ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ವಹಿವಾಟಿಗೆ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ ಮೇಲೆ, ಬ್ಯಾಂಕಿನ ಒಂದೊಂದೇ ಅವ್ಯವಹಾರಗಳು ಹೊರಬೀಳುತ್ತಿವೆ. ಪ್ರಮುಖವಾಗಿ ನಿವೃತ್ತಿ ಹೊಂದಿದ ಗ್ರಾಹಕರು ಇದರಿಂದ ಕಂಗಾಲಾಗಿ ಹೋಗಿದ್ದಾರೆ.
ಮುಂದಿನ ನೋಟಿಸ್ ಹೊರಡಿಸುವ ತನಕ, ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ಮೂವತ್ತೈದು ಸಾವಿರ ರುಪಾಯಿ ತನಕ ನಗದು ಮಾತ್ರ ವಿಥ್ ಡ್ರಾ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆದೇಶಿಸಿದೆ.
''ನಿಮ್ಮ ಹಣವು ನೂರಕ್ಕೆ ನೂರರಷ್ಟು ಸುರಕ್ಷಿತವಾಗಿದೆ. ನಿಮ್ಮ ಹಣದ ಸುರಕ್ಷತೆ ನನ್ನ ಜವಾಬ್ದಾರಿ" ಎಂದು ಗ್ರಾಹಕರಿಗೆ ಕೈಮುಗಿದು ವಿನಂತಿಸಿಕೊಂಡಿದ್ದ, ಬ್ಯಾಂಕ್ ಅಧ್ಯಕ್ಷರ ಮೇಲೆಯೇ ಈಗ ಎಫ್ಐಆರ್ ದಾಖಲಾಗಿರುವುದರಿಂದ, ಬ್ಯಾಂಕಿನ ಅವ್ಯವಹಾರದ ಕರಾಳತೆ ಇನ್ನೊಂದು ಮಜಲಿಗೆ ಹೋಗಿದೆ.
ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಸಹವರ್ತಿಯ ಇನ್ನೊಂದು ಬ್ಯಾಂಕ್ ಇದೆ ಎನ್ನುವ (ಬಹಳಷ್ಟು ಜನರಿಗೆ ಗೊತ್ತಿಲ್ಲದ ಸತ್ಯ) ವಿಷಯ ಬಯಲುಗೊಂಡಿದೆ. ಈ ವಿಚಾರ ಬಹಿರಂಗಗೊಂಡಿರುವುದು ಮತ್ತೊಂದು ಅವ್ಯವಹಾರದ ದೂರು ದಾಖಲಾದ ನಂತರ ಎನ್ನುವುದು ಗಮನಿಸಬೇಕಾದ ಅಂಶ.
ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲು
ಗುರು ರಾಘವೇಂದ್ರ ಬ್ಯಾಂಕಿನ ಈಗಿನ ಆಡಳಿತಾಧಿಕಾರಿ ಸಂತೋಶ್ ಕುಮಾರ್, ಹಿಂದಿನ ಸಿಇಒ ಮನೂರು ವಾಸುದೇವ ಮಯ್ಯ ವಿರುದ್ದ ನಗರದ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಪಿಐಡಿ ಮತ್ತು ಐಪಿಸಿ ಸೆ.420 ಅಡಿಯಲ್ಲಿ ಕೇಸ್ ದಾಖಲಾಗಿದೆ. ಹತ್ತು ದಿನಗಳ ಕೆಳಗೆ ಮಾಜಿ ಸಿಇಒ ಮಯ್ಯ ವಿರುದ್ದ ಈ ಕೇಸ್ ದಾಖಲಾಗಿದೆ.
ಯಾವುದೇ ಭದ್ರತೆ, ಸೂಕ್ತ ದಾಖಲೆಯಿಲ್ಲದೇ ಕೋಟ್ಯಾಂತರ ರೂಪಾಯಿ ಸಾಲ
2012-2018ರ ಅವಧಿಯಲ್ಲಿ ಮಯ್ಯ, ಬ್ಯಾಂಕಿನ ನಿಯಮಗಳಿಗೆ ವಿರುದ್ದವಾಗಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆಂದು ಹಾಲೀ ಸಿಇಒ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯಾವುದೇ ಭದ್ರತೆ, ಸೂಕ್ತ ದಾಖಲೆಯಿಲ್ಲದೇ, ಜಸ್ವಂತ್ ರೆಡ್ಡಿ, ರಂಚಿತಾ ರೆಡ್ಡಿ, ಅಶೋಕ್ ರೆಡ್ಡಿ ಮುಂತಾದ ಗ್ರಾಹಕರಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸಾಲ ಮಂಜೂರು ಮಾಡಿದ್ದಾರೆ ಎಂದು ಸಿಇಒ ದೂರಿನಲ್ಲಿ ದಾಖಲಿಸಿದ್ದಾರೆ. ಬಾಣಸವಾಡಿ ಪೊಲೀಸರು, ಮಯ್ಯ ಅವರ ವಿಚಾರಣೆ ಆರಂಭಿಸಿದ್ದಾರೆ. ಇದು ಒಂದು ಕಡೆ..
ಶಂಕರಪುರಂ ಠಾಣೆಯಲ್ಲಿ ದೂರು ದಾಖಲು
ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಸಹವರ್ತಿ ಬ್ಯಾಂಕ್ ಗುರು ಸಾರ್ವಭೌಮ ಸೌಹಾರ್ದ್ ಕ್ರೆಡಿಟ್ ಕೋ-ಆಪರೇಟಿವ್. ಇದಕ್ಕೆ ಅಧ್ಯಕ್ಷರು ರಾಮಕೃಷ್ಣ. ಇವರ ಮೇಲೆ ಸೋಮವಾರ (ಫೆ 17) ಶಂಕರಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಮಾರಸ್ವಾಮಿ ಲೇಔಟಿನ ಲತಾ ಎನ್ನುವ ಮಹಿಳೆ ಬ್ಯಾಂಕಿನ ಅಧ್ಯಕ್ಷರು ಮತ್ತು ಇನ್ನೋರ್ವ ಸಿಬ್ಬಂದಿಯ ಮೇಲೆ ಚೀಟಿಂಗ್ ಕೇಸ್ ದಾಖಲಿಸಿದ್ದಾರೆ.
ಗುರು ಸಾರ್ವಭೌಮ ಸೌಹಾರ್ದ್ ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿ
ಲತಾ ನೀಡಿರುವ ದೂರಿನ ಪ್ರಕಾರ, 38.5ಲಕ್ಷ ರೂಪಾಯಿಯನ್ನು ಗುರು ಸಾರ್ವಭೌಮ ಸೌಹಾರ್ದ್ ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಲ್ಲಿ ಇಟ್ಟಿದ್ದರು. 91ದಿನಗಳ ಎಫ್ ಡಿ ಇದಾಗಿತ್ತು. ಇದಕ್ಕೆ ಬ್ಯಾಂಕಿನವರು ಸರ್ಟಿಫಿಕೇಟ್ ಅನ್ನೂ ನೀಡಿದ್ದರು. ಮೂರು ತಿಂಗಳಿನ ನಂತರ, ಠೇವಣಿ ಹಣವನ್ನು ವಾಪಸ್ ಪಡೆಯಲು ಮಹಿಳೆ ಹೋದಾಗ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಚೆಕ್ ಅನ್ನು ನೀಡಿದ್ದರು. ಆದರೆ, ಚೆಕ್ ಗೆ ಇಬ್ಬರು ಸಹಿ ಮಾಡಬೇಕಾದ ಜಾಗದಲ್ಲಿ ಒಬ್ಬರು ಮಾತ್ರ ಮಾಡಿದ್ದರು. ಹಾಗಾಗಿ, ಚೆಕ್ ನಗದಾಗಿರಲಿಲ್ಲ.
ಬ್ಯಾಂಕಿನ ಅವ್ಯವಹಾರ ಬಯಲು
ಗಾಬರಿಗೊಂಡ ಮಹಿಳೆ, ಗುರು ಸಾರ್ವಭೌಮ ಸೌಹಾರ್ದ್ ಬ್ಯಾಂಕ್ ನಲ್ಲಿ ಈ ಬಗ್ಗೆ ವಿಚಾರಿಸಿದಾಗ, "ಇಬ್ಬರು ಸಹಿ ಮಾಡುವುದಿಲ್ಲ. ಐದು ಲಕ್ಷ ರೂಪಾಯಿ ವಾಪಸ್ ನೀಡುತ್ತೇವೆ" ಎಂದು ಬ್ಯಾಂಕಿನವರು ಉತ್ತರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ನೊಂದ ಮಹಿಳೆ ಲತಾ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮೇಲೆ, ಬ್ಯಾಂಕಿನ ಅವ್ಯವಹಾರ ಬಯಲಾಗಿದೆ. ಈ ರೀತಿಯ ಪ್ರಕರಣಗಳು ಇನ್ನೆಷ್ಟು ಸಿಗುತ್ತವೆಯೋ ಎನ್ನುವುದು ಕಾದು ನೋಡಬೇಕಿದೆ. ಪ್ರಮುಖವಾಗಿ ಸಾರ್ವಜನಿಕರು ಎಚ್ಚರವಾಗುವುದು ಒಳ್ಳೆಯದು.


Click it and Unblock the Notifications