'ಸದ್ಯ ಭಾರತಕ್ಕೆ 50 ರಿಂದ 60 ಲಕ್ಷ ಕೋಟಿ ರುಪಾಯಿ ವಿದೇಶಿ ಹೂಡಿಕೆ ಬೇಕು'
ನವದೆಹಲಿ, ಜುಲೈ 2: ಕೊರೊನಾವೈರಸ್ ಹಾವಳಿಯಿಂದ ತತ್ತರಿಸಿರುವ ಭಾರತದ ಆರ್ಥಿಕತೆ ಪುಟಿದೇಳಬೇಕಾದರೆ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ತುಂಬಬೇಕಾಗುತ್ತದೆ. ದೊಡ್ಡ ಪ್ರಮಾಣದ ವಿದೇಶಿ ನೇರ ಹೂಡಿಕೆ ಬೇಕಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅವರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರಸ್ತುತ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಉದ್ಯೋಗ ಸೃಷ್ಟಿಯ ಸವಾಲಿನ ಬಗ್ಗೆ ಕೇಂದ್ರ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಮಾತು
ಆರ್ಥಿಕತೆಯನ್ನು ಹೆಚ್ಚಿಸಲು ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದಲ್ಲಿ 50 ರಿಂದ 60 ಲಕ್ಷ ಕೋಟಿ ರುಪಾಯಿ ವಿದೇಶಿ ಹೂಡಿಕೆ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಎಂಎಸ್ಎಂಇಗಳನ್ನು ಮೇಲಕ್ಕೆತ್ತಬಹುದು
50 ರಿಂದ 60 ಲಕ್ಷ ಕೋಟಿ ರುಪಾಯಿ ವಿದೇಶಿ ಹೂಡಿಕೆಯಲ್ಲಿ ಪ್ರಮುಖವಾಗಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಮೇಲಕ್ಕೆತ್ತಬಹುದು. ಈ ಹಂತದಲ್ಲಿ ದೇಶಕ್ಕೆ ಹಣಕಾಸಿನ ದ್ರವ್ಯತೆ ಬೇಕು. ದ್ರವ್ಯತೆ ಇಲ್ಲದೆ ನಮ್ಮ ಆರ್ಥಿಕತೆಯ ವೇಗವಾಗುವುದಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಗಮನಾರ್ಹವಾಗಿ ಅಸ್ತವ್ಯಸ್ತಗೊಂಡಿವೆ
ಲಾಕ್ಡೌನ್ನಿಂದಾಗಿ ಆರ್ಥಿಕ ಚಟುವಟಿಕೆಗಳು ಗಮನಾರ್ಹವಾಗಿ ಅಸ್ತವ್ಯಸ್ತಗೊಂಡಿವೆ. ದೇಶಕ್ಕೆ ಈಗ ದ್ರವ್ಯತೆ ವರ್ಧಕ ಬೇಕು ಮತ್ತು ವಿವಿಧ ಮೂಲಸೌಕರ್ಯ ಯೋಜನೆಗಳಾದ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಒಳನಾಡಿನ ಜಲಮಾರ್ಗಗಳು, ರೈಲ್ವೆಗಳು, ಲಾಜಿಸ್ಟಿಕ್ ಪಾರ್ಕ್, ಬ್ರಾಡ್ ಗೇಜ್ ಮತ್ತು ಮೆಟ್ರೋಗಳು, ಜೊತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ದೊಡ್ಡ ಪ್ರಮಾಣದ ವಿದೇಶಿ ಹೂಡಿಕೆಯನ್ನು ಬೇಡುತ್ತಿವೆ ಎಂದಿದ್ದಾರೆ.
ಹೂಡಿಕೆ ಸೆಳೆಯಲು ಪ್ರಯತ್ನ
'ಈ ಹಿನ್ನೆಲೆಯಲ್ಲಿ, ದುಬೈ ಮತ್ತು ಯುಎಸ್ ನಿಂದ ಹೂಡಿಕೆದಾರರನ್ನು ಸೇರಿಸಲು ಕೇಂದ್ರ ಸರ್ಕಾರ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದೆ. ಕೆಲವು ಎಂಎಸ್ಎಂಇಗಳನ್ನು ಈಗಾಗಲೇ ಬಿಎಸ್ಇಯಲ್ಲಿ ಪಟ್ಟಿ ಮಾಡಲಾಗಿದೆ. ದುಬೈ ಮತ್ತು ಅಮೆರಿಕದಲ್ಲಿ ಹೂಡಿಕೆದಾರರೊಂದಿಗೆ, ಎಂಎಸ್ಎಂಇಗಳಲ್ಲಿ ಮೂರು ವರ್ಷಗಳ ವಹಿವಾಟು, ಜಿಎಸ್ಟಿ ಟ್ರ್ಯಾಕ್ ರೆಕಾರ್ಡ್, ಐಟಿ ರೆಕಾರ್ಡ್ ಮತ್ತು ಉತ್ತಮ ರೇಟಿಂಗ್ ಆಧರಿಸಿ ಹೂಡಿಕೆ ಮಾಡಲು ನಾನು ಮಾತನಾಡಿದ್ದೇನೆ. ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ರಫ್ತು ಕೂಡ ಸಮೃದ್ಧ ಲಾಭಾಂಶಕ್ಕೆ ಕಾರಣವಾಗಬಹುದು' ಎಂದು ನಿತಿನ್ ಗಡ್ಕರಿ ಹೇಳಿದರು.
ಹೆದ್ದಾರಿ ಯೋಜನೆಯಲ್ಲಿ ಚೀನಾ ಬ್ಯಾನ್
ಭವಿಷ್ಯದ ಯಾವುದೇ ಹೆದ್ದಾರಿ ಯೋಜನೆಯಲ್ಲಿ ಭಾಗವಹಿಸಲು ಯಾವುದೇ ಚೀನಾದ ಕಂಪನಿಗೆ ಅವಕಾಶ ನೀಡುವುದಿಲ್ಲ ಮತ್ತು ಚೀನಾದ ಯಾವುದೇ ಸಂಸ್ಥೆಯೊಂದಿಗೆ ಜಂಟಿ ಸಹಭಾಗಿತ್ವಕ್ಕೆ (ಜೆವಿ) ಪ್ರವೇಶಿಸುವ ಕಂಪನಿಗಳ ಯೋಜನೆಗಳಿಗೆ ಬಿಡ್ಡಿಂಗ್ ಮಾಡುವುದನ್ನು ನಿಷೇಧಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.