ಸಿಹಿ ಸುದ್ದಿ: ಎಂಆರ್ಪಿ ಕಡಿತಕ್ಕೆ ಕೇಂದ್ರ ಸೂಚನೆ, ಇನ್ನಷ್ಟು ತಗ್ಗಲಿದೆ ಖಾದ್ಯ ತೈಲ ಬೆಲೆ
ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರವು ಸಿಹಿ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು ಖಾದ್ಯ ತೈಲ ತಯಾರಕರು ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಬೆಲೆಯನ್ನು ಪ್ರತಿ ಲೀಟರ್ಗೆ ಹತ್ತು ರೂಪಾಯಿ ಕಡಿತ ಮಾಡುವಂತೆ ಹೇಳಿದೆ. ಅದಲ್ಲದೆ ಇದಕ್ಕೆ ಗಡುವು ಕೂಡಾ ಕೇಂದ್ರ ಸರ್ಕಾರ ನೀಡಿದೆ.
ಇನ್ನು ಅದೇ ಬ್ರಾಂಡ್ನ ದೇಶದಾದ್ಯಂತ ತನ್ನ ಖಾದ್ಯ ತೈಲದ ಬೆಲೆಯಲ್ಲಿ ಏಕರೂಪತೆ ಹೊಂದಿರುವಂತೆಯೂ ಹೇಳಿದೆ. ಒಂದು ವಾರದೊಳಗೆ ಬೆಲೆ ಬದಲಾವಣೆಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚನೆ ನೀಡಿದೆ.
ಎಲ್ಲರಿಗೂ ರುಚಿಸುವಂಥ ಸುದ್ದಿ! ಖಾದ್ಯ ತೈಲ ಇಳಿಕೆ ಮಾಡಿದ ಅದಾನಿ ಸಂಸ್ಥೆ
ಕಳೆದ ಕೆಲವು ದಿನಗಳಲ್ಲಿ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಬೆಲೆ ಮಾತ್ರ ಹೆಚ್ಚು ಇಳಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಸೂಚನೆಯನ್ನು ದೇಶದ ಖಾದ್ಯ ತೈಲ ಸಂಸ್ಥೆಗಳಿಗೆ ನೀಡಿದೆ. ದೇಶದಲ್ಲಿ ಖಾದ್ಯ ತೈಲದ ಶೇಕಡಾ 60 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ತೀವ್ರ ಅಧಿಕವಾದ ಕಾರಣದಿಂದಾಗಿ ದೇಶದಲ್ಲಿ ಖಾದ್ಯ ತೈಲ ಬೆಲೆಯು ಗಣನೀಯವಾಗಿ ಏರಿಕೆಯಾಗಿದೆ. ಆದರೆ ಈಗ ಜಾಗತಿಕ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿದೆ.
ಕಳೆದ ತಿಂಗಳು ಲೀಟರ್ಗೆ 10-15 ರೂಪಾಯಿ ಕಡಿತ
ಜಾಗತಿಕ ಬೆಲೆ ಇಳಿಕೆಯಾದ ಬೆನ್ನಲ್ಲೇ ಖಾದ್ಯ ತೈಲ ತಯಾರಕರು ಕಳೆದ ತಿಂಗಳು ಲೀಟರ್ಗೆ 10-15 ರೂಪಾಯಿಗಳವರೆಗೆ ಕಡಿತ ಮಾಡಿದ್ದಾರೆ. ಆದರೆ ಈಗ ಜಾಗತಿಕ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ. ಆದ್ದರಿಂದಾಗಿ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಎಲ್ಲಾ ಖಾದ್ಯ ತೈಲ ಸಂಘಗಳು ಮತ್ತು ಪ್ರಮುಖ ತಯಾರಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಎಲ್ಲಾ ಖಾದ್ಯ ತೈಲ ಸಂಸ್ಥೆಗಳು ಒಂದು ವಾರದ ಒಳಗಾಗಿ ಖಾದ್ಯ ತೈಲಗಳ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಜನರಿಗೆ ಸಿಹಿಸುದ್ದಿ: ಖಾದ್ಯ ತೈಲ ಬೆಲೆ ಲೀಟರ್ಗೆ 15 ರೂ. ಇಳಿಕೆ
ಪ್ರತಿ ಲೀಟರ್ಗೆ 10 ರೂ.ವರೆಗೆ ಎಂಆರ್ಪಿ ಕಡಿತದ ಭರವಸೆ
"ಕಳೆದ ಒಂದು ವಾರದಲ್ಲಿ ಜಾಗತಿಕ ಖಾದ್ಯ ತೈಲಗಳ ಬೆಲೆಯಲ್ಲಿ ಶೇಕಡ ಹತ್ತರಷ್ಟು ಇಳಿಕೆಯಾಗಿದೆ. ಇದರ ಲಾಭವನ್ನು ನಾವು ದೇಶದ ಗ್ರಾಹಕರಿಗೆ ಹಸ್ತಾಂತರ ಮಾಡುವುದು ಅವಶ್ಯಕ. ಎಂಆರ್ಪಿಯನ್ನು ಕಡಿತ ಮಾಡುವಂತೆ ತಿಳಿಸಿದ್ದೇವೆ," ಎಂದು ಸಂಸ್ಥೆಗಳಿಗೆ ಸುಧಾಂಶು ಪಾಂಡೆ ತಿಳಿಸಿದ್ದಾರೆ. ಪ್ರಮುಖ ಖಾದ್ಯ ತೈಲ ತಯಾರಕರು ಮುಂದಿನ ವಾರದ ವೇಳೆಗೆ ಆಮದು ಮಾಡಿಕೊಳ್ಳುವ ಎಲ್ಲಾ ಖಾದ್ಯ ತೈಲಗಳಾದ ತಾಳೆ ಎಣ್ಣೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳಲ್ಲಿ ಪ್ರತಿ ಲೀಟರ್ಗೆ 10 ರೂ.ವರೆಗೆ ಎಂಆರ್ಪಿ ಕಡಿತ ಮಾಡುವುದಾಗಿ ಭರವಸೆ ನೀಡಿದ್ದಾರೆ.
ದೇಶಾದಾದ್ಯಂತ ಒಂದು ಬ್ರಾಂಡ್ಗೆ ಒಂದೇ ಬೆಲೆ
ಪ್ರಸ್ತುತ ವಿವಿಧ ವಲಯಗಳಲ್ಲಿ ಒಂದೇ ಬ್ರಾಂಡ್ ಎಣ್ಣೆಯಲ್ಲಿ ಲೀಟರ್ಗೆ 3-5 ರೂಪಾಯಿಗಳ ವ್ಯತ್ಯಾಸವಿದೆ. ಆದರೆ ಈ ವ್ಯತ್ಯಾಸವಿಲ್ಲದಂತೆ, ಒಂದು ಬ್ರಾಂಡ್ ದೇಶದಾದ್ಯಂತ ಒಂದೇ ದರವನ್ನು ಹೊಂದಿರಬೇಕು ಎಂದು ಕೂಡಾ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಸೂಚನೆ ನೀಡಿದ್ದಾರೆ. "ಪ್ರಸ್ತುತ, ವಿವಿಧ ವಲಯಗಳಲ್ಲಿ ಮಾರಾಟವಾಗುವ ಅದೇ ಬ್ರಾಂಡ್ಗಳ ಎಂಆರ್ಪಿಯಲ್ಲಿ ಲೀಟರ್ಗೆ 3-5 ರೂ ವ್ಯತ್ಯಾಸವಿದೆ. ಸಾರಿಗೆ ಮತ್ತು ಇತರ ವೆಚ್ಚಗಳು ಈಗಾಗಲೇ ಎಂಆರ್ಪಿಯಲ್ಲಿ ಸೇರ್ಪಡೆ ಆಗಿರುತ್ತದೆ. ಹಾಗಿರುವಾಗ ಎಂಆರ್ಪಿಯಲ್ಲಿ ವ್ಯತ್ಯಾಸವಾಗಬಾರದು," ಎಂದು ಹೇಳಿದ್ದಾರೆ. ಇದನ್ನು ಕೂಡಾ ಸಂಸ್ಥೆಗಳು ಒಪ್ಪಿಕೊಂಡಿದೆ.
ಖಾದ್ಯ ತೈಲ ಬ್ರಾಂಡ್ಗಳ ಬಗ್ಗೆ ಗ್ರಾಹಕರ ದೂರು
ಈ ಎರಡು ವಿಚಾರ ಮಾತ್ರವಲ್ಲದೇ ಇನ್ನೂ ಒಂದು ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಖಾದ್ಯ ತೈಲ ಬ್ರಾಂಡ್ಗಳ ವಿರುದ್ಧ ಗ್ರಾಹಕರ ದೂರು ಅಧಿಕವಾಗಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆದಿದೆ. ಖಾದ್ಯ ತೈಲವನ್ನು 15 ಡಿಗ್ರಿ ಸೆಲ್ಸಿಯಸ್ನಲ್ಲಿ ತಾಪಾಂಶದಲ್ಲಿ ಪ್ಯಾಕ್ ಮಾಡಲಾಗಿದೆ ಎಂದು ಕೆಲವು ಕಂಪನಿಗಳು ಪ್ಯಾಕೇಜ್ನಲ್ಲಿ ಬರೆಯುತ್ತಿವೆ. ಇದರಿಂದಾಗಿ ತೈಲವು ಇನ್ನಷ್ಟು ದ್ರವವಾಗುತ್ತದೆ, ತೂಕ ಕಡಿಮೆಯಾಗುತ್ತದೆ. ಆದರೆ ವಾಸ್ತವವಾಗಿ ಸಂಸ್ಥೆಗಳು 30 ಡಿಗ್ರಿ ಸೆಲ್ಸಿಯಸ್ನಲ್ಲಿ ಪ್ಯಾಕ್ ಮಾಡಬೇಕಾಗುತ್ತದೆ. ಆದರೆ ಸಂಸ್ಥೆಗಳು 15 ಡಿಗ್ರಿ ಸೆಲ್ಸಿಯಸ್ ತಾಪಾಂಶದಲ್ಲಿ ಪ್ಯಾಕ್ ಮಾಡಿದಾಗ ತೂಕ ಕಡಿಮೆಯಾಗುತ್ತದೆ. ಆದರೆ ಈ ಬಗ್ಗೆ ಪ್ಯಾಕ್ನಲ್ಲಿ ಉಲ್ಲೇಖ ಮಾಡಲಾಗಿಲ್ಲ. ಇದು ಮೋಸ ಎಂದು ಗ್ರಾಹಕರು ವಾದ ಮಾಡಿದ್ದಾರೆ. ಈ ಬಗ್ಗೆ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ವಿವರಿಸಿದ್ದಾರೆ.
ಪ್ರಸ್ತುತ ಖಾದ್ಯ ತೈಲ ಬೆಲೆ ಎಷ್ಟಿದೆ?
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಜುಲೈ 6 ರಂದು ತಾಳೆ ಎಣ್ಣೆ ಕೆಜಿಗೆ 144.16 ರೂ., ಸೂರ್ಯಕಾಂತಿ ಎಣ್ಣೆ ಕೆಜಿಗೆ 185.77 ರೂ., ಸೋಯಾಬೀನ್ ಎಣ್ಣೆ ಕೆಜಿಗೆ 185.77 ರೂ., ಸಾಸಿವೆ ಎಣ್ಣೆ ಕೆಜಿಗೆ 177.37 ರೂ. ಮತ್ತು ಕಡಲೆ ಎಣ್ಣೆ ಕೆಜಿಗೆ 187.93 ರೂಪಾಯಿ ಆಗಿದೆ.