ಚೆನ್ನೈ, ಮೇ 16: ಕಾರ್ಬೊನೇಟೆಡ್ ಪಾನೀಯಗಳ ತಯಾರಕ ಕಂಪೆನಿಗಳಾದ ಕೋಕಾ-ಕೋಲ ಹಾಗೂ ಪೆಪ್ಸಿಗೆ ತಮಿಳುನಾಡಿನಲ್ಲಿ ಮತ್ತೊಮ್ಮೆ ವಿರೋಧ ವ್ಯಕ್ತವಾಗಿದೆ. ಅವುಗಳ ಬ್ರ್ಯಾಂಡ್ ಅನ್ನು ಮಳಿಗೆಗಳಿಂದ ಹೊರಗೆ ಹಾಕಲು ತಮಿಳುನಾಡು ವ್ಯಾಪಾರಿಗಳು ಮುಂದಾಗಿದ್ದು, ಅವುಗಳ ಬದಲಿಗೆ ದೇಸಿ ಬ್ರ್ಯಾಂಡ್ ಪ್ರಚಾರಕ್ಕೆ ಮುಂದಾಗಿದ್ದಾರೆ.
ಎರಡು ವರ್ಷದ ಹಿಂದೆ ಇದೇ ರೀತಿಯ ಕ್ರಮವನ್ನು ವ್ಯಾಪಾರಿಗಳು ತೆಗೆದುಕೊಂಡಿದ್ದರು. ಆಗ ಈ ಎರಡು ವಿದೇಶಿ ಬ್ರ್ಯಾಂಡ್ ನ ಮಾರಾಟದಲ್ಲಿ ಭಾರೀ ಇಳಿಕೆ ಆಗಿತ್ತು. ಎರಡು ವರ್ಷದ ಹಿಂದೆ ಜಲ್ಲಿಕಟ್ಟು ವಿಚಾರವಾಗಿ ಆಕ್ರೋಶ ಭುಗಿಲೆದ್ದಿತ್ತು. ಆ ವೇಳೆ ತಮಿಳುನಾಡು ವರ್ತಕರ ಒಕ್ಕೂಟವು ಕೋಕಾ ಕೋಲ ಹಾಗೂ ಪೆಪ್ಸಿ ಬ್ರ್ಯಾಂಡ್ ಗಳ ನಿಷೇಧಕ್ಕೆ ಮುಂದಾದರು.
ಪಾನೀಯ ತಯಾರಿಕೆ ವೇಳೆ ಅಂತರ್ಜಲ ಬಳಕೆ ವ್ಯಾಪಕವಾಗಿ ಮಾಡಲಾಗುತ್ತಿದೆ. ಹಾನಿಕಾರಕ ರಾಸಾಯನಿಕ ಬಳಕೆಯಾಗುತ್ತಿದೆ ಎಂದು ಆರೋಪಿಸಿ, ಸ್ಥಳೀಯ ಬ್ರ್ಯಾಂಡ್ ಗಳನ್ನೇ ಪ್ರಚುರ ಪಡಿಸುವ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದರು. ಮೂಲಗಳ ಪ್ರಕಾರ, ಈ ನಿಷೇಧವು ಅಗಸ್ಟ್ ನಿಂದ ಜಾರಿಗೆ ಬರಲಿದೆ.
ಕಳೆದ ಬಾರಿ ಕೆಲ ತಿಂಗಳಲ್ಲೇ ವ್ಯಾಪಾರ ಮೊದಲಿನಂತೆ ಆಗಿತ್ತು
ಆದರೆ, ಎಫ್ ಎಂಸಿಜಿ ಚಿಲ್ಲರೆ ಜಾಲವೊಂದನ್ನು ನೋಡಿಕೊಳ್ಳುವ ಮ್ಯಾನೇಜರ್ ವೊಬ್ಬರ ಪ್ರಕಾರ, ವರ್ತಕರು ಈ ರೀತಿ ನಿಷೇಧ ಹೇರುವುದು ಎಷ್ಟು ಕಾಲ ಮುಂದುವರಿಯುತ್ತದೆ ಎಂದು ಕಾದು ನೋಡಬೇಕು. ಏಕೆಂದರೆ ಕಳೆದ ಬಾರಿ ಕೆಲವೇ ವಾರಗಳಲ್ಲಿ ನಿಷೇಧ ತೆರವಾಗಿತ್ತು. ಕೆಲ ತಿಂಗಳಲ್ಲೇ ವ್ಯಾಪಾರ ಮೊದಲಿನಂತೆ ಆಗಿತ್ತು.
ರೆಫ್ರಿಜರೇಟರ್ ಸಲುವಾಗಿ ಉತ್ಪನ್ನ ಖರೀದಿಸುತ್ತಾರೆ
ಈಗ ನಿಷೇಧ ಹೇರಲು ಮುಂದಾಗಿರುವ ಒಕ್ಕೂಟದ ಅಡಿಯಲ್ಲಿ ಹದಿನೈದು ಲಕ್ಷ ವರ್ತಕರಿದ್ದಾರೆ. ಈಗ ನಿಷೇಧದ ಬಗ್ಗೆ ಮಾತನಾಡುತ್ತಿರುವವರಿಗೆ ಸಮಸ್ಯೆಯ ಮೂಲ ಗೊತ್ತಿದೆ. ಕೋಕಾ ಕೋಲ ಅಥವಾ ಪೆಪ್ಸಿ ಕಂಪೆನಿಯ ಉತ್ಪನ್ನಗಳನ್ನು ಇಡುವ ಸಲುವಾಗಿ ಕಡಿಮೆ ದರದಲ್ಲಿ ಮತ್ತು ಕೆಲವು ಸಲ ಉಚಿತವಾಗಿ ರೆಫ್ರಿಜರೇಟರ್ ನೀಡಲಾಗುತ್ತದೆ. ಆ ಋಣಕ್ಕೆ ಬಿದ್ದು ವರ್ತಕರು ಅವರ ಉತ್ಪನ್ನಗಳ ಮಾರಾಟ ಮಾಡುತ್ತಾರೆ. ಆದ್ದರಿಂದ ರೆಫ್ರಿಜರೇಟರ್ ತಯಾರಿಸುವವರ ಬಳಿಯೇ ಮಾತನಾಡಿ, ಸರಬರಾಜಿಗೆ ಕೇಳಿಕೊಂಡಿದ್ದೇವೆ ಎಂದಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು
ಬಾಟಲಿಯಲ್ಲಿ ಪಾನೀಯ ತಯಾರು ಮಾಡುವವರಿಗೆ ತಮಿಳುನಾಡಿನಲ್ಲಿ ಬಹಳ ಸವಾಲುಗಳು ಎದುರಾಗಿವೆ. ಮೂರು ವರ್ಷದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ, ತಾಮ್ರಭರಣಿ ನದಿಯಿಂದ ನೀರು ತೆಗೆಯುವುದಕ್ಕೆ ಪೆಪ್ಸಿ ಹಾಗೂ ಕೋಕಾ ಕೋಲದವರಿಗೆ ತಡೆ ತರಲಾಗಿತ್ತು. ಆ ನಂತರ ಮದ್ರಾಸ್ ಹೈ ಕೋರ್ಟ್ ಆ ಆದೇಶಕ್ಕೆ ತಡೆ ನೀಡಿತ್ತು.
ಕ್ಲಿಯರೆನ್ಸ್ ಸೇಲ್ ಮಾಡಿದ್ದರು
ಎರಡು ವರ್ಷಗಳ ಹಿಂದೆ ಸಣ್ಣ ಪ್ರಮಾಣದ ಮಾರಾಟಗಾರರಿಂದ ಆರಂಭವಾಗಿದ್ದು ನಿಧಾನಕ್ಕೆ ದೊಡ್ಡ ದೊಡ್ಡ ದಿನಸಿ ಅಂಗಡಿ ತನಕ ಎಲ್ಲರೂ ಈ ಕಂಪೆನಿಗಳ ಉತ್ಪನ್ನಗಳ ಮಾರಾಟ ನಿಷೇಧಿಸಿದ್ದರು. ತಮ್ಮ ಬಳಿ ಇದ್ದ ಸರಕುಗಳನ್ನು ಮಾರಾಟ ಮಾಡುವ ಸಲುವಾಗಿ ಕ್ಲಿಯರೆನ್ಸ್ ಸೇಲ್ ಘೋಷಣೆ ಮಾಡಿದ್ದರು. ಅ ವೇಳೆ ಭಾರತೀಯ ಪಾನೀಯ ಒಕ್ಕೂಟ ಹೇಳಿಕೆ ನೀಡಿ, ತಮಿಳುನಾಡಿನಲ್ಲಿ ಗ್ರಾಹಕರ ಆಯ್ಕೆಯನ್ನು ಮಿತಿಗೊಳಿಸಲಾಗುತ್ತಿದೆ ಎಂದು ನಿರಾಶೆ ವ್ಯಕ್ತಪಡಿಸಿತ್ತು.


Click it and Unblock the Notifications