ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಜೂನ್ 1ನೇ ತಾರೀಕಿನಂದು ಒಂದೇ ದಿನದಲ್ಲಿ ಕಿರು, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ (MSME's) 3,200 ಕೋಟಿ ರುಪಾಯಿ ಸಾಲ ವಿತರಿಸಿವೆ. ಯಾವುದೇ ಶ್ಯೂರಿಟಿ ಇಲ್ಲದೆ ತುರ್ತು ಸಾಲ ಯೋಜನೆ ಅಡಿಯಲ್ಲಿ 3200 ಕೋಟಿ ರುಪಾಯಿ ವಿತರಿಸಲಾಗಿದೆ ಎಂದು ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಗೆ ಕಳೆದ ತಿಂಗಳು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಕೊರೊನಾದಿಂದ ಸಂಕಷ್ಟದಿಂದ ನಲುಗಿರುವ ಎಂಎಸ್ ಎಂಇಗಳ ಹಣಕಾಸು ಅಗತ್ಯಗಳಿಗೆ, ಕಚ್ಚಾ ವಸ್ತುಗಳಿಗೆ ಮತ್ತು ವ್ಯಾಪಾರ ಆರಂಭಿಸಲು ಅನುಕೂಲ ಆಗಲಿ ಯೋಜನೆ ರೂಪಿಸಲಾಗಿದೆ ಎಂದು 20 ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸುವ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಎಂಎಸ್ ಎಂಇಗಳು ಮೂರು ಸಾವಿರಕ್ಕೂ ಹೆಚ್ಚು ಟಯರ್ 2 ಪಟ್ಟಣಗಳಲ್ಲಿ ಇವೆ. ಈ ಸಾಲ ಯೋಜನೆ ಅಡಿಯಲ್ಲಿ ಒಂದೇ ದಿನದಲ್ಲಿ ಇವುಗಳನ್ನು ಕವರ್ ಮಾಡಲಾಗಿದೆ. ವೇತನ, ಬಾಡಿಗೆ ಮತ್ತು ಇತರ ಖರ್ಚುಗಳಿಗೆ ಈ ಹಣವನ್ನು ಅವರು ಬಳಸಿಕೊಳ್ಳಬಹುದು ಎಂದು ಟ್ವೀಟ್ ಮಾಡಲಾಗಿದೆ.

25 ಕೋಟಿ ರುಪಾಯಿ ತನಕ ಬಾಕಿ ಇರುವಂಥ ಎಂಎಸ್ ಎಂಇಗಳು, 100 ಕೋಟಿ ವಹಿವಾಟು ಇರುವಂಥವು ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿಗಳಿಂದ ಫೆಬ್ರವರಿ 29, 2020ಕ್ಕೆ ಬಾಕಿ ಇರುವ ಒಟ್ಟು ಸಾಲದ 20 ಪರ್ಸೆಂಟ್ ಅನ್ನು ತುರ್ತು ಸಾಲ ಎಂದು ಪಡೆಯಬಹುದು.
ಎಂಎಸ್ ಎಂಇಗಳಿಗೆ ಯಾವುದೇ ಶ್ಯೂರಿಟಿ ಇಲ್ಲದೆ ಸಾಲ ನೀಡಲು 3 ಲಕ್ಷ ಕೋಟಿ ರುಪಾಯಿ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಈಚೆಗೆ ಕೂಡ ಸಣ್ಣ ಮಟ್ಟದ ವ್ಯಾಪಾರ- ವ್ಯವಹಾರ ಮಾಡುವವರು ಬ್ಯಾಂಕ್ ಗಳ ವಿರುದ್ಧ ಆರೋಪ ಮಾಡಿದ್ದರು. ಈಗಲೂ ಬ್ಯಾಂಕ್ ಗಳಲ್ಲಿ ಸಾಲ ನೀಡುತ್ತಿಲ್ಲ ಎಂದು ದೂರಿದ್ದರು.


Click it and Unblock the Notifications