ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಕಟು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಗೆ ಪೆಟ್ಟು ನೀಡಿದ್ದೇ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಎಂದಿರುವ ಅವರು, 2020ರ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದ ಜಿಡಿಪಿ ಕಳೆದ ಸಾಲಿನ ಇದೇ ಅವಧಿಗಿಂತ 23.9% ಕುಗ್ಗಿರುವುದನ್ನು ಹೋಲಿಸಿ, ಸಿಟ್ಟು ಹೊರಹಾಕಿದ್ದಾರೆ.
ಜಿಡಿಪಿ ಇಳಿಕೆಗೆ ಮತ್ತೊಂದು ಪ್ರಮುಖ ಕಾರಣ ಮೋದಿ ಸರ್ಕಾರದ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್ ಟಿ). ಹತ್ತಾರು ಲಕ್ಷಣ ಸಣ್ಣ ವ್ಯಾಪಾರ- ವ್ಯವಹಾರವನ್ನು ವ್ಯರ್ಥ ಮಾಡಿತು. ಇದರ ಜತೆಗೆ ಹತ್ತಾರು ಲಕ್ಷ ಉದ್ಯೋಗ, ಯುವ ಜನರ ಭವಿಷ್ಯ, ರಾಜ್ಯಗಳ ಆರ್ಥಿಕ ಸ್ಥಿತಿ ವ್ಯರ್ಥವಾಯಿತು. ಜಿಎಸ್ ಟಿ ಅಂದರೆ ಆರ್ಥಿಕತೆಯ ಪ್ರಳಯ (ಅಪೋಕ್ಯಾಲಿಪ್ಸ್) ಎಂದು ಭಾನುವಾರ ಬೆಳಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹದಿನೈದು- ಇಪ್ಪತ್ತು ಉದ್ಯಮಿಗಳಿಗೆ ಸರ್ಕಾರವು ತೆರಿಗೆ ಪಾವತಿಯಲ್ಲಿ ತಮಗೆ ಬೇಕಾದಂತೆ ಲೆಕ್ಕ ನೀಡಲು ಅವಕಾಶ ನೀಡಿತು. ಆದರೆ ರೈತರು, ಕಾರ್ಮಿಕರು ಹಾಗೂ ಸಣ್ಣ ವರ್ತಕರಿಗೆ ಈ ಅನುಕೂಲ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರ ನಡೆಸುವವರಿಗೆ ಈ ತೆರಿಗೆ ಪಾವತಿಸಲು ಸಾಧ್ಯವಿಲ್ಲ. ಆದರೆ ದೊಡ್ಡ ಕಂಪೆನಿಗಳು ಈ ಕೆಲಸ ಮಾಡುವುದಕ್ಕಾಗಿಯೇ ಐದು, ಹತ್ತು, ಹದಿನೈದು ಅಕೌಂಟೆಂಟ್ ಗಳನ್ನು ನೇಮಿಸಿಕೊಳ್ಳುತ್ತವೆ. ಏನೆ ನಾಲ್ಕು ಬೇರೆ ದರಗಳು? ಏಕೆಂದರೆ, ಯಾರ ಬಳಿ ಇದೆಯೋ ಅವರು ಸುಲಭವಾಗಿ ಜಿಎಸ್ ಟಿ ಬದಲಿಸಿಕೊಳ್ಳಲಿ ಮತ್ತು ಯಾರ ಬಳಿ ಇಲ್ಲವೋ ಅವರು ಜಿಎಸ್ ಟಿಗೆ ಏನೂ ಮಾಡಲು ಆಗಲ್ಲ ಎಂದಿದ್ದಾರೆ.
ಜುಲೈ 1, 2017ರಲ್ಲಿ ಜಿಎಸ್ ಟಿ ಜಾರಿಗೆ ಬಂತು. 0, 5, 12, 18 ಹಾಗೂ 28 ಪರ್ಸೆಂಟ್ ದರವನ್ನು ಪರಿಚಯಿಸಲಾಯಿತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಜಾರಿ ಮಾಡುವುದಕ್ಕೆ ಇದು ಸಲೀಸಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
"ಜಿಎಸ್ ಟಿ ಸಂಪೂರ್ಣ ವಿಫಲವಾಗಿದೆ. ಇದು ಭಾರತ ಆರ್ಥಿಕತೆ ಮೇಲೆ ದಾಳಿ ನಡೆಸಿದೆ. ಇವತ್ತು ರಾಜ್ಯ ಸರ್ಕಾರಗಳಿಗೆ ಜಿಎಸ್ ಟಿ ಪರಿಹಾರ ಧನ ನೀಡುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ. ಇನ್ನು ರಾಜ್ಯಗಳು ಶಿಕ್ಷಕರು, ಸಿಬ್ಬಂದಿಗೆ ಸಂಬಳ ಕೊಡಲು ಆಗುತ್ತಿಲ್ಲ" ಎಂದು ರಾಹುಲ್ ಹೇಳಿದ್ದಾರೆ.


Click it and Unblock the Notifications