ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಹೆಚ್ಚುವರಿಯಾಗಿ 9,913 ಕೋಟಿ ಸಂಗ್ರಹಿಸಲು ಕೇಂದ್ರದ ಅನುಮತಿ
ಮುಕ್ತ ಮಾರುಕಟ್ಟೆ ಸಾಲದ (OMB) ಮೂಲಕ ಐದು ರಾಜ್ಯಗಳಿಗೆ ಹೆಚ್ಚುವರಿಯಾಗಿ 9,913 ಕೋಟಿ ರುಪಾಯಿ ಸಂಗ್ರಹಿಸಲು ಗುರುವಾರ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆದಾಯದಲ್ಲಿ ಇಳಿಕೆ ಆಗಿರುವುದರಿಂದ ಅದನ್ನು ತುಂಬಿಕೊಳ್ಳಲು ರಾಜ್ಯಗಳಿಗೆ ಈ ಅವಕಾಶ ಮಾಡಿಕೊಡಲಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ ಹಾಗೂ ತ್ರಿಪುರಾ- ಈ ಐದು ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯಲು ಅವಕಾಶ ನೀಡಲಾಗಿದೆ. 'ಒನ್ ನೇಷನ್ ಒನ್ ರೇಷನ್ ಕಾರ್ಡ್' ವ್ಯವಸ್ಥೆಯ ಅನುಷ್ಠಾನದ ಸುಧಾರಣೆ ನಿಯಮಗಳನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಅನುಮತಿ ನೀಡಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯಾವ ರಾಜ್ಯಕ್ಕೆ ಎಷ್ಟು ಹೆಚ್ಚುವರಿ ಮೊತ್ತ?
ಆರ್ಥಿಕ ಸಚಿವಾಲಯದ ಅಡಿಯಲ್ಲಿ ಬರುವ ವೆಚ್ಚದ ಇಲಾಖೆಯು ಕರ್ನಾಟಕಕ್ಕೆ ಹೆಚ್ಚುವರಿಯಾಗಿ 4509 ಕೋಟಿ ರುಪಾಯಿ, ತೆಲಂಗಾಣಕ್ಕೆ 2508 ಕೋಟಿ ಹಾಗೂ ಆಂಧ್ರಪ್ರದೇಶಕ್ಕೆ 2,525 ಕೋಟಿ ಮಂಜೂರು ಮಾಡಿದೆ. ಗೋವಾದಿಂದ 223 ಕೋಟಿ ಸಂಗ್ರಹಿಸಲು ಉದ್ದೇಶಿಸಿದ್ದು, ತ್ರಿಪುರಾ 148 ಕೋಟಿ ಸಂಗ್ರಹಿಸಲು ಉದ್ದೇಶಿಸಿದೆ ಎಂದು ಹೇಳಿದೆ. 2020- 21ರ ಜಿಎಸ್ ಡಿಪಿಯ (ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್) 2%ನಷ್ಟು ಹೆಚ್ಚುವರಿಯಾಗಿ ಸಾಲ ಮಾಡಬಹುದು ಎಂದು ಕೆಲವು ಷರತ್ತುಗಳೊಂದಿಗೆ ಕಳೆದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಒಪ್ಪಿಸಿತ್ತು. ಇದರಿಂದಾಗಿ ರಾಜ್ಯಗಳಿಗೆ 4,27,302 ಕೋಟಿ ರುಪಾಯಿ ರಾಜ್ಯಗಳಿಗೆ ದೊರೆಯುವಂತಾಗುತ್ತದೆ.
ಕನಿಷ್ಠ ಮೂರು ಸುಧಾರಣೆಗಳನ್ನು ತರಬೇಕು
2%ನಲ್ಲಿ ಕೇವಲ 0.5%ಗೆ ಯಾವುದೇ ಷರತ್ತುಗಳಿಲ್ಲ. ಆ ನಂತರ ರಾಜ್ಯಗಳಿಗೆ ನಾಲ್ಕು ಇನ್ ಕ್ರಿಮೆಂಟ್ 0.25% ನಿರ್ದಿಷ್ಟವಾಗಿ ರಾಜ್ಯ ಮಟ್ಟದ ಸುಧಾರಣೆ ಮೇಲೆ ಅವಕಾಶ ನೀಡಲಾಗುತ್ತದೆ. ಪ್ರತಿ ಸುಧಾರಣೆಯು GSDPಯ 0.25% ತೂಕವಾಗುತ್ತದೆ. ಒನ್ ನೇಷನ್ ಒನ್ ನೇಷನ್ ಕಾರ್ಡ್, ಉದ್ಯಮ ಸ್ನೇಹಿ ಸುಧಾರಣೆ, ಪಟ್ಟಣ ಸ್ಥಳೀಯ ಸಂಸ್ಥೆ ಇತರ ಸುಧಾರಣೆ ಹಾಗೂ ವಿದ್ಯುತ್ ವಿತರಣೆ ಖಾಸಗಿಗೆ ವಹಿಸುವ ಮೂಲಕ ವಿದ್ಯುತ್ ವಲಯದ ಸುಧಾರಣೆ ಹೀಗೆ ನಾಲ್ಕು ಕ್ಷೇತ್ರಗಳಿವೆ. ಬಾಕಿ ಹೆಚ್ಚುವರಿ ಸಾಲ 1% ತಲಾ 0.50%ನಂತೆ ಬಿಡುಗಡೆ ಮಾಡಲಾಗುತ್ತದೆ. ಮೊದಲನೆಯದು ಎಲ್ಲ ರಾಜ್ಯಗಳಿಗೂ ಒಟ್ಟಾಗಿ ಮತ್ತು ಎರಡನೆಯದು ಕನಿಷ್ಠ ಮೂರು ಸುಧಾರಣೆಗಳನ್ನು ಕೈಗೊಂಡಿರುವ ಆಧಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ಒಎಂಬಿ ಮೂಲಕ ಸಂಗ್ರಹಿಸಲು ಅನುಮತಿ
ಭಾರತ ಸರ್ಕಾರ ಈಗಾಗಲೇ 0.50% ಅನ್ನು ಒಎಂಬಿ ಮೂಲಕ ಸಂಗ್ರಹಿಸಲು ಅನುಮತಿಯನ್ನು ನೀಡಿದೆ. ಇದರಿಂದಾಗಿ ರಾಜ್ಯಗಳಿಗೆ ಹೆಚ್ಚುವರಿಯಾಗಿ 1,06,830 ಕೋಟಿ ರುಪಾಯಿ ದೊರೆಯುತ್ತದೆ. ರಾಜ್ಯಗಳ ನಿವ್ವಳ ಸಾಲದ ಮಿತಿ 2020-21ನೇ ಸಾಲಿಗೆ 6.41 ಲಕ್ಷ ಕೋಟಿ (GSDPಯ 3%) ಮಿತಿ ಹಾಕಲಾಗಿದೆ.