ಕೇಂದ್ರ ಸರ್ಕಾರದಿಂದ ಜನವರಿ 1, 2021ರಿಂದ ಈರುಳ್ಳಿ ರಫ್ತಿನ ನಿರ್ಬಂಧ ತೆರವು
ಕೇಂದ್ರ ಸರ್ಕಾರವು ಎಲ್ಲ ಬಗೆಯ ಈರುಳ್ಳಿ ರಫ್ತಿನ ಮೇಲಿನ ನಿರ್ಬಂಧವನ್ನು ಜನವರಿ 1, 2021ರಿಂದ ತೆರವು ಮಾಡುತ್ತದೆ. ಈ ಬಗ್ಗೆ ಡೈರೆಕ್ಟೊರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಸೋಮವಾರ ಅಧಿಸೂಚನೆ ಹೊರಡಿಸಿದೆ. ಉತ್ತಮ ಚಳಿಗಾಲದೊಂದಿಗೆ ಪೂರೈಕೆ ಕೊರತೆಯು ನಿವಾರಣೆ ಆಗುತ್ತಿದ್ದಂತೆ ಹಾಗೂ ಆಮದು ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದಂತೆ ಈ ನಿರ್ಧಾರಕ್ಕೆ ಬರಲಾಗಿದೆ.
"ಮೇಲ್ಕಂಡ ರೀತಿ ವಿವರಿಸಿದಂತೆ, ಎಲ್ಲ ಬಗೆಯ ಈರುಳ್ಳಿ ರಫ್ತನ್ನು 1.1.2021ರಿಂದ ಮುಕ್ತಗೊಳಿಸಲಾಗಿದೆ," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್ 15ನೇ ತಾರೀಕು ಸರ್ಕಾರವು ಎಲ್ಲ ಬಗೆಯ ಈರುಳ್ಳಿ ರಫ್ತನ್ನು ನಿಷೇಧಿಸಿತ್ತು. ದೇಶೀಯವಾಗಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಸರ್ಕಾರದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಎಲ್ಲ ಬಗೆಯ ಈರುಳ್ಳಿ ರಫ್ತು ತಕ್ಷಣ ನಿಷೇಧ; ಆದರೆ ಹೀಗೆ ಮಾಡಿದ್ದಲ್ಲಿ ತಡೆಯಿಲ್ಲ
ಈ ವರ್ಷದ ಏಪ್ರಿಲ್ ನಿಂದ ಜುಲೈ ಮಧ್ಯೆ ಈರುಳ್ಳಿ ರಫ್ತಿನಲ್ಲಿ ಅಸ್ವಾಭಾವಿಕವಾದ 30% ಏರಿಕೆ ಕಂಡುಬಂದಿತ್ತು. ಇದರಿಂದಾಗಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಅದೇ ಅವಧಿಯಲ್ಲಿ ಸಗಟು ಮಾರುಕಟ್ಟೆ ಈರುಳ್ಳಿ ದರ 30% ಹೆಚ್ಚಳವಾಯಿತು. ದೇಶದ ಹಲವು ನಗರಗಳಲ್ಲಿ ಕೇಜಿಗೆ 80ರಿಂದ 100 ರುಪಾಯಿ ತಲುಪಿತು.
ಅಧಿಕೃತ ಮಾಹಿತಿ ಪ್ರಕಾರ, 2019- 20ರಲ್ಲಿ ಭಾರತವು 328 ಮಿಲಿಯನ್ ಯುಎಸ್ ಡಿ ಮೌಲ್ಯದ ತಾಜಾ ಈರುಳ್ಳಿ, 112 ಮಿಲಿಯನ್ ಯುಎಸ್ ಡಿ ಒಣ ಈರುಳ್ಳಿ ರಫ್ತು ಮಾಡಿತ್ತು. 2020ರ ಏಪ್ರಿಲ್ ಹಾಗೂ ಜುಲೈ ಮಧ್ಯೆ ಬಾಂಗ್ಲಾದೇಶ್ ಗೆ ಈರುಳ್ಳಿ ರಫ್ತು 157.7 ಪರ್ಸೆಂಟ್ ಏರಿಕೆ ಆಗಿದೆ.
ಈ ಹಿಂದೆ 2019ರ ಸೆಪ್ಟೆಂಬರ್ 29ರಂದು ಸರ್ಕಾರವು ಈರುಳ್ಳಿ ರಫ್ತು ನಿಷೇಧಿಸಿತ್ತು. ಅದೇ ವರ್ಷ ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ಈರುಳ್ಳಿ ಬೆಲೆ ಕೇಜಿಗೆ 80 ರುಪಾಯಿ ಮುಟ್ಟಿತ್ತು. ಈ ವರ್ಷ ಸೆಪ್ಟೆಂಬರ್ ನಲ್ಲಿ ಮತ್ತೆ ಈರುಳ್ಳಿ ರಫ್ತು ನಿಷೇಧ ಹೇರುವ ಮುನ್ನ, ಮಾರ್ಚ್ 15, 2020ರಲ್ಲಿ ನಿಷೇಧ ತೆರವುಗೊಳಿಸಿತ್ತು.