ಇಂದು ಬಿಎಸ್ಎನ್ಎಲ್ ನೌಕರರ ಉಪವಾಸ ಸತ್ಯಾಗ್ರಹ
ಬಿಎಸ್ಎನ್ಎಲ್ ಸಿಬ್ಬಂದಿ ಒಕ್ಕೂಟವು ಸೋಮವಾರ ದೇಶಾದ್ಯಂತ ಉಪವಾಸ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ. ಸ್ವಯಂ ನಿವೃತ್ತಿ ಯೋಜನೆ(ವಿಆರ್ಎಸ್) ಸೇರುವಂತೆ ಆಡಳಿತ ಮಂಡಳಿಯು ಸಿಬ್ಬಂದಿ ಮೇಲೆ ಬಲವಂತವಾಗಿ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ.
'ಸ್ವಯಂ ನಿವೃತ್ತಿ ಯೋಜನೆ(ವಿಆರ್ಎಸ್) ಆಯ್ಕೆ ಮಾಡಿಕೊಳ್ಳಲಿದ್ದರೆ, ಸಿಬ್ಬಂದಿ ನಿವೃತ್ತಿಯ ವಯಸ್ಸನ್ನು 58ಕ್ಕೆ ಇಳಿಸಲಾಗುವುದು. ಮತ್ತು ದೂರದ ಊರಿಗೆ ವರ್ಗಾವಣೆ ಮಾಡುವುದಾಗಿ ಆಡಳಿತ ಮಂಡಳಿ ಬೆದರಿಕೆ ಹಾಕುತ್ತಿದೆ' ಎಂದು ಸಂಸ್ಥೆಯ ಅಖಿಲ ಭಾರತ ಒಕ್ಕೂಟ ಮತ್ತು ಸಂಘದ(ಎಯುಬಿ) ಸಂಚಾಲಕ ಪಿ. ಅಭಿಮನ್ಯು ಆರೋಪಿಸಿದ್ದಾರೆ.
'ಕೆಲವು ವರ್ಷಗಳ ಹಿಂದೆ ಬ್ಯಾಂಕುಗಳು ಉತ್ತಮ ವಿಆರ್ಎಸ್ ಯೋಜನೆಯನ್ನು ನೀಡಿವೆ. ಆದರೆ ಅದಕ್ಕೆ ಹೋಲಿಸಿದರೆ ಬಿಎಸ್ಎನ್ಎಲ್ ನೀಡುವ ವಿಆರ್ಎಸ್ ಲಾಭದಾಯಕವಲ್ಲ. ಸಿಬ್ಬಂದಿ ಮೇಲೆ ಆಡಳಿತ ಮಂಡಳಿಯು ಬೆದರಿಕೆ ಹಾಕುವುದನ್ನು ನಿಲ್ಲಿಸಿದರೆ ವಿಆರ್ಎಸ್ ಆಯ್ಕೆ ಮಾಡಿಕೊಳ್ಳುವ ಸಿಬ್ಬಂದಿ ಕಡಿಮೆಯಾಗುತ್ತದೆ' ಎಂದು ಅವರು ಹೇಳಿದರು.
BSNLನ 70 ಸಾವಿರ ಉದ್ಯೋಗಿಗಳಿಂದ VRS ಆಯ್ಕೆ
ವಿಆರ್ಎಸ್ ಯೋಜನೆ ಆಯ್ಕೆ ಮಾಡಿಕೊಳ್ಳಲು ಡಿಸೆಂಬರ್ 3ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 77 ಸಾವಿರಕ್ಕೂ ಅಧಿಕ ಸಿಬ್ಬಂದಿ ವಿಆರ್ಎಸ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.