ಲೋಕಸಭಾ ಚುನಾವಣೆ ಎಫೆಕ್ಟ್! ಜನ್ ಧನ್ ಖಾತೆಗಳಿಗೆ ತಲಾ 10 ಸಾವಿರ ಜಮಾ..!
ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯ 1700 ಮಂದಿಯ ಜನ್ ಧನ್ ಖಾತೆಗಳಿಗೆ ಎಲೆಕ್ಷನ್ ವೇಳೆಯಲ್ಲಿಯೇ ತಲಾ ರೂ. 10,000 ಜಮೆ ಮಾಡಲಾಗಿದೆ ಅಂದರೆ ಸುಮಾರು ರೂ. 1.7 ಕೋಟಿ ಹಣ ಈ ಖಾತೆಗಳಿಗೆ ಡಿಪಾಸಿಟ್ ಮಾಡಲಾಗಿದೆ.
ಚುನಾವಣೆಗಳು ಬಂದರೆ ಹಣದ ಹೊಳೆ ಹರಿದು ಬರುವುದು ಸಾಮಾನ್ಯ! ಇದೀಗ ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಿಗೆ ಹಣದ ಹೊಳೆ ಹರಿದಿರುವುದು ಆಶ್ಚರ್ಯ ಉಂಟು ಮಾಡಿದೆ. ಇದಕ್ಕೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆ ಸಾಕ್ಷಿಯಾಗಿದೆ. ಎಷ್ಟು ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ, ಚುನಾವಣಾ ಆಯೋಗ, ತೆರಿಗೆ ಇಲಾಖೆ, ಗುಪ್ತಚರ ಘಟಕಗಳು ಕೈಗೊಂಡ ಕ್ರಮಗಳೇನು ನೋಡೋಣ ಬನ್ನಿ..
ಪ್ರತಿ ಖಾತೆಗೆ 10,000 ಜಮಾ
ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯ 1700 ಮಂದಿಯ ಜನ್ ಧನ್ ಖಾತೆಗಳಿಗೆ ಎಲೆಕ್ಷನ್ ವೇಳೆಯಲ್ಲಿಯೇ ತಲಾ ರೂ. 10,000 ಜಮೆ ಮಾಡಲಾಗಿದೆ ಅಂದರೆ ಸುಮಾರು ರೂ. 1.7 ಕೋಟಿ ಹಣ ಈ ಖಾತೆಗಳಿಗೆ ಡಿಪಾಸಿಟ್ ಮಾಡಲಾಗಿದೆ.
ಮತ ಸೆಳೆಯುವ ತಂತ್ರ!
ಕಳೆದ ಕೆಲ ದಿನಗಳ ಹಿಂದೆ ವರ್ಗಾವಣೆಯಾದ ರೂ. 1.7 ಕೋಟಿ ಹಣವನದನು ರಾಜಕೀಯ ಪ್ರಚಾರಕರು ಮತದಾರರಿಗೆ ಹಣ ನೀಡಿ ಅಥವಾ ಲಂಚ ನೀಡಿ ಮತಾದಾರರನ್ನು ಸೆಳೆಯಲು ಹೂಡಿರುವ ತಂತ್ರವಾಗಿರಬಹುದು ಎಂದು ಗುಪ್ತಚರ ಮತ್ತು ತನಿಖಾ ಸಂಸ್ಥೆಗಳು ಗಮನಿಸಿವೆ.
ಚುನಾವಣಾ ಆಯೋಗ ಕ್ರಮ
ಇಷ್ಟು ದೊಡ್ಡ ಮಟ್ಟದಲ್ಲಿ ಜನರ ಜನ್ ಧನ್ ಖಾತೆಗಳಿಗೆ ಅನುಮಾನಾಸ್ಪದ ಹಣ ಡಿಪಾಸಿಟ್ ಆಗಿರುವು ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಲೋಕಸಭಾ ಚುನಾವಣೆ ಉದ್ದೇಶದಿಂದಲೇ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಚುನಾವಣಾ ಆಯೋಗ ತನಿಖೆ ಆರಂಭಿಸಿದೆ. ಇದು ಸರ್ಕಾರದ ಯೋಜನೆಯ ಹಣವೇ ಅಥವಾ ಬೇರೆ ಮೂಲದಿಂದ ಜಮೆಯಾಗಿದೆಯೇ ಎಂಬುದರ ಬಗ್ಗೆ ಚುನಾವಣಾ ಆಯೋಗ ವರದಿ ಕೇಳಿದೆ.
ಹಣಕಾಸು ವಹಿವಾಟಿನ ಮೇಲೆ ನಿಗಾ
ಚುನಾವಣೆಗಳ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಸಂಸ್ಥೆಗಳು ಅಲರ್ಟ್ ಆಗಿ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಸಾಮಾನ್ಯ. ಕೇಂದ್ರ ನೇರ ತೆರಿಗೆ ಮಂಡಳಿ, ಕಸ್ಟಮ್ಸ್ ಇಲಾಖೆ, ಇಂಟಲಿಜೆನ್ಸ್ ಬ್ಯೂರೋ, ಹಣಕಾಸು ಗುಪ್ತಚರ ಘಟಕ, ಜಾರಿ ನಿರ್ದೇಶನಾಲಯದಂತಹ ಪ್ರಮುಖ ಸಂಸ್ಥೆಗಳು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಹಣಕಾಸು ವಹಿವಾಟಿನ ಮೇಲೆ ತೀವ್ರ ನಿಗಾ ವಹಿಸಿವೆ.
ತೆರಿಗೆ ಇಲಾಖೆ ತನಿಖೆ
ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಪ್ಪು ಹಣ ಮತ್ತು ಮತದಾರರಿಗೆ ಕಾನೂನುಬಾಹಿರವಾಗಿ ನಡೆಯುವ ಪ್ರಚೋದನಾಕಾರಿ ಘಟನೆಗಳನ್ನು ಪರಿಶೀಲಿಸಲು ನಿಯೋಜಿಸಲಾದ ಇತರೆ ಏಜೆನ್ಸಿಗಳೊಂದಿಗೆ ಆದಾಯ ತೆರಿಗೆ ಇಲಾಖೆ ತನಿಖೆಯನ್ನು ಆರಂಭಿಸಿದೆ.
ಹದ್ದಿನ ಕಣ್ಣು
ಚುನಾವಣಾ ಆಯೋಗವು ಮೇಲ್ವಿಚಾರಣೆಗಾಗಿ ದೊಡ್ಡ ತಂಡಗಳನ್ನು ನಿಯೋಜಿಸುವ ಮೂಲಕ ಮತದಾರರಿಗೆ ಅಕ್ರಮ ಹಣ ಮತ್ತು ಆಮಿಷಗಳನ್ನು ಒಡ್ಡುವುದನ್ನು ತಡೆಗಟ್ಟಲು ಎಲ್ಲಾ ಕ್ಷೇತ್ರಗಳಲ್ಲಿ ಹದ್ದಿನ ಕಣ್ಣನ್ನು ಇಟ್ಟಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು, ವಾಹನಗಳ ತಪಾಸಣೆ ಕಾರ್ಯಗಳು ಜೋರಾಗಿ ಸಾಗಿದ್ದು, ಈಗಾಗಲೇ ಸಾಕಷ್ಟು ಮೊತ್ತದ ಹಣ, ಬಂಗಾರ/ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಕಾರಣಿಗಳ ಕುತಂತ್ರ ಸಾಧ್ಯತೆ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜನ್ ಧನ್ ಖಾತೆಗಳಿಗೆ ಹಣ ಸಂದಾಯವಾಗಿರುವ ಕುರಿತಾಗಿ ತನಿಖೆ ನಡೆಸಲಾಗಿದೆ. ರಾಜಕೀಯ ಮುಖಂಡರುಗಳು ಜನ್ ಧನ್ ಖಾತೆದಾರರನ್ನು ದುರುಪಯೋಗಪಡಿಸಿಕೊಂಡು ಹಣ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ದೇಶದಲ್ಲಿ ಏಪ್ರಿಲ್ 11 ರಿಂದ 7 ಹಂತದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ.