ಸಿರಿ- ಸಂಪತ್ತು ನೆಲೆಸಲು ಭಾರತೀಯ ಪದ್ಧತಿಯಲ್ಲಿ ಆರು ಸಲಹೆಗಳು
ಆರೋಗ್ಯವಂತ, ಸಂಪತ್ತಿನಿಂದ ಕೂಡಿದ ಜೀವನವನ್ನು ಯಾರು ಬಯಸುವುದಿಲ್ಲ ಹೇಳಿ! ಕೆಲವರಿಗೆ ಸಂಪತ್ತು ಗಳಿಸುವುದು ಕಷ್ಟವೇ ಅಲ್ಲವೇನೋ ಎಂಬಂತೆ ಜೀವನ ಇರುತ್ತದೆ. ಮತ್ತೆ ಕೆಲವರು ವರ್ಷಗಟ್ಟಲೆ ಕಷ್ಟ ಪಡುತ್ತಲೇ ಇರುತ್ತಾರೆ. ಭಾರತೀಯ ಸಂಸ್ಕೃತಿ ಪ್ರಕಾರ ಕೆಲವನ್ನು ಅದೃಷ್ಟ ಎಂದು ಕರೆದಿದ್ದು, ಈ ನಿಯಮಗಳನ್ನು ಅನುಸರಿಸಿದರೆ ಸಂಪತ್ತು ಗಳಿಕೆ ಹಾದಿಯಲ್ಲಿ ಅಡೆತಡೆ ಆಗುವುದಿಲ್ಲ ಎನ್ನಲಾಗುತ್ತದೆ.
ಎಲ್ಲ ಸಂತೋಷದ ಮೂಲ ಹಣ ಅಲ್ಲ. ಆದರೆ ಹಣದ ಮೂಲಕ ಕೆಲವು ಸಂತೋಷ ಖರೀದಿ ಮಾಡಬಹುದು ಎಂಬುದಂತೂ ಸತ್ಯ. ಮಕ್ಕಳನ್ನು ಒಳ್ಳೆ ಶಾಲೆ- ಕಾಲೇಜಿಗೆ ಸೇರಿಸಬೇಕು, ಪ್ರೀತಿಪಾತ್ರರಿಗೆ ಅವರಿಗೆ ಇಷ್ಟವಾಗುವ ವಸ್ತುಗಳನ್ನು ಖರೀದಿಸಿ ಕೊಡಬೇಕು... ಹೀಗೆ ಎಷ್ಟೋ ಆಸೆಗಳಿಗೆ ಹಣವೇ ಮೂಲವಾಗಿರುತ್ತದೆ.
ಬಹಳ ಶ್ರಮಪಟ್ಟು ದುಡಿದ ಮೇಲೂ ಹಣ ಉಳಿಸಲು ಆಗುತ್ತಿಲ್ಲ ಎಂದುಕೊಳ್ಳುತ್ತಿರುವವರಿಗೆ ಈ ಲೇಖನದಲ್ಲಿ ಕೆಲವು ಸಲಹೆಗಳಿವೆ. ನಂಬಿಕೆ ಇದ್ದಲ್ಲಿ ಅನುಸರಿಸಿದರೆ ಬದಲಾವಣೆಯನ್ನು ನೀವೇ ಗಮನಿಸಿ ನೋಡಿ.
ಸಿರಿಯ ದೇವತೆಯನ್ನು ಆರಾಧಿಸಿ
ಸಿರಿಯ ದೇವತೆಯಾದ ಲಕ್ಷ್ಮಿಯನ್ನು ಆರಾಧನೆ ಮಾಡಿ. ಅದೃಷ್ಟ, ಸಂಪತ್ತು ತರುವ ದೇವತೆ ಲಕ್ಶ್ಮೀದೇವಿ ಎಂಬುದು ಜನಪ್ರಿಯ ನಂಬಿಕೆ. ಆದ್ದರಿಂದಲೇ ದೀಪಾವಳಿಯಲ್ಲಿ ವಿಶೇಷವಾಗಿ ಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಇನ್ನು ಲಕ್ಷ್ಮಿ ಅನುಗ್ರಹ ಪಡೆಯುವುದಕ್ಕೆ ನಾನಾ ಮಂತ್ರಗಳು ಇವೆ. ಅದನ್ನು ಹೇಳುವ ಮೂಲಕ ಲಕ್ಷ್ಮೀ ಅನುಗ್ರಹಕ್ಕೆ ಪ್ರಾರ್ಥಿಸಲಾಗುತ್ತದೆ. ಒಂದು ಗಾಜಿನ ಲೋಟ ತೆಗೆದುಕೊಂಡು, ಅದಕ್ಕೆ ಲಕ್ಷ್ಮೀ ದೇವಿ ಚಿತ್ರ ಅಂಟಿಸಬೇಕು. ಅದರೊಳಗೆ ದಿನವೂ ನಾಲ್ಕು ಹೊಸ ನಾಣ್ಯಗಳನ್ನು ಹಾಕಿ, ದೇವಿಯ ಆರಾಧನೆ ಮಾಡಬೇಕು.
ಆನೆಯು ಸಂಪತ್ತಿನ ಸಂಕೇತ
ಪ್ರಾಚೀನ ಭಾರತದಲ್ಲಿ ಶ್ರೀಮಂತ ರಾಜರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳಿರುತ್ತಿದ್ದವು. ಆನೆಗಳನ್ನು ಶ್ರೀಮಂತಿಕೆ ಸಂಕೇತ ಎನ್ನಲಾಗುತ್ತದೆ. ಆದ್ದರಿಂದ ಆನೆಯ ಸಣ್ಣ ವಿಗ್ರಹವನ್ನಾದರೂ ಮನೆಯಲ್ಲಿ ಇರಿಸಿಕೊಳ್ಳುವ ಪರಿಪಾಠ ನಡೆದುಬಂದಿದೆ. ಅಥವಾ ಆನೆಯ ಮುಖ ಇರುವ ಲಾಕೆಟ್ ಅಥವಾ ಪೆಂಡೆಂಟ್ ಮಾಡಿಸಿ, ಹಾಕಿಕೊಳ್ಳುವುದು ಸಹ ಅದೃಷ್ಟ ಎಂದು ಭಾವಿಸಲಾಗುತ್ತದೆ.
ಕುಬೇರ ಪೂಜೆ ಮತ್ತು ವಾಸ್ತು ಶಾಸ್ತ್ರ
ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆದರೆ, ಕುಬೇರನನ್ನು ಸಂಪತ್ತಿನ ಒಡೆಯ ಎನ್ನಲಾಗುತ್ತದೆ. ಜನಪ್ರಿಯ ನಂಬಿಕೆ ಪ್ರಕಾರ, ಹಣಕಾಸು- ಸಂಪತ್ತಿನ ಅಡೆತಡೆಗಳು ಇದ್ದಲ್ಲಿ ಕುಬೇರನ ಆರಾಧನೆ ಮಾಡಿದರೆ ತೊಂದರೆಗಳ ನಿವಾರಣೆ ಆಗುತ್ತದೆ. ಇನ್ನು ವಾಸ್ತುವನ್ನು ಮುಖ್ಯವಾಗಿ ನಂಬುತ್ತಿದ್ದ ಪ್ರಾಚೀನ ಭಾರತೀಯರು ಗೃಹ ವಾಸ್ತುವು ಲಕ್ಷ್ಮೀ ಅನುಗ್ರಹಕ್ಕೆ ಬಹಳ ಮಹತ್ತರವಾದುದು ಎಂದಿದ್ದಾರೆ.
ಕೈಲಾದಷ್ಟು ಹಣವನ್ನು ದಾನ ಮಾಡಿ
ಪ್ರತಿ ವರ್ಷವೂ ಇಂತಿಷ್ಟು ಮೊತ್ತವನ್ನು ದಾನ ಮಾಡಬೇಕು. ಹಣಕಾಸಿನ ಅಗತ್ಯ ಇರುವವರಿಗೆ ನಿಮ್ಮ ಕೈಲಾದ ನೆರವನ್ನು ಮಾಡಬೇಕು. ಮೇಲ್ನೋಟಕ್ಕೆ ಇದೊಳ್ಳೆ ಉಪದೇಶ ಆಯಿತಲ್ಲ ಅನ್ನಿಸಬಹುದು. ಆದರೆ ಇನ್ನೊಬ್ಬರ ಕಷ್ಟವನ್ನು ನಿಮ್ಮ ಹಣದ ಮೂಲಕ ಸ್ವಲ್ಪವಾದರೂ ಕಡಿಮೆ ಮಾಡಿದರೆ ಅದರಿಂದ ಆ ದೇವರ ಅನುಗ್ರಹ ಆಗುತ್ತದೆ ಎಂಬುದು ಹಿರಿಯರ ನಂಬಿಕೆ. ಇದರ ಜತೆಗೆ ಹಣದ ಬಗ್ಗೆ ಮತ್ತು ಅದರ ಶಕ್ತಿ ಬಗ್ಗೆ ಉದಾಸೀನ, ಉಡಾಫೆಯ ಮಾತುಗಳನ್ನು ಆಡಬೇಡಿ.