50 ಪೈಸೆ ಬಾಕಿ ಉಳಿದಿದೆ ಎಂದು ಬ್ಯಾಂಕ್ ನೋಟಿಸ್; ಕಟ್ಟಲು ಹೋದರೆ ಕಿರಿಕ್
ರಾಜಸ್ಥಾನದ ಝುಂಝುನುನಿಂದ ವರದಿಯೊಂದು ಬಂದಿದೆ. ಅದರ ಪ್ರಕಾರ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ವೊಂದು ವ್ಯಕ್ತಿಯೊಬ್ಬರ ಮನೆ ಬಾಗಿಲಿಗೆ ನೋಟಿಸ್ ಹಚ್ಚಿದೆಯಂತೆ; ಅದು ಕೂಡ ಐವತ್ತು ಪೈಸೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ. ಸರಿ, ಆ ಐವತ್ತು ಪೈಸೆ ಮರುಪಾವತಿಸುವುದಕ್ಕೆ ಅಂತ ಹೋದರೆ ಬ್ಯಾಂಕ್ ನವರು ಅದನ್ನು ಕೂಡ ತೆಗೆದುಕೊಂಡಿಲ್ಲ. ಇದೀಗ ಆ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.
ಈ ಘಟನೆ ನಡೆದಿರುವುದು ಝುಂಝುನು ಜಿಲ್ಲೆಯ ಖೇಟ್ರಿಯಲ್ಲಿ. ಜಿತೇಂದ್ರ ಸಿಂಗ್ ಎಂಬುವರ ಮನೆ ಬಾಗಿಲಿಗೆ ರಾತ್ರೋರಾತ್ರಿ ನೋಟಿಸ್ ಹಚ್ಚಿರುವ ಬ್ಯಾಂಕ್, ಹಣ ಪಾವತಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ.
ಆದರೆ, ಜಿತೇಂದ್ರ ಸಿಂಗ್ ಅವರಿಗೆ ಬೆನ್ನು ಹುರಿಯ ಸಮಸ್ಯೆ. ತಾವು ಖೇಟ್ರಿಯಲ್ಲಿ ಲೋಕ್ ಅದಾಲತ್ ಭಾಗಿಯಾಗಲು ಸಾಧ್ಯವಿಲ್ಲ ಎಂದು ತಂದೆ ವಿನೋದ್ ಸಿಂಗ್ ರನ್ನು ಜಿತೇಂದ್ರ ಕಳುಹಿಸಿದ್ದಾರೆ. ಆದರೆ ಬ್ಯಾಂಕ್ ನವರು ವಿನೋದ್ ರಿಂದ ಹಣ ಪಡೆಯಲು ನಿರಾಕರಿಸಿದ್ದಾರೆ. ತಮ್ಮ ಮಗನ ಅನಾರೋಗ್ಯ ಸ್ಥಿತಿಯನ್ನು ವಿವರಿಸಿದ ನಂತರವೂ ಅವರು ಕರಗಿಲ್ಲ.
"ಐವತ್ತು ಪೈಸೆಗಾಗಿ ನನ್ನ್ ಕಕ್ಷೀದಾರರಿಗೆ ಬ್ಯಾಂಕ್ ನವರು ನೋಟಿಸ್ ಕಳುಹಿಸಿದ್ದಾರೆ. ಹಣ ಕಟ್ಟಿ ನಿರಾಕ್ಷೇಪಣಾ ಪತ್ರ (ಎನ್ ಒಸಿ) ಪಡೆಯಲು ಹೋದರೆ ಅದನ್ನು ಒಪ್ಪಿಕೊಂಡಿಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ವಕೀಲ ವಿಕ್ರಮ್ ಸಿಂಗ್ ಹೇಳಿದ್ದಾರೆ.