ಬೆಂಗಳೂರು, ಅ. 23: ದೀಪಾವಳಿ ಹಬ್ಬಕ್ಕೆ ದೇಶಾದ್ಯಂತ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಂದ ನೌಕರರಿಗೆ ಬೋನಸ್ ಸೇರಿದಂತೆ ಹಲವು ಕೊಡುಗೆಗಳು ಸಿಕ್ಕಿವೆ. ಕರ್ನಾಟಕ ಸೇರಿ ಹಲವು ರಾಜ್ಯಗಳು ದೀಪಾವಳಿ ಹಬ್ಬಕ್ಕೆ ಮುನ್ನ ತಮ್ಮ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಿಸಿವೆ. ಈಗ ಈ ಪಟ್ಟಿಗೆ ಅಸ್ಸಾಮ್ ಸರ್ಕಾರ ಸೇರಿಕೊಂಡಿದೆ.
ಅಸ್ಸಾಮ್ನ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ತುಟ್ಟಿಭತ್ಯೆಯಲ್ಲಿ ಶೇ. 4ರಷ್ಟು ಹೆಚ್ಚಳ ಮಾಡಲಾಗಿದೆ. 2022 ಜುಲೈ 1ರಿಂದಲೇ ಈ ಹೆಚ್ಚಳ ಅನ್ವಯ ಆಗಲಿದೆ. ಅಕ್ಟೋಬರ್ ತಿಂಗಳ ಸಂಬಳದಲ್ಲಿ, ಅಂದರೆ ನವೆಂಬರ್ನಲ್ಲಿ ಕೊಡಲಾಗುವ ಸಂಬಳದಲ್ಲಿ ಇದು ಉದ್ಯೋಗಿಗಳ ಕೈ ಸೇರುತ್ತದೆ. ಜುಲೈನಿಂದ ಹೆಚ್ಚಳವು ಅನ್ವಯ ಆಗುವುದರಿಂದ ಅಷ್ಟೂ ಬಾಕಿ ಹಣ ಅಕ್ಟೋಬರ್ ತಿಂಗಳ ಸಂಬಳದಲ್ಲಿ ಒಟ್ಟಿಗೆ ಬರುತ್ತದೆ. ಅಂದರೆ ನಾಲ್ಕು ತಿಂಗಳ ಹೆಚ್ಚುವರಿ ಡಿಎ ಹಣ ಒಮ್ಮೆಗೇ ಪ್ರಾಪ್ತವಾಗುತ್ತದೆ.
ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ನಿನ್ನೆ ಶನಿವಾರ ಟ್ವೀಟ್ ಮೂಲಕ ಡಿಎ ಹೆಚ್ಚಳವನ್ನು ಪ್ರಕಟಿಸಿ ರಾಜ್ಯದ ಜನತೆಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ.

ಅಸ್ಸಾಮ್ ಸರ್ಕಾರ ಇತ್ತೀಚೆಗಷ್ಟೇ ಹೋಮ್ ಗಾರ್ಡ್ಗಳ ಡೈಲಿ ಡ್ಯೂಟಿ ಅಲೋಯನ್ಸ್ ಅನ್ನು 300 ರೂಪಾಯಿಯಿಂದ 767 ರೂಪಾಯಿಗೆ ಹೆಚ್ಚಿಸಿದೆ. ಇದರೊಂದಿಗೆ ಹೋಮ್ ಗಾರ್ಡ್ಗಳ ಕನಿಷ್ಠ ವೇತನ 23,010 ರೂಪಾಯಿಗೆ ಏರಿದೆ. ಅಸ್ಸಾಮ್ನ ಗೃಹ ಇಲಾಖೆ ಅಡಿಯಲ್ಲಿ 24 ಸಾವಿರ ಹೋಮ್ ಗಾರ್ಡ್ ಸಿಬ್ಬಂದಿ ಇದ್ದಾರೆ. ಸಂಬಳ ಹೆಚ್ಚಳ ಮಾಡಬೇಕೆಂದು ಹೋಮ್ ಗಾರ್ಡ್ ಬಹಳ ವರ್ಷಗಳಿಂದ ಇಟ್ಟಿದ್ದ ಬೇಡಿಕೆಯನ್ನು ಸರ್ಕಾರ ಪೂರೈಸಿದೆ.
ಬಸವರಾಜ್ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಈ ವರ್ಷ ಎರಡು ಬಾರಿ ಡಿಎ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಕೂಡ ಶೇ. 4ರಷ್ಟು ಡಿಎ ಹೆಚ್ಚಿಸಿದೆ. ಇದರಿಂದ ಕೇಂದ್ರ ಸರ್ಕಾರದ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ. ಇದಲ್ಲದೇ ಉತ್ತರಪ್ರದೇಶ ಸೇರಿ ಇನ್ನೂ ಹಲವು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆ ಹೆಚ್ಚಿಸಿವೆ.
ಬೋನಸ್
ಹಲವು ಸರ್ಕಾರಗಳು ಡಿಎ ಜೊತೆಗೆ ಬೋಸನ್ ಕೊಡುಗೆಗಳನ್ನೂ ಉದ್ಯೋಗಿಗಳಿಗೆ ಒದಗಿಸಿದೆ. ಇಪಿಎಫ್ಒ ಸಂಸ್ಥೆ ತನ್ನ ಗ್ರೂಪ್ ಬಿ ಮತ್ತು ಸಿ ನೌಕರರಿಗೆ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ (ಪಿಎಲ್ಬಿ) ಅನ್ನು ಘೋಷಿಸಿದೆ.

ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಎಂಬುದು ಉದ್ಯೋಗಿಗಳ ಉತ್ಪನ್ನಶೀಲತೆಗೆ ಅನುಗುಣವಾಗಿ ನೀಡಲಾಗುವ ಬೋನಸ್. 78 ದಿನಗಳವರೆಗಿನ ಸಂಬಳದ ಹಣವನ್ನು ಬೋನಸ್ ಆಗಿ ಕೊಡಲಾಗುತ್ತದೆ. ಕೇಂದ್ರ ರೈಲ್ವೆ ಇಲಾಖೆ ತನ್ನ ಉದ್ಯೋಗಿಗಳಿಗೆ ಪಿಎಲ್ಬಿಯನ್ನು ಪ್ರಕಟಿಸಿದೆ. ಇದರಿಂದ ರೈಲ್ವೆ ಉದ್ಯೋಗಿಗಳಿಗೆ ಗರಿಷ್ಠ 17,951 ರೂಪಾಯಿವರೆಗೂ ಬೋನಸ್ ಸಿಗಲಿದೆ.
ಹಾಗೆಯೇ, ಕೇಂದ್ರ ಸರ್ಕಾರ ತನ್ನ ಬಿ ಮತ್ತು ಸಿ ಗ್ರೂಪ್ ನೌಕರರಿಗೆ ಆಡ್-ಹಾಕ್ ಬೋನಸ್ ಅನ್ನು ನೀಡಿದೆ. ಅಡ್-ಹಾಕ್ ಬೋನಸ್ ಎಂಬುದು ಪ್ರೊಡಕ್ಟಿವಿಟಿಗೆ ಸಂಬಂಧಿಸದ ಬೋನಸ್ ಆಗಿದೆ. ಪಿಎಲ್ಬಿ ಯೋಜನೆ ವ್ಯಾಪ್ತಿಯಲ್ಲಿ ಇಲ್ಲದ ನೌಕರರಿಗೆ ಇದನ್ನು ಕೊಡಲಾಗುತ್ತದೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಉದ್ಯೋಗಿಗಳಿಗೆ 5 ಸಾವಿರ ರೂ ಬೋನಸ್ ನೀಡಿದೆ. ಮಹಾ ಸರ್ಕಾರ ತನ್ನ ಈ ನಿಗಮಕ್ಕೆ 45 ಕೋಟಿ ರೂ ಆರ್ಥಿಕ ಸಹಾಯ ನೀಡಿದ ಬೆನ್ನಲ್ಲೇ ಈ ಘೋಷಣೆ ಆಗಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತನ್ನ ರಾಜ್ಯದ ಪೊಲೀಸ್ ಸಿಬ್ಬಂದಿಗೆ ಮಾಸಿಕ ಮೋಟಾರ್ಸೈಕಲ್ ಅಲೋಯನ್ಸ್ ಆಗಿ 500 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.


Click it and Unblock the Notifications