ಬಜೆಟ್ ಮಂಡನೆ ಬಳಿಕ ಪಿಯೂಷ್ ನೀಡಿದ ವಿವರಣೆಗಳೇನು?
ನವದೆಹಲಿ, ಫೆಬ್ರವರಿ 1: ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಮಧ್ಯಂತರ ಹಣಕಾಸು ಸಚಿವರಾಗಿ ಪಿಯೂಷ್ ಗೋಯಲ್ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ.
ಬಜೆಟ್ ಮಂಡನೆಯಲ್ಲಿ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ ಗೋಯಲ್ ಅವರು, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಘೋಷಣೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಎನ್ಡಿಎಯ ಮೊದಲ ಅವಧಿಯ ಕೊನೆಯ ಬಜೆಟ್ ಮಂಡಿಸಲಾಗಿದೆ. ಮಧ್ಯಂತರ ಬಜೆಟ್ ಆಗಿದ್ದರಿಂದ ನಾವು ನೀಡಬಹದಾಗಿದ್ದ ಮಹತ್ವದ ಕೊಡುಗೆಗಳನ್ನು ನೀಡಲಾಗಿಲ್ಲ. ಸಮಾಜದ ಪ್ರತಿ ವರ್ಷಕ್ಕೂ ಅಭಿವೃದ್ಧಿಯನ್ನು ಮತ್ತು ಲಾಭವನ್ನು ನೀಡುವುದು ಕೊಡಲಾಗಿದೆ. ದೇಶದಾದ್ಯಂತ ಉತ್ಸಾಹದ ವಾತಾವರಣವನ್ನು ನಿರ್ಮಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಮುಖ್ಯ ಬಜೆಟ್ಗಾಗಿ ನಾವು ಕಾಯಲು ಸಾಧ್ಯವಾಗದೆ ಇರುವುದರಿಂದ ಮಧ್ಯಂತರ ಬಜೆಟ್ನಲ್ಲಿ ನಿರ್ಧಾರ ಘೋಷಿಸಲಾಗಿದೆ. ಇಲ್ಲದಿದ್ದರೆ ಮುಖ್ಯ ಬಜೆಟ್ನಲ್ಲಿಯೇ ತೆರಿಗೆ ವಿನಾಯಿತಿ ಪ್ರಕಟಿಸಲಾಗಿದೆ.
ದೇಶದ ಅಭಿವೃದ್ಧಿಯಲ್ಲಿ ಕಠಿಣ ಪರಿಶ್ರಮ ವಹಿಸಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಗೌರವ ನೀಡಲಾಗಿದೆ. ಈ ಯೋಜನೆಗೆ 18-40 ವಯೋಮಿತಿಯ ಕಾರ್ಮಿಕರು ಅಲ್ಪ ಮೊತ್ತದ ಕಾಣಿಕೆ ನೀಡುವುದರ ಮೂಲಕ ಸೇರಿಕೊಳ್ಳಬಹುದು.
ಈ ಹಿಂದಿನ ಹಾಗೂ ಬಜೆಟ್ ನಂತರದ ಆದಾಯ ತೆರಿಗೆ ಪಾವತಿ ಲೆಕ್ಕಾಚಾರ
ಅಸಂಘಟಿತ ವಲಯದ 60 ವರ್ಷ ಮೇಲ್ಪಟ್ಟ ಕೆಲಸಗಾರರಿಗೆ ಪ್ರಧಾನಮಂತ್ರಿ ಶ್ರಮ ಯೋಗಿ ಮಂಧಾನ್ ಅಡಿ ತಿಂಗಳಿಗೆ 3,000 ರೂ. ಮಾಸಿಕ ಪಿಂಚಣಿ ನೀಡಲಾಗುವುದು. ಅದಕ್ಕೆ ಮಾಸಿಕ 100 ರೂ. ಕಟ್ಟಬೇಕಾಗುತ್ತದೆ.
ರೈತರಿಗೆ ಸಬ್ಸಿಡಿ ಸೌಲಭ್ಯ
ತೀವ್ರ ನೈಸರ್ಗಿಕ ವಿಕೋಪದಿಂದ ಬೆಳೆ ನಷ್ಟ ಅನುಭವಿಸಿರುವ ಎಲ್ಲ ರೈತರೂ ಬೆಳೆ ಸಾಲದ ಬದಲು ಶೇ 2ರ ಬಡ್ಡಿದರದಲ್ಲಿ ಸಬ್ಸಿಡಿ ಮತ್ತು ಶೇ 3ರ ಬಡ್ಡಿದರದಲ್ಲಿ ಮರುಪಾವತಿ ಸಬ್ಸಿಡಿ ಸೌಲಭ್ಯ ನೀಡಲಾಗುವುದು. ಇದು ಸರ್ಕಾರದ ಬೆಳೆ ವಿಮಾ ಯೋಜನೆಯನ್ನು ವಿವಿಧ ಕಾರಣಕ್ಕೆ ಪಡೆದುಕೊಳ್ಳಲು ಸಾಧ್ಯವಾಗದೆ ಇರುವವರಿಗೆ ಬಹಳ ಅನುಕೂಲ ನೀಡುತ್ತದೆ ಎಂದು ಗೋಯಲ್ ತಿಳಿಸಿದ್ದಾರೆ.
ರಾಜ್ಯದಿಂದ ವಿವರ ಕಳುಹಿಸಿ
ಎರಡು ಹೆಕ್ಟೇರ್ಗಿಂತ ಕಡಿಮೆ ಜಮೀನು ಇರುವ ಪ್ರತಿ ರೈತರಿಗೂ ವರ್ಷಕ್ಕೆ 6,000 ರೂಪಾಯಿ ನೀಡಲಾಗುತ್ತದೆ. ಹೀಗಾಗಿ ತಮ್ಮ ರಾಜ್ಯದಲ್ಲಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವಂತೆ ಅವರ ವಿವರಗಳನ್ನು ರಾಜ್ಯ ಸರ್ಕಾರ ಕಳುಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಶೇ 98ರಷ್ಟು ಗ್ರಾಮೀಣ ಶೌಚಾಲಯ ನಿರ್ವಹಣೆ
ನಮ್ಮ ಸಹೋದರಿಯರು ಮತ್ತು ತಾಯಂದಿರ ಗೌರವ ಕಾಪಾಡಲು ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಾಣ ಅಗತ್ಯವಾಗಿದೆ. ಶೇ 98ರಷ್ಟು ಗ್ರಾಮೀಣ ಶೌಚಾಲಯ ನಿರ್ವಹಣೆ ಸಾಧಿಸಲಾಗಿದೆ. 5.45 ಲಕ್ಷ ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಲಾಗಿದೆ. ಸ್ವಚ್ಛ ಭಾರತ ಈಗ ರಾಷ್ಟ್ರೀಯ ಚಳವಳಿಯಾಗಿ ಬೆಳೆದಿದೆ ಎಂದು ಗೋಯಲ್ ಶ್ಲಾಘಿಸಿದ್ದಾರೆ.
ಕೋಟಿ ಉಚಿತ ಎಲ್ಪಿಜಿ ಸಂಪರ್ಕ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಜಗತ್ತಿನ ಅತಿ ಕುಗ್ರಾಮಕ್ಕೂ ಸೇರಿದಂತೆ 6 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ದೇಶದ ಪ್ರತಿ ಮನೆಗೂ ಅಡುಗೆ ಅನಿಲ ಅಥವಾ ಕೊಳವೆ ಅನಿಲ ಸಂಪರ್ಕ ಸಾಧ್ಯವಾಗುವಂತೆ ಮಾಡಲಾಗುವುದು.