ಕೊರೊನಾದಿಂದ ರದ್ದಾದ ವಿಮಾನದ ಟಿಕೆಟ್ ರೀಫಂಡ್: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಹೇರಿದಾಗ ರದ್ದಾದ ವಿಮಾನದ ಟಿಕೆಟ್ ಗಳ ಹಣವನ್ನು ಯಾವುದೇ ಕ್ಯಾನ್ಸಲ್ ಶುಲ್ಕ ಮುರಿದುಕೊಳ್ಳದೆ ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ನೇತೃತ್ವವನ್ನು ಅಶೋಕ್ ಭೂಷಣ್ ವಹಿಸಿದ್ದರು.
ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಶಿಫಾರಸನ್ನು ಪರಿಗಣಿಸಲಾಗಿದೆ. ಟಿಕೆಟ್ ಹಣ ಮರುಪಾವತಿಸಲು ಹಾಗೂ ಕ್ರೆಡಿಟ್ ಶೆಲ್ ಯೋಜನೆಗೆ (ಈಗಿನ ಟಿಕೆಟ್ ಹಣವನ್ನು ಮುಂದೆ ಪ್ರಯಾಣಕ್ಕೆ ಬಳಸಬಹುದು) ಮುಂದಿನ ವರ್ಷದ ಮಾರ್ಚ್ 31ನೇ ತಾರೀಕಿನ ತನಕ ಅವಕಾಶ ಇದೆ. ಈ ತೀರ್ಪು ದೇಶೀಯ ಹಾಗೂ ಅಂತರರಾಷ್ಟ್ರೀಯ ಟಿಕೆಟ್ ಎರಡಕ್ಕೂ ಅನ್ವಯಿಸುತ್ತದೆ.
ಟ್ರಾವೆಲ್ ಏಜೆಂಟ್ ಗಳ ಮೂಲಕ ಹಣ ಪಡೆಯುವುದು ಹೇಗೆ?
ಯಾರು ಟ್ರಾವೆಲ್ ಏಜೆಂಟ್ ಗಳ ಮೂಲಕ ಟಿಕೆಟ್ ಖರೀದಿ ಮಾಡಿರುತ್ತಾರೋ ಅಂಥವರು ಆ ಏಜೆಂಟ್ ಖಾತೆಗೆ ಹಣ ಜಮೆ ಆದ ಮೇಲೆ ವಾಪಸ್ ಪಡೆಯಬಹುದು ಎಂದು ಕೋರ್ಟ್ ಹೇಳಿದೆ. ಮುಂದಿನ ವರ್ಷದ ಮಾರ್ಚ್ 31ನೇ ತಾರೀಕಿನೊಳಗೆ ಪ್ರಯಾಣಿಕರಿಗೆ ಹಣವನ್ನು ಹಿಂತಿರುಗಿಸಬೇಕು ಎಂದು ಕೋರ್ಟ್ ಹೇಳಿದೆ. ಆದರೆ, ಲಾಕ್ ಡೌನ್ ಅವಧಿಯಲ್ಲಿ ಪ್ರಯಾಣ ಮಾಡುವುದಕ್ಕೆ ಅದೇ ಲಾಕ್ ಡೌನ್ ಸಮಯದಲ್ಲಿ ಟಿಕೆಟ್ ಬುಕ್ ಮಾಡಿದ್ದಲ್ಲಿ ತಕ್ಷಣವೇ ಹಿಂತಿರುಗಿಸಬೇಕು. "ಏರ್ ಲೈನ್ಸ್ ಗಳು ಅಂಥ ಟಿಕೆಟ್ ಗಳನ್ನು ಬುಕ್ ಮಾಡುವಂತೆಯೇ ಇರಲಿಲ್ಲ," ಎಂದು ಕೋರ್ಟ್ ಹೇಳಿದೆ.
ಮೂರು ವಾರದೊಳಗೆ ಹಣ ಹಿಂತಿರುಗಿಸಬೇಕು
"ಒಂದು ವೇಳೆ ಪ್ರಯಾಣಿಕರು ಲಾಕ್ ಡೌನ್ ಅವಧಿಯಲ್ಲಿ (ಮಾರ್ಚ್ 25 ಮೇ 24ರ ಮಧ್ಯೆ) ಟಿಕೆಟ್ ಬುಕ್ ಮಾಡಿದ್ದಲ್ಲಿ ಮತ್ತು ಅದೇ ಅವಧಿಯಲ್ಲಿ ಪ್ರಯಾಣಿಸುವುದಕ್ಕೆ ಏರ್ ಲೈನ್ಸ್ ನಿಂದ ಹಣ ಪಡೆದುಕೊಂಡಿದ್ದಲ್ಲಿ, ಅದು ದೇಶೀಯ ಆಗಿರಬಹುದು ಅಥವಾ ಅಂತರರಾಷ್ಟ್ರೀಯ ಆಗಿರಬಹುದು. ಪ್ರಯಾಣಿಕರು ಆ ಬುಕ್ಕಿಂಗ್ ರದ್ದು ಮಾಡಲು ಕೋರಿದ್ದಲ್ಲಿ, ವಿಮಾನ ಯಾನ ಸಂಸ್ಥೆಗಳಿಂದ ಯಾವುದೇ ಕ್ಯಾನ್ಸಲೇಷನ್ ಶುಲ್ಕ ವಿಧಿಸದೆ ಹಣವನ್ನು ಹಿಂತಿರುಗಿಸಬೇಕು. ಕ್ಯಾನ್ಸಲೇಷನ್ ಆದ ದಿನದಿಂದ ಮೂರು ವಾರದೊಳಗಾಗಿ ಹಣ ಹಿಂತಿರುಗಿಸಬೇಕು," ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಯಾಣಿಕರ ರೀಫಂಡ್ ಗಳ ಅರ್ಜಿ ವಿಚಾರಣೆ
ಅಂಥ ರೀಫಂಡ್ ಮೊತ್ತವನ್ನು ಟ್ರಾವೆಲ್ ಏಜೆಂಟ್ ಗಳು ಕೂಡ ತಕ್ಷಣವೇ ಪ್ರಯಾಣಿಕರಿಗೆ ವರ್ಗಾಯಿಸಬೇಕು ಎಂದು ತಿಳಿಸಿದೆ. ರೀಫಂಡ್ ವಿಚಾರವನ್ನು ಯಾರು ಗಮನಿಸಬೇಕು ಎಂಬ ಸ್ಪಷ್ಟ ಸೂಚನೆ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಚಿವಾಲಯದಿಂದ ಅಧಿಸೂಚನೆ ಹೊರಡಿಸುವಂತೆ ತಿಳಿಸಲಾಗಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರದ್ದಾದ ವಿಮಾನಗಳ ಟಿಕೆಟ್ ರೀಫಂಡ್ ವಿಚಾರಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಹಾಕಿದ್ದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಈ ಆದೇಶ ಬಂದಿದೆ.