ಪ್ರಧಾನ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಖಾತೆಯನ್ನು ಹೊಂದಿರುವವರಿಗೆ ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಜನ ಧನ ಯೋಜನೆಯ ಖಾತೆಯಲ್ಲಿ ಯಾವುದೇ ಹಣ ಇಲ್ಲದಿದ್ದರೂ ನೀವು ಸುಮಾರು 10 ಸಾವಿರ ರೂಪಾಯಿವರೆಗೆ ವಿತ್ಡ್ರಾ ಮಾಡುವ ಅವಕಾಶವಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ 2014ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಪ್ರಧಾನ ಮಂತ್ರಿ ಜನ ಧನ ಯೋಜನೆಯನ್ನು ಘೋಷನೆ ಮಾಡಿದ್ದಾರೆ. ಈ ಯೋಜನೆಯು ಆಗಸ್ಟ್ 28, 2014ರಂದು ಈ ಯೋಜನೆ ಜಾರಿಗೆ ಬಂದಿದೆ. ಎಲ್ಲ ಜನರು ಹಣಕಾಸು ಸೇವೆಗಳಾದ ಬ್ಯಾಂಕಿಂಗ್, ಸಾಲ, ವಿಮೆ, ಪಿಂಚಣಿಯನ್ನು ಪಡೆಯುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ನೀವು ಖಾತೆಯಲ್ಲಿ ಯಾವುದೇ ಹಣ ಇಲ್ಲದಿದ್ದರೂ ಹತ್ತು ಸಾವಿರ ರೂಪಾಯಿಯನ್ನು ವಿತ್ಡ್ರಾ ಮಾಡುವ ಅವಕಾಶವಿದೆ.
ಈ ಹಿಂದೆ ನೀವು 5 ಸಾವಿರ ರೂಪಾಯಿ ಮಾತ್ರ ಪಡೆಯುವ ಅವಕಾಶವಿತ್ತು. ಆದರೆ ಈಗ ನೀವು 10 ಸಾವಿರ ರೂಪಾಯಿ ಪಡೆಯುವ ಅವಕಾಶವಿದೆ. ಅಷ್ಟು ಮಾತ್ರವಲ್ಲದೆ ಯಾವುದೇ ನಿರ್ಬಧವಿಲ್ಲದೆ ಎರಡು ಸಾವಿರ ರೂಪಾಯಿವರೆಗೆ ಓವರ್ಡ್ರಾಫ್ಟ್ ಹಣವನ್ನು ಪಡೆಯಬಹುದು. ಹಾಗಾದರೆ 10 ಸಾವಿರ ರೂಪಾಯಿ ಹಣವನ್ನು ಪಡೆಯಲು ಇರುವ ಷರತ್ತು ಏನು ಎಂಬುವುದನ್ನು ನೋಡೋಣ ಮುಂದೆ ಓದಿ...
ಷರತ್ತುಗಳು ಅನ್ವಯ!
ನೀವು ಪ್ರಧಾನ ಮಂತ್ರಿ ಜನ ಧನ ಖಾತೆಯಲ್ಲಿ ಜಿರೋ ಬ್ಯಾಲೆನ್ಸ್ ಇರುವಾಗ 10 ಸಾವಿರ ರೂಪಾಯಿ ಓವರ್ಡ್ರಾಫ್ಟ್ ರೂಪದಲ್ಲಿ ಪಡೆಯಬೇಕಾದರೆ ಅದಕ್ಕೆ ಕೆಲವು ಷರತ್ತುಗಳು ಇದೆ. ನೀವು ಪ್ರಧಾನ ಮಂತ್ರಿ ಜನ ಧನ ಖಾತೆಯನ್ನು ತೆರೆದು ಕನಿಷ್ಠ ಆರು ತಿಂಗಳುಗಳು ಆಗಿರಬೇಕು. ಆರು ತಿಂಗಳ ಅವಧಿ ಆಗಿಲ್ಲದಿದ್ದರೆ ನೀವು ಕೇವಲ ಎರಡು ಸಾವಿರ ರೂಪಾಯಿವರೆಗೆ ಹಣವನ್ನು ವಿತ್ಡ್ರಾ ಮಾಡುವ ಅವಕಾಶವಿದೆ.
ವಯಸ್ಸಿನ ಮಿತಿ ಕೂಡಾ ಇದೆ!
ಇನ್ನು ಇದಕ್ಕೆ ವಯಸ್ಸಿನ ಮಿತಿ ಕೂಡಾ ಇದೆ. ಈ ಹಿಂದೆ 60 ವರ್ಷಕ್ಕಿಂತ ಕೆಳಗಿನವರು ಮಾತ್ರ ಈ ಓವರ್ಡ್ರಾಫ್ಟ್ ಆಯ್ಕೆಯ ಪ್ರಯೋಜನ ಪಡೆಯುವ ಅವಕಾಶವಿತ್ತು. ಆದರೆ ಇದನ್ನು ಈಗ 65ಕ್ಕೆ ಏರಿಕೆ ಮಾಡಲಾಗಿದೆ. ಅಂದರೆ 65 ವರ್ಷಕ್ಕಿಂತ ಕೆಳಗಿನವರು ಮಾತ್ರ ಈ ಓವರ್ಡ್ರಾಫ್ಟ್ ಆಯ್ಕೆಯ ಪ್ರಯೋಜನವನ್ನು ಪಡೆಯಬಹುದು.
ಯಾವೆಲ್ಲ ಯೋಜನೆಯ ಪ್ರಯೋಜನ
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ (ಪಿಎಂಎಸ್ಬಿವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ) ಹಾಗೂ ಮೈಕ್ರೋ ಯುನಿಟ್ ಡೆವಲಪ್ಮೆಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್ (ಮುದ್ರಾ) ಈ ಎಲ್ಲ ಯೋಜನೆಗಳ ಮೊತ್ತವನ್ನು ನಾವು ಪ್ರಧಾನ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಖಾತೆಯ ಮೂಲಕ ಪಡೆಯಬಹುದು.
ಜನಧನ ಖಾತೆಯಲ್ಲಿ ಎಷ್ಟು ಮೊತ್ತ ಜಮೆ?
ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ಮೂಲಕ ಫಲಾನುಭವಿಗಳಿಗೆ ಇದುವರೆಗೆ ಸುಮಾರು 25 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. "ನಿಮಗೆಲ್ಲರಿಗೂ ಗೊತ್ತು, ಸರ್ಕಾರ ಜನ್ಧನ್ ಖಾತೆಗಳನ್ನು ತೆರೆದಾಗ ನಮ್ಮ ದೇಶದಲ್ಲಿ ಇದರ ಅಗತ್ಯವಿದೆಯೇ ಎಂಬ ಪ್ರಶ್ನೆ ಇತ್ತು. ಇಂದು ನಾವು ಜನ್ ಧನ್ ಖಾತೆಗಳ ಮೂಲಕ ಬಡವರಿಗೆ 25 ಲಕ್ಷ ಕೋಟಿ ರೂಪಾಯಿಗಳನ್ನು ಕಲ್ಯಾಣ ಯೋಜನೆಗಳ ಮೇಲೆ ವಿತರಿಸಿದ್ದೇವೆ. ಇದು ಸಾಧನೆಯಾಗಿದೆ," ಎಂದು ಇತ್ತೀಚೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.


Click it and Unblock the Notifications