ಛಬಾರ್ ರೈಲು ಯೋಜನೆಯಿಂದ ಭಾರತವನ್ನು ದೂರವಿಟ್ಟ ಇರಾನ್ ನಿಂದ ಚೀನಾ ದೋಸ್ತಿ
ಭಾರತೀಯ ರೈಲ್ವೆಗೆ ಭಾರೀ ಹಿನ್ನಡೆ ಆಗಿದೆ. ಛಬಾರ್ ಬಂದರಿನ ರೈಲು ಯೋಜನೆಯಿಂದ ಭಾರತವನ್ನು ಇರಾನ್ ಕೈ ಬಿಟ್ಟಿದೆ. ಹಣ ಒದಗಿಸುವಲ್ಲಿ ಭಾರತ ತಡ ಮಾಡುತ್ತಿದೆ ಎಂಬುದೇ ಅದಕ್ಕೆ ಕಾರಣ. ಛಬಾರ್ ಬಂದರಿನಿಂದ ಅಫ್ಗಾನಿಸ್ತಾನದ ಗಡಿ ಝಹೆದನ್ ತನಕ ರೈಲು ಮಾರ್ಗ ನಿರ್ಮಿಸಲು ಭಾರತ ಮತ್ತು ಇರಾನ್ ಮಧ್ಯೆ ಒಪ್ಪಂದ ಆಗಿತ್ತು.
ಇರಾನ್- ಅಮೆರಿಕ ಯುದ್ಧ ಸನ್ನಿವೇಶದಲ್ಲಿ ಭಾರತದಲ್ಲಿ ಮೇಲೆ ಆಗಬಹುದಾದ ನಾಲ್ಕು ಪರಿಣಾಮ
ಇದೀಗ ಆ ರೈಲು ಮಾರ್ಗ ಯೋಜನೆಯನ್ನು ಇರಾನ್ ವೊಂದೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದೆ. ಇರಾನ್- ಅಫ್ಗಾನಿಸ್ತಾನ ಗಡಿಯ ಮಧ್ಯೆ 628 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಲು ನಾಲ್ಕು ವರ್ಷದ ಹಿಂದೆ ಒಪ್ಪಂದ ಆಗಿತ್ತು. ಅದರಲ್ಲಿ ಈಗ ಅನಿರೀಕ್ಷಿತವಾದ ಬೆಳವಣಿಗೆ ಕಾಣಿಸಿಕೊಂಡಿದೆ.
ಇರಾನ್ ಜತೆಗೆ ಚೀನಾ 25 ವರ್ಷಕ್ಕೆ 40 ಸಾವಿರ ಕೋಟಿ ಒಪ್ಪಂದ
ರೈಲ್ವೆ ಮೂಲಗಳ ಪ್ರಕಾರ, ಸಿದ್ಧತೆ ಕೆಲಸಗಳು ಈಗಾಗಲೇ ಆರಂಭವಾಗಿತ್ತು. ರೈಲು ಮಾರ್ಗ ನಿರ್ಮಾಣಕ್ಕಾಗಿ ಭಾರತದ ಎಂಜಿನಿಯರಿಂಗ್ ಗಳು ಈಗಾಗಲೇ ಹಲವು ಸಲ ಭೇಟಿ ನೀಡಿದ್ದರು. ಮತ್ತು ಭಾರತ ಛಬಾರ್ ಯೋಜನೆಗಾಗಿ ಅಂದಾಜು 3700 ಕೋಟಿ ರುಪಾಯಿಯಷ್ಟು ಹೂಡಿಕೆ ಕೂಡ ಮಾಡಿತ್ತು. ಈ ಮಧ್ಯೆ ಚೀನಾವು 25 ವರ್ಷಕ್ಕೆ 40 ಸಾವಿರ ಕೋಟಿ ಅಮೆರಿಕನ್ ಡಾಲರ್ ವ್ಯೂಹಾತ್ಮಕ ಸಹಭಾಗಿತ್ವದೊಂದಿಗೆ ಇರಾನ್ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಇದಕ್ಕೂ ಮುನ್ನ ಇರಾನ್ ರೈಲ್ವೆ, ಭಾರತೀಯ ರೈಲ್ವೆ ನಿರ್ಮಾಣ ಸಂಸ್ಥೆ (IRCON) ರೈಲು ಯೋಜನೆ ಚರ್ಚೆಯಾಗಿತ್ತು. ಈ ಬಗ್ಗೆ ಭಾರತ, ಇರಾನ್ ಮತ್ತು ಅಫ್ಗಾನಿಸ್ತಾನ ಮಧ್ಯೆ ತ್ರಿಪಕ್ಷೀಯ ಒಪ್ಪಂದವಾಗಿತ್ತು. ಆ ಮೂಲಕ ಅಫ್ಗಾನಿಸ್ತಾನ ಮತ್ತು ಕೇಂದ್ರ ಏಷ್ಯಾ ಮಧ್ಯೆ ಪರ್ಯಾಯ ವ್ಯಾಪಾರ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿತ್ತು.
160 ಕೋಟಿ ಅಮೆರಿಕನ್ ಡಾಲರ್ ನೀಡುವುದಾಗಿ ಹೇಳಿದ್ದ ಭಾರತ
2016ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೆಹರಾನ್ ಗೆ ಭೇಟಿ ನೀಡಿದ್ದ ವೇಳೆಯಲ್ಲಿ ಇರಾನ್ ಅಧ್ಯಕ್ಷ ಹಾಗೂ ಅಫ್ಗಾನಿಸ್ತಾನ ಅಧ್ಯಕ್ಷರೊಂದಿಗೆ ಛಬಾರ್ ಒಪ್ಪಂದಕ್ಕೆ ಸಹಿ ಹಾಕಿದ್ದರು. IRCONನಿಂದ ಇರಾನಿಯನ್ ರೈಲ್ವೆ ಸಚಿವಾಲಯದ ಜತೆ ಸಹಿ ಹಾಕಲಾಗಿತ್ತು. ಈ ಯೋಜನೆಯ ಎಲ್ಲ ಸೇವೆ, ರಚನೆ ಮತ್ತು ಹಣಕಾಸು (160 ಕೋಟಿ ಅಮೆರಿಕನ್ ಡಾಲರ್) ಒದಗಿಸುವುದಾಗಿ IRCON ಭರವಸೆ ನೀಡಿತ್ತು. ಆದರೆ ಈಗ ಇರಾನ್ ಏಕಾಂಗಿಯಾಗಿ ಈ ಯೋಜನೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ. ಭಾರತದ ನೆರವು ಪಡೆಯದೆ, ಇರಾನಿಯನ್ ನ್ಯಾಷನಲ್ ಡೆವಲಪ್ ಮೆಂಟ್ ಫಂಡ್ ಸಂಗ್ರಹಿಸಿ, ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದೆ. "ಈ ವಿಚಾರ ಸೂಕ್ಷ್ಮವಾಗಿದೆ" ಎನ್ನುವ ಮೂಲಕ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು IRCON ನಿರಾಕರಿಸಿದೆ.
ಪ್ರಾಬಲ್ಯ ವಿಸ್ತರಿಸುವ ಹವಣಿಕೆ
ಇರಾನ್- ಚೀನಾ ಎರಡರ ಮಧ್ಯದ ಸಂಬಂಧ ಹತ್ತಿರ ಆಗುತ್ತಿರುವ ಬಗ್ಗೆ ಭಾರತದ ಅಧಿಕಾರಿಗಳು ಎಚ್ಚರದಿಂದ ಗಮನಿಸಬೇಕು ಎಂದು ಈ ಹಿಂದೆ ಇರಾನ್ ಗೆ ರಾಯಭಾರಿ ಆಗಿದ್ದ ಕೆ.ಸಿ. ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಇರಾನ್- ಚೀನಾ ಮಧ್ಯದ ಒಪ್ಪಂದವು ಭಾರತವು ಛಬಾರ್ ಬಂದರು ಬಳಸಿಕೊಂಡು ಇರಾನ್ ಜತೆಗೆ ಹೊಂದಿರುವ "ವ್ಯೂಹಾತ್ಮಕ ಒಪ್ಪಂದ"ದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆ ಮೂಲಕ ಚೀನಾವು ತನ್ನ ಪ್ರಾಬಲ್ಯವನ್ನು ಪಾಕಿಸ್ತಾನ- ಇರಾನ್ ಕಡಲ ತೀರದ ತನಕ ವಿಸ್ತರಿಸುವ ಹವಣಿಕೆಯಲ್ಲಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಸಮುದ್ರ ಮಾರ್ಗದ ಬಾಗಿಲು ತೆರೆದಂತೆ
ಒಂದು ವೇಳೆ ಚೀನಾಗೆ ಇರಾನ್ ನ ಜಸ್ಕ್ ನಗರದ ಮೇಲೆ ಹಿಡಿತ ಸಿಕ್ಕರೆ ಆ ಮೂಲಕ ವಿಶ್ವದ ತೈಲ ಪೂರೈಕೆಯ ಬಹುತೇಕ ಸಮುದ್ರ ಮಾರ್ಗದ ಬಾಗಿಲು ತೆರೆದಂತೆ ಆಗುತ್ತದೆ. ಈಗಿನ ಚೀನಾ- ಇರಾನ್ ಒಪ್ಪಂದ ಮತ್ತು ಛಬಾರ್ ರೈಲು ಯೋಜನೆಯಿಂದ ಭಾರತವನ್ನು ಕೈ ಬಿಟ್ಟಿರುವುದನ್ನು ಕಾಂಗ್ರೆಸ್ ಪಕ್ಷವು, ದೇಶಕ್ಕೆ ಅತಿ ದೊಡ್ಡ ನಷ್ಟ ಎಂದು ಕರೆದಿದೆ. ಪಕ್ಷದ ನಾಯಕ ಅಭಿಷೇಕ್ ಸಿಂಘ್ವಿ ಟ್ವೀಟ್ ಮಾಡಿ, "ಇದು ಮೋದಿ ಸರ್ಕಾರದ ರಾಜತಾಂತ್ರಿಕತೆ. ಕೆಲಸವೇ ಪೂರ್ತಿ ಆಗದೆ ಪಡೆದ ಪ್ರತಿಫಲ ಇದು. ಚೀನಾ ಸದ್ದಿಲ್ಲದೆ ಕೆಲಸ ಮಾಡಿ, ಉತ್ತಮ ವ್ಯವಹಾರದ ಅವಕಾಶ ನೀಡಿತು. ಇದರಿಂದ ಭಾರತಕ್ಕೆ ಅತಿ ದೊಡ್ಡ ನಷ್ಟವಾಗಿದೆ. ಆದರೆ ನೀವು ಪ್ರಶ್ನೆ ಕೇಳುವುದಕ್ಕೆ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.