ಕಷ್ಟ ಕಾಲಕ್ಕೆ ಎಷ್ಟು ಹಣ ಬೇಕು, ಇನ್ನೂ ಏನೇನು ಬೇಕು, ಆ ಬಗ್ಗೆ ಈಗೇಕೆ ಚಿಂತಿಸಬೇಕು?
ಒಂದೊಂದು ವರ್ಷ ಕಳೆದಂತೆಯೂ ಹೊಸ ಸವಾಲು, ಹೊಸ ಆಲೋಚನೆ, ಗುರಿಗಳು ಬರುತ್ತವೆ. ಈ ವರ್ಷಕ್ಕೆ ಹಣಕಾಸಿನ ವಿಚಾರದಲ್ಲಿ ಏನಾದರೂ ನಿರ್ಧಾರ ಮಾಡಿದ್ದೀರಾ? ಬಹಳ ಜನಕ್ಕೆ ತಮ್ಮ ಆದಾಯದಲ್ಲಿ ಏನು ಮಾಡಬಹುದು ಎಂಬುದೇ ಗೊತ್ತಿರುವುದಿಲ್ಲ. ಇನ್ನೂ ಕೆಲವರಿಗೆ ತಮಗೆ ಯಾವ ಕಾರಣಕ್ಕೆ ಹಣ ಬೇಕಾಗಬಹುದು ಎಂಬುದೇ ಗೊತ್ತಿರುವುದಿಲ್ಲ.
ಪ್ರತಿ ತಿಂಗಳ ಕೊನೆಗೆ ತಮ್ಮ ಹತ್ತಿರ ಹಣ ಇರುವುದಿಲ್ಲ ಅನ್ನೋದು ಮಾತ್ರ ನಿಕ್ಕಿ ಎಂಬುದು ಗೊತ್ತಿರುತ್ತದೆ. ಈಗಲಾದರೂ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ. ಈ ಲೇಖನದಲ್ಲಿ ನೀಡುತ್ತಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಅದಕ್ಕೂ ಮುಂಚೆ ಇಲ್ಲಿನ ಸಲಹೆಗಳು ನಿಮಗೆ ಎಷ್ಟು ಮುಖ್ಯ ಅನ್ನೋದನ್ನು ತಿಳಿದುಕೊಳ್ಳಿ.
ತುರ್ತು ಸಮಯಕ್ಕೆಂದು ಹಣ ಎತ್ತಿಡಿ
ದೇಶದಲ್ಲಿ ಈಗ ಆರ್ಥಿಕ ಬೆಳವಣಿಗೆ ಕುಂಠಿತ ಎಂಬುದರ ಬಗ್ಗೆಯೇ ಮಾತು. ಕನಿಷ್ಠ ಮುಂದಿನ ಒಂಬತ್ತು ತಿಂಗಳ ಕಾಲವಂತೂ ಆಶಾದಾಯಕವಾದದ್ದು ಏನೋ ನಡೆಯಬಹುದು ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ. ನಾನಾ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಈಗ ನೌಕರಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲ, ವ್ಯಾಪಾರವೂ ಡಲ್. ಇಂಥ ಸನ್ನಿವೇಶ ಯಾವಾಗಲಾದರೂ ಎದುರಾಗಬಹುದು. ಆದ್ದರಿಂದ ಇಂಥ ಸನ್ನಿವೇಶಕ್ಕಾಗಿಯೇ 'ತುರ್ತು ನಿಧಿ' (ಎಮರ್ಜೆನ್ಸಿ ಫಂಡ್) ಎತ್ತಿಟ್ಟುಕೊಳ್ಳಬೇಕು.
ಹಾಗಿದ್ದರೆ ತುರ್ತು ಸಮಯಕ್ಕೆ ಎಷ್ಟು ಹಣ ಎತ್ತಿಟ್ಟುಕೊಳ್ಳಬೇಕು? ನಿಮ್ಮ ಆರು ತಿಂಗಳ ಖರ್ಚು ಅದರಲ್ಲಿ ನಿಭಾಯಿಸುವಂತೆ ಇರಬೇಕು. ನೀವು ಉಳಿತಾಯ ಶುರು ಮಾಡುವ ಮುಂಚೆ ತಿಂಗಳಿಗೆ ಕಟ್ಟಲೇ ಬೇಕಾದ ಇಎಂಐ, ಬಾಡಿಗೆ, ಮಕ್ಕಳ ಶಾಲೆ ಫೀ, ದಿನಸಿ ಹಾಗೂ ಇತರ ಕರೆಂಟ್- ನೀರು ಮತ್ತಿತರ ಬಿಲ್ ಎಷ್ಟು ಕಟ್ಟಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿಕೊಳ್ಳಿ. ಆರು ತಿಂಗಳಿಗೆ ಆಗುವಷ್ಟು ವೆಚ್ಚವನ್ನು ಬ್ಯಾಂಕ್ ನಲ್ಲಿ ಅಥವಾ ಯಾವಾಗಲಾದರೂ ವಿಥ್ ಡ್ರಾ ಮಾಡಬಹುದಾದ ರೀತಿಯಲ್ಲಿ ಇಟ್ಟುಕೊಳ್ಳಿ.
ಇನ್ನು ನೀವು ಎಂಥ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದೀರಿ ಎಂಬುದು ಕೂಡ ಮುಖ್ಯ. ಅನಿಶ್ಚಿತತೆ ಹೆಚ್ಚಿರುವ ಹಾಗೂ ಉದ್ಯೋಗಾವಕಾಶವೇ ಕಡಿಮೆ ಇರುವಂಥ ಕಡೆಯಾದರೆ ಹನ್ನೆರಡು ತಿಂಗಳ ವೆಚ್ಚವನ್ನು ಎತ್ತಿಟ್ಟುಕೊಳ್ಳಿ ಎಂದು ಸಲಹೆ ಮಾಡುತ್ತಾರೆ ಆರ್ಥಿಕ ತಜ್ಞರು.
ಅನವಶ್ಯಕ ಖರ್ಚು ಕಡಿಮೆ ಮಾಡಿ
ತುರ್ತು ಸಮಯಕ್ಕೆ ಹಣ ಎತ್ತಿಟ್ಟುಕೊಳ್ಳಿ ಅಂತ ಹೇಳುವುದೇನೋ ಸಲೀಸು. ಆದರೆ ಅದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ನಿಮ್ಮದೇ ಹಣದಲ್ಲಿ ಉಳಿತಾಯ ಮಾಡಬಹುದು. ಅನವಶ್ಯಕ ಖರ್ಚನ್ನು ಮೊದಲಿಗೆ ಗುರುತಿಸಿ. ಆ ಹೆಚ್ಚುವರಿ ಖರ್ಚನ್ನು ಉಳಿತಾಯ ಮಾಡಿ. ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾ ಗಮನಿಸಿ. ಒಂದು ವೇಳೆ ನೀವು ಉದ್ಯೋಗಕ್ಕೆ ಹೋಗುವಾಗ ಸ್ವಂತ ಕಾರಿನಲ್ಲಿ ಹೋಗುತ್ತಿರುವವರಾದರೆ ಕಾರು ಪೂಲಿಂಗ್ ಮಾಡಲು ಸಾಧ್ಯವಾ ನೋಡಿ ಅಥವಾ ವಾರದಲ್ಲಿ ಒಂದು ಅಥವಾ ಎರಡು ದಿನ ಸಾರ್ವಜನಿಕ ಸಾರಿಗೆ ಬಳಸಿ.
ಇನ್ನು ಆನ್ ಲೈನ್ ಶಾಪಿಂಗ್, ಹೋಟೆಲ್- ರೆಸ್ಟೋರೆಂಟ್ ಗಳಿಗೆ ಪದೇ ಪದೇ ಹೋಗುವುದನ್ನು ಕಡಿಮೆ ಮಾಡಬಹುದು. ರಜಾ ದಿನಗಳನ್ನು ಕಳೆಯಲು ವಿದೇಶಕ್ಕೆ ಹೋಗುವವರಾದರೆ ದೇಶೀಯ ಪ್ರವಾಸಿ ತಾಣಗಳಿಗೆ ತೆರಳಿ. ಯಾವಾಗ ನಿಮ್ಮ ಖರ್ಚಿನ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡುತ್ತೀರೋ ಆಗ ಅನವಶ್ಯಕ ಖರ್ಚು ಕಡಿಮೆ ಮಾಡಲು ಸಾಧ್ಯ. ಎಷ್ಟೋ ಸಣ್ಣ- ಸಣ್ಣ ಖರ್ಚುಗಳನ್ನು ಕಡಿತಗೊಳಿಸಿದರೂ ದೊಡ್ಡ ಮಟ್ಟದ ಉಳಿತಾಯ ಆಗಬಹುದು.
ಸಾಲ ಮಾಡಬೇಡಿ
ಸಾಲವು ಯಾರಿಗೇ ಆದರೂ ಹೊರೆಯೇ. ಆದರೂ ತಮ್ಮ ಜೀವನಶೈಲಿ ಸಲುವಾಗಿ ಅಥವಾ ಶೂನ್ಯ ಬಡ್ಡಿದರ ಎಂಬ ಕಾರಣಕ್ಕೆ ಸಾಲ ತೆಗೆದುಕೊಳ್ಳುವುದು ಉಂಟು. ಇದರಿಂದ ತಿಂಗಳ ಬಜೆಟ್ ಮೇಲೆ ಪರಿಣಾಮವಾಗುತ್ತದೆ. ಅಷ್ಟೇ ಅಲ್ಲ, ಸಾಲವು ಬಲೆ ಇದ್ದಂತೆ. ಅದರಲ್ಲಿ ಸಿಲುಕಿದರೆ ಪರಿತಪಿಸಬೇಕಾಗುತ್ತದೆ. ಒಂದು ವೇಳೆ ಈಗಾಗಲೇ ಸಾಲ ಪಡೆದಿದ್ದರೆ ಅವುಗಳನ್ನು ಶೀಘ್ರವಾಗಿ ತೀರಿಸಲು ಸಂಕಲ್ಪ ಮಾಡಿ. ಆದರೆ ಗೃಹ ಸಾಲದಂಥದ್ದಾದರೆ ತೊಂದರೆ ಇಲ್ಲ. ಬಡ್ಡಿ ಆಧಾರದಲ್ಲಿ ಹೆಚ್ಚಿನ ಬಡ್ಡಿದರವನ್ನು ತೆರಬೇಕಾದ ಸಾಲವನ್ನು ಮೊದಲಿಗೆ ತೀರಿಸಿ. ಕ್ರೆಡಿಟ್ ಕಾರ್ಡ್ ಸಾಲ, ಪರ್ಸನಲ್ ಲೋನ್... ಹೀಗೆ ಬಡ್ಡಿ ದರ ಹೆಚ್ಚಿರುವುದನ್ನು ತೀರಿಸಿ.
ಒಂದು ವೇಳೆ ನಿಮ್ಮ ವೇತನಕ್ಕಿಂತ ತಿಂಗಳ ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್ ಇಎಂಐ ಹೆಚ್ಚಿಗೆ ಇದ್ದಲ್ಲಿ ಈಗಾಗಲೇ ಮಾಡಿರುವ ಹೂಡಿಕೆ ಇದ್ದರೆ ಅದನ್ನು ವಿಥ್ ಡ್ರಾ ಮಾಡಿ, ಸಾಲ ತೀರಿಸಿಕೊಳ್ಳಿ.
ಅಗತ್ಯ ಇನ್ಷೂರೆನ್ಸ್ ಮತ್ತು ಆರ್ಥಿಕ ಭದ್ರತೆ
ಜೀವ ವಿಮೆ ಬಗ್ಗೆ ಈಚಿನ ವರ್ಷಗಳಲ್ಲಿ ತಿಳಿವಳಿಕೆ ಹೆಚ್ಚಾಗಿದೆ. ಆದರೂ ಅಗತ್ಯ ಪ್ರಮಾಣದ ಇನ್ಷೂರೆನ್ಸ್ ಮಾಡಿರುವುದಿಲ್ಲ. ಅಗತ್ಯ ಪ್ರಮಾಣದ ಇನ್ಷೂರೆನ್ಸ್ ಅಂದರೆ ಎಷ್ಟು? ಈ ಪ್ರಶ್ನೆಗೆ ಉತ್ತರ: ನಿಮ್ಮ ವಾರ್ಷಿಕ ಸಂಬಳದ ಹತ್ತು ಪಟ್ಟು ಮೊತ್ತಕ್ಕೆ ಜೀವವಿಮೆ ಮಾಡಿಸಬೇಕು. ಇನ್ನೂ ಸ್ಪಷ್ಟ ಮಾಹಿತಿ ಬೇಕೆಂದರೆ ಇನ್ಷೂರೆನ್ಸ್ ಕಂಪೆನಿಗಳ ವೆಬ್ ಸೈಟ್ ಗಳಲ್ಲಿ ಈ ಬಗ್ಗೆ ಕ್ಯಾಲ್ಕುಲೇಟರ್ ಇರುತ್ತವೆ. ಅವುಗಳಲ್ಲಿ ಪರೀಕ್ಷಿಸಿ. ಸಾಂಪ್ರದಾಯಿಕ ಯೋಜನೆಗಳು ಅಥವಾ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಬೇಡ. ಹೂಡಿಕೆ ಜತೆಗೆ ಇನ್ಷೂರೆನ್ಸ್ ಬೆರೆಸಬೇಡಿ.
ಉದ್ಯೋಗ ಮಾಡುವ ಸ್ಥಳದಲ್ಲೇ ಇನ್ಷೂರೆನ್ಸ್ ಮಾಡಿಸಿದ್ದಾರೆ. ಅದಕ್ಕಿಂತ ಇನ್ನೇನು ಬೇಕು ಎಂಬ ಆಲೋಚನೆ ಬಿಡಿ. ನಿಮ್ಮ ಅಗತ್ಯ ಗಮನಿಸಿ, ಕನಿಷ್ಠ ಹತ್ತರಿಂದ ಹದಿನೈದು ಲಕ್ಷ ರುಪಾಯಿ ವೈಯಕ್ತಿಕ ಅಥವಾ ಕೌಟುಂಬಿಕ ಪ್ಲಾನ್ ಖರೀದಿಸಿ. ಇನ್ನು ವೈದ್ಯಕೀಯ ವೆಚ್ಚ ಹೆಚ್ಚಾದಂತೆಯೇ ಇನ್ಷೂರೆನ್ಸ್ ಟಾಪ್ ಅಪ್ ಮಾಡಿಸಿ.