ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆಗೆ ಬಜೆಟ್ ಘೋಷಣೆಗಳೇನು?
ಬೆಂಗಳೂರು, ಫೆಬ್ರವರಿ 8: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ವಲಯಗಳ ಅಭಿವೃದ್ಧಿಗೆ ವಿವಿಧ ಘೋಷಣೆಗಳನ್ನು ಮಾಡಿದ್ದಾರೆ.
ಬಜೆಟ್ನಲ್ಲಿ ಅವರು ಕುರಿ, ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವುದಾಗಿ ಪ್ರಕಟಿಸಿದ್ದಾರೆ. ತೋಟಗಾರಿಕೆ, ಮೀನುಗಾರಿಕೆಗೆ ಹೆಚ್ಚಿನ ಅನುದಾನ ನೀಡಲು ಮುಂದಾಗಿದ್ದಾರೆ. ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ವಿಶೇಷ ಗಮನ ಹರಿಸಿದ್ದಾರೆ.
Karnataka Budget 2019 LIVE : ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ
ಮಾವು, ಟೊಮೆಟೊ ಉತ್ಪನ್ನಗಳ ಸಂಸ್ಕರಣ ಘಟಕಗಳ ಸ್ಥಾಪನೆ ಘೋಷಣೆ ಮೂಲಕ ರೈತರಿಗೆ ಭರವಸೆ ಮೂಡಿಸಿದ್ದಾರೆ. ಮೀನುಗಾರರ ದೋಣಿಗಳಿಗೆ ಇಸ್ರೋ ಉಪಕರಣ ಅಳವಡಿಸಿಕೊಳ್ಳಲು ನೆರವು, ಪ್ರಕಟಿಸಿದ್ದಾರೆ. ಕೃಷಿ ವಲಯದ ಎಲ್ಲ ವಿಭಾಗಗಳಿಗೂ ಅವರು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.
ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮತ್ತು ಪಶುಸಂಗೋಪನೆ ವಲಯಗಳಿಗೆ ಅವರು ಪ್ರಕಟಿಸಿರುವ ಘೋಷಣೆಗಳ ಮಾಹಿತಿ ಇಲ್ಲಿದೆ.
ತೋಟಗಾರಿಕೆಗೆ ಘೋಷಣೆಗಳು
* ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್
ಘೋಷಣೆ.
* ರಾಮನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಅಂತರ್ ರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೋ ಉತ್ಪಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ. ಅನುದಾನ.
* ಖಾಸಗಿ ಸಹಭಾಗಿತ್ವದಲ್ಲಿ ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರುಕಟ್ಟೆ ಉತ್ತೇಜನ
ಸಂಬಂಧಿತ ಚಟುವಟಿಕೆಗಳ ನಿರ್ವಹಣೆ ಯೋಜನೆಗೆ 2 ಕೋಟಿ ರೂ. ಅನುದಾನ.
* ಜೇನುಕೃಷಿ ಉತ್ತೇಜನಕ್ಕೆ 5 ಕೋಟಿ ರೂ. ಅನುದಾನ.
* ಮಿಡಿ ಸೌತೆ ಬೆಳೆಗಾರರ ಅನುಕೂಲಕ್ಕಾಗಿ ಹಾಗೂ ರಫ್ತು ಮೌಲ್ಯ ಹೆಚ್ಚಿಸಲು 6 ಕೋಟಿ ರೂ.ಗಳ ವಿಶೇಷ
ಪ್ಯಾಕೇಜ್.
ರೇಷ್ಮೆ ವಲಯದ ಸುಧಾರಣೆಗೆ ಯೋಜನೆಗಳು
* ಪ್ರಗತಿಪರ ರೇಷ್ಮೆ ಕೃಷಿಕರ ಮೂಲಕ ರೇಷ್ಮೆ ವಿಸ್ತರಣಾ ಕಾರ್ಯಕ್ರಮಕ್ಕೆ 2 ಕೋಟಿ ರೂ. ಅನುದಾನ.
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು 10 ಕೋಟಿ ರೂ. ಅನುದಾನ.
* ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ.
ಅನುದಾನ.
* ಚಾಮರಾಜನಗರ ರೇಷ್ಮೆ ಕಾರ್ಖಾನೆಯ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ
* ರಾಮನಗರ ಮತ್ತು ಹಾವೇರಿ ರೇಷ್ಮೆ ಮಾರುಕಟ್ಟೆ ಆಧುನೀಕರಣ ಮತ್ತು ಬಲವರ್ಧನೆಗೆ 10 ಕೋಟಿ ರೂ.
ಅನುದಾನ.
* ಚನ್ನಪಟ್ಟಣದ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್ನ ಫಿಲೇಚರ್ ಕಾರ್ಖಾನೆ ಆವರಣದ
ಎಂಪೋರಿಯಂನಲ್ಲಿ ಕರ್ನಾಟಕದ ರೇಷ್ಮೆ ವಲಯದ ಸಾಧನೆಗಳ ಪ್ರದರ್ಶನ ಹಾಗೂ ರೇಷ್ಮೆ ಉತ್ಪನ್ನಗಳ
ಮಾರಾಟಕ್ಕೆ ಉತ್ತೇಜನ ನೀಡಲು 10 ಕೋಟಿ ರೂ. ಅನುದಾನ.
ಬಜೆಟ್: ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ನೀಡಿರುವ ಕೊಡುಗೆಗಳು
ಪಶುಸಂಗೋಪನೆ ಯೋಜನೆಗಳು
* ರಾಜ್ಯದ 15 ಜಿಲ್ಲೆಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ವಾರ್ಡ್ ಒದಗಿಸಲು 2 ಕೋಟಿ ರೂ. ಅನುದಾನ.
* 5 ಕೋಟಿ ರೂ. ವೆಚ್ಚದಲ್ಲಿ 10,000 ಬಡ ನಿರುದ್ಯೋಗಿ ಯುವಕ-ಯುವತಿಯರಿಗೆ "ನಾಟಿ ಕೋಳಿ ಸಾಕಾಣಿಕೆ"ಗೆ ಪ್ರೋತ್ಸಾಹ.
* ದೇಶೀಯ ಕುರಿ ತಳಿಗಳಲ್ಲಿ ಅವಳಿ-ಜವಳಿ ಸಂತಾನೋತ್ಪತ್ತಿಯನ್ನು ಅಭಿವೃದ್ಧಿಗೊಳಿಸುವ ಯೋಜನೆಗೆ ಪ್ರಯೋಗಾಲಯ ಸ್ಥಾಪನೆಗೆ 2 ಕೋಟಿ ರೂ. ಅನುದಾನ.
* ರಾಜ್ಯದಲ್ಲಿ ಮಂಗನ ಕಾಯಿಲೆಯ ಲಸಿಕೆ ತಯಾರಿಕೆಗೆ ಬೆಂಬಲ ನೀಡಲು 5 ಕೋಟಿ ರೂ. ಅನುದಾನ
* ರಾಜ್ಯದಲ್ಲಿ ಹಾಲು ಉತ್ಪಾದಕರ ಪ್ರೋತ್ಸಾಹಧನ 5 ರೂ. ನಿಂದ 6 ರೂ.ಗೆ ಹೆಚ್ಚಳ; 1459 ಕೋಟಿ ರೂ ವೆಚ್ಚ. ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ 638 ಕೋಟಿ ರೂ. ಹಾಗೂ ಅಂಗನವಾಡಿ ಮಕ್ಕಳಿಗೆ 405 ಕೋಟಿ ರೂ. ವೆಚ್ಚ. ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ ಒಟ್ಟು 2502 ಕೋಟಿ ರೂ. ವಿನಿಯೋಗ.
ಬಜೆಟ್: ರಾಜ್ಯದ ರೈತರಿಗೆ ಕುಮಾರಸ್ವಾಮಿ ಘೋಷಣೆಗಳೇನು?
ಮೀನುಗಾರಿಕೆ ಘೋಷಣೆಗಳೇನು
* ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿ.ಎ.ಟಿ. ಉಪಕರಣ ಅಳವಡಿಸಿಕೊಳ್ಳಲು ಶೇ.50ರಷ್ಟು ಸಹಾಯಧನ; 3 ಕೋಟಿ ರೂ. ಅನುದಾನ.
* ಒಳನಾಡು ಮತ್ತು ಹಿನ್ನೀರು ಜಲಸಂಪನ್ಮೂಲದಲ್ಲಿ ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ. 400 ಘಟಕಗಳಿಗೆ ಸಹಾಯಧನ ನೀಡಲು 2 ಕೋಟಿ ರೂ. ಅನುದಾನ.
* ಒಳನಾಡಿನ ಕೆರೆಗಳಲ್ಲಿನ ಮೀನುಗಾರಿಕೆ ಗುತ್ತಿಗೆಗಳನ್ನು ಸಂಘ-ಸಂಸ್ಥೆಗಳ ಬದಲು ಸ್ಥಳೀಯ ಮೀನುಗಾರರಿಗೆ ಮೀಸಲಿಡುವ ಕುರಿತು ಪರಿಶೀಲನೆ.
* ಮತ್ಸ್ಯಾಶ್ರಯ ಯೋಜನೆ ಮುಂದುವರಿಕೆ; ಪ್ರಗತಿಯಲ್ಲಿರುವ 2500 ಮನೆಗಳನ್ನು ಪೂರ್ಣಗೊಳಿಸಲು ಕ್ರಮ.
* ಉಡುಪಿ ಜಿಲ್ಲೆಯ ಮಲ್ಪೆ ಕಡಲು ತೀರದ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ, ತ್ಯಾಜ್ಯ ನಿರ್ವಹಣೆ ಘಟಕ ಹಾಗೂ ಇತರೆ ನೈರ್ಮಲ್ಯ ಸೌಲಭ್ಯಗಳ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ.
* ರಾಜ್ಯದಲ್ಲಿ ಡೀಸಲ್ ಮತ್ತು ಸೀಮೆಎಣ್ಣೆ ಪಾಸ್ಬುಕ್ ಪಡೆದಿರುವ ದೋಣಿಗಳಿಗೆ ಡೀಸಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ನೀಡಲು 148.5 ಕೋಟಿ ರೂ. ಅನುದಾನ.
ರ್ನಾಟಕ ಬಜೆಟ್ 2019: ಎಚ್.ಡಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..