ಬಿಪಿಸಿಎಲ್ ನಲ್ಲಿ ಶೇ 53ರಷ್ಟು ಷೇರು ಖರೀದಿಗೆ ವೇದಾಂತದ ಆಸಕ್ತಿ
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್)ನಲ್ಲಿ ಇರುವ ಸರ್ಕಾರದ ಪಾಲಿನ ಷೇರನ್ನು ಖರೀದಿ ಮಾಡುವ ಬಗ್ಗೆ ಪ್ರಾಥಮಿಕವಾಗಿ ಆಸಕ್ತಿ ವ್ಯಕ್ತಪಡಿಸಿರುವುದಾಗಿ ವೇದಾಂತ ಗ್ರೂಪ್ ಲಿಮಿಟೆಡ್ ಖಾತ್ರಿ ಪಡಿಸಿದೆ. ಈಗಾಗಲೇ ಇರುವ ವೇದಾಂತ ಕಂಪೆನಿಯ ತೈಲ ಹಾಗೂ ಅನಿಲ ವ್ಯವಹಾರದ ಜತೆಗೆ ಬಿಪಿಸಿಎಲ್ ಸಹಕಾರ ದೊರೆಯುತ್ತದೆ ಎಂಬ ಹಿನ್ನೆಲೆಯಲ್ಲಿ ಆಸಕ್ತಿ ತೋರಿಸಲಾಗುತ್ತಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗ ಆಸಕ್ತಿ ವಹಿಸಿರುವುದು ಪ್ರಾಥಮಿಕ ಹಂತದ್ದಾಗಿದೆ ಮತ್ತು ಇನ್ನಷ್ಟು ಸಾಧ್ಯಾಸಾಧ್ಯತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನಲಾಗಿದೆ. ಬಿಪಿಸಿಎಲ್ ನಲ್ಲಿನ ಶೇಕಡಾ 52.98ರಷ್ಟು ಷೇರು ಖರೀದಿಗಾಗಿ ಆಸಕ್ತಿ ವ್ಯಕ್ತಪಡಿಸುವಂತೆ ಸರ್ಕಾರದಿಂದ ಸೋಮವಾರದ ಗಡುವು ಹಾಕಲಾಗಿತ್ತು.
BPCL, SCI ಷೇರುಗಳ ಮಾರಾಟಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
ಹಲವು ಕಂಪೆನಿಗಳು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಬಿಪಿಸಿಎಲ್ ಸ್ಟ್ರಾಟೆಜಿಕ್ ಹಿಂತೆಗೆತವು ಈಗ ಎರಡನೇ ಹಂತವನ್ನು ತಲುಪಿದೆ ಎಂದು ಸೋಮವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮಾಡಿದ್ದರು. ಎಷ್ಟು ಕಂಪೆನಿಗಳು ಬಿಡ್ ಮಾಡಿವೆ ಹಾಗೂ ಆ ಸಂಖ್ಯೆ ಎಷ್ಟು ಎಂದು ತಿಳಿಸಿರಲಿಲ್ಲ.
ಪಿಟಿಐ ವರದಿಯಂತೆ, ಮೂರ್ನಾಲ್ಕು ಬಿಡ್ ಬಂದಿವೆ. ಆದರೆ ಅದರಲ್ಲಿ ಸೌದಿ ಅರಾಮ್ಕೋ, ಬಿಪಿ ಮತ್ತು ಟೋಟಲ್ ಅಥವಾ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಇಲ್ಲ. ಖರೀದಿದಾರರಿಗೆ ಬಿಪಿಸಿಎಲ್ ನಿಂದ ಭಾರತದ ಒಟ್ಟು ತೈಲ ಸಂಸ್ಕರಣಾ ಸಾಮರ್ಥ್ಯದ ಶೇಕಡಾ 15ರಷ್ಟು ಮತ್ತು ತೈಲ ಮಾರ್ಕೆಟಿಂಗ್ ನ ಶೇಕಡಾ 22ರಷ್ಟು ಪಾಲು ದೊರೆಯಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 2.1 ಲಕ್ಷ ಕೋಟಿ ರುಪಾಯಿ ಮೌಲ್ಯದ ದಾಖಲೆಯ ಬಂಡವಾಳ ಹಿಂತೆಗೆತದ ಗುರಿ ಇರಿಸಿಕೊಂಡಿರುವ ಸರ್ಕಾರಕ್ಕೆ ಬಿಪಿಸಿಎಲ್ ಖಾಸಗಿಗೆ ಮಾರಾಟ ಮಾಡುವುದು ಅತಿ ಮುಖ್ಯ. ಬಿಪಿಸಿಎಲ್ ಬಿಡ್ಡಿಂಗ್ ಮುಕ್ತಾಯ ಆದ ಮೇಲೆ ಬಿಪಿಸಿಎಲ್ ಷೇರು 7.5 ಪರ್ಸೆಂಟ್ ಗೂ ಹೆಚ್ಚು ಕುಸಿತ ಕಂಡಿದೆ.