ಕೊರೊನಾ ಲಾಕ್ ಡೌನ್; ಸಂಬಳ ಇಲ್ಲದೆ ಪರದಾಟ, ಕಷ್ಟ ಕೇಳೋರ್ಯಾರು?
ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಲೀ ಸಂಬಳ ಕಡಿತವಾಗಲೀ ಮಾಡಬಾರದು ಎಂದು ಕಂಪೆನಿಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಬೆಂಗಳೂರಿನಲ್ಲೇ ಹಲವು ಸಂಸ್ಥೆಗಳಲ್ಲಿ ಮಾರ್ಚ್ ತಿಂಗಳ ಸಂಬಳವನ್ನೇ ಅರ್ಧ ಮಾತ್ರ ಪಾವತಿಸಿದ್ದಾರೆ. ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು, ಆಡಿಟ್ ಕಂಪೆನಿಗಳು, ಬಿಪಿಒ ಸೇರಿದಂತೆ ಹಲವೆಡೆ ಇಂಥ ಸಮಸ್ಯೆ ಎದುರಾಗಿದೆ.
ಈಗಾಗಲೇ ಕೆಲವು ಗುತ್ತಿಗೆ ಆಧಾರದ ಸಿಬ್ಬಂದಿಗೆ ಬೆದರಿಸುವ ಕೆಲಸವೂ ನಡೆಯುತ್ತಿದೆ. ಗುತ್ತಿಗೆ ಅವಧಿ ವಿಸ್ತರಣೆ ಆಗಬೇಕು ಅಂದರೆ, ಈಗ ಬರುತ್ತಿರುವ ವೇತನಕ್ಕಿಂತ 30% ಕಡಿಮೆಗೆ ಒಪ್ಪಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಕೆಲಸ ಕೂಡ ಉಳಿಯುವುದಿಲ್ಲ ಎಂದು ಧಮಕಿ ಹಾಕಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಗುತ್ತಿಗೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಜಲಮಂಡಳಿಯಲ್ಲೇ ಹೀಗೆ
ಬೆಂಗಳೂರು ಜಲಮಂಡಳಿಯಂಥ ಕಡೆಯಲ್ಲೇ ಗುತ್ತಿಗೆ ನೌಕರರನ್ನು ತೆಗೆದು ಹಾಕುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ. ಸರ್ಕಾರಕ್ಕೆ ಸೇರಿದ ಸಂಸ್ಥೆಗಳಲ್ಲೇ ಹೀಗೆ ನಡೆಯುತ್ತಿದೆ. ಇನ್ನು ಖಾಸಗಿಯವರಿಂದ ಏನು ನಿರೀಕ್ಷೆ ಮಾಡಬಹುದು ಎಂದು ಅದೇ ವ್ಯಕ್ತಿ ಮರುಪ್ರಶ್ನೆ ಕೂಡ ಮಾಡಿದರು.
ವೇತನದ ಆಧಾರದಲ್ಲಿ ಸ್ಲ್ಯಾಬ್ ನಿಗದಿ
ಬೆಂಗಳೂರಿನ ಜಯನಗರದಲ್ಲಿ ಇರುವ ಆಡಿಟಿಂಗ್ ಸಂಸ್ಥೆಯೊಂದರಲ್ಲಿ ಮಾರ್ಚ್ ನಲ್ಲಿ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಲಾಗಿತ್ತು. ಈ ವೇಳೆ ವೇತನ ಕೂಡ ಪಾವತಿಸಲಾಗಿದೆ. ಆದರೆ ಏಪ್ರಿಲ್ ನಲ್ಲಿ ಸಿಬ್ಬಂದಿಯ ವೇತನದ ಆಧಾರದಲ್ಲಿ ಸ್ಲ್ಯಾಬ್ ಮಾಡಲಾಗಿದೆ. ಆ ಉದ್ಯೋಗಿಗೆ ಎಷ್ಟೇ ಸಂಬಳ ಬಂದರೂ ಸ್ಲ್ಯಾಬ್ ನಲ್ಲಿ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ವೇತನ ಪಾವತಿಸುವುದಿಲ್ಲ.
ರಜಾ ಮುಗಿದ ಮೇಲೆ ಸಂಬಳ ಕಟ್
ಇನ್ನು ವೈಟ್ ಫೀಲ್ಡ್ ನ ಅನಿಮೇಷನ್ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು 'ಗುಡ್ ರಿಟರ್ನ್ಸ್ ಕನ್ನಡ'ದ ಜತೆಗೆ ಮಾತನಾಡಿ, ಇಲ್ಲಿಯ ತನಕ ಯಾರದೆಲ್ಲ ರಜಾಗಳಿದ್ದವೋ ಅದನ್ನು ಅಪ್ಲೈ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅವೆಲ್ಲ ಖಾಲಿಯಾದ ಮೇಲೆ ಕೆಲಸಕ್ಕೆ ಹೋಗದ ದಿನಗಳ ವೇತನ ಸಿಗುವುದಿಲ್ಲ ಎಂದರು.
ಮಾರ್ಚ್ ನಲ್ಲಿ ಅರ್ಧ ಸಂಬಳ
ಮಾರ್ಚ್ ನಲ್ಲಿ ಅರ್ಧ ಸಂಬಳ ಕೊಡಲಾಗಿದೆ. ಆದರೆ ಏಪ್ರಿಲ್ ನಲ್ಲಿ ಸಂಬಳ ಕೊಡುವುದೇ ಅನುಮಾನ. ಆದರೆ ಆಫೀಸ್ ನಿಂದ ಕಾರನ್ನು ಕಳುಹಿಸಿ, ಕೆಲಸ ಕರೆಸಿಕೊಳ್ಳುತ್ತಿದ್ದಾರೆ. ಆದರೆ ಯಾವ ವ್ಯವಹಾರವೂ ನಡೆಯುತ್ತಿಲ್ಲ. ತಿಂಗಳ ಸಂಬಳಕ್ಕೆ ತಕ್ಕಂತೆ ನಮ್ಮ ಖರ್ಚು ಇದೆ. ಆದರೆ ಈ ಬಗ್ಗೆ ದೂರು ನೀಡುವುದು ಎಲ್ಲಿ ಎಂಬುದು ಸಹ ನಮಗೆ ಗೊತ್ತಿಲ್ಲ ಎಂದರು ಮತ್ತೊಂದು ಸಂಸ್ಥೆಯ ಉದ್ಯೋಗಿ.