20ನೇ ವಯಸ್ಸಿನಲ್ಲಿ ಈ ಐದು ಆರ್ಥಿಕ ತಪ್ಪುಗಳನ್ನು ಮಾಡದಿರಿ! ಭವಿಷ್ಯದ ದೃಷ್ಟಿಯಿಂದ ಒಳಿತು
ಇತ್ತೀಚಿನ ಆಧುನಿಕ ಜೀವನದ ಭರಾಟೆಯಲ್ಲಿ ಟೆಕ್ನಾಲಜಿ ಬೆಳೆಯುತ್ತಾ ಹೋದಂತೆ ಸೌಲಭ್ಯಗಳಿಗೇನು ಕೊರತೆ ಇಲ್ಲ. ಸೌಲಭ್ಯಗಳು ಹೆಚ್ಚಾದಂತೆ ಅದಕ್ಕೆ ತಗುಲುವ ವೆಚ್ಚವು ಹೆಚ್ಚಾಗುತ್ತಿದೆ. ಸದ್ಯ ನೀವು ಪಡೆಯುತ್ತಿರುವ ಸೇವೆ ಮತ್ತು ಸೌಲಭ್ಯಗಳಿಗೆ ಭವಿಷ್ಯದಲ್ಲಿ ಖರ್ಚು ಎರಡರಿಂದ ಮೂರು ಪಟ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಬೇಡ.
ಬಹುತೇಕ ಯುವಕರು ಹಣಕಾಸಿನ ವಿಚಾರದಲ್ಲಿ ಬೇಜವಾಬ್ದಾರಿಯುತ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಅದರಲ್ಲೂ 20ರ ಹರೆಯದ ವ್ಯಕ್ತಿಗಳು ತಮ್ಮ ಹಣದ ಬಗ್ಗೆ ಅಸಡ್ಡೆ ಹೊಂದಿರುವವರು ಹೆಚ್ಚಿದ್ದಾರೆ. ಅಂದರೆ ಹಣದ ಮೌಲ್ಯವನ್ನು ಅರಿಯದೆ ಹೇಗೆಂದರೆ ಹಾಗೆ ಖರ್ಚು ಮಾಡುವುದು, ಭವಿಷ್ಯದ ಬಗ್ಗೆ ಯಾವುದೇ ಯೋಜನೆಗಳಿಲ್ಲದೆ ಮುಂದೆ ಮಾಡಿದರೆ ಆಯಿತು ಬಿಡು ಇನ್ನೂ ಸಾಕಷ್ಟು ಸಮಯವಿದೆ ಎಂಬ ಯೋಚನೆ ಬರುವುದು ಸಾಮಾನ್ಯ. ಆದರೆ 20ರ ಹರೆಯದಲ್ಲೇ ಸರಿಯಾದ ಹಣಕಾಸಿನ ಹೆಜ್ಜೆಗಳನ್ನ ಇಟ್ಟರೆ ಭವಿಷ್ಯದಲ್ಲಿ ಅನುಕೂಲವೇ ಹೆಚ್ಚು.
20ರ ಹರೆಯದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾಮಾನ್ಯವಾಗಿ ಮಾಡುವ ತಪ್ಪುಗಳು ಈ ಕೆಳಕಂಡತಿದೆ.
1. ಶೈಕ್ಷಣಿಕ ಸಾಲವನ್ನು ದೀರ್ಘಕಾಲದವರೆಗೂ ಉಳಿಸಿಕೊಳ್ಳುವುದು
ಕಾಲೇಜು ನಂತರ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲದ ಬಗ್ಗೆ ಹೆಚ್ಚು ಗಮನವಹಿಸದೇ ಅದನ್ನು ಬದಿಗೆ ತಳ್ಳುವುದನ್ನು ನೋಡಿದ್ದೇವೆ. ಅಂದರೆ ಸಾಕಷ್ಟು ಸಮಯವಿದೆ ಕಟ್ಟಿದರಾಯ್ತು ಎಂದು ಬಿಟ್ಟು ಬಿಡುವುದು ತಪ್ಪು. ಆದಷ್ಟು ತ್ವರಿತವಾಗಿ ಶೈಕ್ಷಣಿಕ ಸಾಲವನ್ನು ಪಾವತಿಸುವುದು ಮುಖ್ಯ.
ಹೆಚ್ಚು ಕಾಲ ಸಾಲ ಕಟ್ಟದೆಯೇ ಹಾಗೇ ಉಳಿಸಿಕೊಂಡರೆ ನೀವು ಹೆಚ್ಚುವರಿ ಹಣವನ್ನು ಬಡ್ಡಿಗೆ ಪಾವತಿಸಬೇಕಾಗುತ್ತದೆ. ಮೂವತ್ತು ವರ್ಷಗಳ ನಂತರ ವಿದ್ಯಾರ್ಥಿ ಸಾಲ ಯಾರು ತೀರಿಸಲು ಬಯಸುತ್ತಾರೆ ಹೇಳಿ? ಹೀಗಾಗಿ ಆದಷ್ಟು ಬೇಗ ಶೈಕ್ಷಣಿಕ ಸಾಲ ಮರುಪಾವತಿಗೆ ಪ್ರಯತ್ನಿಸಿ.
2. ನಿವೃತ್ತಿ ಬಿಡು ಬಹಳ ದೂರದಲ್ಲಿದೆ!
ಯುವಕ ಅಥವಾ ಯುವತಿಯರು ಯಾರೇ ಆಗಿರಲಿ ಹಣವನ್ನು ಹೇಗೆಂದರೆ ಹಾಗೆ ಖರ್ಚು ಮಾಡುತ್ತಿದ್ದರೆ ಮನೆಯಲ್ಲಿ ಪೋಷಕರು ಬೈಯುವುದು ಸಾಮಾನ್ಯ. ಭವಿಷ್ಯದ ಬಗ್ಗೆ ಏನಂದುಕೊಂಡಿದ್ದೀಯ, ಹೇಗೆ ಬೇಕೆ ಹಾಗೆ ಖರ್ಚು ಮಾಡಬೇಡ ಹಣವನ್ನ ಈಗಿಂದಲೇ ಉಳಿಸಿಕೊಂಡು ಬಾ ಎಂದು ಬುದ್ದಿ ಮಾತು ಹೇಳುತ್ತಾರೆ.
ಆದರೆ ನಿವೃತ್ತಿ ಬಹಳ ದೂರದಲ್ಲಿದೆ. ಈಗ ಎಂಜಾಯ್ ಮಾಡೋಣ ಎಂದು ತಮ್ಮ ಅಮೂಲ್ಯವಾದ ಸಮಯ ಮತ್ತು ಹಣವನ್ನು ವ್ಯರ್ಥ ಮಾಡದಿರಿ. ನಿಮ್ಮ ವಾರ್ಷಿಕ ವೇತನದಲ್ಲಿ 40 ಪರ್ಸೆಂಟ್ಗೂ ಹೆಚ್ಚು ಹಣವನ್ನು ಉಳಿತಾಯ ಇಲ್ಲವೇ ಹೂಡಿಕೆ ಮಾಡುತ್ತಾ ಬನ್ನಿ. ಇದು ನಿಮ್ಮ ನಿವೃತ್ತಿ ವಯಸ್ಸಿನ ವೇಳೆಗೆ ದೊಡ್ಡ ಮೊತ್ತವಾಗಿ ನಿಮ್ಮ ಮುಂದಿರುವುದು.
3. ಹೂಡಿಕೆ ಮಾಡುವುದನ್ನು ತಪ್ಪಿಸುವುದು
ಈ ಮೇಲಿನ ಅಂಶದಲ್ಲಿ ಹೇಳಿದಂತೆ ಉಳಿತಾಯ ಒಂದೆಡೆಯಾದರೆ, ಹೂಡಿಕೆಯು ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ನಿಮ್ಮ ಹಣವನ್ನು ಕೇವಲ ಉಳಿತಾಯ ಮಾಡದೆ ಅದರಲ್ಲಿ ಸ್ವಲ್ಪ ಭಾಗವನ್ನು ಹೂಡಿಕೆ ಮಾಡಿ. ಸುರಕ್ಷಿತ ಹೂಡಿಕೆಗಳಿಗೆ ಹೆಚ್ಚು ಜನರು ಬ್ಯಾಂಕ್ ಡೆಪಾಸಿಟ್ ಮೊರೆ ಹೋಗುವುದು ಸಾಮಾನ್ಯ. ಆದರೆ ನೀವು ಉಳಿತಾಯ ಮಾಡಿದರಷ್ಟೇ ಹೆಚ್ಚು ಹಣವನ್ನು ಮಾಡಲು ಸಾಧ್ಯವಿಲ್ಲ.
ಹೂಡಿಕೆ ಮಾಡಿದ ಹಣದಿಂದಲೇ ಮತ್ತಷ್ಟು ಹಣವನ್ನು ಸಂಪಾದಿಸುವುದು ಜಾಣತನ. ಆದರೆ ಈಗಿನಿಂದಲೇ ಏಕೆ ಆ ಯೋಚನೆ ಎಂದು ಹೂಡಿಕೆಯನ್ನು ತಪ್ಪಿಸಬೇಡಿ.
4. ಕಂಪನಿಯ ಪ್ರಯೋಜನಗಳನ್ನು ನಿರ್ಲಕ್ಷಿಸುವುದು
ಕೆಲ ಯುವ ಉದ್ಯೋಗಿಗಳು ಕಂಪನಿಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ನಿರ್ಲಕ್ಷಿಸುತ್ತಾರೆ. ಕಾಲೇಜು ಹಂತ ಮುಗಿಸಿ ಸಿಗುವ ಮೊದಲ ಕೆಲಸದಲ್ಲಿ ಹೆಚ್ಚು ವರ್ಷಗಳ ಕಾಲ ಇರಲು ಯೋಜಿಸುವುದಿಲ್ಲ. ಸಂಬಳ ಹೆಚ್ಚು ಸಿಗುವುದು ಎಂದು ಬೇರೆ ಕಂಪನಿಗೆ ಹೋಗುವುದು ತಪ್ಪಲ್ಲ. ಆದರೆ ಕಾರ್ಯ ನಿರ್ವಹಿಸುವ ಕಂಪನಿಯಲ್ಲಿ ಸಿಗುವ ಲಾಭಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದಿರುವುದು ದಡ್ಡತನ.
ಉದಾಹರಣೆಗೆ ವಿಮಾ ಸೌಲಭ್ಯ, ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಸೇರಿದಂತೆ ಅದರ ಸಂಪೂರ್ಣ ಲಾಭ ಪಡೆಯಬೇಕು.
5. ಆರ್ಥಿಕವಾಗಿ ಅನಕ್ಷರಸ್ಥರಾಗಿರುವುದು
ಬಹುತೇಕ ಯುವ ಜನತೆಗೆ ಅವರ ಪೋಷಕರು ಅಥವಾ ಓದಿದ ಶಾಲೆಯಿಂದ ಹಣವನ್ನು ಹೇಗೆ ನಿರ್ವಹಣೆ ಮಾಡುವುದು ಎಂದು ಕಲಿಸಿರುವುದಿಲ್ಲ. ಈಗಿನ ಆಧುನಿಕ ಜೀವನ, ಹೆಚ್ಚಿನ ಖರ್ಚುಗಳ ನಡುವೆ ಹಣವನ್ನು ಹೇಗೆ ಪರಿಣಾಮಕಾರಿ ಬಳಸಿಕೊಳ್ಳುವುದು ಎಂದು ಅರಿಯದೇ ಇರುವುದು ನಿಜಕ್ಕೂ ನಿರಾಶಾದಾಯಕವಾಗಿದೆ.
ಈಗಿನಿಂದಲೇ ಉಳಿತಾಯ, ಬಜೆಟ್, ನಿವೃತ್ತಿ ಮತ್ತು ಸಂಪತ್ತಿನ ನಿರ್ಮಾಣದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಕಲಿಯಿರಿ. ಇದರಿಂದ ನಿಮ್ಮ ಜೀವನದ ಉಳಿದ ಭಾಗವನ್ನು ಆ ಜ್ಞಾನದಿಂದ ಲಾಭ ಪಡೆಯಬಹುದು. ನಿಮ್ಮ ಮನೆ ಹತ್ತಿರದ ಅಥವಾ ನಿಮ್ಮ ಏರಿಯಾದಲ್ಲಿ ರುವ ಹಣಕಾಸು ಸಲಹೆಗಾರರು ಭೇಟಿ ಮಾಡುವುದು. ಇಲ್ಲವೆ ಹಣದ ನಿರ್ವಹಣೆ ಕುರಿತು ಪುಸ್ತಕಗಳು, ವೆಬ್ಸೈಟ್ಗಳಲ್ಲಿ ಮಾಹಿತಿ ತಿಳಿದುಕೊಂಡರೆ ಭವಿಷ್ಯದ ದೃಷ್ಟಿಯಿಂದ ಒಳಿತು.