ಜಮ್ಮು ಮತ್ತು ಕಾಶ್ಮೀರ: ಕೇಂದ್ರದ ನಿರ್ಧಾರದಿಂದ ಕಂಪೆನಿಗಳಿಗೆ ಭರ್ಜರಿ ಲಾಭದ ನಿರೀಕ್ಷೆ
ನವದೆಹಲಿ, ಆಗಸ್ಟ್ 9: ಜಮ್ಮು ಮತ್ತು ಕಾಶ್ಮೀರದಲ್ಲಿನ 370ನೇ ಪರಿಚ್ಛೇದ ಮತ್ತು 35ಎ ಅನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ ಇರಿಸಿದೆ. ಇದರ ಜತೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಪುನರ್ ರಚನ ಮಸೂದೆಗೂ ರಾಜ್ಯಸಭೆ ಅಂಗೀಕಾರ ನೀಡಿದೆ.
ಈ ನಡೆ ರಾಜಕೀಯವಾಗಿ ಮಿಶ್ರ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಈ ಕ್ರಮದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಷ್ಟ್ರವನ್ನು ಉದ್ದೇಶಿಸಿ ಗುರುವಾರ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಅವರು, ರಾಜ್ಯದಲ್ಲಿ ಹೊಸದಾಗಿ ಹೂಡಿಕೆಗೆ ಬಂಡವಾಳ ಹರಿದುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವಿವಿಧ ಕಂಪೆನಿಗಳಿಗೆ ಅನುಕೂಲಕರವಾಗಿದೆ. ಜೆ & ಕೆ ಬ್ಯಾಂಕ್, ಎನ್ಎಚ್ಪಿಸಿ, ಭಾರತ್ ಡೈನಾಮಿಕ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಎಲ್&ಟಿ, ಅಶೋಕ ಬಿಲ್ಡಿಕಾನ್ ಮತ್ತು ಜಿಇ ಟಿ&ಡಿ ಮುಂತಾದ ಕಂಪೆನಿಗಳ ಷೇರುಗಳಿಗೆ ಇದರಿಂದ ಹೆಚ್ಚು ಲಾಭವಾಗಲಿದೆ.
ಈ ಕ್ರಮವು ಮಾರುಕಟ್ಟೆ ವಿಚಾರದಲ್ಲಿ ತಟಸ್ಥವಾಗಿದ್ದರೂ, ರಾಜಕೀಯ ಆರ್ಥಿಕತೆ ನೇತೃತ್ವದಲ್ಲಿ ಕೆಲವು ದೀರ್ಘಾವಧಿ ಅಳವಡಿಕೆಗಳು ಜಾರಿಯಾಗಬಹುದು. ಕಳೆದ ಆರು ವರ್ಷಗಳಿಂದ ಮೋದಿ ಸರ್ಕಾರದ ಕೈಯನ್ನು ಬಲಪಡಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆಯು ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಲು ನೆರವಾಗಲಿದೆ.
ಕೆಲವು ಏರಿಳಿತಗಳ ನಡುವೆ ಮಾರುಕಟ್ಟೆ ಪ್ರಸ್ತುತದ ಪರಿಸ್ಥಿತಿಯಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ. ಎನ್ಎಚ್ಪಿಸಿ ಮತ್ತು ಜೆ&ಕೆ ಬ್ಯಾಂಕ್ ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ವಿಚಾರದಲ್ಲಿ ಕೆಲವೇ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಎಲ್ಓಸಿಯಲ್ಲಿ ಹೆಚ್ಚಿನ ಉದ್ವಿಗ್ನತೆ ಇರುವುದರಿಂದ ಮತ್ತು ಸೇನಾ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಅತಿ ಹೆಚ್ಚಿನ ರಕ್ಷಣಾ ವಲಯದ ಹೂಡಿಕೆಗಳು ನಡೆಯಲಿವೆ.
ಭಾರತ್ ಡೈನಾಮಿಕ್ಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಇದರ ಪ್ರಯೋಜನ ಪಡೆದುಕೊಳ್ಳಬಹುದು. ರಾಜ್ಯದ ಆರ್ಥಿಕತೆಯು ಪ್ರಾಥಮಿಕವಾಗಿ ತೋಟಗಾರಿಕೆ ಮತ್ತು ಪ್ರವಾಸೋದ್ಯಮದಂತಹ ಅಸಂಘಟಿತ ವಲಯದ ಮೇಲೆಯೇ ಅವಲಂಬಿತವಾಗಿದ್ದು, ಅದರ ಪ್ರಮಾಣವೂ ಅತಿ ಚಿಕ್ಕದಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬೃಹತ್ ಪ್ರಮಾಣದ ಮೂಲಸೌಕರ್ಯದ ಕಾರ್ಯಗಳು ಆರಂಭವಾಗುವ ನಿರೀಕ್ಷೆಯಿದೆ. ಮುಖ್ಯವಾಗಿ ಹೆದ್ದಾರಿಗಳು ಮತ್ತು ಅಣೆಕಟ್ಟು ನಿರ್ಮಾಣದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇದರಿಂದ ಎಲ್&ಟಿ, ಅಶೋಕ ಬಿಲ್ಡನ್ ಮತ್ತು ಜಿಇ ಟಿ&ಡಿ ಸೇರಿದಂತೆ ನಿರ್ಮಾಣ ಕಂಪೆನಿಗಳು ಲಾಭ ಪಡೆದುಕೊಳ್ಳಲಿವೆ.