ಜೂನ್ 1ರಿಂದ 200 ನಾನ್ ಏಸಿ ರೈಲುಗಳ ಸಂಚಾರ ಆರಂಭ
ಭಾರತೀಯ ರೈಲ್ವೆಯಿಂದ 200 ನಾನ್ ಏಸಿ ರೈಲುಗಳ ಸಂಚಾರ ಆರಂಭಿಸಲಾಗುವುದು. ಜೂನ್ 1ನೇ ತಾರೀಕಿನಿಂದ ಪ್ರತಿ ದಿನ ವೇಳಾಪಟ್ಟಿಯಂತೆ ಈ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮಂಗಳವಾರ ತಿಳಿಸಿದ್ದಾರೆ. ಇವುಗಳಿಗಾಗಿ ಆನ್ ಲೈನ್ ಬುಕ್ಕಿಂಗ್ ಶೀಘ್ರವೇ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ರೈಲುಗಳ ವೇಳಾಪಟ್ಟಿಯನ್ನೂ ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಯಾವುದೇ ರೈಲು ನಿಲ್ದಾಣದಲ್ಲಿ ಟಿಕೆಟ್ ಮಾರಾಟ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಟಿಕೆಟ್ ಖರೀದಿ ಮಾಡುವುದಕ್ಕೆ ಬರಬಾರದು ಎಂದು ತಿಳಿಸಲಾಗಿದೆ.
ಶ್ರಮಿಕ್ ಸ್ಪೆಷಲ್ ರೈಲುಗಳ ಸಂಖ್ಯೆ ನಾನೂರಕ್ಕೆ ಹೆಚ್ಚಳ
ಸರಣಿ ಟ್ವೀಟ್ ಗಳನ್ನು ಮಾಡಿರುವ ಗೋಯೆಲ್, ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿರುವ ವಲಸಿಗ ಕಾರ್ಮಿಕರಿಗಾಗಿ ನಿತ್ಯವೂ ಇನ್ನೂರು 'ಶ್ರಮಿಕ್ ಸ್ಪೆಷಲ್' ರೈಲು ಸಂಚರಿಸಬಹುದು. ಆ ಕಾರ್ಯಾಚರಣೆ ಇನ್ನಷ್ಟು ಹೆಚ್ಚು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಶ್ರಮಿಕ್ ಸ್ಪೆಷಲ್ ರೈಲುಗಳ ಸಂಚಾರ ಸಂಖ್ಯೆಯನ್ನು ದಿನಕ್ಕೆ ನಾನೂರಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ವಲಸಿಗ ಕಾರ್ಮಿಕರು ಈಗ ಎಲ್ಲಿದ್ದೀರೋ ಅಲ್ಲೇ ಇರಿ. ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ರೈಲ್ವೆಯಿಂದ ನಿಮ್ಮ ಮನೆಗಳಿಗೆ ವಾಪಸ್ ಕರೆದೊಯ್ಯಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರ ವಲಸಿಗ ಕಾರ್ಮಿಕರನ್ನು ಗುರುತಿಸಬೇಕು
ಆಯಾ ರಾಜ್ಯ ಸರ್ಕಾರಗಳು ವಲಸಿಗ ಕಾರ್ಮಿಕರನ್ನು ಗುರುತಿಸಬೇಕು. ನಡೆದುಕೊಂಡೇ ತಮ್ಮ ತವರೂರುಗಳಿಗೆ ಹೊರಟವರನ್ನು ಹತ್ತಿರದ ಮುಖ್ಯ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಅದಕ್ಕೂ ಮುನ್ನ ಹತ್ತಿರದ ಜಿಲ್ಲಾ ಕೇಂದ್ರದಲ್ಲಿ ಅವರ ಹೆಸರು ನೋಂದಣಿ ಮಾಡಬೇಕು. ಆ ಪ್ರಯಾಣಿಕರ ಪಟ್ಟಿಯನ್ನು ರೈಲ್ವೆ ಅಧಿಕಾರಿಗಳಿಗೆ ತಲುಪಿಸಬೇಕು. ಹಾಗೆ ಮಾಡುವುದರಿಂದ ವಲಸಿಗ ಕಾರ್ಮಿಕರ ಪ್ರಯಾಣಕ್ಕೆ ರೈಲು ವ್ಯವಸ್ಥೆ ಮಾಡುವುದಕ್ಕೆ ಅನುಕೂಲ ಆಗುತ್ತದೆ ಎಂದು ರೈಲ್ವೆ ಸಚಿವರು ಟ್ವೀಟ್ ಮಾಡಿದ್ದಾರೆ. ಈ ವರೆಗೆ ಅಂದರೆ ಮೇ 19, 2020ರ ತನಕ 1600 ಶ್ರಮಿಕ್ ರೈಲುಗಳಲ್ಲಿ 21.5 ಲಕ್ಷ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ತಲುಪಿಸಲಾಗಿದೆ.
ರೈಲ್ವೆ ಕಾರ್ಯಾಚರಣೆಗೆ ರಾಜ್ಯಗಳ ಅನುಮತಿ ಬೇಕಿಲ್ಲ
ವಲಸಿಗ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಬಿಡುವ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬಗ್ಗೆ ರೈಲ್ವೆಯಿಂದ ಮಂಗಳವಾರ ಉತ್ತರ ಬಂದಿದ್ದು, ಇಂಥ ರೈಲುಗಳ ಸಂಚಾರಕ್ಕೆ ಆ ರಾಜ್ಯದ ಒಪ್ಪಿಗೆ ಪಡೆಯಬೇಕು ಎಂದೇನಿಲ್ಲ ಎಂಬ ಮಾತನ್ನು ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯದ ಜತೆ ಚರ್ಚೆ ನಡೆಸಿ, ರೈಲ್ವೆ ಸಚಿವಾಲಯದಿಂದ ಅನುಮತಿ ನೀಡಲಾಗುತ್ತದೆ. ಅದಕ್ಕೆ ಅನುಸರಿಸಬೇಕಾದ ನಿಯಮಾವಳಿಗಳನ್ನು ಸಹ ಸ್ಪಷ್ಟಪಡಿಸಲಾಗುವುದು ಎಂದು ಕೇಂದ್ರದಿಂದ ತಿಳಿಸಲಾಗಿತ್ತು. ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಈ ರೀತಿ ಸ್ಥಳಾಂತರ ಮಾಡುವುದನ್ನು ಕೆಲ ರಾಜ್ಯಗಳು ವಿರೋಧಿಸಿದ್ದವು.