಖರೀದಿ ಮಾಡುವ ವಿಧಾನದಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದೆ. ಹಲವಾರು ಜನರು ತಮ್ಮ ದಿನದ ಅಗತ್ಯಕ್ಕೆ ಬೇಕಾದದ್ದನ್ನು ಆನ್ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ. ಸಂಪರ್ಕವಿಲ್ಲದೇ ಮನೆಯಲ್ಲೇ ಕೂತು ಆನ್ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ. ಹಾಗೆಯೇ ಸಾರ್ವಜನಿಕ ವಾಹನದಲ್ಲಿ ಸಂಚಾರ ಮಾಡುವುದನ್ನು ಕೂಡಾ ಜನರು ಕಡಿಮೆ ಮಾಡಿದ್ದಾರೆ. ಸಾಧ್ಯವಾದಷ್ಟು ತಮ್ಮ ವಾಹನದಲ್ಲೇ ಸಂಚಾರ ಮಾಡುತ್ತಿದ್ದಾರೆ. ಜನರು ಸಾರ್ವಜನಿಕ ಸ್ಥಳಗಳಿಗೆ ತೆರಳುವುದು, ಹೊಟೇಲ್ಗಳಲ್ಲಿ ಕೂತು ತಿನ್ನುವುದನ್ನು ಕೂಡಾ ಕಡಿಮೆ ಮಾಡಿದ್ದಾರೆ ಎಂದು ಕೆಪಿಎಂಜಿ ವರದಿಯು ಹೇಳಿದೆ.
ವೈಯಕ್ತಿಕ ಸಾಲ ಪಡೆಯುವ ಮುನ್ನ ಇದನ್ನು ಗಮನಿಸಿ..
ಆಶಾಭಾವನೆಯೂ ಇದೆ ನಮ್ಮ ಸುತ್ತಲು
ಈ ನಡುವೆ ಒಳ್ಳೆಯ ಸುದ್ದಿ ಏನೆಂದರೆ ಜನರಲ್ಲಿದ್ದ ಹತಾಶೆಯ ಭಾವನೆಗಳು ಕ್ರಮೇಣ ಕಡಿಮೆಯಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ವಿರುದ್ದ ಲಸಿಕೆಗಳು ನೀಡುವುದನ್ನು ಆರಂಭ ಮಾಡಿದ ನಂತರ ಜನರಲ್ಲಿ ಆಶಾ ಭಾವನೆ ಮೂಡುತ್ತಿದೆ. ಈಗ ಉದ್ಯಮಗಳು ಮತ್ತೆ ಆರಂಭವಾಗುತ್ತಿದೆ. ಇನ್ನು ಮುಂದೆ ಉಂಟಾಗಬಹುದಾದ ಯಾವುದೇ ಅಡೆತಡೆಗಳನ್ನು ಹೇಗೆ ಎದುರಿಸುವುದು ಎಂಬುವುದರ ಬಗ್ಗೆ ಜನರು ಈಗಲೇ ಚಿಂತನೆ ನಡೆಸಿದ್ದಾರೆ. ಕುಟುಂಬಗಳು ಯಾವುದೇ ವಸ್ತುಗಳಿಗೆ ಖರ್ಚು ಮಾಡುವ ಸಂದರ್ಭದಲ್ಲಿ ವಿವೇಚನೆಯಿಂದ ಅಲೋಚನೆ ಮಾಡಿ ಖರ್ಚು ಮಾಡುತ್ತಿದೆ. ಕೋವಿಡ್ನ ಮೊದಲ ಅಲೆಯ ಸಂದರ್ಭದಲ್ಲಿ ಹೊಡೆತವನ್ನು ಅನುಭವಿಸಿದ್ದ ಪ್ರವಾಸೋದ್ಯಮ, ಚಿಲ್ಲರೆ ವ್ಯಾಪಾರ, ಉತ್ಪಾದನೆ, ಸಾರಿಗೆ ವಿಭಾಗ, ಅತಿಥಿ ಗೃಹ ವಿಭಾಗವು ಈಗ ಕೊಂಚ ಚೇತರಿಸಿಕೊಳ್ಳುತ್ತಿದೆ.
ಖರೀದಿಗಾಗಿ ಡಿಜಿಟಲ್ ಕ್ಷೇತ್ರಕ್ಕೆ ಜೋತು ಬಿದ್ದ ಜನರು
ಇನ್ನು ಈ ನಡುವೆ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜನರು ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಕಾದರೂ ಡಿಜಿಟಲ್ ಕ್ಷೇತ್ರಕ್ಕೆ ಜೋತು ಬಿದ್ದಿದ್ದಾರೆ. ಎಲ್ಲಾ ವಸ್ತುಗಳನ್ನು ಆನ್ಲೈನ್ ಮೂಲಕವೇ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಆನ್ಲೈನ್ ಖರೀದಿ ಹೆಚ್ಚಾಗಿ ನಂಬಿಕಾರ್ಹವಲ್ಲ ಎಂಬುವುದು ಈಗಿನ ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಆನ್ಲೈನ್ ಖರೀದಿಯೇ ಅಧಿಕ ಸುರಕ್ಷಿತ ಎಂಬಂತೆ ಆಗಿದೆ. ಈ ಆನ್ಲೈನ್ ಖರೀದಿಯ ಟ್ರೆಂಡ್ ಮುಂದೆಯೂ ಕೂಡಾ ಇರಲಿದೆ ಎಂಬುವುದು ಮಾತ್ರ ಸುಳ್ಳಲ್ಲ. ಕೊರೊನಾ ವೈರಸ್ ಸೋಂಕು ದೇಶದಲ್ಲಿ ಕಾಣಿಸಿಕೊಂಡಂದಿನಿಂದ ಈವರೆಗೂ ಆನ್ಲೈನ್ ಖರೀದಿ, ಆನ್ಲೈನ್ ಪಾವತಿ ಇದ್ದದ್ದು ಮಾತ್ರವಲ್ಲದೇ ಈಗ ಡಿಜಿಟಲ್ ಸಾಲವು ಕೂಡಾ ಇದೆ. ಇನ್ನು ಮೊದಲು ಖರೀದಿ ಮಾಡಿ ನಂತರ ಪಾವತಿ ಮಾಡುವ ವಿಧಾನವೂ ಕೂಡಾ ಇದೆ. ಅದು ಕೂಡಾ ಮುಖ್ಯವಾಗಿ ಇದು ಭಾರತದಲ್ಲಿ ಹೆಚ್ಚಾಗಿ ಮಾಡಲಾಗುತ್ತಿದೆ. ಇಎಂಐ ಆಧಾರದಲ್ಲಿ ಎಲ್ಲಾ ವಸ್ತುಗಳ ಪಾವತಿ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ಈ ಡಿಜಿಟಲ್ ಟ್ರೆಂಡ್ ಬರೀ ಆರ್ಥಿಕ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುವುದು ಕೂಡಾ ಇಲ್ಲಿ ಗಮನಿಸಬೇಕಾದ ವಿಚಾರ.
ಇದ್ದಕ್ಕಿದ್ದಂತೆ ನಿಮ್ಮ ಪ್ರೀತಿ ಪಾತ್ರರು ಕೋವಿಡ್ಗೆ ಬಲಿಯಾದರೆ, ಮೊದಲು ಇದನ್ನು ಮಾಡಿ..
ಐಷಾರಾಮಿ ಜೀವನಕ್ಕೆ ಬಾಯ್ ಬಾಯ್
ಈ ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಹೆಚ್ಚಾಗಿ ಜನರು ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ಬಗ್ಗೆ ಅಧಿಕ ಗಮನ ಇರಿಸಿದ್ದು, ಕೆಲವೊಂದು ಪಾಸಿಟಿವ್ ಬದಲಾವಣೆಗಳು ಆಗಿದೆ. ಇನ್ನು ಮುಂದೆ ಭವಿಷ್ಯದಲ್ಲಿ ಉಂಟಾಗಬಹುದಾದ ಆರೋಗ್ಯ ತುರ್ತು ಪರಿಸ್ಥಿತಿಯ ಬಗ್ಗೆ ಈಗ ಆತಂಕಕ್ಕೆ ಒಳಗಾಗಿರುವ, ಆರ್ಥಿಕ ಸ್ಥಿತಿಯ ಬಗ್ಗೆ ಆತಂಕಕ್ಕೆ ಒಳಗಾಗಿರುವ ಜನರು ತಮ್ಮ ಹಾಗೂ ತಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸುವ ಆರ್ಥಿಕ ಭದ್ರತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಐಷಾರಾಮಿ ಜೀವನಕ್ಕೆ ಕೊನೆ ಹಾಡಿ, ಸರಳ ಜೀವನ ನಡೆಸುತ್ತಿದ್ದಾರೆ. ಅತಿಯಾಗಿ ಪ್ರವಾಸ ಹೋಗುವುದನ್ನು ಕೂಡಾ ನಿಲ್ಲಿಸಿದ್ದಾರೆ. ಇನ್ನು ಫಂಡ್ಗಳಿಗೆ ಸೇರಿ ಉಳಿತಾಯ ಮಾಡಿಕೊಳ್ಳುವುದು ಇತ್ತೀಚೆಗೆ ತೀವ್ರ ಏರಿಕೆ ಕಂಡು ಬಂದಿದೆ ಎಂದು ವರದಿಗಳು ಹೇಳುತ್ತದೆ. ಈ ಹಿಂದೆ ಅಧಿಕ ಮಂದಿಗೆ ಹಣಕಾಸಿನ ವಿಚಾರದಲ್ಲಿ ಒಂದು ಶಿಸ್ತು ಎಂಬುವುದು ಇರಲಿಲ್ಲ. ಸರಿಯಾಗಿ ಯೋಜನೆ ಕೂಡಾ ಮಾಡುತ್ತಿರಲಿಲ್ಲ. ಆದರೆ ಸಾಂಕ್ರಾಮಿಕ ಪೂರ್ವದಲ್ಲಿ ಸಾಲವನ್ನು ಹಿಂದೆಂದೂ ಮಾಡದ ಜನರು ಈಗ ಸಾಲ ಮಾಡುತ್ತಿದ್ದಾರೆ. ತಮ್ಮ ಆಸೆ, ಆಕಾಂಕ್ಷೆಗಳಿಗೆ ಅಧಿಕ ಮಹತ್ವ ನೀಡುತ್ತಿದ್ದ ಜನರು ಈಗ ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸರಳ ಜೀವನ ಉತ್ತಮ ಎಂದು ಬಹಳ ಸೂಕ್ಷ್ಮವಾಗಿ ಲೆಕ್ಕಾಚಾರ ಹಾಕಿ ಜೀವನ ನಡೆಸುತ್ತಿದ್ದಾರೆ.
ಆರೋಗ್ಯವೇ ನಮ್ಮ ಪ್ರಧಾನ ಆದ್ಯತೆ
ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆಯೂ ಅಧಿಕ ಗಮನ ಹರಿಸಲು ಆರಂಭ ಮಾಡಿದ್ದಾರೆ. ಆರೋಗ್ಯವು ನಮ್ಮ ಮೂಲಭೂತವಾದ ಜೀವನ ಅಂಶ ಎಂಬುವುದನ್ನು ಜನರು ಈ ಕೋವಿಡ್ ಸಂದರ್ಭದಲ್ಲಿ ಅರಿತುಕೊಂಡಿದ್ದಾರೆ. ಯಾವುದೇ ಸೋಂಕುಗಳಿಂದ ದೂರವಿರಲು ತಾವು ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಹೆಚ್ಚಾಗಿ ಭಾರತವು ಧಾರ್ಮಿಕವಾಗಿ ಹೆಚ್ಚು ಪ್ರಬಲವಾದ ದೇಶವಾದ ಕಾರಣ ಇಲ್ಲಿ ಜನರು ಧಾರ್ಮಿಕ ವಿಚಾರದಲ್ಲಿ ಯಾವುದೇ ವಿನಾಯತಿ ಮಾಡುತ್ತಿಲ್ಲ. ಈ ಕೊರೊನಾ ಸಂದರ್ಭದಲ್ಲೂ ಅದೇಷ್ಟೋ ಧಾರ್ಮಿಕ ಕಾರ್ಯಕ್ರಮಗಳು ನಡೆದಿರುವುದಕ್ಕೆ ಭಾರತ ಸಾಕ್ಷಿಯಾಗಿದೆ. ಆದರ ಉತ್ತಮ ಆರೋಗ್ಯ ಹೊಂದುವುದು ಪ್ರಧಾನ ಎಂಬುವುದನ್ನು ಮಾತ್ರ ಜನರು ಮನಗಂಡಿದ್ದಾರೆ.
ಸಾಲದ ಹೊರೆಯಲ್ಲಿ ಜನರು ತತ್ತರ
ಈಗ ಜನರು ಸಾಲ ಮಾಡುತ್ತಿರುವುದು ಅಧಿಕವಾಗುತ್ತಿದೆ. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಜನರು ತಮ್ಮ ಉದ್ಯೋಗ ಕಳೆದುಕೊಂಡು ಜೀವನ ಸಾಗಿಸಲು ಸಾಲ ಮಾಡಿದ್ದಾರೆ, ಹಾಗೆಯೇ ಉದ್ಯೋಗವಿದ್ದರೂ ಕಡಿಮೆ ಸಂಬಳವಿರುವ ಕಾರಣದಿಂದಾಗಿ ಸಾಲವನ್ನು ಮಾಡಿಕೊಂಡಿದ್ದಾರೆ. ಜನರಿಗೆ ಸಾಲ ನೀಡುವುದನ್ನು ಸುಲಭಗೊಳಿಸಬೇಕು ಎಂಬಂತೆ ಬ್ಯಾಂಕುಗಳು ಹಾಗೂ ಹಲವು ಹಗಕಾಸು ಸಂಸ್ಥೆಗಳು ಈಗ ಆನ್ಲೈನ್ ಸಾಲವನ್ನು ನೀಡಲು ಆರಂಭ ಮಾಡಿದೆ. ಇನ್ನು ಕೊರೊನಾ ವೈರಸ್ ಸೋಂಕಿನ ಈ ಸಂದರ್ಭದಲ್ಲಿ ಹಲವಾರು ಮಂದಿ ತಮ್ಮ ಸಾಲವನ್ನು ತೀರಿಸಲು ಕೈಯಲ್ಲಿ ಹಣವಿಲ್ಲದೆ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಲದ ಹೊರೆಯಲ್ಲಿ ಜನರು ತತ್ತರಿಸಿದ್ದಾರೆ. ಇನ್ನು ಹಲವಾರು ಉದ್ಯಮಿಗಳು ಸಾಲದ ಹೊರೆಯಿಂದಾಗಿ ಸಾವಿನ ಹಾದಿ ಹಿಡಿದಿರುವುದನ್ನು ಕೂಡಾ ನಾವು ನೋಡಿದ್ದೇವೆ. ಆದರೆ ಇವೆಲ್ಲದರ ನಡುವೆ ಜನರಲ್ಲಿ ಈಗ ಕೊಂಚ ಆಶಾಭಾವನೆ ಮೂಡುತ್ತಿರುವಾಗಲೇ ಬೆಲೆ ಏರಿಕೆಯು ಜನರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆಗಳು ಯಾವಾಗ ಕಡಿಮೆ ಆದೀತು ಎಂದು ಜನರು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ.