ಜನವರಿ 1, 2015ರಿಂದ ಡಿಸೆಂಬರ್ 31, 2019ರ ಮಧ್ಯೆ ಐದು ವರ್ಷಗಳಲ್ಲಿ 38 ಮಂದಿ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಪರಾರಿ ಆಗಿದ್ದಾರೆ. ಇವರು ಬ್ಯಾಂಕ್ ಗಳಿಂದ ಸಾಲ ಪಡೆದು, ಅದನ್ನು ಮರುಪಾವತಿಸದೆ ಪರಾರಿ ಆಗಿರುವವರು. ಸೋಮವಾರದಂದು ಈ ಬಗ್ಗೆ ಸರ್ಕಾರ ಸಂಸತ್ ಗೆ ಮಾಹಿತಿ ನೀಡಿ, ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸೇರಿ 38 ಮಂದಿ ಉದ್ದೇಶಿತ ಸುಸ್ತಿದಾರರು ಭಾರತದಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಲಾಗಿದೆ.
ವಂಚನೆ ಮಾಡಿ, ಬ್ಯಾಂಕ್ ಗಳ ಮೂಲಕ ಸಾಲ ಪಡೆದುಕೊಂಡು, ದೇಶ ಬಿಟ್ಟು ಪರಾರಿಯಾದವರೂ ಸೇರಿದಂತೆ ಬೇರೆ ದೇಶಗಳಿಗೆ ವಲಸೆ ಹೋದವರ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದೆಯೇ ಎಂದು ಕೇಳಿದ್ದ ಪ್ರಶ್ನೆಗೆ, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿದರು. "ಕೇಂದ್ರೀಯ ತನಿಖಾ ದಳವು (ಸಿಬಿಐ) ಬ್ಯಾಂಕ್ ಗಳ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಮೂವತ್ತೆಂಟು ಮಂದಿ ಜನವರಿ 1, 2015ರಿಂದ ಡಿಸೆಂಬರ್ 31, 2019ರ ಮಧ್ಯೆ ದೇಶ ಬಿಟ್ಟು ಪರಾರಿ ಆಗಿದ್ದಾರೆ" ಎಂದಿದ್ದಾರೆ.
"ಇಂಥ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ" ಎಂದು ಲಿಖಿತ ಉತ್ತರ ಸಹ ನೀಡಿದ್ದಾರೆ. ಇಪ್ಪತ್ತು ಆರ್ಥಿಕ ಅಪರಾಧಿಗಳಿಗೆ ರೆಡ್ ಕಾರ್ನರ್ ನೋಟಿಸ್ ಗೆ ಅರ್ಜಿ ಹಾಕಲಾಗಿದೆ. ಹದಿನಾಲ್ಕು ಪ್ರಕರಣಗಳಲ್ಲಿ ವಿವಿಧ ದೇಶಗಳಲ್ಲಿ ಹಸ್ತಾಂತರ ಪ್ರಕ್ರಿಯೆಗೆ ಮನವಿ ಸಲ್ಲಿಸಲಾಗಿದೆ. ಹನ್ನೊಂದು ಮಂದಿ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆ 2018ರಲ್ಲಿ ಕಲಾಪ ನಡೆದಿದೆ.

ಸರ್ಕಾರದ ಮಾಹಿತಿ ಪ್ರಕಾರ 2019ರ ಜನವರಿಯಿಂದ ಡಿಸೆಂಬರ್ ಮಧ್ಯೆ ಹನ್ನೊಂದು ಮಂದಿ ದೇಶ ಬಿಟ್ಟು ಹೋಗಿದ್ದಾರೆ. 2019ರ ಜನವರಿ ತನಕ ಇಪ್ಪತ್ತೇಳು ಮಂದಿ ಪರಾರಿಯಾಗಿದ್ದಾರೆ. ಈ ಇಪ್ಪತ್ತೇಳು ಮಂದಿ ವಿರುದ್ಧ ಆರ್ಥಿಕ ಅಪರಾಧ ಹಾಗೂ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪ ಇದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಮಾಹಿತಿ ಪ್ರಕಾರ, 2014ರಿಂದ 2019ರ ಮಧ್ಯೆ ಉದ್ದೇಶಿತ ಸುಸ್ತಿದಾರರಿಂದ 7654 ಕೋಟಿ ರುಪಾಯಿ ವಸೂಲಿ ಮಾಡಲಾಗಿದೆ.


Click it and Unblock the Notifications