ವಾಟ್ಸ್ ಆಪ್ ಕರೆ, ಸಂದೇಶದ ಮೂಲಕ ವಂಚಿಸುವವರ ಬಗ್ಗೆ ಎಸ್ ಬಿಐನಿಂದ ಎಚ್ಚರಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿಐ) ಖಾತೆದಾರರಿಗೆ ಅಪರಿಚಿತ ವಾಟ್ಸ್ ಆಪ್ ಕರೆಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಿದೆ. ವಾಟ್ಸ್ ಆಪ್ ಮೂಲಕ ಬ್ಯಾಂಕ್ ಮಾಹಿತಿಯನ್ನು ಕೇಳಬಹುದು. ಆ ನಂತರ ಅದರಿಂದ ವಂಚನೆ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
3 ತಿಂಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ನೂರಾರು ಕೋಟಿ ರುಪಾಯಿ ವಂಚನೆ
"ಗ್ರಾಹಕರನ್ನು ಈಗ ವಾಟ್ಸ್ ಆಪ್ ಮೂಲಕ ಗುರಿ ಮಾಡಿಕೊಳ್ಳಲಾಗಿದೆ. ಸೈಬರ್ ಕ್ರಿಮಿನಲ್ ಗಳು ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಅವಕಾಶ ನೀಡಬೇಡಿ! ಜಾಗೃತರಾಗಿರಿ ಹಾಗೂ ಎಚ್ಚರಿಕೆಯಿಂದ ಇರಿ," ಎಂದು ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ನಲ್ಲಿ ಎಚ್ಚರಿಕೆ ನೀಡಿದೆ.
ಆನ್ ಲೈನ್ ಬ್ಯಾಂಕಿಂಗ್ ವಂಚನೆ ಹೆಚ್ಚಳ
ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಾಗುತ್ತಿರುವಂತೆ ಆನ್ ಲೈನ್ ಬ್ಯಾಂಕಿಂಗ್ ವಂಚನೆಯೂ ಹೆಚ್ಚಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ವಾಟ್ಸ್ ಆಪ್ ಕರೆಗಳು ಹಾಗೂ ಸಂದೇಶಗಳು ಸೈಬರ್ ಅಪರಾಧಿಗಳ ಪಾಲಿಗೆ ಆನ್ ಲೈನ್ ವಂಚನೆಗೆ ಹೊಸ ದಾರಿಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಆಗಿಂದಾಗ್ಗೆ ಗ್ರಾಹಕರಿಗೆ ಸುರಕ್ಷತೆಯ ಟಿಪ್ಸ್ ಗಳನ್ನು ಹಂಚಿಕೊಳ್ಳುತ್ತಾ ಬಂದಿದೆ. ಕೆಲವು ದಿನಗಳ ಹಿಂದೆ, ನಕಲಿ ಇಮೇಲ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಎಸ್ ಬಿಐ ಎಚ್ಚರಿಸಿತ್ತು. ವಂಚಕರು ಕಳಿಸುವ ಇಮೇಲ್ ಗಳು ಥೇಟ್ ಬ್ಯಾಂಕ್ ಅಧಿಕಾರಿಗಳ ಇಮೇಲ್ ನಂತೆಯೇ ಇರುತ್ತಿವೆ.
ವೈಯಕ್ತಿಕ ವಿವರ, ಖಾತೆ ಮಾಹಿತಿ ಕೇಳುವುದಿಲ್ಲ
ಟ್ವೀಟ್ ನಲ್ಲಿ ಬ್ಯಾಂಕ್ ಈ ಬಗ್ಗೆ ತಿಳಿಸಿದ್ದು, ಅಸ್ತಿತ್ವದಲ್ಲೇ ಇಲ್ಲದೇ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೀತಿಯಲ್ಲಿ ಇಮೇಲ್ ಕಳುಹಿಸುತ್ತಿದ್ದು, ನಮ್ಮ ಗ್ರಾಹಕರಿಗೆ ನಕಲಿ ಇಮೇಲ್ ಗಳು ಬರುತ್ತಿವೆ. ಅಂಥ ಇಮೇಲ್ ಗಳನ್ನು ಕ್ಲಿಕ್ ಮಾಡಬೇಡಿ. ನಾವು ಅಂಥ ಮೇಲ್ ಗಳನ್ನು ಎಂದಿಗೂ ಕಳುಹಿಸುವುದಿಲ್ಲ ಎಂದು ತಿಳಿಸಿದೆ. ಲಾಟರಿಯಲ್ಲಿ ಗೆದ್ದಿದ್ದೀರಿ, ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಖ್ಯೆಯನ್ನು ಸಂಪರ್ಕಿಸಿ ಎಂದು ಮೇಲ್ ಬಂದಿರುತ್ತದೆ. ಎಸ್ ಬಿಐನಿಂದ ಯಾರಿಗೂ ಕರೆ ಮಾಡುವುದಿಲ್ಲ ಅಥವಾ ಇಮೇಲ್/ಎಸ್ಸೆಮ್ಮೆಸ್/ವಾಟ್ಸ್ ಆಪ್ ಮೂಲಕ ಯಾವುದೇ ಖಾತೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಅಥವಾ ವೈಯಕ್ತಿಕ ವಿವರ ಕೇಳುವುದಿಲ್ಲ ಎಂದು ತಿಳಿಸಿದೆ.
ಯಾವುದೇ ಲಾಟರಿ ಸ್ಕೀಮ್ ಇಲ್ಲ
ಯಾವುದೇ ಲಾಟರಿ ಯೋಜನೆ ಅಥವಾ ಅದೃಷ್ಟವಂತ ಗ್ರಾಹಕರಿಗೆ ಕೊಡುಗೆ ಅಂತ ಇಲ್ಲ. ಆದ್ದರಿಂದ ದಯವಿಟ್ಟು ಇಂಥ ವಂಚನೆಯಿಂದ ಎಚ್ಚರದಿಂದ ಇರಿ. ಏಕೆಂದರೆ ಸೈಬರ್ ಅಪರಾಧಿಗಳು ಒಂದು ತಪ್ಪಿಗಾಗಿ ಎದುರು ನೋಡುತ್ತಾರೆ. ಅಂಥ ನಕಲಿ ಕಾಲರ್ ಗಳು ಹಾಗೂ ಸಂದೇಶ ನಂಬಬೇಡಿ ಎಂದು ಎಸ್ ಬಿಐ ಮನವಿ ಮಾಡಿದೆ. ಈಗಿನ ಈ ಎಚ್ಚರಿಕೆ ಸಂದೇಶವನ್ನು ಜನರೊಂದಿಗೆ ಹಂಚಿಕೊಳ್ಳಿ. ಯಾವುದೇ ವಂಚನೆ ಸಂಭವಿಸಿದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದು, ಒಂದು ವೇಳೆ ಬ್ಯಾಂಕ್ ಕಡೆಯಿಂದ ತಪ್ಪಾಗಿ, ಗ್ರಾಹಕರಿಗೆ ವಂಚನೆ ಆದಲ್ಲಿ ಪರಿಹಾರ ದೊರೆಯುತ್ತದೆ. ಒಂದು ಗ್ರಾಹಕರ ನಿರ್ಲಕ್ಷ್ಯದಿಂದ ನಷ್ಟವಾದಲ್ಲಿ ಪರಿಹಾರ ಸಿಗುವುದಿಲ್ಲ ಎಂದು ಹೇಳಿದೆ.