ಕೇಂದ್ರ ಸರ್ಕಾರ ಆರ್ಬಿಐ ಬಿಕ್ಕಟ್ಟು! ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆ
ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವಣ ಬಿಕ್ಕಟ್ಟು ಇನ್ನೊಂದು ರೂಪಕ್ಕೆ ತಿರುಗಿದ್ದು, ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವಣ ಬಿಕ್ಕಟ್ಟು ಇನ್ನೊಂದು ರೂಪಕ್ಕೆ ತಿರುಗಿದ್ದು, ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರ್ಬಿಐ ಕಾರ್ಯಚಟುವಟಿಕೆಗಳ ಮೇಲೆ ಹಣಕಾಸು ಸಚಿವಾಲಯ ದಬ್ಬಾಳಿಕೆ ನಡೆಸಿದ ನಂತರದ ಬೆಳವಣಿಗೆ ಇದಾಗಿದ್ದು, ಬ್ಯಾಂಕ್ ಗಳಲ್ಲಿ ಉಂಟಾಗಿರುವ ಸಂಕಷ್ಟಕ್ಕೆ ಆರ್ಬಿಐ ಕಾರಣ ಎಂದು ಅರುಣ್ ಜೇಟ್ಲಿ ಹೇಳಿದ್ದರು.
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹಾಗು ಕೇಂದ್ರ ಸರ್ಕಾರದ ನಡುವೆ ಕೆಲ ದಿನಗಳಿಂದ ತೆರೆಮರೆಯ ಬಿಕ್ಕಟ್ಟು ಉಧ್ಬವಿಸಿದ್ದು, ಇಂತಹ ಸಂಧಿಗ್ದ ಸ್ಥಿತಿಯಲ್ಲಿ ಪಟೇಲ್ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಸಿಎನ್ಬಿಸಿ ಟಿವಿ೧೮ ತಿಳಿಸಿದೆ.
ಆರ್ಬಿಐ ಮತ್ತು ಕೇಂದ್ರದ ನಡುವಿನ ಕಠಿಣ ಪರಿಸ್ಥಿತಿಯ ಬೆಳವಣಿಗೆ ಹಿನ್ನೆಲೆಯಲ್ಲಿ, ಆರ್ಬಿಐ ಬ್ಯಾಂಕಿನ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಬಾರದು, ಸ್ವಾಯತ್ತತೆಗೆ ಧಕ್ಕೆ ತರಬಾರದು ಮತ್ತು ಇದು "ಸಂಭಾವ್ಯ ದುರಂತ" ಎಂದು ಆರ್ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಹೇಳಿದ್ದಾರೆ.
ಆರ್ಬಿಐ ನ ಡೆಪ್ಯುಟಿ ಗವರ್ನರ್ ವಿರಳ್ ವಿ. ಆಚಾರ್ಯ ಅವರು, ಆರ್ಬಿಐ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಗೌರವಿಸದಿದ್ದರೆ ಹಣಕಾಸು ಮಾರುಕಟ್ಟೆ ನಷ್ಟ ಎದುರಿಸಲಿದೆ ಎಂದು ಇತ್ತೀಚಿಗಷ್ಟೆ ಹೇಳಿದ್ದರು. ಈ ಹೇಳಿಕೆಗೆ ಆರ್ಬಿಐ ನೌಕರರ ಸಂಘಟನೆ ಬೆಂಬಲ ಸೂಚಿಸಿದ್ದು, ಆರ್ಬಿಐ ಸಂಸ್ಥೆಯನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು ಎಂದು ಹೇಳಿದೆ. ದಬ್ಬಾಳಿಕೆ ನಡೆಸಬೇಡಿ, ಪ್ರಾಬಲ್ಯ ಸಾಧಿಸಬೇಡಿ: ಕೇಂದ್ರಕ್ಕೆ ಆರ್ಬಿಐ ನೌಕರರ ಸಂಘಟನೆ ಖಡಕ್ ಎಚ್ಚರಿಕೆ