ವಿಮಾನ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್: ಹಣ ವಾಪಸ್ ಇಲ್ಲ, ಮರುಹೊಂದಾಣಿಕೆ ಮಾತ್ರ
ಸರ್ಕಾರ ಇಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಮೇ 3ಕ್ಕೆ ವಿಸ್ತರಿಸಿದೆ. ಇದರಿಂದಾಗಿ ಇನ್ನೂ ಮೂರು ವಾರಗಳ ಕಾಲ ರೈಲು, ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಹಣವನ್ನು ಹಿಂದಿರುಗಿಸದಿರಲು ಕೆಲ ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ.
ರದ್ದಾದ ವಿಮಾನಗಳಿಗಾಗಿ ಗ್ರಾಹಕರಿಗೆ ಹಣವನ್ನು ಹಿಂದಿರುಗಿಸುವುದಿಲ್ಲ, ಬದಲಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರುಹೊಂದಾಣಿಕೆಯನ್ನು ಮಾಡಿಕೊಡುತ್ತೇವೆ ಎಂದು ವಿಸ್ಟಾರಾ ತಿಳಿಸಿದೆ. ಏಪ್ರಿಲ್ 14ರ ನಂತರದ ಅವಧಿಯಲ್ಲಿ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಹೊರತುಪಡಿಸಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬುಕಿಂಗ್ ತೆಗೆದುಕೊಳ್ಳುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸುವುದಾಗಿ ಘೋಷಿಸಿದ ನಂತರ, ವಾಯುಯಾನ ನಿಯಂತ್ರಕ ಡಿಜಿಸಿಎ ಎಲ್ಲಾ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ಲಾಕ್ಡೌನ್ ಸಮಯದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಸುತ್ತೋಲೆ ಹೊರಡಿಸಿದೆ.
"ನಾವು ಬುಕಿಂಗ್ ಅನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು 2020 ರ ಡಿಸೆಂಬರ್ 31 ರವರೆಗೆ ಗ್ರಾಹಕರಿಗೆ ಮತ್ತೊಂದು ದಿನಾಂಕಕ್ಕೆ ಮರುಹೊಂದಿಸುವಿಕೆಯನ್ನು ನಾವು ಉಚಿತವಾಗಿ ನೀಡುತ್ತೇವೆ" ಎಂದು ವಿಸ್ಟಾರಾ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಆದರೂ, ಮರು ಶುಲ್ಕ ವಿಧಿಸುವ ಸಮಯದಲ್ಲಿ ಗ್ರಾಹಕರು ಶುಲ್ಕ ವ್ಯತ್ಯಾಸವನ್ನು ಪಾವತಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಗೋಏರ್ ಕೂಡ ಇದೇ ರೀತಿಯ ಯೋಜನೆ ಕಾರ್ಯರೂಪಕ್ಕೆ ತರುವ ಸಾಧ್ಯತೆಯಿದೆ.
ಒಟ್ಟಾರೆ ಈಗಾಗಲೇ ವಿಸ್ಟಾರಾ ಏರ್ಲೈನ್ಸ್ನಲ್ಲಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಆಗಿದ್ದ ಗ್ರಾಹಕರು ಡಿಸೆಂಬರ್ 31 ರವರೆಗೆ ಯಾವುದೇ ದಿನಾಂಕಕ್ಕೆ ಮರುಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.