ವಿಶೇಷ ಆರ್ಥಿಕ ಪ್ಯಾಕೇಜ್ನಲ್ಲಿ ಕೈಗಾರಿಕೆಗಳಿಗೆ ಬಂಪರ್ ಕೊಡುಗೆ : 3 ಲಕ್ಷ ಕೋಟಿ ರುಪಾಯಿ ಸಾಲ
ಕೊರೊನಾವೈರಸ್ ಲಾಕ್ಡೌನ್ ಪರಿಹಾರವಾಗಿ ಘೋಷಿಸಿರುವ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ನಲ್ಲಿ ಎಂಎಸ್ಎಂಇಗಳಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಮಧ್ಯಮ, ಸಣ್ಣ, ಅತಿಸಣ್ಣ ಕೈಗಾರಿಕೆಗಳಿಗೆ ಇದರಿಂದ ಹೆಚ್ಚಿನ ಲಾಭ ಸಿಗಲಿದ್ದು ಮೂರು ಲಕ್ಷ ಕೋಟಿ ರುಪಾಯಿ ಸಾಲ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಎಂಎಸ್ ಎಂಇಗಳಿಗೆ (ಕಿರು, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ) ಶ್ಯೂರಿಟಿ ಇಲ್ಲದ ಆಟೋಮೆಟಿಕ್ ಸಾಲ ದೊರೆಯಲಿದೆ. ಎಷ್ಟು ಮೊತ್ತ ಅಂದರೆ, ಅದಕ್ಕಾಗಿ ಮೂರು ಲಕ್ಷ ಕೋಟಿ ರುಪಾಯಿ ಮೀಸಲು ಇರಲಿದೆ. ನಾಲ್ಕು ವರ್ಷದಲ್ಲಿ ಇದನ್ನು ಮರುಪಾವತಿ ಮಾಡಬಹುದು. ಮೊದಲ ಹನ್ನೆರಡು ತಿಂಗಳು ವಿನಾಯಿತಿ ದೊರೆಯಲಿದ್ದು, ಸಾಲವನ್ನು ಮರುಪಾವತಿಸುವಂತಿಲ್ಲ. ಇದಕ್ಕೆ ಯಾವುದೇ ಖಾತ್ರಿ, ಅಡಮಾನ ಬೇಕಾಗಿಲ್ಲ. ಅಕ್ಟೋಬರ್ 31, 2020ರ ತನಕ ಈ ಸಾಲ ದೊರೆಯಲಿದೆ.\
ಜೊತೆಗೆ ಸಣ್ಣ ಕೈಗಾರಿಕೆಗಳಿಗೆ ಸಂಬಳ ನೀಡಲು ತುರ್ತಾಗಿ ಹಣ ಬೇಕಿದ್ದರೆ ಕೂಡಲೇ ಮಂಜೂರು ಮಾಡಲಾಗುವುದು ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ. ಒತ್ತಡದಲ್ಲಿ ಇರುವ ಎಂಎಸ್ ಎಂಇಗಳಿಗೆ ಇಪ್ಪತ್ತು ಸಾವಿರ ಕೋಟಿ ರುಪಾಯಿ ಮೀಸಲಿಡಲಾಗುವುದು. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ಘಟಕಗಳಿಗೆ ಸಹಾಯ ಆಗಲಿದೆ.
ಈ ಹೆಚ್ಚುವರಿ ಸಹಾಯದಿಂದ ಹತ್ತು ಸಾವಿರ ಕೋಟಿ ರುಪಾಯಿ ಪ್ರಗತಿಗೆ ಸಹಾಯ ಮಾಡಲಿದ್ದೇವೆ. ಅವರ ಸಾಮರ್ಥ್ಯ ಹೆಚ್ಚಳಕ್ಕೆ ಸಹಾಯ ಮಾಡಲಿದ್ದೇವೆ. ವಿಸ್ತರಣೆ -ಸಾಮರ್ಥ್ಯ ಹೆಚ್ಚಳಕ್ಕೆ 'ಫಂಡ್ಸ್ ಆಫ್ ಫಂಡ್ಸ್' ಮೂಲಕ ಐವತ್ತು ಸಾವಿರ ಕೋಟಿ ರುಪಾಯಿ ಬಂಡವಾಳ ಪೂರೈಕೆ ಮಾಡಲಾಗುತ್ತದೆ ಎಂದಿದ್ದಾರೆ.
ಇನ್ನು ಎಂಸ್ಎಂಇ ವ್ಯಾಖ್ಯಾನ ಬದಲಾಗಲಿದ್ದು, ಇದರಿಂದ ಬೆಳವಣಿಗೆ ಬಗ್ಗೆ ಯೋಚಿಸುವ ಅಗತ್ಯ ಇಲ್ಲ ಎಂದಿದ್ದಾರೆ. ಎಂಎಸ್ ಎಂಇಯಲ್ಲಿನ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗುವುದು. ಹೆಚ್ಚುವರಿ ಮಾನದಂಡ ಪರಿಚಯಿಸಲಾಗುವುದು. ಈಗ ಒಟ್ಟಾರೆ ವ್ಯವಹಾರವನ್ನು ಸೇರ್ಪಡೆ ಮಾಡಲಾಗುವುದು. ಮ್ಯಾನುಫ್ಯಾಕ್ಚುರಿಂಗ್ ಸೇವೆ ಅಂತ ವ್ಯತ್ಯಾಸ ಇರುವುದಿಲ್ಲ. ಒಂದು ಕೋಟಿ ತನಕ ಹೂಡಿಕೆ ಮಾಡಿದರೂ ಎಂಎಸ್ ಎಂಇ ಎಂದು ಕರೆಯಲಾಗುವುದು. ಈ ಮುಂಚೆ ಹತ್ತು ಲಕ್ಷ ಇತ್ತು. ಈಗ ಒಂದು ಕೋಟಿ ಆದರೂ, ಟರ್ನ್ ಓವರ್ ಐದು ಕೋಟಿ ಆದರೂ ಅದನ್ನು ಕಿರು ಕೈಗಾರಿಕೆ ಎಂದು ಕರೆಯಲಾಗುವುದು. ಇದೇ ರೀತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲೂ ಬದಲಾವಣೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಜೊತೆಗೆ ಇನ್ನೂರು ಕೋಟಿ ತನಕ ಟೆಂಡರ್ ಅನ್ನು ಜಾಗತಿಕ ಟೆಂಡರ್ ಎನ್ನುವುದಿಲ್ಲ. ಹೀಗೆ ಮಾಡುವುದರಿಂದ ನಮ್ಮ ಎಂಎಸ್ ಎಂಇಗಳು ಇದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಅದರಲ್ಲೂ ಸರ್ಕಾರದ ಟೆಂಡರ್ ಜಾಗತಿಕ ಟೆಂಡರ್ ಅಲ್ಲ ಎಂದಿದ್ದಾರೆ.