ಕೇಂದ್ರ ಬಜೆಟ್ ಬಗ್ಗೆ ನಿಮಗೆ ಗೊತ್ತಿರಬೇಕಾದ 10 ಇಂಟರೆಸ್ಟಿಂಗ್ ಮಾಹಿತಿ
ಭಾರತದಂಥ ದೊಡ್ಡ ಆರ್ಥಿಕತೆಯ ದೇಶದಲ್ಲಿ ವರ್ಷಾವರ್ಷದ ಈ ಆರ್ಥಿಕ ಲೆಕ್ಕಾಚಾರಕ್ಕೆ ಖಂಡಿತಾ ಪ್ರಾಮುಖ್ಯ ಇದೆ. ಆರ್ಥಿಕ ಕುಸಿತದ ಸನ್ನಿವೇಶದ ಎದುರಿಗೆ ನಿಂತು, ಪ್ರತಿ ಸಲದಂತೆ ಈ ಬಾರಿಯೂ ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ, ಕುತೂಹಲದ ಕಣ್ಣುಗಳಿಂದ ನೋಡಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ನೇತೃತ್ವದ ಸರ್ಕಾರ ಪವಾಡವನ್ನೇ ಮಾಡಬೇಕಾಗುತ್ತದೆ.
ಹಾಗೆ ಆಗದ ಹೊರತು ಜನರ ನಿರೀಕ್ಷೆ ಮುಟ್ಟಲು ಕಷ್ಟವಾಗಲಿದೆ. ಅದೆಲ್ಲ ಇರಲಿ, ಕೇಂದ್ರ ಬಜೆಟ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಹತ್ತು ಮುಖ್ಯ ಸಂಗತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮಾಹಿತಿ ಬಹಳ ಆಸಕ್ತಿಕರವಾಗಿದೆ. ಇನ್ನೊಂದು ಬಜೆಟ್ ಎದುರಿಗೆ ಇರುವಾಗ ಹಿಂದಿನ ನೆನಪಿನ ಪುಟಗಳನ್ನು ತೆರೆಯುವುದೇ ಖುಷಿಯ ವಿಚಾರ.
ಮೊದಲ ಬಜೆಟ್, ಮಧ್ಯಂತರ ಬಜೆಟ್ ಆಗಿತ್ತು
ಭಾರತ ಸ್ವಾತಂತ್ರ್ಯ ಪಡೆದ ನಂತರ ಮೊದಲ ಬಜೆಟ್ ನವೆಂಬರ್ 26, 1947ರಂದು ಮಂಡಿಸಲಾಯಿತು. ಅದು ಮಧ್ಯಂತರ ಬಜೆಟ್ ಆಗಿತ್ತು. ಮೊದಲ ಹಣಕಾಸು ಸಚಿವ ಆರ್. ಕೆ. ಷಣ್ಮುಖಂ ಚೆಟ್ಟಿ ಅವರು ಪ್ರಸ್ತುತ ಪಡಿಸಿದರು. ಆರ್ಥಿಕತೆಯ ಪರಿಶೀಲಿಸಲಾಯಿತೇ ಹೊರತು ಯಾವುದೇ ಹೊಸ ತೆರಿಗೆ ಪರಿಚಯಿಸಲಿಲ್ಲ. ಏಕೆಂದರೆ ಮುಂದಿನ ಬಜೆಟ್ ಅವಧಿ ನೂರು ದಿನಕ್ಕಿಂತ ಕಡಿಮೆ ಇತ್ತು. ಆ ನಂತರ ಅಲ್ಪಾವಧಿಗೆ ಮಧ್ಯಂತರ ಬಜೆಟ್ ಬಂತು.
ಹಣಕಾಸು ಇಲಾಖೆ ವಹಿಸಿಕೊಂಡ ಮೊದಲ ಮಹಿಳೆ
1969ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಕಾಂಗ್ರೆಸ್ ಪಕ್ಷದೊಳಗೇ ಹಲವು ಸಮಸ್ಯೆ ಎದುರಾಯಿತು. ಮೊರಾರ್ಜಿ ದೇಸಾಯಿ ಅವರ ಜತೆ ಚರ್ಚಿಸದೆ ಹದಿನಾಲ್ಕು ಬ್ಯಾಂಕ್ ಗಳ ರಾಷ್ಟ್ರೀಕರಣಕ್ಕೆ ಇಂದಿರಾ ಮುಂದಾಗಿದ್ದರು. ಆ ನಂತರ ಭಿನ್ನಾಭಿಪ್ರಾಯ ಏರ್ಪಟ್ಟು. ಮೊರಾರ್ಜಿ ದೇಸಾಯಿ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಹಣಕಾಸು ಇಲಾಖೆ ಜವಾಬ್ದಾರಿ ತೆಗೆದುಕೊಂಡ ಇಂದಿರಾ ಗಾಂಧಿ, ಕೇಂದ್ರ ಬಜೆಟ್ ಮಂಡಿಸಿದ್ದರು. ಆ ಮೂಲಕ ಹಣಕಾಸು ಸಚಿವ ಸ್ಥಾನ ನಿರ್ವಹಿಸಿದ ಮೊದಲ ಮಹಿಳೆ ಎನಿಸಿಕೊಂಡರು.
ಅತಿ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದವರು
ಹತ್ತು ಬಾರಿ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಆ ನಂತರ ಪಿ. ಚಿದಂಬರಂ ಒಂಬತ್ತು ಸಲ ಹಾಗೂ ಪ್ರಣವ್ ಮುಖರ್ಜಿ ಎಂಟು ಸಲ ಬಜೆಟ್ ಮಂಡನೆ ಮಾಡಿದ್ದಾರೆ.
ಹಲ್ವಾ ಕಾರ್ಯಕ್ರಮ
ಯಾವುದೇ ಮುಖ್ಯ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಿಹಿ ಹಂಚುವುದು ಭಾರತೀಯರ ಪದ್ಧತಿ. ಬಜೆಟ್ ಗೂ ಮುನ್ನ ದಾಖಲೆಗಳ ಮುದ್ರಣ ಪ್ರಕ್ರಿಯೆ ಆರಂಭಕ್ಕೂ ಮುನ್ನ ಹಲ್ವಾ ಕಾರ್ಯಕ್ರಮ ಮಾಡಲಾಗುತ್ತದೆ. ಹಲ್ವಾ ತಯಾರಿಸಿ, ಹಂಚಲಾಗುತ್ತದೆ. ಆ ನಂತರ ಹಣಕಾಸು ಸಚಿವಾಲಯದ ಸಿಬ್ಬಂದಿ, ಪ್ರಮುಖ ಅಧಿಕಾರಿಗಳಿಗೆ ಬಜೆಟ್ ಮಂಡನೆ ಆಗುವ ತನಕ ಹೊರ ಜಗತ್ತಿನ ಜತೆ ಸಂಪರ್ಕವೇ ಇರುವುದಿಲ್ಲ. ಅವರು ಮುದ್ರಣಾಲಯದಲ್ಲೇ ಉಳಿದಿರುತ್ತಾರೆ.
ಪ್ರಧಾನಿಯಾಗಿ ರಾಜೀವ್ ಗಾಂಧಿ ಬಜೆಟ್ ಮಂಡಿಸಿದ್ದರು
1984ರಲ್ಲಿ ವಿ.ಪಿ. ಸಿಂಗ್ ಅವರನ್ನು ಹಣಕಾಸು ಸಚಿವರಾಗಿ ನೇಮಿಸಲಾಯಿತು. ಇಂದಿರಾ ಗಾಂಧಿ ಹತ್ಯೆ ನಂತರ ರಾಜೀವ್ ಗಾಂಧಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. 1987ರಲ್ಲಿ ವಿ.ಪಿ. ಸಿಂಗ್ ಅವರನ್ನು ಸಂಪುಟದಿಂದ ಏಕೆ ವಜಾ ಮಾಡಲಾಯಿತು ಎಂಬ ಬಗ್ಗೆ ನಾನಾ ಸುದ್ದಿ ಇದ್ದವು. ವಜಾ ಮಾಡಿದ ನಂತರ ವಿ.ಪಿ.ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೇ ಹಾಗೂ ಲೋಕಸಭೆಗೆ ರಾಜೀನಾಮೆ ನೀಡಿದರು. ಅದಾದ ಮೇಲೆ 1987-88ರ ಆರ್ಥಿಕ ವರ್ಷಕ್ಕೆ ರಾಜೀವ್ ಗಾಂಧಿ ಅವರೇ ಬಜೆಟ್ ಮಂಡಿಸಿದರು.
ಕನಸಿನ ಬಜೆಟ್
1997-98ನೇ ಸಾಲಿನ ಬಜೆಟ್ ಅನ್ನು ಕನಸಿನ ಬಜೆಟ್ ಎನ್ನಲಾಗುತ್ತದೆ. ಏಕೆಂದರೆ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಇಳಿಕೆಯಂಥ ಮಹತ್ತರವಾದ ಸುಧಾರಣೆ ತಂದ ವರ್ಷ ಅದು. ಆ ಬಜೆಟ್ ಅನ್ನು ಪಿ. ಚಿದಂಬರಂ ಮಂಡಿಸಿದರು.
ಸಾಂವಿಧಾನಿಕ ಬಿಕ್ಕಟ್ಟು
1998-99ನೇ ಸಾಲಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಬಜೆಟ್ ಗೆ ಸಮ್ಮತಿ ಸೂಚಿಸಲಾಯಿತು. ಏಕೆಂದರೆ ಆಗ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆಗಿ ಐ.ಕೆ. ಗುಜ್ರಾಲ್ ನೇತೃತ್ವದ ಸರ್ಕಾರ ವಿಸರ್ಜನೆ ಆಗುವುದಿತ್ತು. ಬಜೆಟ್ ಅಂಗೀಕಾರಕ್ಕಾಗಿಯೇ ಸಂಸತ್ ನ ವಿಶೇಷ ಅಧಿವೇಶನ ಕರೆಯಲಾಗಿತ್ತು.
ಬಜೆಟ್ ಮಂಡನೆ ವೇಳೆ ಬದಲಾವಣೆ
1999ನೇ ಇಸವಿಯಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆ ಸಮಯದ ಬದಲಾವಣೆಗೆ ನಾಂದಿ ಹಾಡಿದರು. ಫೆಬ್ರವರಿ ತಿಂಗಳ ಕೊನೆ ದಿನದ ಸಂಜೆ 5 ಗಂಟೆಗೆ ಅದುವರೆಗೆ ಬಜೆಟ್ ಮಂಡನೆ ಆಗುತ್ತಿತ್ತು. ಅಲ್ಲಿಂದ ಆಚೆಗೆ ಬೆಳಗ್ಗೆ 11 ಗಂಟೆಗೆ ಮಂಡನೆ ಮಾಡಲು ಆರಂಭಿಸಲಾಯಿತು.
ರೈಲ್ವೆ ಬಜೆಟ್
2016ನೇ ಇಸವಿಯಲ್ಲಿ ಸಾಮಾನ್ಯ ಬಜೆಟ್ ಹಾಗೂ ರೈಲ್ವೆ ಬಜೆಟ್ ಅನ್ನು ಒಟ್ಟಿಗೆ ಸೇರಿಸುವ ಮೂಲಕ 92 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಕೊನೆ ಹಾಡಲಾಯಿತು.
ಬಜೆಟ್ ಮಂಡಿಸುವ ದಿನ ಬದಲಾವಣೆ
2017ರಲ್ಲಿ ಅರುಣ್ ಜೇಟ್ಲಿ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ ಬಜೆಟ್ ಮಂಡನೆ ದಿನಾಂಕವನ್ನಾಗಿ ಫೆಬ್ರವರಿ 1ನೇ ತಾರೀಕನ್ನು ನಿಗದಿ ಮಾಡಲಾಯಿತು. ಮುಂದಿನ ಆರ್ಥಿಕ ವರ್ಷದ ಆರಂಭದ ದಿನವಾದ ಏಪ್ರಿಲ್ 1ನೇ ತಾರೀಕು ಬಜೆಟ್ ಅನುಷ್ಠಾನ ಜಾರಿ ಮಾಡಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ ಎಂದು ಈ ನಿರ್ಧಾರ ಮಾಡಲಾಯಿತು.