ಹಿಂದಿ ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಶುಕ್ರವಾರ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿಹಾರ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ಆಧರಿಸಿ, ಈ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಮುಂಬೈನಲ್ಲಿ ತನಿಖೆ ನಡೆಸಿದ ಬಿಹಾರ ಪೊಲೀಸರ ತಂಡದ ಅತ್ಯುನ್ನತ ಮಟ್ಟದ ಸಭೆಯು ಪಾಟ್ನಾದ ಡಿಜಿಪಿ ಕಚೇರಿಯಲ್ಲಿ ಇದಕ್ಕೂ ಮುಂಚೆ ನಡೆಯಿತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ- ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು, ಅಕ್ರಮ ಹಣ ವರ್ಗಾವಣೆ ಆಯಾಮದಿಂದ ನಟ ಸುಶಾಂತ್ ಸಾವಿನ ತನಿಖೆಯನ್ನು ಇ.ಡಿ. ಮಾಡಬೇಕು ಎಂದು ಆಗ್ರಹಿಸಿದ್ದರು. ECIR ದಾಖಲಿಸಲು ಒತ್ತಾಯಿಸಿದ್ದರು.
ಸುಶಾಂತ್ ಖಾತೆಯಿಂದ ಹಣದ ವಂಚನೆ ಆಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಅಕ್ರಮ ಹಣ ವರ್ಗಾವಣೆ ವಿಷಯ ಕೂಡ ಮುನ್ನೆಲೆಗೆ ಬಂದಿದೆ. ಇಂಥ ಪ್ರಕರಣ ಇ.ಡಿ. ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಇಸಿಐಆರ್ ದಾಖಲಿಸಿ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಫಡ್ನವೀಸ್ ಒತ್ತಾಯಿಸಿದ್ದರು.

ಈ ಸಾವಿನ ಪ್ರಕರಣದಲ್ಲಿ ಸಂಜಯ್ ಲೀಲಾ ಬನ್ಸಾಲಿ, ರಾಜೀವ್ ಮಸಂದ್, ಸನೈನಾ ಸಾಂಘ್ವಿ, ರಿಯಾ ಚಕ್ರಬರ್ತಿ, ಶಾನೂ ಶರ್ಮಾ, ಮುಕೇಶ್ ಛಬ್ರಾ, ಆದಿತ್ಯ ಚೋಪ್ರಾ ಮತ್ತಿತರರ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿದ್ದಾರೆ. ಸುಶಾಂತ್ ಕುಟುಂಬ, ಅಡುಗೆ ಮಾಡುತ್ತಿದ್ದಾತ ಸೇರಿ 40 ಜನರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
34 ವರ್ಷದ ನಟ ಸುಶಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಜೂನ್ 14ನೇ ತಾರೀಕು ಬಾಂದ್ರಾದಲ್ಲಿ ಪತ್ತೆಯಾಗಿತ್ತು.


Click it and Unblock the Notifications