ಕೇರಳ ಮೂಲದ ಹಣಕಾಸು ಸಂಸ್ಥೆಯ ಮಾಲೀಕರನ್ನು ಪೊಲೀಸರು ಬಂಧಿಸಿದ್ದು, ವಿವಿಧ ಠೇವಣಿದಾರರು ಹಾಗೂ ಹೂಡಿಕೆದಾರರು ಇನ್ನೂರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದರು. 2000 ಕೋಟಿ ರುಪಾಯಿ ಮೌಲ್ಯದ ವಂಚನೆ ದೂರು ಇವರ ವಿರುದ್ಧ ದಾಖಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಹೇಳಿದ್ದಾರೆ.
ಪಾಪ್ಯುಲರ್ ಫೈನಾನ್ಸ್ ಮ್ಯಾನೇಜಿಂಗ್ ಪಾರ್ಟನರ್ ಥಾಮಸ್ ಡೇನಿಯಲ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರಿಗೆ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಥಾಮಸ್ ಡೇನಿಯಲ್, ಆತನ ಪತ್ನಿ ಪ್ರಭಾ ಮತ್ತು ಆ ಸಂಸ್ಥೆಯ ಪಾರ್ಟನರ್ ಗಳನ್ನು ಚಂಗನಸ್ಸೆರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಕೆ.ಜಿ. ಸೈಮನ್ ನೇತೃತ್ವದ ತಂಡವು ಈ ಪ್ರಕರಣದ ತನಿಖೆ ನಡೆಸಲಿದೆ.
ಆಸ್ಟ್ರೇಲಿಯಾಕ್ಕೆ ಪಲಾಯನ ಮಾಡಲು ಯತ್ನಿಸಿದವರು ವಶಕ್ಕೆ
ಈ ತನಿಖೆಯ ಉಸ್ತುವಾರಿಯನ್ನು ದಕ್ಷಿಣ ವಲಯದ ಐಜಿ ಅಟ್ಟಲುರಿ ನೋಡಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿರುವ ಮುಖ್ಯಮಂತ್ರಿ ವಿಜಯನ್, ಈ ಪ್ರಕರಣದಲ್ಲಿ ವಿದೇಶಿ ವ್ಯವಹಾರಗಳು ಒಳಗೊಂಡಿರುವ ಗುಮಾನಿ ಇರುವುದರಿಂದ ಇಂಟರ್ ಪೋಲ್ ನೆರವು ಕೇಳುವುದಾಗಿ ಹೇಳಿದ್ದಾರೆ. ಇನ್ನು ಆಸ್ಟ್ರೇಲಿಯಾಗೆ ಪಲಾಯನ ಮಾಡುವುದಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಮಾಲೀಕರಿಬ್ಬರ ಹೆಣ್ಣುಮಕ್ಕಳಿಬ್ಬರನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಚಿನ್ನದ ಮೇಲಿನ ಸಾಲದ ವ್ಯವಹಾರ
ಪಾಪ್ಯುಲರ್ ಫೈನಾನ್ಸ್ ಮುಖ್ಯ ಕಚೇರಿ ಇರುವುದು ಪಥನಂಥಿಟ್ಟ ಜಿಲ್ಲೆಯಲ್ಲಿ. 1965ರಿಂದ ಚಿನ್ನದ ಮೇಲೆ ಸಾಲ ಒದಗಿಸುತ್ತಿದೆ. ಐದು ರಾಜ್ಯಗಳಲ್ಲಿ 284 ಶಾಖೆಗಳನ್ನು ಹೊಂದಿದೆ. ಎಲ್ಲ ಶಾಖೆಗಳನ್ನು ಮುಚ್ಚಲಾಗುತ್ತಿದೆ ಎಂಬ ವರದಿಗಳು, ಕಂಪೆನಿ ನಷ್ಟದಲ್ಲಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಗ್ರಾಹಕರಿಂದ ತಮ್ಮ ಠೇವಣಿ ತೆಗೆಯಲು ಹೆಚ್ಚಿದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
1500 ಠೇವಣಿದಾರರಿಗೆ 2 ಸಾವಿರ ಕೋಟಿ ಬಾಕಿ
ಪೊಲೀಸರ ಪ್ರಕಾರ, ಕನಿಷ್ಠ 1500 ಠೇವಣಿದಾರರಿಗೆ ಕಂಪೆನಿಯು 2 ಸಾವಿರ ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ. ವಂಚನೆ, ಕ್ರಿಮಿನಲ್ ವಿಶ್ವಾಸ ದ್ರೋಹ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇನ್ನು ವಿವಿಧೆಡೆ ಇರುವ ಈ ಸಂಸ್ಥೆಯ ಎದುರು ಧರಣಿ ಕೂತು, ತಮ್ಮ ಠೇವಣಿ ವಿಥ್ ಡ್ರಾ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.


Click it and Unblock the Notifications