ಅರುಣ್ ಜೇಟ್ಲಿಯವರು ನಡೆದು ಬಂದ ಹಾದಿ, ಕೈಗೊಂಡ ಪ್ರಮುಖ ಹಣಕಾಸು ಸುಧಾರಣೆಗಳ ವಿವರ ಇಲ್ಲಿದೆ..
ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಅರುಣ್ ಜೇಟ್ಲಿಯವರು ಹಣಕಾಸು ಹಾಗು ರಕ್ಷಣಾ ಖಾತೆಗಳ ಜವಾಬ್ಧಾರಿ ನಿರ್ವಹಿಸಿದ್ದರು.
ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಅರುಣ್ ಜೇಟ್ಲಿಯವರು ಹಣಕಾಸು ಹಾಗು ರಕ್ಷಣಾ ಖಾತೆಗಳ ಜವಾಬ್ಧಾರಿ ನಿರ್ವಹಿಸಿದ್ದರು. ನೋಟು ರದ್ದತಿಯಂತಹ ಕಠಿಣ ನಿರ್ಧಾರದ ನಂತರ ಎದುರಾದ ಏರುಪೇರುಗಳನ್ನು ಗಟ್ಟಿಯಾಗಿ ಎದುರಿಸಿ ಸಮರ್ಥವಾಗಿ ಸರ್ಕಾರದ ನಿರ್ಧಾರ ಪ್ರತಿಪಾದಿಸಿದ್ದರು.
ಜೇಟ್ಲಿ ನಡೆದು ಬಂದ ಹಾದಿ
ಅರುಣ್ ಜೇಟ್ಲಿಯವರು 1957 ಡಿಸೆಂಬರ್ 28 ರಂದು ಕಿಶನ್ ಜೇಟ್ಲಿ ಹಾಗೂ ರತನ್ ಪ್ರಭಾ ದಂಪತಿಗೆ ಜನಿಸಿದರು. ಅರುಣ್ ಜೇಟ್ಲಿ 1969-70ನೇ ವರ್ಷದ ಅವಧಿಯಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಸ್ಕೂಲ್, 1973ರಲ್ಲಿ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಡಿಗ್ರಿ (ವಾಣಿಜ್ಯ) ಪಡೆದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ 1977ರಲ್ಲಿ ಕಾನೂನು ಪದವಿ ಪಡೆದರು.
ವೈಯಕ್ತಿಕ ಜೀವನ
1982ರಲ್ಲಿ ಅರುಣ್ ಜೇಟ್ಲಿಯವರು ಸಂಗೀತಾ ಜೇಟ್ಲಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ರಾಜಕೀಯ ಜೀವನ
ವಿದ್ಯಾರ್ಥಿ ಜೀವನದಲ್ಲೇ ನಾಯಕನಾಗಿ ರೂಪಗೊಂಡ ಜೇಟ್ಲಿಯವರು ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭಿಸಿದರು. ವಿದ್ಯಾರ್ಥಿ ದಿಶೆಯಲ್ಲೇ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅರುಣ್ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನಾಯಕನಾಗಿ ಮಿಂಚಿದ್ದರು. 1974ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಲ್ಲದೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಸಂದರ್ಭದಲ್ಲಿ 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದದ್ದು ರಾಜಕೀಯದತ್ತ ಸೆಳೆಯಿತು. ಎಪ್ಪತ್ತರ ದಶಕದಲ್ಲಿ ಜಯ ಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧದ ಚಳುವಳಿಯ ಪ್ರಮುಖ ರೂವಾರಿಯಾಗಿದ್ದರು. ನಂತರ ಜಯ ಪ್ರಕಾಶ್ ನಾರಾಯಣ್ ಅವರು ಜೇಟ್ಲಿಯವರನ್ನು ವಿದ್ಯಾರ್ಥಿಗಳ ರಾಷ್ಟೀಯ ಸಮಿತಿ ಸಂಯೋಜಕರನ್ನಾಗಿ ಆಯ್ಕೆ ಮಾಡಿದರು. ಜೈಲಿನಿಂದ ಹೊರಬಂದ ಮೇಲೆ ಬಿಜೆಪಿಗೆ ಸೇರಿ ರಾಜಕೀಯ ಜೀವನ ಆರಂಭಿಸಿದರು. 2000ರಲ್ಲಿ ಜುಲೈ 23ರಂದು ಕಾನೂನು ಮಂತ್ರಿಯಾಗಿದ್ದರು. 2003ರಲ್ಲಿ ಮತ್ತೊಮ್ಮೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದರು.
ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತ
ವಿದ್ಯಾರ್ಥಿಯಾಗಿದ್ದಾಗಲೇ ಅರುಣ್ ಜೇಟ್ಲಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿದ್ದರು. 1999ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷದ ವಕ್ತಾರರಾಗಿ ಜವಾಬ್ದಾರಿ ನಿರ್ವಹಿಸಿದರು. ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾಹಿತಿ ಹಾಗೂ ಪ್ರಸಾರದ ರಾಜ್ಯ ಮಂತ್ರಿಯಾಗಿ ನೇಮಕಗೊಂಡರು.
ಬೇರೆ ಬೇರೆ ರಾಜ್ಯಗಳ ಚುನಾವಣೆಯ ಜವಾಬ್ದಾರಿ
ನರೇಂದ್ರ ಮೋದಿಯವರಿಗೆ 2002ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ಬೆನ್ನೆಲುಬಾಗಿ ನಿಂತು ಚುನಾವಣೆಯ ಜವಾಬ್ದಾರಿ ವಹಿಸಿದರು. ಆಗ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 126 ರಲ್ಲಿ ಗೆಲುವು ಸಾದಿಸಿತ್ತು. ನಂತರ ಅರುಣ್ ಜೇಟ್ಲಿ ರಾಜ್ಯಸಭೆಗೆ ಆಯ್ಕೆಯಾದರು. 2003ರಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಉಸ್ತುವಾರಿ ಅರುಣ್ ಜೇಟ್ಲಿ ಹೆಗಲಿಗೆ ಬಿದ್ದಿತು. ಉಮಾ ಭಾರತಿಯವರೊಂದಿಗೆ ಈ ಚುನಾವಣೆಯಲ್ಲಿ ಒಟ್ಟು 230 ಸ್ಥಾನಗಳಲ್ಲಿ 173 ಸೀಟು ಗೆಲ್ಲಿಸಿದರು. 2004ರ ಲೋಕಸಭಾ ಚುನಾವಣೆಗೆ ಕರ್ನಾಟಕದ ವಿಶೇಷ ಉಸ್ತುವಾರಿ ವಹಿಸಿದ್ದರು.
ಜಿಎಸ್ಟಿ ಮಸೂದೆ
ದೇಶದ ಆರ್ಥಿಕತೆಯಲ್ಲಿ ಹೊಸ ಸಂಚಾರ ಸೃಷ್ಟಿ ಮಾಡಿದ್ದ ಜಿಎಸ್ಟಿಯನ್ನು ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಜಾರಿ ತರಲಾಯಿತು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಸುಧಾರಣೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಲಾಯಿತು. ದೇಶದ ಆರ್ಥಿಕತೆಯ ಮೇಲೆ ಭಾರೀ ಪ್ರಭಾವ ಬೀರಿದ್ದ ಜಿಎಸ್ಟಿಯು ಧನಾತ್ಮಕ ಮತ್ತು ನಕರಾತ್ಮಕ ಅಭಿಪ್ರಾಯಗಳಿಗೆ ಒಳಗಾಯಿತು.
ಪ್ರತಿಯೊಬ್ಬರಿಗೂ ಜನ ಧನ್ ಖಾತೆ
ದೇಶದ ಪ್ರತಿಯೊಬ್ಬ ಪ್ರಜೆ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಜನ್ ಧನ್ ಖಾತೆ ಯೋಜನೆಯನ್ನು
ಅರುಣ್ ಜೇಟ್ಲಿ ಅವರು ಪ್ರಾರಂಭಿಸಿದರು. ಇದು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗಿದ್ದ ಸಾವಿರಾರು ಜನರನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸುವ ಕೆಲಸ ಮಾಡಿದರು.
ಬ್ಯಾಂಕಿಂಗ ವ್ಯವಸ್ಥೆಗೆ ಬಲ
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಬ್ಯಾಂಕಿಂಗ್ ವಲಯ ಮಂದಗತಿಯಲ್ಲಿ ಸಾಗಿತ್ತು. ಕ್ಷೀಣಿಸುವ ಸ್ಥಿತಿಯಲ್ಲಿದ್ದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಬ್ಯಾಂಕುಗಳ ಬಲವರ್ಧನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು.
ವಿದೇಶಿ ನೇರ ಹೂಡಿಕೆಗೆ ಆದ್ಯತೆ
ಅರುಣ್ ಜೇಟ್ಲಿಯವರು ಹಣಕಾಸು ಸಚಿವರಾಗಿದ್ದಾಗ ದೇಶದಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಹೆಚ್ಚಿನ ಉತ್ತೇಜನ ದೊರಕಿತು. ಎಫ್ಡಿಐಯಿಂದಾಗಿ ದೇಶದ ಮಾರುಕಟ್ಟೆಯಲ್ಲಿ ಹೂಡಿಕೆ ಅವಕಾಶಗಳು ಸಿಕ್ಕವು.
ರೈಲು ಬಜೆಟ್ ವಿಲೀನ
ಅರುಣ್ ಜೇಟ್ಲಿಯವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಪ್ರತ್ಯೇಕ ರೈಲು ಬಜೆಟ್ ಮಂಡಿಸುವ ನಿಯಮವನ್ನು ಮುರಿದು ಸಾಮಾನ್ಯ ಕೇಂದ್ರ ಬಜೆಟ್ ನೊಂದಿಗೆ ವಿಲೀನಗೊಳಿಸಲಾಯಿತು.