ಬಜೆಟ್ 2021: ವಿವಿಧ ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಸೀತಾರಾಮನ್ ಗೆ ಮನವಿ
ಕೇಂದ್ರ ಬಜೆಟ್ 2021ರ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಜಾಲದ ಪ್ರತಿನಿಧಿಗಳು ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಆಗಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶದಿಂದ ಈ ಭೇಟಿ ಆಗಿದೆ. ಅಂದ ಹಾಗೆ ಕೊರೊನಾದಿಂದಾಗಿ ದೇಶದಾದ್ಯಂತ ಸಾವಿರಾರು ಸ್ಕ್ರೀನ್ ಗಳನ್ನು ಶಾಶ್ವತವಾಗಿ ನಿಲ್ಲಿಸಲಾಗಿದೆ.
ಇನ್ನು FY21ರಲ್ಲಿ ಭಾರತದ ಚಿತ್ರೋದ್ಯಮ ಶೇಕಡಾ 67ರಷ್ಟು ಕುಗ್ಗಬಹುದು ಎಂದು ಈಚಿನ ಕೆಪಿಎಂಜಿ ವರದಿ ತಿಳಿಸಿದೆ. ಈ ನಿಯೋಗದ ನೇತೃತ್ವವನ್ನು ಪಿವಿಆರ್ ಲಿಮಿಟೆಡ್ ಎಂ.ಡಿ. ಸಂಜೀವ್ ಕುಮಾರ್ ಬಿಜಿಲಿ ವಹಿಸಿಕೊಂಡಿದ್ದರು. ಪಿವಿಆರ್ ಪಿಕ್ಚರ್ಸ್ ಸಿಇಒ ಕಮಲ್ ಗಿಯಾನ್ ಚಂದಾನಿ ಮತ್ತಿತರರು ತೆರಳಿದ್ದರು. ಈ ಸಂದರ್ಭದಲ್ಲಿ ನಟ, ಹಾಗೂ ಬಿಜೆಪಿ ಸಂಸದ ಸನ್ನಿ ದೇವಲ್ ಸಹ ಇದ್ದರು. ಸಮಸ್ಯೆಯಲ್ಲಿ ಇರುವ ಈ ವಲಯಕ್ಕೆ ಅಗತ್ಯ ಸಹಾಯ ಮಾಡುವಂತೆ ಕೇಳಿಕೊಂಡರು.
ಬಜೆಟ್ ಎಷ್ಟು ಥರ, ಈ ಬಾರಿ ಕೇಂದ್ರ ಬಜೆಟ್ ಹೇಗಿರುತ್ತದೆ ಗೊತ್ತಾ?
ಚಿತ್ರಮಂದಿರಗಳ ಮಾಲೀಕರು ಈ ವಾರದ ಆರಂಭದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ರನ್ನು ಭೇಟಿ ಮಾಡಿದ್ದರು.
"ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಸೀಟುಗಳಲ್ಲಿ ಮಾತ್ರ ಅವಕಾಶ ಎಂಬ ಮಿತಿಯನ್ನು ತೆಗೆದುಹಾಕಬೇಕು ಎಂಬುದು ನಮ್ಮ ಪ್ರಾಥಮಿಕ ಮನವಿಯಾಗಿತ್ತು. ಇದನ್ನು ಪರಿಗಣಿಸುವುದಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಹೆಳಿದ್ದು, ಈ ಬಗ್ಗೆ ಯಾವುದೇ ಖಾತ್ರಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಗಿ," ಹೆಸರು ಹೆಳಲು ಇಚ್ಛಿಸದ ಮಲ್ಟಿಪ್ಲೆಕ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯುತ್ ಹಾಗೂ ವಿದ್ಯುಚ್ಛಕ್ತಿ ಶುಲ್ಕ, ಮನರಂಜನಾ ತೆರಿಗೆ ಇವೆಲ್ಲ ಸರ್ಕಾರಕ್ಕೆ ಸಂಬಂಧ ಪಟ್ಟ ವಿಷಯ. ಆದ್ದರಿಂದ ಮನ್ನಾ ಅಥವಾ ವಿನಾಯಿತಿ ಕಡಿತ ಮಾಡುವಂತೆ ಈ ಬಗ್ಗೆ ಮಲ್ಟಿಪ್ಲೆಕ್ಸ್ ಅಧಿಕಾರಿಗಳು ನಿರ್ಮಲಾ ಜತೆ ಮಾತನಾಡಿದ್ದಾರೆ. ಈ ಅಂಶವನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆಕೆ ಹೇಳಿದ್ದಾರೆ.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವಂತೆ ಈಗ ಒಟಿಟಿ ಪ್ಲಾಟ್ ಫಾರ್ಮ್ ನಿಂದ ಹೊಸ ಸವಾಲು ಎದುರಾಗಲಿದೆ ಎಂದು ಸಿನಿಮಾ ವ್ಯವಹಾರಗಳ ತಜ್ಞರು ಅಲವತ್ತು ತೋಡಿಕೊಂಡರು.
ಲಕ್ಷ್ಮೀ, ಕೂಲಿ ನಂಬರ್ 1. ಭುಜ್: ದ ಪ್ರೈಡ್ ಆಫ್ ಇಂಡಿಯಾ, ಸಡಕ್ 2, ಗುಲಾಬೋ ಸಿತಾಬೋ ಮತ್ತಿತರ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಇನ್ನು ಮುಂದೆ ಥಿಯೇಟರ್ ಗಳಲ್ಲಿ ಸಿನಿಮಾ ನೋಡುವುದು ಕಷ್ಟ. ತುಂಬ ಆರಾಮವಾಗಿ ಮತ್ತು ಸುರಕ್ಷಿತವಾಗಿ ಮನೆಯಲ್ಲೇ ಸಿನಿಮಾ ನೋಡಬಹುದು ಎಂಬ ಭಾವ ಬಂದುಬಿಟ್ಟಿದೆ.
ಸಿನಿಮಾ ಹಾಗೂ ಮನರಂಜನಾ ಕ್ಷೇತ್ರಕ್ಕೆ ಮುಂಬರುವ ಬಜೆಟ್ ಬಹಳ ಪ್ರಮುಖವಾಗಿದೆ. ವಿದ್ಯುತ್ ನಿರ್ವಹಣೆ ಮನ್ನಾ ಅಥವಾ ಕಡಿಮೆ ಮಾಡಬೇಕು ಎಂಬುದು ಬೇಡಿಕೆ. ಇದೇ ತಿಂಗಳಿಗೆ 20 ಲಕ್ಷ ರುಪಾಯಿ ತನಕ ಬರುತ್ತದೆ. ಹೆಚ್ಚಿನ ಸ್ಕ್ರೀನ್ ಆರಂಬಿಸಲು ಏಕಗವಾಕ್ಷಿ ಪರವಾನಗಿ, ಜತೆಗೆ ಫುಡ್ ಕೋರ್ಟ್ ತೆರೆಯಲು ಅನುಮತಿ ನೀಡಬೇಕು ಎಂಬ ಮನವಿ ಇದೆ.
ಟಿಕೆಟ್ ದರದ ಮೇಲೆ ಎಸ್ ಜಿಸಿಟಿ (ರಾಜ್ಯ ಜಿಎಸ್ ಟಿ) ಮನ್ನಾ, ಹಳೇ ಚಿತ್ರಮಂದಿರಗಳ ರಕ್ಷಣೆಗೆ ಸರ್ಕಾರಿ ಯೋಜನೆಗಳು, ಭೂಮಿ ಮೇಲೆ ಸಬ್ಸಿಡಿ ಮತ್ತಿತರ ಬೇಡಿಕೆಗಳನ್ನು ಮುಂದಿಡಲಾಗಿದೆ.