ಫೆಬ್ರವರಿ ತಿಂಗಳ ಕೊನೆಯಲ್ಲಿ ಟೊಮೆಟೋ ನಾಟಿ ಮಾಡಿದ್ರೆ ಲಾಭ ಗ್ಯಾರೆಂಟಿ!
ಬೆಂಗಳೂರು, ಜೂ. 22: 'ಈ ಬಾರಿ ಟೊಮೆಟೋ ಬೆಳೆಯನ್ನು ಪ್ಲಾನ್ ಮಾಡಿ ಬೆಳೆದೆ. ನಾಲ್ಕು ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆದಿದ್ದೆ. ಆಜು ಬಾಜು 40 ಲಕ್ಷ ಬಂದಿದೆ. ನನಗೆ ಇವತ್ತಿನವರೆಗೂ ಟೊಮೆಟೊ ಬೆಳೆ ಕೈ ಕೊಟ್ಟಿಲ್ಲ. ಟೊಮೆಟೊ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೆ ನಷ್ಟದ ಪ್ರಶ್ನೆಯೇ ಇಲ್ಲ'
ಇದು ಕೇವಲ ನಾಲ್ಕು ಎಕರೆ ಜಮೀನನ್ನು ಗುತ್ತಿಗೆ ಪಡೆದು ನಲವತ್ತು ಲಕ್ಷ ರೂಪಾಯಿ ಆದಾಯ ಗಳಿಸಿದ ಟೊಮೆಟೋ ರೈತನ ಯಶೋಗಾಥೆ. ಅಂದಹಾಗೆ ಟೊಮೆಟೋ ಬೆಳೆಯಲ್ಲಿ ಲಾಭ ಗಳಿಸುವ ಟ್ರಿಕ್ಸ್ ಇಲ್ಲಿ ವಿವರಿಸಿದ್ದಾರೆ.
ಈ ವರ್ಷ ಟೊಮೆಟೊ ಬೆಳೆದ ರೈತರು ಲಕ್ಷಾಧಿಪತಿಗಳಾಗಿದ್ದಾರೆ. ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೊರೊನಾದಿಂದ ಎರಡು ವರ್ಷ ರೈತರು ಕೃಷಿ ಕೈ ಬಿಟ್ಟಿದ್ದರು. ಕೊರೊನಾ ಕಾಲದಲ್ಲಿ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೇ ಬೀದಿಗೆ ಬಿಸಾಡಿ ನಷ್ಟ ಅನುಭವಿಸಿದ್ದರು. ಆದ್ರೆ ವೈಜ್ಞಾನಿಕವಾಗಿ ಟೊಮೆಟೊ ಬೆಳೆದ ರೈತರು ಈ ಭಾರಿ ಲಕ್ಷ ಲಕ್ಷ ಜೇಬಿಗೆ ಇಳಿಸಿದ್ದಾರೆ. ಇವರನ್ನು ನೋಡಿ ಇದೀಗ ಎಲ್ಲೆಡೆ ಟೊಮೆಟೊ ಗಿಡ ನೆಡಲಾಗಿದೆ.
ಆದ್ರೆ ವೈಜ್ಞಾನಿಕಾಗಿ ಟೊಮೆಟೋ ಯಾವ ಸಮಯದಲ್ಲಿ ನೆಡಬೇಕು, ಯಾವ ರೀತಿ ಔಷಧ ಕೊಡಬೇಕು ಎಂಬುದರ ಬಗ್ಗೆ ಪೂರ್ಣ ಅಧ್ಯಯನ ಮಾಡಿ ಬೆಳೆದರೆ ಒಂದು ಎಕರೆಯಲ್ಲಿ ಮೂರು ತಿಂಗಳಲ್ಲಿ ಕನಿಷ್ಠ ಐದು ಲಕ್ಷ ರೂಪಾಯಿ ಆದಾಯ ಗಳಿಸಬಹುದು. ಈ ಕುರಿತು ಬೆಂಗಳೂರು ಉತ್ತರ ಜಿಲ್ಲೆಯ ಮಧುರೆ ಸಮೀಪದ ರೈತ ರಮೇಶ್ ಹೇಳಿದ ಅಸಲಿ ಸತ್ಯ ಇಲ್ಲಿದೆ ನೋಡಿ.
ಫೆಬ್ರವರಿ ಎರಡನೇ ವಾರದಿಂದ ನಾಲ್ಕನೇ ವಾರದೊಳಗೆ ನಾಟಿ
ಸಾಮಾನ್ಯವಾಗಿ ಯಾವ ಅವಧಿಯಲ್ಲಿ ಟೊಮೆಟೊ ಬೆಳೆಯಬೇಕು ಎಂಬ ಕಲ್ಪನೆ ರೈತರಿಗೆ ಇರುವುದಿಲ್ಲ. ಸಾಮಾನ್ಯವಾಗಿ ಟೊಮೆಟೊ ಗಿಡಗಳನ್ನು ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ನಾಟಿ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಟೊಮೆಟೋ ಗಿಡಗಳನ್ನು ಫೆಬ್ರವರಿ ಎರಡನೇ ವಾರದಿಂದ ಮಾರ್ಚ್ ಮೊದಲನೇ ವಾರದ ಒಳಗೆ ನಾಟಿ ಮಾಡಿದ್ರೆ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ. ಫೆಬ್ರವರಿಯಲ್ಲಿ ಯಾಕೆ ಟೊಮೆಟೊ ಬೆಳೆಯಬೇಕು ಎಂಬುದಕ್ಕೆ ರೈತ ಕೊಟ್ಟಿರುವ ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ.
ಟೊಮೆಟೊ ಬೆಳೆದು ಲಕ್ಷಾಧೀಶನಾದ ರೈತನ ಸಕ್ಸಸ್ ಸ್ಟೋರಿ
ನೀವು ಬೇಕಾದರೆ ಹತ್ತು ವರ್ಷದ ಟೊಮೆಟೊ ಬೆಲೆ ಧಾರಣೆ ವರದಿ ನೋಡಿ. ಮೇ ಮತ್ತು ಜೂನ್ ತಿಂಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುತ್ತದೆ. ಯಾಕೆಂದರೆ, ಕಳೆದ ಏಳೆಂಟು ವರ್ಷದಿಂದ ಮುಂಗಾರು ಮಳೆ ಮತ್ತು ಬೇಸಿಗೆ ಮಳೆ ನಿರೀಕ್ಷೆಗೂ ಮೀರಿ ಸುರಿಯುತ್ತಿದೆ. ಹೀಗಾಗಿ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಟೊಮೆಟೋ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಟೊಮೆಟೋ ಅತಿ ಹೆಚ್ಚು ಬೆಳೆಯುವ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ನಾಟಿ ಮಾಡುವುದು ಅಪರೂಪ.
ಒಂದು ವೇಳೆ ನಾಟಿ ಮಾಡಿದರೂ ಅಲ್ಲಿನ ಉಷ್ಣಾಂಶ ತೀವ್ರತೆಯಿಂದ ಕರ್ನಾಟಕಕ್ಕೆ ಹೋಲಿಸಿದ್ರೆ ಹೆಚ್ಚು ಫಲ ಬರುವುದಿಲ್ಲ. ಬೇಸಿಗೆ ಹಾಗೂ ಮುಂಗಾರು ಪ್ರವೇಶದ ಮಳೆ ಸತತಾಗಿ ಪ್ರವಾಹ ಉಂಟು ಮಾಡುತ್ತಿದೆ. ಹೀಗಾಗಿ ಫೆಬ್ರವರಿ ಎರಡನೇ ವಾರದಲ್ಲಿ ಟೊಮೆಟೊ ನಾಟಿ ಮಾಡಿದ್ರೆ, ಮೇಲೆ ಜೂನ್ ತಿಂಗಳಲ್ಲಿ ಫಸಲು ಬರುತ್ತದೆ. ಈ ಅವಧಿಯಲ್ಲಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ರೈತರು ಟೊಮೆಟೊ ಬೆಳೆಯುವುದಿಲ್ಲ. ಹೀಗಾಗಿ ರಾಜ್ಯದ ರೈತರಿಗೆ ಸಹಜವಾಗಿ ನಿರೀಕ್ಷೆಗೂ ಮೀರಿ ಲಾಭ ಸಿಗುತ್ತದೆ ಎಂದು ಹಲವು ವರ್ಷದಿಂದ ಟೊಮೆಟೊ ಬೆಳೆಯುತ್ತಿರುವ ರೈತ ರಮೇಶ್ ತಿಳಿಸಿದ್ದಾರೆ.
ಮಂಗಾರು ಪೂರ್ವ ಮಳೆ ಪಾತ್ರ ಅತಿ ಮಹತ್ವ
ಮಾರ್ಚ್ ಎರಡನೇ ವಾರದ ನಂತರ ಬಿಸಿಲು ಜಾಸ್ತಿಯಾಗುತ್ತದೆ. ಈ ಅವಧಿಯಲ್ಲಿ ಟೊಮಟೊ ನೆಟ್ಟರೂ ಗಿಡಗಳು ಫಲವತ್ತಾಗಿ ಬೆಳೆಯುವುದಿಲ್ಲ. ಬೆಳದರೂ ಮುಂಗಾರು ಪೂರ್ವ ಮಳೆಗೆ ಸಿಲುಕಿ ಟೊಮೆಟೊ ಹೂವು ಉದರಿ ಹೋಗುತ್ತದೆ. ನಷ್ಟವಾಗುವ ಸಾಧ್ಯತೆಯಿದೆ. ಅತಿ ತಾಪಮಾನ ಇದ್ದರೂ ಟೊಮೆಟೊ ಗಿಡಗಳು ಬೆಳೆಯವುದು ತುಂಬಾ ಕಷ್ಟ. ಹೀಗಾಗಿ ಫೆಬ್ರವರಿ ಎರಡನೇ ವಾರದಲ್ಲಿ ಟೊಮೆಟೋ ನಾಟಿ ಮಾಡುವುದು ಸೂಕ್ತ. ಆದ್ರೆ, ದೇಶದಲ್ಲಿ ಯಾವುದೇ ರಾಜಕೀಯ ಅಸ್ಥಿರತೆ ಇರಬಾರದು. ಹೀಗಾಗಿ ರೈತರು ಫೆಬ್ರವರಿ ತಿಂಗಳಲ್ಲಿ ಟೊಮೆಟೊ ನಾಟಿ ಮಾಡಿದ್ರೆ ಉತ್ತಮ ಆದಾಯ ಗಳಿಸುವ ಸಾಧ್ಯತೆಗಳು ಇವೆ ಎಂದು ಹೇಳುತ್ತಾರೆ ರೈತ ರಮೇಶ್.
ದೀಪಾವಳಿ ಸಮಯದಲ್ಲಿ ಟೊಮೆಟ್ ಬೆಲೆ ಕೈಬಿಡಲ್ಲ
ರೈತರು ಅವೈಜ್ಞಾನಿಕವಾಗಿ ಇಷ್ಟ ಬಂದ ಸಮಯದಲ್ಲಿ ಟೊಮೆಟೊ ಬೆಳೆ ಬೆಳೆಯುತ್ತಾರೆ. ಯಾರಾದರೂ ನಾಲ್ಕು ಲಕ್ಷ ಗಳಿಕೆ ಮಾಡಿದ ಬಳಿಕ ಅವರನ್ನು ನೋಡಿ ಎಲ್ಲರೂ ಬೆಳೆಯಲು ಶುರು ಮಾಡುತ್ತಾರೆ. ಆನಂತರ ಬೆಳೆದ ಬೆಳೆಯನ್ನು ರಸ್ತೆಗಳಲ್ಲಿ ಸುರಿಯುತ್ತಾರೆ. ನಾನು ಹತ್ತು ವರ್ಷದಿಂದ ಟೊಮೆಟೋ ಬೆಳೆಯುತ್ತಿದ್ದೇನೆ. ಕೆಲವೊಮ್ಮೆ ಸರಿಯಾಗಿ ಬೆಲೆ ಸಿಕ್ಕಿಲ್ಲ. ಇನ್ನೂ ಕೆಲವೊಮ್ಮೆ ಮಳೆಗೆ ಬೆಳೆ ನಾಶವಾಗಿದೆ. ನಾನಾ ಸಮಸ್ಯೆ ಎದುರಿಸಿದ್ದೇನೆ. ಹಾಗಂತ ನಷ್ಟ ಅನುಭವಿಸಿಲ್ಲ.
ಮಾರುಕಟ್ಟೆ ಎಂಟ್ರಿ ಬಗ್ಗೆ ಅಧ್ಯಯನ ಮಾಡಿ
ದೇಶದ ತರಕಾರಿ ಬೆಳೆ, ಅವುಗಳ ಮಾರುಕಟ್ಟೆ ಎಂಟ್ರಿ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಸಮಯದಲ್ಲಿ ಟೊಮೆಟೊ ಬೆಳೆಯುತ್ತೇನೆ. ಹೀಗಾಗಿ ನನಗೆ ಎಂದೂ ಟೊಮೆಟೊ ಬೆಳೆಯಲ್ಲಿ ನಷ್ಟವಾಗಿಲ್ಲ. ಈ ವರ್ಷ ನಾಲ್ಕು ಎಕರೆಯಲ್ಲಿ ಟೊಮೆಟೊ ಬೆಳೆದು ನಲವತ್ತು ಲಕ್ಷ ರೂ. ವರೆಗೂ ಗಳಿಸಿದ್ದೇನೆ. ನಾಲ್ಕು ಎಕರೆಗೆ ಐದು ಲಕ್ಷ ರೂ. ವೆಚ್ಚ ಮಾಡಿದ್ದೇನೆ. ಟೊಮೆಟೋ ಬೆಳೆ ಉತ್ತಮವಾಗಿ ಬೆಳೆಯುವುದಕ್ಕಿಂತಲೂ ಯಾವ ಸಮಯದಲ್ಲಿ ನಾಟಿ ಮಾಡಬೇಕು ಎಂಬುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ.
ಸೂಕ್ತ ಕಾಲದಲ್ಲಿ ನಾಟಿ ಮಾಡಿದ್ರೆ ನಷ್ಟದ ಪ್ರಶ್ನೆಯೇ ಇಲ್ಲ
ಟೊಮೆಟೋ ಬೆಳೆಗೆ ಯಾವ ಸಮಯದಲ್ಲಿ ಬೆಲೆ ಇರುತ್ತದೆ ಎಂಬುದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸೂಕ್ತ ಕಾಲದಲ್ಲಿ ನಾಟಿ ಮಾಡಿದ್ರೆ ನಷ್ಟದ ಪ್ರಶ್ನೆಯೇ ಇಲ್ಲ ಎಂದು ರಮೇಶ್ ಸಲಹೆ ನೀಡಿದ್ದಾರೆ.
ನಾನು ನಾಲ್ಕು ಎಕರೆ ಜಮೀನು ಲೀಸ್ ತೆಗೆದುಕೊಂಡು ಫೆಬ್ರವರಿ ಎರಡನೇ ವಾರದಲ್ಲಿ ನಾಟಿ ಮಾಡಿದ್ದೆ. ಉತ್ತಮ ಫಸಲು ಬಂತು. 14 ಕೆಜಿ ಟೊಮೆಟೋ ಬಾಕ್ಸ್ಗೆ 800 ರೂ. ನಿಂದ 1200 ರೂ. ವರೆಗೂ ಸಿಕ್ಕಿದೆ. ಕೊನೆ ಹಂತದಲ್ಲಿ 20 ಕೆಜಿ ಟೊಮೆಟೋ ಒಂದು ಬಾಕ್ಸ್ಗೆ 2400 ರೂ. ಸಿಕ್ಕಿದೆ. ಅಂತಿಮವಾಗಿ ನನ್ನ ವೆಚ್ಚ ಕಳೆದರೂ ಮೂವತ್ತು ಲಕ್ಷ ರೂ. ಲಾಭ ಸಿಕ್ಕಿದಂತಾಗಿದೆ. ಅಂತು ಟೊಮೆಟೋ ಬೆಳೆಯನ್ನು ಉತ್ತಮ ವಾಗಿ ಫಸಲು ತೆಗೆಯುವುದಕ್ಕಿಂತಲೂ ಉತ್ತಮ ಸಮಯ ನೋಡಿ ಬೆಳೆಯಬೇಕು ಎಂದು ರೈತ ಕಿವಿಮಾತು ಹೇಳಿದ್ದಾರೆ.