ಭಾರತದ ಷೇರು ಮಾರ್ಕೆಟ್ ನಲ್ಲಿ ಪ್ರಳಯ; ಆರ್ಥಿಕ ಮಹಾ ಕುಸಿತದ ಮುನ್ಸೂಚನೆಯೇ?
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಹೇರಿರುವ ನಿರ್ಬಂಧವು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಒಂದೇ ದಿನದಲ್ಲಿ ಸೆನ್ಸೆಕ್ಸ್- ನಿಫ್ಟಿ ಕಂಡ ದಾಖಲೆಯ ಭಾರೀ ಕುಸಿತ ಸೋಮವಾರದ ದಿನದ್ದಾಗಿದೆ. ಇನ್ನು ಭಾರತೀಯ ಷೇರು ಮಾರುಕಟ್ಟೆ ಕುಸಿಯುತ್ತಿರುವ ವೇಗ ಗಮನಿಸಿದರೆ ಇದರ ಅಂತ್ಯ ಎಲ್ಲಿ ಎಂಬುದೇ ಗೊತ್ತಾಗದ ಸ್ಥಿತಿ ಸೃಷ್ಟಿಯಾಗಿದೆ.
ಮಾರ್ಚ್ 23ರ ಸೋಮವಾರ ಸೆನ್ಸೆಕ್ಸ್ 3934.72 ಪಾಯಿಂಟ್ ಕುಸಿದು, 25,981.24ಕ್ಕೆ ದಿನದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 1135.2 ಪಾಯಿಂಟ್ ಇಳಿಕೆ ಕಂಡು 7610.25 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಅಗ್ರಗಣ್ಯ ಕಂಪೆನಿ ಷೇರುಗಳು ಪಾತಾಳ ತಲುಪಿವೆ.
ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಸರ್ವೀಸಸ್ ಪಾತಾಳಕ್ಕೆ
ದಿನದ ಆರಂಭದಲ್ಲಿ ಹತ್ತು ಪರ್ಸೆಂಟ್ ನಷ್ಟು ಮಾರ್ಕೆಟ್ ಇಳಿಕೆ ಕಂಡಿದ್ದರಿಂದ 45 ನಿಮಿಷಗಳ ಕಾಲ ವಹಿವಾಟು ನಿಲ್ಲಿಸಲಾಗಿತ್ತು. ಆ ಮೇಲೆ ವ್ಯವಹಾರ ಆರಂಭಿಸಿದ ಮಾರ್ಕೆಟ್ ಚೇತರಿಕೆ ಕಾಣಲೇ ಇಲ್ಲ. ಸೆನ್ಸೆಕ್ಸ್ ಸೂಚ್ಯಂಕವು ಹಿಂದಿನ ದಿನ ಅಂದರೆ, ಶುಕ್ರವಾರದ ಅಂತ್ಯಕ್ಕೆ 29,915.96 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿತ್ತು. ಸೋಮವಾರ ಮಾರುಕಟ್ಟೆ ಆರಂಭವಾಗಿದ್ದು 27,608.80 ಪಾಯಿಂಟ್ ನೊಂದಿಗೆ. ಅಂದರೆ 2300 ಪಾಯಿಂಟ್ ಇಳಿಕೆಯೊಂದಿಗೆ ಸೆನ್ಸೆಕ್ಸ್ ಸೋಮವಾರ ವಹಿವಾಟು ಆರಂಭಿಸಿ, ದಿನದ ಕನಿಷ್ಠ ಮಟ್ಟವಾದ 25,880.83 ಪಾಯಿಂಟ್ ಗಳನ್ನು ತಲುಪಿತ್ತು. ಆ ಮೂಲಕ 4 ಸಾವಿರಕ್ಕೂ ಹೆಚ್ಚು ಪಾಯಿಂಟ್ ಗಳು ಕುಸಿತ ಕಂಡಂತಾಯಿತು. ಇನ್ನು ನಿಫ್ಟಿ 8,745.45 ಪಾಯಿಂಟ್ ನಲ್ಲಿ ಶುಕ್ರವಾರ ವ್ಯವಹಾರ ಮುಕ್ತಾಯಗೊಳಿಸಿತ್ತು. 800 ಪಾಯಿಂಟ್ ಗಳ ಇಳಿಕೆಯೊಂದಿಗೆ ಸೋಮವಾರ ವಹಿವಾಟು ಆರಂಭಿಸಿತು. ದಿನದ ಕನಿಷ್ಠ ಮಟ್ಟ 7583 ತಲುಪಿತ್ತು.
ಆರ್ಥಿಕ ಕುಸಿತದತ್ತ ಹೆಜ್ಜೆಗಳು
ಆಕ್ಸಿಸ್ ಬ್ಯಾಂಕ್ 27.91%, ಬಜಾಜ್ ಫೈನಾನ್ಸ್ ಸರ್ವೀಸ್ 25.86%, ಇಂಡಸ್ ಇಂಡ್ ಬ್ಯಾಂಕ್ 23.59%, ಬಜಾಜ್ ಫೈನಾನ್ಸ್ 23.23%, ಅದಾನಿ ಪೋರ್ಟ್ಸ್ 18.95% ಕುಸಿದವು. ಎಲ್ಲ ವಲಯಗಳಲ್ಲೂ ಭಾರೀ ಕುಸಿತ ಕಂಡುಬಂದಿದೆ. ಆ ಪೈಕಿ ಬ್ಯಾಂಕ್ ಮತ್ತು ಆಟೋಮೊಬೈಲ್ ವಲಯಗಳಿಗೆ ಭಾರೀ ಪೆಟ್ಟು ಬಿದ್ದಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕವು ಹದಿನೈದು ಪರ್ಸೆಂಟ್ ಗೂ ಹೆಚ್ಚು ಇಳಿಕೆ ಕಂಡಿದೆ. ಕೊರೊನಾ ವೈರಾಣು ಪರಿಣಾಮವು ಆರ್ಥಿಕ ಕುಸಿತದತ್ತ ಒಯ್ಯಬಹುದು, ಬ್ಯಾಂಕ್ ಗಳಿಗೆ ಜನರು ಸಾಲ ಮರುಪಾವತಿ ಮಾಡಲು ಕಷ್ಟವಾಗಬಹುದು ಎಂಬ ಸಂಗತಿಗಳು ಕೂಡ ಮಹತ್ವ ಪಡೆದಿವೆ.
ತಳ ಮಟ್ಟ ಯಾವುದು ಎನ್ನುವುದು ಗೊತ್ತಾಗುತ್ತಿಲ್ಲ
ಜಾಗತಿಕ ಮಟ್ಟದಲ್ಲೇ ಪರಿಸ್ಥಿತಿ ದುರ್ಬಲವಾಗಿದೆ. ಅಮೆರಿಕ, ಯುರೋಪ್ ಮಾರ್ಕೆಟ್ ಗಳು ಸಹ ಕುಸಿದಿವೆ. ಅಷ್ಟೇ ಅಲ್ಲ, ಏಷ್ಯನ್ ಮಾರ್ಕೆಟ್ ಗಳು ಸಹ ಇದರಿಂದ ಹೊರತಾಗಿಲ್ಲ. ಆದರೆ ಉಳಿದೆಲ್ಲ ಮಾರ್ಕೆಟ್ ಗಿಂತ ಭಾರತೀಯ ಷೇರು ಮಾರ್ಕೆಟ್ ಕುಸಿತದ ಪರಿ ಭಯಾನಕವಾಗಿದೆ. ತಜ್ಞರು ಹೇಳುವ ಪ್ರಕಾರ, ಷೇರು ಮಾರ್ಕೆಟ್ ಇನ್ನಷ್ಟು ಕುಸಿಯುವ ಸಾಧ್ಯತೆಗಳಿವೆ. ಆ ಕಾರಣಕ್ಕೆ ಯಾವುದು ತಳಮಟ್ಟ ಎಂಬುದು ಗೊತ್ತಾಗುತ್ತಿಲ್ಲ. ಒಂದು ವೇಳೆ ಆ ಅಂಶ ಗೊತ್ತಾದಲ್ಲಿ ಹೂಡಿಕೆದಾರರು ಮತ್ತೆ ಖರೀದಿ ಆರಂಭಿಸುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ತಿಳಿದುಕೊಳ್ಳುವುದೇ ಸಾಧ್ಯವಾಗುತ್ತಿಲ್ಲ. ಸಟ್ಟಾ ವ್ಯವಹಾರದ ಮೇಲೆ ಶುಕ್ರವಾರದಂದು ಸೆಬಿ ನಿರ್ಬಂಧ ಹೇರಿದೆ. ಇದರಿಂದ ಷೇರು ಮಾರುಕಟ್ಟೆಗೆ ಪ್ರೋತ್ಸಾಹ ಸಿಗಬಹುದು ಎಂಬ ಅಂದಾಜಿತ್ತು. ಆದರೆ ಅದರಿಂದಲೂ ಯಾವುದೇ ಅನುಕೂಲ ಈ ತಕ್ಷಣಕ್ಕೆ ಆದಂತಿಲ್ಲ.