ಕೊರೊನಾದಿಂದ ನಲುಗಿದ ಅಫ್ಘಾನ್ ಆರ್ಥಿಕತೆಗೆ ತಾಲಿಬಾನ್ ಏಟು
ಕೊರೊನಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿಗೆ ಆತಂಕಕ್ಕೆ ಒಳಗಾಗಿರುವ ಜನರು ಜೀವ ಭಯದಲ್ಲಿ ಇದ್ದಾರೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಆರ್ಥಿಕತೆಯೂ ತೀವ್ರ ಸಂಕಷ್ಟದಲ್ಲಿದೆ. ತಾಲಿಬಾನ್ ದಾಳಿಗೆ ಅಫ್ಘಾನ್ ಜನತೆ ಮಾತ್ರವಲ್ಲದೇ ಅಫ್ಘಾನಿಸ್ತಾನದ ಆರ್ಥಿಕತೆಯೂ ತತ್ತರಿಸಿದೆ. ಹಲವಾರು ಮಂದಿ ಹಸಿವಿನಿಂದ ನರಳುತ್ತಿರುವ ನಡುವೆ ವಿಶ್ವ ಸಂಸ್ಥೆಯ ಆಹಾರ ಸಂಸ್ಥೆಯು ಅಫ್ಘಾನಿಸ್ತಾನದ ಜನರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ನಡೆಸುತ್ತಿದೆ.
ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಅಫ್ಘಾನಿಸ್ತಾನದ ಆರ್ಥಿಕತೆಯು ನಲುಗಿ ಹೋಗಿತ್ತು. ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದಲ್ಲಿ ಇತರೆ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಜನರ ಆದಾಯಕ್ಕೆ ಪೆಟ್ಟು ಹಾಕುತ್ತಿತ್ತು. ಅಫ್ಘಾನಿಸ್ತಾನದಲ್ಲಿ ಸುಮಾರು 14 ಮಿಲಿಯನ್ ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಿತಿಯ ಕುರಿತು ಯುಎನ್ ಆಹಾರ ಸಂಸ್ಥೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿರುವ ಯುನ್ ಆಹಾರ ಸಂಸ್ಥೆ ಅಫ್ಘಾನಿಸ್ತಾನದಲ್ಲಿ ಆಹಾರ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ದೇಣಿಗೆ ನೀಡುವಂತೆ ವಿವಿಧ ರಾಷ್ಟ್ರಗಳಿಗೆ ವಿಶ್ವ ಸಂಸ್ಥೆ ಮನವಿ ಮಾಡಿದೆ.
ಕೊರೊನಾದಿಂದ ಶೇ. 90ರಷ್ಟು ಭಾರತೀಯರು ನಷ್ಟ ಅನುಭವಿಸಿದ್ದಾರೆ: ವರದಿ
ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ಬಳಿಕ ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿಯು ಶೋಚನೀಯವಾಗುತ್ತಿದೆ. ಅಫ್ಘಾನಿಸ್ತಾನದ ಆರ್ಥಿಕತೆಯು ಶೀಘ್ರದಲ್ಲೇ ತೀವ್ರ ಕುಸಿತ ಕಾಣಲಿದೆ ಎಂದು ಹಲವಾರು ತಜ್ಷರುಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಆರ್ಥಿಕ ಕುಸಿತದಿಂದ ಹೊರಬರುವ ನಿಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಸುಮಾರು ಅರ್ಧ ಮಿಲಿಯನ್ ಡಾಲರ್ ಅನುದಾನ ಅನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೋಮವಾರದಿಂದ ನೀಡಲಿದೆ ಎಂದು ಹೇಳಲಾಗಿದೆ.
35 ದಿನಗಳಿಂದ ಪೆಟ್ರೋಲ್ ದರ ಇಳಿಕೆಯಾಗಿಲ್ಲ..! ಹೀಗಾದ್ರೆ ಏನ್ ಗತಿ?
ಐಎಂಎಫ್ನಿಂದ ಅಫ್ಘಾನ್ಗೆ ಅನುದಾನ
ಐಎಂಎಫ್ ಅಫ್ಘಾನಿಸ್ತಾನಕ್ಕೆ ಅತೀ ಅಧಿಕ ಅನುದಾನ ಹಂಚಿಕೆಯನ್ನು ನಿಗದಿಪಡಿಸಿದೆ. ಸ್ಪೆಶಲ್ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್ಸ್) ಮೂಲಕ ಅಫ್ಘಾನಿಸ್ತಾನಕ್ಕೆ ಅಂದಾಜು ಡಾಲರ್ 460 ಮಿಲಿಯನ್ ಡಾಲರ್ ಅನುದಾನವನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ ನೀಡಲಿದೆ. ಈವರೆಗೆ ಅಫ್ಘಾನಿಸ್ತಾನವು ಸ್ಪೆಶಲ್ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್ಸ್) ಅಡಿಯಲ್ಲಿ ಡಾಲರ್ 52.5 ಮಿಲಿಯನ್ ಅನ್ನು ಸ್ವೀಕರಿಸಿದೆ. ಆದರೆ ಈ ಅಂತರಾಷ್ಟ್ರೀಯ ಹಣಕಾಸು ನಿಧಿಯ ಸ್ಪೆಶಲ್ ಡ್ರಾಯಿಂಗ್ ರೈಟ್ಸ್ ಅನುದಾನವನ್ನು ತಾಲಿಬಾನ್ ಸ್ವೀಕರಿಸುವುದಿಲ್ಲ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನವು ಅಂತರಾಷ್ಟ್ರೀಯ ಹಣಕಾಸು ನಿಧಿಯ ಅನುದಾನವನ್ನು ಪಡೆಯುವ ಮ್ಯಾನ್ಮಾರ್ ಮತ್ತು ವೆನಿಜುವೆಲಾವನ್ನು ಸೇರಬೇಕಾಗುತ್ತದೆ ಆದರೆ ಈ ಹಣವನ್ನು ಅವರ ದೇಶೀಯ ಉದ್ದೇಶಗಳಿಗಾಗಿ ಈ ನಿಧಿಯನ್ನು ಬಳಸಲು ಸಾಧ್ಯವಿಲ್ಲ ಎನ್ನಲಾಗಿದೆ. ಹಾಗೆಯೇ ತಾಲಿಬಾನ್ ಉಗ್ರಗಾಮಿಗಳು ದೇಶದ ಸಂಪತ್ತನ್ನು ಕೂಡಾ ಉಪಯೋಗಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಇನ್ನು ತಾಲಿಬಾನ್ ಅಫ್ಘಾನಿಸ್ತಾವನ್ನು ವಶಕ್ಕೆ ಪಡೆಯುವ ಮೊದಲೇ ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿಯು ತೀರಾ ಹದಗೆಟ್ಟಿತ್ತು. ವಿಶ್ವ ಬ್ಯಾಂಕ್ ಪ್ರಕಾರ, "ದೇಶದ ಆರ್ಥಿಕತೆಯು ದುರ್ಬಲವಾಗಿದೆ ಹಾಗೂ ನೆರವನ್ನು ಅವಲಂಭಿಸಿದೆ. ಅಫ್ಘಾನಿಸ್ತಾನಕ್ಕೆ ಭಾರೀ ಪ್ರಮಾಣದಲ್ಲಿ ವಿದೇಶ ನಿಧಿಯು ಲಭಿಸಿದೆ ಮತ್ತು ಶೇ. 75 ರಷ್ಟು ಸಾರ್ವಜನಿಕ ಖರ್ಚು ಅನುದಾನದ ಮೂಲಕ ಮಾಡಲಾಗಿದೆ. ಹೀಗೆ ಕೊರೊನಾ ಕಾರಣದಿಂದ ಮತ್ತೆ ನಲುಗಿದ ಅಫ್ಘಾನ್ ಆರ್ಥಿಕತೆಗೆ ತಾಲಿಬಾನ್ ಏಟು ನೀಡಿದೆ.
ಅಫ್ಘಾನ್ ಆರ್ಥಿಕತೆ ಶೇ. 20 ಕ್ಕೆ ಕುಸಿಯುವ ಸಾಧ್ಯತೆ
ಸವರನ್ ರೇಟಿಂಗ್ ಏಜೆನ್ಸಿ ಫಿಚ್ ಸುಲ್ಯೂಷನ್, ಅಫ್ಘಾನಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸವರನ್ ರೇಟಿಂಗ್ ಏಜೆನ್ಸಿಯ ವರದಿಯ ಪ್ರಕಾರ ಅಫ್ಘಾನಿಸ್ತಾನದ ಆರ್ಥಿಕತೆಯು 2021 ರಲ್ಲಿ ಶೇಕಡ 20 ಕ್ಕೆ ಕುಸಿತವಾಗುವ ಸಾಧ್ಯತೆಯಿದೆ. ಇನ್ನು ತಾಲಿಬಾನ್ ದಾಳಿ ಹಾಗೂ ಈಗಾಗಲೇ ಅಫ್ಘಾನ್ನ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆ ಅಫ್ಘಾನ್ ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಅಫ್ಘಾನಿಸ್ತಾನದ ಜಿಡಿಪಿಯು 2020 ರಲ್ಲಿ 19.8 ಡಾಲರ್ ಆಗಿತ್ತು. ಫಿಚ್ ಸುಲ್ಯೂಷನ್ನ ಏಷ್ಯಾ ದೇಶಗಳ ಮುಖ್ಯುಸ್ಥರು ಅನ್ವಿತಾ ಬಸು, "ಮ್ಯಾನ್ಮಾರ್ ಮತ್ತು ಸಿರಿಯಾದಂತಹ ಸನ್ನಿವೇಶಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ಜಿಡಿಪಿಯು ಸುಮಾರು ಶೇಕಡ 10 ರಿಂದ ಶೇಕಡ 20 ರಷ್ಟು ಕುಸಿತ ಕಂಡಿದೆ. ಈ ಪರಿಸ್ಥಿತಿಯಿಂದ ಅಫ್ಘಾನಿಸ್ತಾನವು ಹೊರತಾಗಿಲ್ಲ. ಇಲ್ಲಿಯೂ ಆರ್ಥಿಕ ಕುಸಿತ ಕಂಡು ಬಂದಿದೆ," ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕವು ಈ ಅಫ್ಘಾನ್ ದೇಶದಲ್ಲಿ ಅರ್ಥಿಕತೆ ಭಾರೀ ಪೆಟ್ಟು ನೀಡಿತ್ತು. ಈಗ ತಾಲಿಬಾನ್ನ ಭಯೋತ್ಪಾದಕ ಚಟುವಟಿಕೆಗಳು ಅಫ್ಘಾನ್ನಲ್ಲಿ ಮತ್ತಷ್ಟು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಅಫ್ಘಾನ್ನಲ್ಲಿ ಮಾನವ ಸಂಪನ್ಮೂಲದ ಕೊರತೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ನಡೆಸಿ ದೇಶವನ್ನು ವಶಕ್ಕೆ ಪಡೆದ ಬಳಿಕ ತಾಲಿಬಾನ್ನ ಆಡಳಿತದ ಆತಂಕ್ಕದಿಂದಾಗಿ ಹಲವಾರು ಜನರು ರಾಷ್ಟ್ರವನ್ನು ತೊರೆದು ಬೇರೆಡೆ ಹೋಗುತ್ತಿದ್ದಾರೆ. ಹಲವಾರು ಮಂದಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದಾರೆ. ಇನ್ನು ಭಾರತ ಸೇರಿ ಬೇರೆ ದೇಶಗಳಿಂದ ಅಫ್ಘಾನಿಸ್ತಾನಕ್ಕೆ ಬಂದಿದ್ದ ವಲಸಿಗರು ಕೂಡಾ ಈಗಾಗಲೇ ಅಫ್ಘಾನಿಸ್ತಾನವನ್ನು ತೊರೆದಿದ್ದಾರೆ. ಇವೆಲ್ಲವೂ ಕೂಡಾ ಅಫ್ಘಾನಿಸ್ತಾನದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಭಾರೀ ತೊಂದರೆಯನ್ನು ಉಂಟು ಮಾಡಿದೆ. ಯಾವುದೇ ಕ್ಷೇತ್ರದಲ್ಲೂ ಮಾನವ ಸಂಪನ್ಮೂಲ ಅತ್ಯಗತ್ಯ. ಮಾನವ ಸಂಪನ್ಮೂಲವಿಲ್ಲದೇ ದೇಶದಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಈಗ ಅಫ್ಘಾನಿಸ್ತಾನದಲ್ಲಿ ಮಾನವ ಸಂಪನ್ಮೂಲದ ಕೊರತೆ ಕಾಣಿಸಿಕೊಂಡಿರುವುದರಿಂದಾಗಿ ಉತ್ಪಾದನಾ ಹಾಗೂ ಸೇವಾ ವಲಯದಲ್ಲಿ ಚಟುವಟಿಕೆ ಕುಸಿತ ಕಂಡಿದೆ ಎಂದು ಹೇಳಲಾಗಿದೆ. ಯುದ್ದ ಪೀಡಿತ ದೇಶ ಅಫ್ಘಾನಿಸ್ತಾನವು ಒಟ್ಟಾರೆಯಾಗಿ ತೀವ್ರ ಆರ್ಥಿಕ ಕುಸಿತವನ್ನು ಎದುರು ನೋಡುತ್ತಿದೆ.
ಅಫ್ಘಾನ್ನಲ್ಲಿ ಆಹಾರವಿಲ್ಲದೇ ನರಳುತ್ತಿರುವ ಜನರು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿಗೆ ಆತಂಕಕ್ಕೆ ಒಳಗಾಗಿರುವ ಜನರು ಜೀವ ಭಯದಿಂದ ಇರುವ ನಡುವೆ ಅಫ್ಘಾನಿಸ್ತಾನದಲ್ಲಿ ಹಸಿವಿನ ಹಾಹಾಕಾರವು ಮುಗಿಲು ಮುಟ್ಟುವ ಎಲ್ಲಾ ಸ್ಥಿತಿಗಳು ಈಗಾಗಲೇ ಉಂಟಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು ಮೇರಿ ಎಲೆನ್, ಕೊರೊನಾ ವೈರಸ್ ಸಾಂಕ್ರಾಮಿಕವು ಈಗಾಗಲೇ ಅಫ್ಘಾನಿಸ್ತಾನದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ಪೆಟ್ಟು ನೀಡಿದೆ. ಕೋವಿಡ್ನ ಅಫ್ಘಾನ್ ಸ್ಥಿತಿಯನ್ನು ದುರಂತಕ್ಕೆ ದೂಡಿದೆ. ಈ ನಡುವೆ ಈ ತಾಲಿಬಾನ್ ಸಂಘರ್ಷವೂ ಭಾರೀ ಆಹಾರದ ಕೊರತೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. "ಈಗಾಗಲೇ ಅಫ್ಘಾನಿಸ್ತಾನದಲ್ಲಿ ಶೇ. 40 ರಷ್ಟು ಆಹಾರ ಧಾನ್ಯಗಳು ನಾಶವಾಗಿದೆ. ಬರಗಾಲದಿಂದಾಗಿ ಜಾನುವಾರುಗಳು ಕೂಡಾ ಮೃತ ಪಟ್ಟಿದೆ. ಸಾವಿರಾರು ಜನರು ತಾಲಿಬಾನ್ ದಾಳಿಯಿಂದಾಗಿ ಆತಂಕಕ್ಕೆ ಒಳಗಾದ ಹಿನ್ನೆಲೆ ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಚಳಿಗಾಲವು ಶೀಘ್ರವಾಗಿ ಬರುತ್ತಿದೆ, ಅಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಓಟ ನಡೆಸುವಂತಾಗಿದೆ," ಎಂದು ಹಾಹಾಕಾರದ ಬಗ್ಗೆ ವಿವರಿಸಿದ್ದಾರೆ. "ಯುಎನ್ ಆಹಾರ ಸಂಸ್ಥೆಯು ಮೇ ತಿಂಗಳಿನಲ್ಲಿ ಸುಮಾರು 4 ಮಿಲಿಯನ್ ಜನರಿಗೆ ಆಹಾರ ಪೂರೈಕೆ ಮಾಡಿದೆ. ಸುಮಾರು 9 ಮಿಲಿಯನ್ ಜನರಿಗೆ ಆಹಾರ ನೀಡಬೇಕಾಗಿದೆ. ಇನ್ನು ಕೆಲವು ತಿಂಗಳುಗಳ ಕಾಲ ಆಹಾರವನ್ನು ಸಂಗ್ರಹ ಮಾಡಬೇಕಾದ ಅಗತ್ಯವಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಹಲವಾರು ಸವಾಲುಗಳು ಎದುರಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
ಈ ಸಂಘರ್ಷವನ್ನು ನಿಲ್ಲಿಸುವಂತೆ ಮನವಿ ಮಾಡಿದ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು ಮೇರಿ ಎಲೆನ್, ಇನ್ನು ಕೂಡಾ ಸುಮಾರು 200 ಮಿಲಿಯನ್ ಡಾಲರ್ಗಳ ಅಗತ್ಯವಿದೆ. ದೇಣಿಗೆ ನೀಡಲು ಇಚ್ಛಿಸುವವರು ನೀಡಬಹುದು ಎಂದಿದ್ದಾರೆ. ಹಾಗೆಯೇ ಈ ದೇಣಿಗೆಯಿಂದ ಅಫ್ಘಾನಿಸ್ತಾನದ ಸ್ಥಿತಿಯನ್ನು ಕೊಂಚ ಸುಧಾರಿಸಲು ಸಹಕಾರಿಯಾದೀತು ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಇನ್ನು ಅಫ್ಘಾನಿಸ್ತಾನದಲ್ಲಿ ಸುಮಾರು 30 ಮಿಲಿಯನ್ ಜನರು ಬಡತನ ರೇಖಿಗಿಂತ ಕೆಳ ಮಟ್ಟದವರಾಗಿದ್ದಾರೆ ಎಂದು ವರದಿಗಳು ಹೇಳಿದೆ. ಹಾಗೆಯೇ 11 ಮಿಲಿಯನ್ ಅಫ್ಘಾನ್ ಜನರು ಆಹಾರ ಭದ್ರತೆ ಕೊರತೆಯಿಂದಾಗಿ ನರಳುತ್ತಾರೆ ಎಂದು ಕೂಡಾ ಅಫ್ಘಾನಿಸ್ತಾನದ ಆಹಾರ ಭದ್ರತೆಯ ಬಗ್ಗೆಗಿನ ವರದಿಯು ತಿಳಿಸಿದೆ. ''ಅಫ್ಘಾನಿಸ್ತಾನದ ಹಲವಾರು ಪ್ರದೇಶದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ, ಆರ್ಥಿಕ ಸಮಸ್ಯೆ ಹಾಗೂ ಆಹಾರ ಸಮಸ್ಯೆಯಿಂದಾಗಿ ನಾವು ಕಳವಳಗೊಂಡಿದ್ದೇವೆ. ನೀರಿನ ಸಮಸ್ಯೆ, ಬೆಳೆ ನಾಶದಿಂದಾಗಿ ಸ್ಥಳೀಯ ಮಾರುಕಟ್ಟೆಗಳ ಸ್ಥಿತಿ ಶೋಚನೀಯವಾಗಿದೆ ಹಾಗೂ ಜನರ ಸಾಮಾನ್ಯ ಆದಾಯವು ತೀವ್ರ ಇಳಿಕೆ ಕಾಣುತ್ತಿದೆ,'' ಎಂದು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ ಹಂಗಾಮಿ ಅಧ್ಯಕ್ಷ ಡಾ. ನೀಲಾಬ್ ಮೊಬರೆಜ್ ಎಪ್ರಿಲ್ನಲ್ಲಿ ತಿಳಿಸಿದ್ದರು.
(ಒನ್ ಇಂಡಿಯಾ)